Tuesday 16 September 2014

ತೊದಲು ಹೆಜ್ಜೆ

ಕಣ್ಣ ರೆಪ್ಪೆ ಮೇಲೆ ಕನಸ
ಮರೆತು ಬಿಟ್ಟು ಹೋದ ನಿನ್ನ
ಎಲ್ಲಿ ಅಂತ ಹುಡುಕ ಬೇಕೋ
ತಿಳಿಯದಲ್ಲೇ ರೂಪಸಿ;
ಒಂಟಿಯಾಗಿ ಎಷ್ಟು ದಿವಸ
ನಂಟ ಊಹೆಗೈಯ್ಯುತಿರಲಿ?
ಬೆಸೆದುಕೊಳ್ಳ ಬೇಕು ಈಗ
ಉಳಿಯಬೇಡ ಕಾಯಿಸಿ!!

ಕಪ್ಪು ಕುರುಳಿಗೊಪ್ಪುವಂಥ
ಕೇಶಬಂಧಿ ಕೊಂಡು ತರುವೆ
ಗಲ್ಲವನ್ನು ಇನ್ನು ಮುಂದೆ
ಯಾರೂ ಕೂಡ ಕೆಣಕರು;
ಕೆಣಕುವಾತನೊಬ್ಬ ನಾನು
ಉಳಿಯಲಾರದಷ್ಟು ದೂರ
ನನ್ನ ಈ ಗೋಳು ಕಥೆಯ
ಯಾರು ತಾನೆ ಬಲ್ಲರು?!!

ಸಂತೆ ಬೀದಿಯಲ್ಲಿ ನೀನು
ಹಾದು ಹೋದ ಸುದ್ದಿಯನ್ನು
ಸೋಕಿ ಬಿಟ್ಟ ಸೋರೆಕಾಯಿ
ಸಾರಿ ಸಾರಿ ಹೇಳಲು;
ಯಾವ ಮರದ ನೆರಳು ಕೂಡ
ಹಿತವ ನೀಡುವಂತೆ ಇಲ್ಲ
ಇದ್ದ ದುಃಖವೆಲ್ಲವನ್ನು
ಹಂಚಿ ಒರಗಿಕೊಳ್ಳಲು!!

ಸೀಮೆ ಹಾಕಿಕೊಳ್ಳಲಿಲ್ಲ
ಬಾಗಿಲನ್ನೂ ಇರಿಸಲಿಲ್ಲ
ಮನದ ಮಾರು ದೂರದಲ್ಲಿ
ಒಂದು ಮಲ್ಲೆ ಗಿಡವಿದೆ;
ಅಡ್ಡಿ ಆಗಬಾರದೆಂದು
ಪಳೆಯುಳಿಕೆ ಗೆಳತಿಯರ
ನೆನಪುಗಳ ಬುಡ ಸಮೇತ
ಕಿತ್ತು ಹಾಕಿ ಕೆಡವಿದೆ!!

ಗಟ್ಟಿಯಾಗಿ ಇಟ್ಟು ಕರೆದೆ
ನಿನಗಿಟ್ಟ ಅಡ್ಡ ಹೆಸರ
ಕೇಳದಂತೆ ಸುಳ್ಳೆ ನೀನು
ನಟನೆ ಮಾಡ ಕೂಡದು;
ಉಸಿರುಗಟ್ಟಿದಾಗ ಕೂಡ
ನಿನ್ನ ನೆನಪ ಮಾಡಿಕೊಂಡೆ
ಯಾವ ದಿವ್ಯ ಶಕ್ತಿ ನಿನದು?
ಪ್ರಾಣ ಕೈಯ್ಯ ಮುಗಿವುದು!!

ದಿಂಬಿನಡಿಗೆ ಇಟ್ಟ ಕವನ
ನಿನ್ನ ಎಡೆಗೆ ಒಂದು ಹೆಜ್ಜೆ
ಸಾಲು ಸಾಲು ಗೀಚಿಕೊಂಡು
ನಿನ್ನ ಮನವ ತಲುಪುವೆ;
ಇನ್ನೂ ಹೆಚ್ಚು ಬರೆದುಕೊಳಲು
ಖಿನ್ನತೆ ಕಾಡಬಹುದು
ಇಷ್ಟು ಹೇಳಿ ನನ್ನ ಎರಡು
ಮಾತುಗಳನು ಮುಗಿಸುವೆ!!

                  -- ರತ್ನಸುತ

1 comment:

  1. ಅವಳ ಬಗ್ಗೆ ನಲ್ಲನಿಗೆ ಸಾವಿರ ಕವನಗಳನು ಬರೆದರೂ ಖಾಲಿಯಾಗದು ಬತ್ತಳಿಕೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...