Tuesday 25 April 2017

"ಮುಂದೇನಾಯಿತು?"


ಬೆರಗುಗಣ್ಣಿನ ಮುಗ್ಧ ಮುಖಗಳು
ಪುಣ್ಯಕೋಟಿಯ ಕಥೆ ನೋಡುತ
ಮತ್ತೆ ಮತ್ತೆ ಮಾರುಹೋದವು
ಸತ್ಯವಾಕ್ಯ ಪರಿಪಾಲನೆಗೆ


ಪುಣ್ಯಕೋಟಿ ತಾನು ತನ್ನ
ಕಂದನಿಗೆ ಹಾಲುಣಿಸುತಿರಲು
ನಾಲಗೆಯ ಚಪ್ಪರಿಸುತ ಅವು
ಹರ್ಷದಿಂದ ಕುಣಿದವು


ಹುಲಿಯ ಘರ್ಜನೆ, ಕ್ರೋಧ ಭಂಗಿ
ಅರಳಿಸಿದವು ಕಣ್ಣ ಚೂರು
ಹೆಜ್ಜೆ ಹೆಜ್ಜೆಗೆ ಕೌತುಕಕ್ಕೆ 
ನಾಂದಿ ಹಾಡಿತು ಹಾಡದು


ಪುಣ್ಯಕೋಟಿಯು ಹುಸಿಯನಾಡದೆ
ಹುಲಿಗೆ ತಾ ಶರಣಾಗುತಿರಲು
ಎಗರಿ ಇರಿದು ರಕ್ತ ಕುಡಿವುದು
ಎಂದು ಅವುಗಳು ಎಣಿಸಲು


ಹುಲಿಯು ಕಂಬನಿ ಹರಿಸಿ ಪ್ರಾಣವ
ಬಿಟ್ಟ ಕೂಡಲೆ ಕಥೆಯು ಮುಗಿಯಿತು
ಪುಣ್ಯಕೋಟಿಯ ಜೀವ ಉಳಿದಿದೆ
ಪ್ರಶ್ನೆ "ಮುಂದೇನಾಯಿತು?"


ಹುಲಿಗೂ ಇರಬೇಕಲ್ಲ ಮರಿಗಳು?
ಅವುಗಳಾರು ಸಲಹುವವರು

ಗಂಗೆ, ತುಂಗೆಯರಂತೆ ಅವಕೆ
ಉಣಿಸುವವರಾರು ಮಾಂಸವ?


ಮತ್ತೆ ಮೊಳಗಿತು ಅದೇ ಹಾಡು

ಮತ್ತೆ ಮತ್ತೆ ಹುಲಿಯೇ ಸತ್ತಿತು
ತಬ್ಬಲಿ ಹುಲಿ ಮರಿಗಳೆಷ್ಟೋ 
ಕಾಣದಾದವು ಕಣ್ಣಿಗೆ!!

                                - ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...