Monday 29 December 2014

ಪರಿತಪನೆ

ಅಗಲಿದ ಜೀವಗಳೇ ಕ್ಷಮಿಸಿ
ನಿಮ್ಮ ಅಗಲಿಕೆಯ ವಿಷಯ
ನನ್ನ ತಲುಪದಷ್ಟು ಮೆದುವಾಗಿ
ಡಂಗೂರ ಸಾರಲ್ಪಟ್ಟಿತು
ಅದಕ್ಕಾಗಿಯೇ ಬರಲಾಗಿಲ್ಲ
ನನ್ನ ಸೋತ ಮೋರೆಯ ಹೊತ್ತು
ನಿಮ್ಮ ಅಂತಿಮ ದರ್ಶನಕ್ಕೆ!!

ಈಗ ನಿಮ್ಮ ನೆನಪು
ನನ್ನಲ್ಲೆಬ್ಬಿಸಿದ ಅಪಾರ ದುಃಖಕ್ಕೆ
ಕಣ್ಣೀರಿಡುವ ಅರ್ಹತೆಯನ್ನೂ
ಕಳೆದುಕೊಂಡ ಪಾಪಿಯಾಗಿದ್ದೇನೆ;
ನಿಜಕ್ಕೂ ನಾನು ಪರಮ ಪಾಪಿ!!


ನಿಮ್ಮವರ ಹೃದಯ ಭಾರವ
ಹೊರಲಾಗದವನು
ನಿಮ್ಮ ಭಾರಕ್ಕೂ
ಬಾರದ ಹೆಗಲು
ಹಿಡಿ ಮಣ್ಣ ಚೆಲ್ಲದ ಹಸ್ತ
ನಾಚಿಕೆಯಲ್ಲಿ ತಲೆ ತಗ್ಗಿಸಿವೆ
ತೋಳುಗಳು ಶಕ್ತಿಹೀನವಾಗಿವೆ!!

ಅಂತಿಮ ಯಾತ್ರೆಯ ಕೂಡಿ
ಎದ್ದ ಧೂಪದಲ್ಲಿ ಮೀಯದೆ
ಹೂವ ಹಾದಿಯನು ಹಾಯದೆ
ಮಾನವೀಯತೆಯ ಮರೆತು
ಎಲ್ಲೊ ಮೈಮರೆತ ತಪ್ಪಿಗೆ
ನನ್ನ ಅಂತಿಮ ದಿನದಂದೇ
ಮುಯ್ಯಿಗೆ ಮುಯ್ಯಿ ತೀರಲಿ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...