Friday, 12 June 2015

ಇಷ್ಟರಲ್ಲೇ

ಭಯವೆಂದು ಭುಜಕಾನಿ
ನಡುಗುತ್ತ ಮುತ್ತಿಟ್ಟು
ಪಡೆದದ್ದು ನೂರೆಂಟು
ಲೆಕ್ಕವೇ ಬೋರು
ಖುಷಿಯಲ್ಲಿ ಮಿಂದೆದ್ದು
ನೋವಲ್ಲಿ ಮೈ ಒದರಿ
ಸಹಜ ಸ್ಥಿತಿಯಲ್ಲೊಂದು
ಶಾಂತ ಕಣ್ಣೀರು

ಅವರ ಮಾತಿಗೆ ಎಳೆದು
ಇವರ ಬಿಟ್ಟುಕೊಟ್ಟು
ನಾವು ನಾವಾಗಿರದೆ
ನಮ್ಮನ್ನೇ ಕೆದಕಿ
ಎಲ್ಲೋ ಮರೆತ ಹಾಗೆ
ಹೆಜ್ಜೆಯಿಟ್ಟು ಕೊನೆಗೆ
ಜಂಟಿ ಸೋಲೊಪ್ಪಿದೆವು
ಕಣ್ಮುಚ್ಚಿ ಹುಡುಕಿ

ದೇವರೆದುರೇ ಬಾಗಿ
ಬೈಗುಳದ ಮಳೆಗರೆದು
ನೆತ್ತಿಗಿಟ್ಟ ಬೊಟ್ಟು
ಕರಗುತಿದೆ ಚೂರು
ಹಳ್ಳ-ಕೊಳ್ಳದ ಹಾದಿ
ಅಲ್ಲೊಂದು ಮುದಿ ಸೂರ್ಯ
ಮಂದ ಬೆಳಕಿನ ನಡುವೆ
ನಾವೆಳೆದ ತೇರು

ನಿದ್ದೆಯಿಲ್ಲದ ಇರುಳ
ಕನಸ ಕಾವಲಿನವರು
ಈಗೀಗ ಬೇಡಿಹರು
ಕೂಲಿ ಪಗಾರ
ಹಂಚಿಕೊಂಡದ್ದೆಷ್ಟೋ
ಬಚ್ಚಿಯಿಟ್ಟದ್ದೆಷ್ಟೋ
ನೂಕು ನುಗ್ಗಲಿನಲ್ಲಿ
ಎಷ್ಟೋ ವಿಚಾರ

ಮೊಗಸಾಲೆ ಚಿತ್ರಕ್ಕೆ
ಹಿತ್ತಲಿನ ಹೂಘಮಲು
ಅಂತಃಪುರದ ಬಾಗಿಲು
ಚೂರು ಸಡಿಲು
ಉಪ್ಪರಿಗೆಯ ಮೇಲೆ
ಒಣಗಿಸಿಟ್ಟ ಖಾರ
ಪಲ್ಲಂಗದ ಮೇಲೆ
ನಿತ್ಯ ಹೂ ಮುಗಿಲು
              -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...