Monday 21 September 2015

ನಾನು ಯಾರು?

ಒಂದು ಕುಂಚವಿದ್ದರೆ ಕೊಡಿ
ಬಣ್ಣದಲಿ ಅದ್ದದೆಲೆ
ನನ್ನ ನಾನೇ ರೂಪಿಸಿಕೊಳ್ಳಬೇಕು


ಒಂದು ರೀತಿ ಮಾಯಾ ಕುಂಚವಂದುಕೊಳ್ಳಿ,
ನನ್ನ ಯಾರೂ
ಬಣ್ಣ ಹಚ್ಚಿಕೊಂಡವ ಅನ್ನಕೂಡದು ಅಷ್ಟೆ


ಇದು ನನ್ನ ಕೊನೆ ಆಸೆ,
ಕೊನೆಗಳನ್ನೆಲ್ಲ ಅಲ್ಲೇ ಕೊನೆಗೊಳಿಸಿ
ಕೊನೆಗೆ ಕೊನೆ ತಲುಪಿದ್ದೇನೆ


ಬಣ್ಣ ಹಚ್ಚಲೇ ಬೇಕಾದರೆ
ಕುಂಚದ ತುತ್ತ ತುದಿಗೆ
ನನ್ನ ಅಹಮ್ಮಿನ ಪರಿಚಯವಾಗಿಸಿ
ನಂತರ ಬಂಡಾರದಲಿ ಅದ್ದುತ್ತೇನೆ
ಬಣ್ಣ ಅಷ್ಟಕ್ಕೂ ಹತ್ತಿದರೆ ನಂತರದ ಮಾತು


ಇಲ್ಲಿ ನೋಡಿ
ಹೇಗನಿಸುತ್ತಿದ್ದೇನೆ ಈಗ?
ಗೊಂದಲವಿಲ್ಲದೆ ನಿಜ ಹೇಳಿ
ನಾನು ಬದುಕುತ್ತಿರುವುದೇ ನಿಮಗೋಸ್ಕರ,
ಅಷ್ಟಲ್ಲದೆ ಕಸರತ್ತು ನಡೆಸುವ ದರ್ದೇನಿತ್ತು?!!


ಸರಿ, ನಿಮಗೊಪ್ಪಿಗೆಯಾಗುವವರೆಗೂ
ನನ್ನ ಮರು ರೂಪಿಸಿಕೊಳ್ಳುತ್ತಲೇ ಇರುತ್ತೇನೆ
ಸರಿಯೆನಿಸಿದಲ್ಲಿ ನಿಲ್ಲಿಸಿ, ಅಲ್ಲೇ ನಿಲ್ಲುತ್ತೇನೆ..
ಮತ್ತಿನ್ನಾರೋ ರಾಗ ತೆಗೆಯದ ವಿನಹ!!


ಒಂದೆಡೆ ನಿಲ್ಲದ ನನಗೆ
ನೀವೇ ಒಂದು ಹೆಸರಿಟ್ಟುಬಿಡಿ
ಸ್ವಂತಿಕೆಯೇ ಇರದ ನನಗೆ 
ಇಟ್ಟ ಹೆಸರಲ್ಲೇ ಕರೆಯಬೇಕೆಂಬ ಆಸೆಯಿಲ್ಲ
ಇದ್ದರೂ, ಅದು ಎಂದೋ ಸತ್ತು ಹೋಗಿದೆ


ನಾನು ನಾನಲ್ಲ ಎಂದು ನಂಬಿಸುವುದಕ್ಕೆ
ಯಾವುದೇ ಪುರಾವೆಗಳು ಬೇಕಿಲ್ಲ
ನಾನು ನಿಮ್ಮ ಮಾತನ್ನು ನಂಬುತ್ತೇನೆ
ನಂಬಿಕೆಯೇ ನನ್ನ ಇಷ್ಟು ದೂರ ಕರೆ ತಂದದ್ದು!!
ಈಗ ಹೇಳಿ ನಾನು ಯಾರು?!!
                                         -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...