Tuesday 24 November 2015

ರಿನೈಸನ್ಸ್ (Renaissance)

ಎಲ್ಲರೂ ಸತ್ತು ಮತ್ತೆ ಹುಟ್ಟೋಣ್ವಾ?
ಬ್ರಹ್ಮ, ಅಬ್ರಹಂ, ಇಬ್ರಾಹಿಂ ಒಪ್ಪಿದ್ದಾರೆ
ಬನ್ನಿ ಎಲ್ಲರೂ ಸಾಯೋಣ
ಎಲ್ಲವನ್ನೂ ಸಾಯಿಸೋಣ


ಮನುಕುಲದ ಹುಟ್ಟು ಎಲ್ಲಿಂದ? ಯಾರಿಂದ?
ಹೇಗಾಗುವುದೆಂಬ ಚಿಂತೆ ಬೇಡ
ಒಗಟುಗಳ ತಗಾದೆ ಬೇಡ
ಮೊದಲುಗಳ ಮೂಲ ಹುಡುಕುತ್ತ
ಮೆದುಳುಗಳು ಕೊಳೆವುದು ಬೇಡ
ನೆನ್ನೆಗಳ ಸಮರ್ಥನೆಗೆ ಇಂದು-ನಾಳೆಗಳ ಕಳೆವುದು ಬೇಡ


ಹುಟ್ಟು ಹುಟ್ಟಾಗಿರಲಿ, ಸಾವು ಗುಟ್ಟಾಗಿರಲಿ
ಪುನರ್ಜನ್ಮಗಳ ಕಂತೆ ಪುಟಗಳೆಲ್ಲ ಹರಿಯಲಿ
ದೇವರೇ ಇಳಿದು ಬಂದು ತಾ ದೇವರೆಂದರೂ
ದೇವನೊಬ್ಬನೇ ಎಂದು ಯಾರೇ ಸಾರಿದರೂ
ದೇವರು ಮತ್ತೆ ಹುಟ್ಟಿ ಬರುತ್ತಾನೆಂದರೂ
ದೇವರು ಮೊದಲು ನಮ್ಮಲ್ಲಿ ನೆಲೆಸದ ಹೊರತು
ಅದು ದೇವರೆಂಬುದೇ ಇಲ್ಲವೆನ್ನದ ಹೊರತು
ಅದು ಅದಾಗಿ ಅವ/ಅವಳಾಗದ ಹೊರತು
ದೇವರನ್ನ ದೂರವಿಟ್ಟೇ ನೋಡೋಣ


ಒಂದು ಹಸಿವಿಗೆ ನೂರು ಕೈ
ಒಂದು ನೋವಿಗೆ ನೂರು ಮನಸು
ಒಂದು ಅಳಲಿಗೆ ನೂರು ಕಣ್ಣು
ಸಂಸ್ಕೃತಿಯ ಅಡಿಪಾಯದ ಮೇಲೆ
ಭವ್ಯ ಬಂಗಲೆಗಳ ಕಟ್ಟೋಣ,
ಕೋಣೆಯಲ್ಲಿ ದೇವರ ಕಟ್ಟಿ ಹಾಕುವುದು ಬೇಡ
ಅದಕ್ಕೂ ಸ್ವತಂತ್ರ ತಂತ್ರದ ಅರಿವಾಗಲಿ
ಅನ್ಯ ಗ್ರಹಗಳೇನಾದರೂ ಬದಲಾದ ಭೂಮಿಯಿಂದ ಕಲಿವಂತಿದ್ದರೆ
ದಾರಾಳವಾಗಿ ಅದು ಕಲಿಸಲಿ
ಆದರೆ ದೇವರಾಗಿ ಅಲ್ಲ!!


ಸಾವು ಸ್ವಸ್ಥ್ಯ ವೃದ್ಧಿಸುವುದಾದರೆ
ಇಡಿ ದೇಶ ದೇಶಗಳು ಸ್ಮಶಾಣಗಳಾಗಲಿ
ಆದರೆ ಮನುಷ್ಯರು ಹೀಗೂ ಇದ್ದರೆಂಬ
ಕುರುಹುಗಳ ಉಳಿಸದಿರಲಿ ಸಾಕು!!


                                          - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...