Tuesday, 1 September 2015

ಇರುಳಚ್ಚರಿ

ಮುತ್ತಿಗೆ ಸುಲಭಕೆ ದಕ್ಕುವ ನಿನ್ನ
ತುಸು ದೂರದಲೇ ಮುದ್ದಿಸುವೆ
ತುಟಿಗೆ ತಲುಪಿಸಿ ಮೌನದ ಬಿಸಿಯ
ಒಡಲುದ್ದಗಲಕೂ ಹಬ್ಬಿಸುವೆ


ಬಯಸದೆ ಮೂಡಿದ ಬಿರುಸಿನ ಬಯಕೆಯ
ಬಯಸಿ ಬಯಸಿ ಮರೆಸಿಡುವೆ
ಕನಸಲಿ ಬರೆದ ರತಿ ಕಾವ್ಯವನು
ಕಣ್ಣಲಿ ಕಟ್ಟಿ ಒಪ್ಪಿಸುವೆ


ಮಧುರಾತಿಮಧುರ ಇರುಳಚ್ಚರಿಗಳ
ಅಚ್ಚೆಯಂತೆ ನಮೂದಿಸಿವೆ
ಎಲ್ಲಿಯೆಂದು ನೀ ಹುಡುಕಬೇಡ
ಕೊನೆಯಲ್ಲಿ ನನ್ನಲೇ ಬಿಂಬಿಸುವೆ


ಮಾಗಿ ಕೆಂಪು, ಹೂವಂಥ ನುಣುಪು
ನಿನ್ನಂಥ ವಿಸ್ಮಯಕೆ ಹೆಸರಿಡುವೆ
ಅಕ್ಷರಕ್ಕೇ ಮಾತ್ಸರ್ಯ ತರಿಸಿ
ಒಂದೊಂದೇ ಇಳಿಸಿ ಮುಡಿಗಿಡುವೆ


ಒಂದು ಮಾತು ಮತ್ತೊಂದು ಮಾತು
ಮಾತೆಲ್ಲ ಮುಗಿಯಲು ಕಾದಿರುವೆ
ಇಂಥ ಹೊತ್ತು ಮತ್ತಷ್ಟು ಸಿಗಲಿ
ಎಂತೆಂಬ ಹಂಬಲಕೆ ಜೋತಿರುವೆ


                                    -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...