Thursday 15 October 2015

ನವಿರು ಅನುರಾಗ

ಎಷ್ಟೆಂದು ಹುಡುಕುವುದು ನಸುಕನು
ಕಣ್ಣಲ್ಲಿ ಹೊತ್ತಿಟ್ಟು ಹಣತೆ
ಏನೆಂದು ಬರೆಯಲಿ ನಿನ್ನ ಕುರಿತು
ನೀನಾಗಲೇ ಬರೆದ ಕವಿತೆ

ಅಲ್ಲಲ್ಲಿ ಹೆಸರಿಡದ ಹೂ ಸಾಲು
ನೀ ಆಗಲೇ ನಡೆದು ಹೋದಂತೆ
ಹಸಿವಲ್ಲಿ ಬಳಲಿದ ಮನಸಿಗೆ
ನಿನ್ನೊಲವು ಮಾಗಿದ ಹಣ್ಣಂತೆ

ನಿಂತೊಮ್ಮೆ ನಕ್ಷತ್ರ ಎಣಿಸೋಣ
ಬೇಕಂತಲೇ ತಪ್ಪಿ ಲೆಕ್ಕವನು
ಅದು, ಇದು ಎನ್ನುತ ಕೂರದೆಲೆ
ಬಂದದ್ದ ಸವಿಯೋಣ ಎಲ್ಲವನೂ

ಮುತ್ತಿಟ್ಟು ನೋವನ್ನು ಮರೆಸುತ್ತ
ಮತ್ತಷ್ಟು ನೋಯಿಸುವೆ ಕ್ಷಮಿಸಿಬಿಡು
ಕನಸಲ್ಲಿ ಹೆಚ್ಚು ಕಾಯಿಸದೆ
ಬಿಡುವು ಮಾಡಿಕೊಂಡು ಬಂದುಬಿಡು

ಮೌನವನು ಸಂಭ್ರಮಿಸೋ ಆಟದಲಿ
ಮಾತಿಗೂ ಪಾಲು ಕೊಡು ಆಗಾಗ
ನನ್ನ ಹೆಜ್ಜೆಗೆ ಕೂಡು ಹೆಜ್ಜೆಯನು
ಆಗ ಇನ್ನೂ ನವಿರು ಅನುರಾಗ

                           --
ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...