Friday 17 October 2014

ನಿರುತ್ತರ



ಪ್ರಾಣ ಹಿಂಡುವ ಹಸಿವು
ಎಷ್ಟು ಉಂಡರೂ ನೀಗುತ್ತಿಲ್ಲ
ಅದು ಹೊಟ್ಟೆಯ ಮೀರಿದ ಹಸಿವು
ಹೃದಯವ ಕ್ಷೋಭಿಸೋ ಹಸಿವು!!
ನೆನ್ನೆಗಳೆಲ್ಲವನ್ನೂ ಉಂಡು
ತೇಗುತ್ತ ಉಳಿದ ಜೀವಕ್ಕೆ
ನಾಳೆಗಳು ಕೇವಲ ಮುಂಬರುವ ನೆನ್ನೆಗಳು
ಇಂದಿಗಂತೂ ಹಿಂದೆ ನೀಡಿದಷ್ಟೇ ಮಾನ್ಯತೆ!!
ಅಪಾರ ಹೆಜ್ಜೆಗಳ ಮೇಲೆ
ಹೆಜ್ಜೆಯಿಟ್ಟು ಸಾಗಿ ಬಂದ
ಕನಸುಗಾರಿಕೆಯ ಕಸುಬುದಾರನಿಗೆ
ಕತ್ತಲು ಬಾಯ್ಪಾಠವಾದಂತೆ;
ಬೆಳಕಿನ ಬಳಪ ಹಿಡಿಯದಷ್ಟು ಅವಿವೇಕಿ,
ನಾನು ಕನಸುಗಾರನೆಂಬ ಲಜ್ಜೆಗೇಡು ಭಾವ!!
ಇಷ್ಟೇ ಅಲ್ಲ್ಲದ ಇನ್ನೂ ಖಾಲಿತನಗಳ
ತುಂಬಿಕೊಳ್ಳಲಾಗದ ಅಸಹಾಯಕತೆಯೇ
ನನ್ನ ಗುರುತಿನ ಚೀಟಿ;
ಸೋಲುಗಳೊಡನೆ ಪ್ರತಿ ನಿತ್ಯ
ಮುಖಾ-ಮುಖಿ ಬೇಟಿ
ಆದರೂ ಪಾಠ ತಪ್ಪುವುದೇ ಪರಿಪಾಠ!!
ಸಿಕ್ಕಿಬಿದ್ದ ಗೋಜಲನ್ನ
ಬೇಕಂತಲೇ ಜಗ್ಗಾಡಿಕೊಂಡ ಮೂರ್ಖತ್ವ
ಇನ್ನೂ ಬಿಗಿದ ಕೊರಳಿಂದ ಹೊರಡದ ಮಾತು;
ಸದ್ಯಕ್ಕೆ ಮೌನವೇ ಎಲ್ಲಕ್ಕೂ ಆಧಾರ!!
                                        -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...