Monday, 24 August 2015

ಚಿಗುರಿನ ಹೊಸತು

ಮಾತ ತಡೆಯಲು ಹಸ್ತ ಸಲ್ಲ
ತುಟಿಯಾದರೆ ಹಸ್ತಕ್ಷೇಪವಿಲ್ಲ
ಸತ್ತ ಮಾತುಗಳ ಮುಕ್ತಿಗಾಗಿ
ಒಮ್ಮೆ ಯತ್ನಿಸಿ ನೋಡುವ ಸಹಜವಾಗಿ


ಕತ್ತಲಾವರಿಸುತ್ತಲೇ ಮೌನ
ಕಣ್ರೆಪ್ಪೆ ಮೇಲೆ ಗೀಚಲೇ ಕವನ?
ತಾಳ ತಪ್ಪದಿರಲಿ ಸಪ್ಪಳದ ಹಾಡು
ದೀಪವೂ ನಾಚಿ ಬಳುಕುವುದ ನೋಡು!!


ಪಲ್ಲಂಗಕೆ ದಿಂಬು ಬೇಡವಾಗಿ
ಒಂದೊಂದು ಬದಿಯಲ್ಲಿ ಒಂದೊಂದು
ಮುನಿದು ನೆಲಕಪ್ಪಳಿಸಿಹುದ ಬಲ್ಲೆ
ನಸುಕು ಕಳೆಯಲಿ ಚಿಂತೆ ಬಿಡು ನಲ್ಲೆ


ಹೂವ ಹೊಸಕಿದ ಒಡಲು
ಗಂಧ ಧೂಪವ ಕೂಡಿ
ಕೋಣೆಯ ನಿರ್ಜೀವ ಗೋಡೆಗಳ
ಅಮಾನುಷವಾಗಿ ಬದುಕಿಸಬಾರದಿತ್ತು


ದೀಪ ಆರುವ ಸಮಯದ ನಿಗದಿಯಿಲ್ಲ
ಇದ್ದರೂ ನಮಗದು ಬೇಕಾಗೇಯಿಲ್ಲ
ಗಡಿಯಾರದ ಕಾಲಿಗೆ ಚುಚ್ಚಿ ಮುಳ್ಳು
ಉಳಿದಲ್ಲೇ ನರಳಿತು ದಯೆ ತೋರಲಿಲ್ಲ


ಹೊನ್ನ ಕಿರಣದ ದಿಬ್ಬಣ ಬಂದಿದೆ
ಆಗಷ್ಟೇ ಮುಚ್ಚಿದ ಕಣ್ಣ ತೆರೆಸೆ
ಆಕೆ ಹಣೆಬೊಟ್ಟ ಹುಡುಕುತಲಿದ್ದಳು
ತುಂಟ ನಗೆಬೀರಿ ಅರಳಿತು ಮೀಸೆ!!


                                         -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...