Wednesday, 5 October 2016

ಪುನರ್ಜನ್ಮ

ಪೊರೆ ಕಳಚಿ ಹೊಸತಾಗುವಾಗ
ಬೆತ್ತಲಾಗುವ ಭಯವಿಲ್ಲ
ನನ್ನ ಮುಖವಾಡವೂ ಕಳಚಿದೆ
ನಾನಾರೆಂಬುದಾರಿಗೂ ತಿಳಿಯದು


ಹೊಸತೊಂದು ಗುರುತು ಸಿಗಬೇಕಿದೆ
ಸಮರಕ್ಕೆ ಬೇಕಾದ ಶಸ್ತ್ರಾಸ್ತ್ರಗಳ
ಸಿದ್ಧಪಡಿಸಲೆಂದೇ ಕುಲುಮೆ ಹಚ್ಚಿದೆ
ಎಲ್ಲ ಆಯುಧಗಳ ಕಾಯಿಸಿ ತಟ್ಟಬೇಕು
ಸೋತ ಯುದ್ಧಗಳ ಪಾಠ ಕಲಿತು
 
ಸುಮ್ಮನೆ ಯಾರಂದರಾರೊಡನೆ ಕಾದಾಡಲಿ?
ಎದುರಾಳಿಯ ರಕ್ತ ಕುದಿಯಲು ಕಾರಣ ಬೇಕಲ್ಲ?
ಅದಕ್ಕಾಗಿಯೇ ಕ್ರೌರ್ಯ ರೂಢಿಸಿಕೊಂಡೆ
ಯಾರನ್ನೂ ಬಿಡದೆ, ಎಲ್ಲರನ್ನೂ ಎದುರುಹಾಕಿಕೊಂಡೆ
ಇಷ್ಟು ಸಾಕಿತ್ತು ಶತ್ರುಗಳು ಹುಟ್ಟಿಕೊಳ್ಳಲು
 
ಆಶ್ಚರ್ಯವೆಂಬಂತೆ ನನ್ನ ಜೊತೆ ಕೈ ಜೋಡಿಸಲು
ಪಳಗಿದ ಪಡೆಗಳೇ ಸಜ್ಜಾಗಿದ್ದ ಕಂಡೆ
ರಕ್ಕಸತನದ ಕೆಂಡಕ್ಕೆ ಸಿಕ್ಕ ಉರುವಲಾದೆ
ಅರೆ ಬೆಂದ ನಾನು ಚಟ-ಪಟ ಸದ್ದು ಮಾಡುತ್ತ
ಮೈ ಮುರಿದೆ ನೀಗದ ಹಸಿವಿನಿಂದ
 
ಆಚೆಯವರಲ್ಲಿ ಯಾವುದೇ ಆಯುಧಗಳಿರಲಿಲ್ಲ
ಕೇವಲ ಪ್ರಾರ್ಥನೆಗಳೇ ಕೇಳುತ್ತಿತ್ತು
ಅವರೆಲ್ಲ ನನ್ನ ವೈರಿಯೆನ್ನದೆ
ಹಠಕ್ಕೆ ಬಿದ್ದ ಮಗುವಂತೆ ಕಂಡದ್ದು
ನನ್ನ ಇನ್ನಷ್ಟು ಕೆರಳಿಸಿತು
 
ಸರಿಯಾಗಿ ಆಗಲೇ ಮಿಂಚು, ಗುಡುಗು ಸಹಿತ
ಮಳೆಗರೆಯಲು ಶುರುವಾಗಿದ್ದು
ನನ್ನ ಬೇಕುಗಳೆಲ್ಲ ತಣ್ಣಗೆ ನುಣುಚಿಕೊಂಡು
ಅನಿವಾರ್ಯವಾಗಿದ್ದ ಸಾವು ಸಂಭವಿಸಿದ್ದು
ಲೋಕದ ಕಣ್ಣಿಗೆ ನಾನು ಶವವಾಗಿದ್ದೆ
ಆದರೆ ನನ್ನೊಳಗಿನ ತೀರದ ಬಯಕೆಗಳು
ನನ್ನ ಪ್ರಾಣವನ್ನ ತಮ್ಮ ಮುಷ್ಠಿಯಲ್ಲಿ ಬಚ್ಚಿಟ್ಟಿದ್ದವು
ಮತ್ತೆ ಆಕಾರ ಪಡೆದು
ಸುಟ್ಟ ತೊಗಲ ಮೆಲ್ಲ ಸೀಳುತ್ತ ಹೊರ ಬಂದೆ
ಸುತ್ತಲೂ ಪ್ರಶಾಂತತೆ....
                                              
                                              - ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...