Wednesday, 12 October 2016

ಮೌನ ಪರಿಹಾರ

ಪ್ರವಾದಿಗಳು ಅಪ್ಪಣೆ ಹೊರಡಿಸಿದ್ದಾರೆ?
ಮರ್ಮಾಂಗದ ಮುಂದೊಗಲನ್ನು ಕತ್ತರಿಸಿ

ತಿಳಿ ನೀರಲ್ಲಿ ಅದ್ದಿ ಉಸಿರುಗಟ್ಟಿಸಿ
ತಲೆ ಬೋಳಿಸಿ ಗಂಧ ಲೇಪಿಸಿ
ಎದೆ ಸೀಳಿಕೊಂಡು ರಕ್ತ ಹರಿಸಿ
 
ಪ್ರವಾದಿಗಳು ಅಪ್ಪಣೆ ಹೊರಡಿಸಿದ್ದಾರೆ?
ಎಂಜಲಿನ ಮೇಲೆ ಹೊರಳಾಡಿ ಪುನೀತರಾಗಿ
ಅಸ್ತಿತ್ವವೇ ಮಾಯವಾಗುವಂತೆ ಮೈ ಮುಚ್ಚಿ
"ತಾನೊಬ್ಬನೇ" ಒಪ್ಪದವರನ್ನ ದ್ವೇಷಿಸಿ
ಬದುಕು ಕಟ್ಟುವ ಕ್ರಮವನ್ನೇ ಪಲ್ಲಟಗೊಳಿಸಿ
 
ಇವಷ್ಟೇ ಅಲ್ಲದೆ
 
ಪ್ರವಾದಿಗಳು ಸೂಚಿಸುತ್ತಾರೆ
 ಬದುಕಿ, ಬದುಕ ಕಲಿಸಿ, ಬದುಕಲು ಬಿಡಿ
ಹಸಿವನ್ನು ಆಲಿಸಿ, ವಿಷವನ್ನು ಸೋಲಿಸಿ
ಉಸಿರುಸಿರ ಸರದಿಯನ್ನೂ ಪ್ರೀತಿಸಿ

ಸ್ವಾರ್ಥವನು ಹಿಮ್ಮೆಟ್ಟಿ ಈಸಿ
 
ಪ್ರವಾದಿಗಳು ಅಂಗಲಾಚುತ್ತಿದ್ದಾರೆ
"ಸುಳ್ಳು ಪೋಷಾಕಿನಲ್ಲಿ ಆರಾಧಿಸದಿರಿ
ನನ್ನ ವಿವಸ್ತ್ರಗೊಳಿಸಿ ಹಿಂಬಾಲಿಸಿ

ಕಟ್ಟು ಕಥೆಗಳ ಚಿತೆಗೆ ದೂಡದಿರಿ
ಹಗೆತನದ ಕೊಳ್ಳಿಯಲಿ ಸುಡದಿರಿ"
 
ಯಾರೇ ಸತ್ತ ಕಾಲಕ್ಕೆ ಮೌನವಹಿಸುವಂತಾದರೆ
ಅನಾಚಾರದ ಅತಿರೇಕದ ಪ್ರಭಾವಕ್ಕೆ
ಪ್ರವಾದಿಗಳು ಕ್ಷಣ ಕ್ಷಣಕ್ಕೂ ಸಾಯುತ್ತಿದ್ದಾರೆ
ಎಲ್ಲವನ್ನೂ ಬದಿಗಿಟ್ಟು ಮೌನವಹಿಸೋಣ

ಮಾತಿನಿಂದಲೇ ಮನದ ಮನೆ ಹಾಳು!!
 
                                               - ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...