Tuesday 6 May 2014

ಮೋಕ್ಷ

"ಅಧಮ,
ಪ್ರಥಮಗಳೆಲ್ಲವೂ ಶ್ರೇಷ್ಟವಲ್ಲ!!
ಅದು ಪ್ರೇಮವೋ, ಮೈಥುನವೋ
ಸ್ಖಲನವೋ, ಇಲ್ಲ ವ್ಯಾಗ್ರವೋ!!
ಎಲ್ಲವನ್ನೂ 
ಗಾಳಿಗೆ, ಮಣ್ಣಿಗೆ, ನೀರಿಗೆ
ಕಡೆಗೆ ದೇವರಿಗೂ ಅರ್ಪಿಸು,
ನಂತರಗಳೇ ಸೊಗಸು"

ಹೀಗಂದ ಜಂಗಮನೊಬ್ಬ
ಆಗಾಗ ಬಂದು ಹೋಗುತ್ತಾನೆ
ಕನಸಿನೂರ ಹೆಬ್ಬಾಗಿಲಲಿ
ನಾ ಒಂಟಿಯಾಗಿ ಮಣ್ಣ ಕೆದಕುವಾಗ!!

ನೆಲಗಚ್ಚಿದ ಕಣ್ಣನು ಮೇಲೆತ್ತಿ,
ಕೆನ್ನೆಗಾನಿಕೊಂಡ ನೀರ
ಒರೆಸುತ್ತಲೇ ಹೀಗಂದುಬಿಡುತ್ತಾನೆ
"ಸರ್ವಂ ಸುಂದರಂ, ಚಿತ್ತ ಚಂಚಲಂ"

ಹುಂಬನ ತಲೆಗೆ ಮತ್ತೊಂದು ಒಗಟು,
ಗೋಜಲಿಗೆ ಮತ್ತೊಂದು ಕಗ್ಗಂಟು;

ಅವನ ದನಿ ಅಷ್ಟಾಗಿ ನೆನಪಿಲ್ಲ,
ಮಾಸಲು ಮುಖ ನಿಖರವಾಗಿಲ್ಲ;
ಮೀಸೆ ಮರೆಯ ನಗು,
ಕಣ್ಣಡಿಯ ರೇಖೆಯ ಸಂಕುಚಿತ ಭಾವ
ಗೋಚರಿಸುವಷ್ಟರಲ್ಲೇ ಮರೆಯಾಗುತ್ತಾನೆ,
ಮತ್ತೆರಡು ಮಂತ್ರ ಪಠಿಸುತ್ತ!!

ಆ ನಂತರ ಸುದೀರ್ಘ ನಿದ್ದೆ,
ನಿಲ್ಲದ ಕನಸು;
ಹೆಬ್ಬಾಗಿಲಿಂದ ಹಟ್ಟಿಯ ಪಡಸಾಲೆ-
ತಲುಪುವಷ್ಟರಲ್ಲೇ ಎಚ್ಚರ;
ಸ್ವಪ್ನ ಸ್ಖಲನವಾಗಿತ್ತು
ನೀರಲ್ಲಿ ತೋಯ್ಸಿ ಬಿಟ್ಟೆ!!

                   -- ರತ್ನಸುತ

1 comment:

  1. "ಸರ್ವಂ ಸುಂದರಂ, ಚಿತ್ತ ಚಂಚಲಂ"
    ಹಾ ಹಾ...
    ಮೋಕ್ಷದ ಹೊಸ ಪರಿ ಬಾಷೆ, ಒಳ್ಳೆಯ ಕವನವಿದು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...