Monday, 24 August 2015

ನಾನೊಂದು ಕನಸ ಕಂಡೆ

ನನ್ನ ಮನದ ಬೀದಿಯಲ್ಲಿ
ನೀವು ಸಾಗಿಸಿ ಹೊರಟ
ಹೂವ ತೇರು ಅದರ ಕಂಪು
ಇನ್ನೂ ಮಾಸದಾಗಿದೆ
ಬೀದಿ ತುಂಬ ಹೊಂಡ ಬಿದ್ದು
ಬಳುಕಿ ಬಿದ್ದ ಹೂವ ಹೆಕ್ಕಿ
ಕಣ್ಣಿಗೊತ್ತಿಕೊಂಡೆ ಹಾಗೇ
ಹಿಂದೆ ಮುಂದೆ ನೋಡದೆ


ದೂರ ತಿರುವಿನಲ್ಲಿ ತೇರು
ಕಾಣುವಷ್ಟೂ ಹೊತ್ತು ನಾನು
ಕಣ್ಣ ಮೇಲೆ ರೆಪ್ಪೆ ಸೋಕದಂತೆ
ನಿಂತೆ ನೋಡುತ
ಯಾವ ಮಾತೂ ಹೊರಡಲಿಲ್ಲ
ಬೆರಳೂ ಕೂಡ ಹೊರಳಲಿಲ್ಲ
ಮೌನ ರಾಗದಲ್ಲಿ ಮಿಂದು
ಕರಗಿ ಹೋದೆ ಹಾಡುತ


ಯಾವ ತೋಟಗಾರನಲ್ಲಿ
ಏನ ಕೊಟ್ಟು ತಂದ ಹೂವೋ?
ಬರೇ ಹೂವಲ್ಲ ಅವು
ಜೀವ ತಾಕೋ ಘಮಲಿದೆ
ಮಣ್ಣು ಕೂಡ ಎಷ್ಟು ಗೌಪ್ಯ-
ರಮ್ಯ ಕಲೆಯ ಒಡೆಯನಲ್ಲ?
ಬಿತ್ತಿದಲ್ಲಿ ಎಲ್ಲ ತಾನು
ಚಿತ್ರ ಕಾವ್ಯ ಬಿಡಿಸಿದೆ!!


ಎಷ್ಟೋ ಬಾರಿ ಹಿಂದೆ ಬಿದ್ದು
ನನ್ನ ಮನೆಯ ದಾರಿ ಮರೆತು
ಯಾರೋ ತಡೆದು ಕೈಯ್ಯ ಹಿಡಿದು
ಬಾಗಿಲಲ್ಲಿ ಬಿಟ್ಟರು
ಹೊನ್ನ ತೇರು, ಬೆಳ್ಳಿ ತೇರು
ಎಲ್ಲ ಹಾದು ಹೋದವಲ್ಲಿ
ಹೂವ ಗಂಧದಷ್ಟು ಚಂದ
ಯಾವೂ ಇಲ್ಲ ಆದರೂ


ನಾನೂ ಕೂಡ ಕಟ್ಟುತಿರುವೆ
ಒಂದು ಇಂಥದೇ ತೇರ
ಬೋಳು ಬೋಳಾಗಿ ಇನ್ನೂ
ಬೀದಿಗಿಳಿಸದಾದೆನು
ನೆನ್ನೆ ರಾತ್ರಿ ಕನಸಿನಲ್ಲಿ
ಮನಸಿನಿಂದ ಮನಸಿನೆಡೆಗೆ
ನನ್ನ ತೇರೂ ಹರಿದ ಹಾಗೆ
ಹಗಲುಗನಸು ಕಂಡೆನು!!


                      -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...