Wednesday 9 April 2014

ಭಂ, ಭಂ, ಭಂ ಬೋಲೆನಾಥ್ !!

ಧಹಿಸುವಸುರರ ಸಹಿಸಿಕೊಂಡೆಯಾ?
ಹರಿಸು ಕೋಪಾಗ್ನಿಯನು ಈಗಲೇ 
ಕೋಪಗಣ್ಣಿಗೆ ನಿದ್ದೆ ತಂದೆಯಾ?
ಕ್ಷಮಿಸು ಹರ ನೀ ಏಳು ಕೂಡಲೇ 
ದುಷ್ಟ ಶಕ್ತಿಯ ಅಟ್ಟಹಾಸಕೆ 
ಮಟ್ಟ ಹಾಕುವ ಶಕ್ತಿ ನೀನು 
ತುರುಬು ಸಡಿಲಿಸು ಮೈಯ್ಯ ಕಂಪಿಸಿ 
ತೋರು ತಾಂಡವ ನಾಟ್ಯವನ್ನು 

ನೀಲ ಕಂಠದ ಆಳ ಉಸಿರಲಿ 
ಏಳು ಲೋಕವ ಸಲಹುವಾತ 
ಅಲ್ಲ ಸಮಯ ಕೇಳಿ ಕೂರಲು 
ನಾಮ ಸ್ತುತಿಯ ಸುಪ್ರಭಾತ 
ಬೂದಿಯೊಳಗಣ ಕೆಂಡಮಂಡಲ 
ಬುಗ್ಗೆಯಾಗಿ ಚಿಮ್ಮಿ ಏಳಲಿ 
ಎಂಟು ದಿಕ್ಕಲೂ ಶಂಖ ನಾದದ 
ಓಂಕಾರ ನಾದ ಮೊಳಗಲಿ 

ಶಾಂತ ಚಿತ್ತಕೆ ಬ್ರಾಂತಿ ಮೂಡಲಿ 
ಕ್ರಾಂತಿಯಾಗಲಿ ದೈವ ಕಿರಣ 
ಕತ್ತಲಾವರಿಸುತ್ತ ಹೊರಟಿದೆ 
ಬೆಳಕ ಪಾಲಿಗೆ ಮರ್ಮ ಗ್ರಹಣ 
ಗಂಗೆ ಕೆರಳಲಿ ಅರ್ಧ ಚಂದಿರ 
ರೌಧ್ರ ರೂಪಕೆ ಬೆಚ್ಚ ಬೇಕು 
ಕೆಡುಕಿನ ಶಿರ ಛೇದಿಸುತಲಿ 
ರಕ್ತದೋಕುಳಿ ಹರಿಸ ಬೇಕು 

ಹೆಜ್ಜೆ ಸದ್ದಿಗೆ ಭೂಮಿ ಬಿರಿದು 
ಏದುಸಿರಿಗೆ ಕಡಲು ಉಕ್ಕಿ 
ಮೋಡ ಕೆರಳಿ ಸಿಡಿಲು ಬಡಿದು 
ಮಿಂಚ ಕಣ್ಣುಗಳಲ್ಲಿ ಹಿಡಿದು
ಪಂಚಭೂತಗಳೆಲ್ಲ ಕೂಡಿ 
ಭಂ, ಭಂ, ಭಂ ಬೋಲೆ ಹಾಡಿ 
ಮೃಗಗಳೆಲ್ಲ ನಿನ್ನ ಕೊರಳಿಗೆ 
ತಮ್ಮ ಕೊರಳನು ನೀಡಲಿ 

ಘರ್ಜನೆಯನು ಸಹಿಸಲಾಗದೆ 
ಗೋರಿಯೊಳಗಣ ಹಂದರಗಳು 
ಬೆವರು ಹರಿಸಿ ಮುದುಡಿಕೊಂಡು 
ಆತ್ಮಗಳ ತಮ್ಮೊಳಗೆ ಹೀರಿ 
ಮಸಣ ಸೀಮೆಯ ದಾಟದಂತೆ 
ನಿನ್ನ ಅಪ್ಪಣೆ ಪಡೆಯದಂತೆ 
ನರನ ದೇಹವ ನುಸುಳದಂತೆ
ಚೀರಿ-ಚೀರಿ ಹೆದರಲಿ 

ಶೂಲದಂಚಿಗೆ ಸಿಕ್ಕಿ ನರಳುವ 
ಭೂತ, ಪ್ರೇತ, ಪಿಶಾಚಿಗಳನು 
ಪಾದದಡಿಗೆ ಹೊಸಕಿ ಹಾಕಲು 
ಮೆಟ್ಟಿ ಬಾ ಅಭಯಂಕರ; 
ಹರ ಹರ ಹರ ಶಂಭೋ ಶಂಕರ 
ಸಜ್ಜನರ ಕಾಯೋ ಈಶ್ವರ 
ನಿನ್ನ ಆಧರ ಹೂವ ಚಾದರ 
ಹರಸು ಓ ಕರುಣಾಕರ 

                    -- ರತ್ನಸುತ  

1 comment:

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...