Sunday 15 May 2016

ಹೀಗೂ ಬದುಕಿದ್ದೆವು

ದಢಾರನೆ ಮುಚ್ಚಿ ಹೋದಳು
ಬಾಗಿಲಂಚಿಗೆ ಹೃದಯ ಸಿಲುಕಿದವನಂತೆ
ನಗುತ್ತಲೇ ಯಥಾಸ್ಥಿತಿಗೆ ತಲುಪಿ
ಎದೆ ನೀವಿಕೊಳ್ಳುತ್ತಿದ್ದೇನೆ
ಹೆಪ್ಪುಗಟ್ಟಿದ ಕಣ್ಣುಗಳಿಗೆ ಕೆನ್ನೆಗಳ ಗಡಿಪಾರು
ಒಂದು ಹನಿ ಉರುಳಿದರೂ ಅನಾಹುತ!!


ಬಾಗಿಲು ಬಡಿದ ರಬಸಕ್ಕೆ
ಉಪ್ಪರಿಗೆ ಬಿರುಕು ಬಿಟ್ಟಿರಬಹುದೇ?!!
ಅವಳು ಅಷ್ಟು ಗಟ್ಟಿಯಾಗಿದ್ದಾಳೆಯೆಂದರೆ
ಯಾವುದೋ ನೋವು ಪಕ್ವವಾಗಿ
ಅವಳ ಹದ್ದಿನಂತೆ ಕುಕ್ಕಿ-ಕುಕ್ಕಿ ಕೊಲ್ಲುತ್ತಿರಬೇಕು,
ನಾನೇ ಗಾಂಭೀರ್ಯ ಮರೆತು ನಡೆದುಕೊಂಡೆ
ಚೂರು ನಾಟಕವಾಡಿದ್ದರೂ ನಡೆಯುತ್ತಿತ್ತು!!


ಸಂಬಂಧಗಳು ಹತ್ತಿರವಿದ್ದಷ್ಟೂ ಸಮಸ್ಯೆ
ದೂರುಳಿದರಂತೂ ಅದಕ್ಕೂ ಮೇಲೆ
ಹಾಗಾಗಿ ಆಗಾಗ ಸಾಮಿಪ್ಯದಲ್ಲೇ ಅಂತರವಿಟ್ಟು
ಅಂತರದಲ್ಲೇ ಸನಿಹದಲ್ಲಿರುವುದೊಳಿತು
ಎಷ್ಟೇ ಆಗಲಿ ಮನುಷ್ಯನೂ ಮಂಗನಂತಲ್ಲವೇ?
ಬುದ್ಧಿ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಲೇ ಇರುತ್ತೆ!!


ಮನೆ ಬಿರುಕು ಮೂಡುವುದಕ್ಕೆ
ಮನಸುಗಳ ಸಣ್ಣ ಕಂಪನಗಳೇ ಸಾಕಲ್ಲ?
ಕಣ್ಣೀರು ಜಲ ಪ್ರಳಯವನ್ನೇ ಉಂಟು ಮಾಡಬಹುದು
ಬಿಕ್ಕಳಿಕೆ ಎಂಥ ಖುಷಿಗಳನ್ನೂ ಬಾಧಿಸಬಹುದು.
ಎಲ್ಲಕ್ಕೂ ನಿರುತ್ತರ ಮೌನವೇ ಉತ್ತರವಾಗಬಹುದು!!


ವಿಮುಖವಾಗಿ ದಿನವಿಡಿ ನಡೆದು
ವಿಮುಖರಾಗಿ ಒಂದೇ ಹಾಸಿಗೆಯಲ್ಲಿ ಮಲಗಿದಾಗ
ಪ್ರಮುಖವಾದ ಕನಸುಗಳೆಲ್ಲ ಕೈ ಕಟ್ಟಿ
ನಮ್ಮಿಂದ ದೂರುಳಿದುಬಿಟ್ಟಾಗ
ಕೂಡಿ ಕಟ್ಟಿದ ಕನಸಿನ ಅರಮನೆಯಲ್ಲೊಂದು
ಅನಾಮಿಕ ಗೋರಿ ತಲೆಯೆತ್ತುವುದು ಸಹಜ,
ಅದು ನಾಳೆ ದಿನ ನಮ್ಮ ನೋಡಿ ಉಸಿರುಗಟ್ಟಿ ನಕ್ಕಾಗ
ಮುಜುಗರಕ್ಕೊಳಪಡುವವರಲ್ಲಿ ಮಾತಿರುವುದಿಲ್ಲ


ಬೇಸಿಗೆಯ ಇರುಳ ಮಳೆಯಂತಿನ ಮುನಿಸುಗಳು
ಬೆಳಕು ಹರಿಯುವುದರೊಳಗೆ ಮಾಯ,
ರಾತ್ರಿ ಕಳೆಯಲಿ
ಹೊಸ ದಿನ, ಹೊಸ ನಗುವಿನೋಟ್ಟಿಗೆ ಕಟ್ಟಬೇಕು
ಬೇಸರಿಕೆ ತಂದ ಬದುಕುಗಳ ನಡುವೆ
ಪ್ರೀತಿಯೆಂಬ ಸೇತುವೆಯನ್ನ


ಸೇತುವೆ ಬದುಕಿನಿಂದ ಬದುಕುಗೆ ದಾಟುವುದಕ್ಕಾಗಿಯಲ್ಲ
ಬದುಕುಗಳ ನಡುವಿನ ಬದುಕನ್ನ ಬದುಕುವುದಕ್ಕಾಗಿ!!


                                                            -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...