Tuesday 29 April 2014

ಬಿಟ್ಟು ಹೋದ ಗಳಿಗೆ

ಕೊನೆಯ ಮುತ್ತಿಗೆ ಕಾಯಲಿಲ್ಲ
ಕೊಟ್ಟು ಹೋದಳು ಕಣ್ಣಲಿ
ಗುರುತು ಎಲ್ಲೂ ಕಾಣುತಿಲ್ಲ?
ಅಂದರೇನು ಹೇಳಲಿ!!

ಕೂತು ಆಡಿದ ಮಾತು ಯಾವೂ
ನಿಲ್ಲಲಿಲ್ಲ ಮನಸಲಿ
ಎಲ್ಲ ಮೆಲ್ಲನೆ ತುಂಬಿಕೊಂಡವು
ತಾನೇ ನಾಕೂ ಕಣ್ಣಲಿ!!

ನಾನು ಹೊತ್ತ ಭಾರ ಅವಳು
ಅವಳು ಹೊತ್ತ ಭಾರ ನಾ
ಭೂಮಿ ತೂಕವ ಅಳಿದ ಹಾಗೆ
ಉಳಿದುಕೊಂಡಿತು ಜೀವನ!!

ಯಾವ ಮಾತನೂ ತಡೆಯಲಿಲ್ಲ
ಮುನಿಸ ಮಧ್ಯೆ ತರಿಸದೆ 
ಜೋರು ಬಡಿತದ ಎದೆಯ ಕದವ
ತೆರೆದುಕೊಂಡಳು ಮರೆಯದೆ!!

ಬಿಟ್ಟುಗೊಡದ ಕಿರು ಬೆರಳಿಗೆ
ಸಣ್ಣ ಸಾಂತ್ವನ ನೀಡುತ
ಬರೆದುಕೊಳ್ಳದ ಸಾಲ ಹಿಡಿದು
ಬಿಟ್ಟು ಹೊರಟಳು ಬಿಕ್ಕುತ!!

                      -- ರತ್ನಸುತ

1 comment:

  1. ಇದೇ ಪ್ರಶ್ನಾರ್ಥಕ ಕವಿತೆ ಕೈಯಲಿಟ್ಟುಕೊಂಡು ಅಂದಿನಿಂದಲೂ ಮರುಗುತ್ತಿದ್ದೇವೆ ನಾವೆಲ್ಲ ಭಗ್ನಾತ್ಮ ಕವಿಪುಂಗವರು. :(

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...