Monday, 17 August 2015

ಪಯಣ

ಈಜಿದ್ದು ಸಾಕಾಯಿತು
ಪಾದವ ನೆಲಕೆ ತಾಕಿಸಿ
ಯಾವ ಮಟ್ಟಕ್ಕೆ ನೀರು ಬರುತ್ತದೆಯೋ
ಕೂಡಲೇ ಪರೀಕ್ಷಿಸಬೇಕು,
ನನಗೆ ಗೊತ್ತಾಗಿದೆ
ಇನ್ನು ಬಹಳ ದೂರ ಈಜಲಾರೆ


ಉಸಿರು ಬುಡ್ಡೆಗಳಾಗಿ ಒಡೆದು
ಹೆಸರಿಲ್ಲದಂತಾಗಿವೆ
ಎದೆ ಗೂಡಿಗೆ ಕನ್ನ ಹಾಕಿ
ಮತ್ತಷ್ಟು ದೋಚುವ ನೀರಿಗೆ
ಮೀನುಗಳಿಗೆ ಮಾತ್ರ ತವಕ
ನನಗದು ನರಕ


ತೇಲಿ ಬಿಡಬೇಕು
ಹೇಗಾದರೂ ತೀರ ತಲುಪಲು,
ಅದಕೆ ಸಾಯುವುದೊಂದೇ ದಾರಿಯಲ್ಲ
ಈಜು ಕಲಿತರೆ ಸಂಬಾಳಿಸಬಹುದು.
ಕಲಿಸುವರಾರಿಲ್ಲದೆ ಬಳಲಿದ್ದೇನೆ
ಅಲೆಗಳು ಗುಟ್ಟಾಗಿ ಸಂಚು ರೂಪಿಸುತ್ತಿವೆ


ಸುಳಿಯೊಂದನು ದಾಟಿ ಬಂದಿರುವೆ
ಅದರ ವ್ಯಾಪ್ತಿಯ ಅರಿವಿದೆ,
ಭಯವೆಲ್ಲ ಒಂದೇ
ಅದು ಸುಳಿಯೇ ಆಗಿರದಿದ್ದರೆ?
ಸುಳ್ಳಾಗಿದ್ದರೆ ಗತಿಯೇನು?
ಯಾವುದನ್ನೂ ಕಡಿಮೆ ಅಂದಾಜಿಸುವಂತಿಲ್ಲ!!


ಮಂಡಿ ನಿಧಾನಕೆ ಸೆಟೆದುಕೊಂಡಿತು
ಪಾದಕೆ ಏನೋ ಸಿಕ್ಕಂತಿದೆ
ಇದೇ ನೆಲವಿರಬೇಕು
ನನ್ನ ದಣಿವಾರದ ಹಂಬಲದ ಮೊದಲ ಹೆಜ್ಜೆಯ
ಮುಂದಿಕ್ಕುವ ಆತಂಕ


ಪಯಣ ಒಂದೇ ಸಮ ಇರದು
ಇದ್ದಲ್ಲೇ ಉಳಿಯಲಿಕ್ಕೂ ಮುಜುಗರ
ಪ್ರಪಾತವೊಂದರ ಪರಿಚಯವಾಗಲಿ
ಹೆಜ್ಜೆ ಇಕ್ಕಿಯೇ ತೀರುತ್ತೇನೆ,
ಮತ್ತೆ ನೆಲದ ಮಡಿಲು
ಬದುಕು ಸಾಗುತ್ತಲೇ ಇದೆ!!


                                            -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...