Sunday 17 August 2014

ಕಾವ್ಯ ಸಂಸ್ಕಾರ

ಮೆಚ್ಚಿ ಬರೆದ ಕವನಗಳೆಲ್ಲ
ಮುಚ್ಚಿಹೋದ ಬುಕ್ಕಿನಲ್ಲೋ
ಕೊಚ್ಚಿಹೋದ ದೋಣಿಯಲ್ಲೋ
ಸ್ವಚ್ಛ ಕಣ್ಣೀರಿನಲ್ಲೋ
ಕರಗಿ, ಸೊರಗಿ, ಮರುಗಿ
ಉಸಿರ ತೊರೆದ ಶವಗಳಾಗಿವೆ!!

ಗೊಂದಲದ ಗೂಡಲ್ಲಿ
ಇನ್ನೂ ಚೀವ್ಗುಟ್ಟುತ ಹಸಿದ ಮರಿಗಳು 
ಮೊಟ್ಟೆಯ ಕಾವಿನಿಂದ ಹೊರ ಬರದೆ
ಒಮ್ಮೆ ನಡುಗಿ, ಮೈ ಒದರಿ
ಮತ್ತೆ ನಿದ್ದೆಗೆ ಜಾರಿದಂತೆ
ಬಾಕಿ ಉಳಿದ ಎದೆಯಾಕ್ಷರಗಳು 
ಇನ್ನೂ ಜೀವಂತವಾಗಿವೆ!!

ಎಡವಿ ಬಿದ್ದಾಗ
ಯಾರೋ ಬಂದು ಮೇಲೆತ್ತುತ್ತಾರೆಂದು
ಕಾದ ತರಚು ಗಾಯಕ್ಕೆ
ಮಂಡಿ ಇನ್ನೆಷ್ಟು ಬುದ್ಧಿ ಹೇಳಬೇಕು;
ಬಿದ್ದು ಗಾಯಗೊಂಡ ಕವಿತೆಗಳು
ಅಳುವುದ ಬಿಟ್ಟು ಬೇರೇನನ್ನೂ ಕಲಿತಿಲ್ಲ;
ಇನ್ನೂ ಹುಟ್ಟದವೇ ಲೇಸು!!

ಮಸಿಯಾದ ತುದಿ ಬೆರಳುಗಳ
ಕೆನ್ನೆಗೆ ಆನಿಸಿ
ದೂರ ದೂರಕ್ಕೆ ವಿಸ್ತರಿಸುವ ಚಿತ್ತಕ್ಕೆ
ಹಾಳೆಯ ಮೇಲೆ ಹರಡಿ ಬಿದ್ದವುಕ್ಕಿಂತ
ನಾಲಗೆ ತುದಿಯಿಂದೊರಡದ ಆ
ಮೂರು-ಮತ್ತೊಂದು ನಕಲಿ ಶಬ್ಧಗಳ
ಅನಾವರಣದ ಚಿಂತೆ!!

ಬೇಕಾದ ಆಕಾರ ಕೊಟ್ಟು 
ಕುರೂಪಗೊಂಡ ಶರೀರದಲ್ಲಿ
ಶಾರೀರವಿಲ್ಲವಾದಾಗ
ಚಟ್ಟವೇರಿಸಿ ದಹಿಸುವ ಮೌನಕ್ಕೆ
ಯಾವ ಸ್ಪೂರ್ತಿದಾಯಕ ಮಳೆಯೂ
ಸಮಾಧಾನಕರವಲ್ಲ!!

ಅಂತಿಮ ಸಂಸ್ಕಾರದಲಿ ಪಾಲ್ಗೊಂಡವು
ನಿರಾಕಾರ ಪದಗಳು;
ಎಂದಾದರೂ ತಮಗೂ ಇಂಥ ಪರಿಸ್ಥಿತಿ
ಒದಗಿ ಬರಬಹುದೆಂಬ ಆತಂಕದಲ್ಲೇ
ನಾಲ್ಕು ಹನಿ ಕಣ್ಣೀರಿಟ್ಟು ಜಾರಿಕೊಳ್ಳುತ್ತವೆ!!

ನಾಯಿ ಹಗಲೇ ಊಳಿಡುತ್ತಿದೆ,
ಪಿಂಡಕ್ಕೆ ಆಗಲೇ ಕಾಗೆಗಳ ಹಿಂಡು
ಮಾಳಿಗೆಯ ಮೇಲೇರಿ ಚೀತ್ಕರಿಸುತ್ತಿವೆ;
"ಹೊಗೆ ಆಡುತಲೇ ಇರಬೇಕು
ಮುಗಿಯುತ್ತಾ ಬಂದ ಕವನಕ್ಕೆ
ಕೊನೆಯ ಶುದ್ಧೊದಕ ಅರ್ಪಿಸಿವೆ;
ಇಂತಿ ನಿಮ್ಮ ಶ್ರೇಯಾಭಿಲಾಶಿ
ಶಾಯಿ ಮುಗಿಯದ ಲೇಖನಿ!!"

-- ರತ್ನಸುತ

1 comment:

  1. ನಮ್ಮ ಕವನಗಳೂ ಹಲವು ಹೇಗೆಯೇ!
    ’ಮುಗಿಯುತ್ತಾ ಬಂದ ಕವನಕ್ಕೆ
    ಕೊನೆಯ ಶುದ್ಧೊದಕ ಅರ್ಪಿಸಿವೆ’
    :(

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...