Thursday, 30 November 2017

ಕಥೆಗಳೇ ಹೀಗೆ


ಒಂದು ಸಣ್ಣ ಕಥೆಯೆಂದೇ ಮೊದಲಾಗಿ
ನಿದ್ದೆಗೆ ಜಾರುವ ತನಕ ಜಗ್ಗಿಕೊಂಡಿತು
ಅಲ್ಲಿ ಹುಟ್ಟಿದವರು ಸತ್ತರು, ಅವರಿಗೆ ಹುಟ್ಟಿದವರೂ
ಆದರೆ ಕಥೆ ಮಾತ್ರ ಮುಗಿದಿಲ್ಲ ಎಂದಿನಂತೆ


ಗೋರಿ ಕಟ್ಟಿದ ಜಾಗದಲ್ಲಿ ಬೆಳೆದ ಹಲಸು
ಎಷ್ಟು ರುಚಿಯಿತ್ತೆಂದರೆ ಊರಿನವರಿಗೆಲ್ಲ ಪ್ರಿಯ
ಬಿಟ್ಟ ಒಂದು ಕಾಯಿಗೆ ಕಾವಲಾಗಿ ನೂರು ಕಣ್ಣು
ಮಣ್ಣಾದ ಮುದುಕಪ್ಪನಿಗೆ ಕೊನೆಗಾಲದಲ್ಲಿ
ತೊಟ್ಟು ನೀರುಣಿಸಿದವರಿಲ್ಲ
ಈಗ ಕೊಳೆತು ಗೊಬ್ಬರವಾಗಿದ್ದಾನೆ
ಅವನ ಮಾಂಸ-ರಕ್ತದ ರುಚಿ ಸಸ್ಯಹಾರಿಗಳಿಗೇ ಹೆಚ್ಚು ಮೋಜು



ಕೆರೆಗೆ ಆನಿಕೊಂಡ ಜಮೀನಿನೊಳಗೆ
ಬೋರುಗಳು ಭೋರ್ಗರೆಯುತ್ತಿದ್ದರೆ
ಇತ್ತ ಊರಾಚೆ ಬೋರುಗಳಿಗೆ ಬೋರೋ ಬೋರು
ತುಟಿ ಸುಟ್ಟ ಬೀಡಿಗಳೆಷ್ಟಾದರೇನು
ಗಂಟಲು ಸುಡಬಾರದು, ಗುಟುಕು ನೀರು ಬೇಕು



ಬಿಳಿ ಕಾಗೆಯೊಂದು ಕಾಗೆಯಂತೇ ಕೂಗುತ್ತಿತ್ತು
ಎಂಥ ತಮಾಷೆ, ಇನ್ನೂ ಪ್ರಳಯವಾಗಿಲ್ಲ
ಆಗಿದ್ದರೆ ಸಾಹುಕಾರನ ಮನೆ ದೋಚುವ ಸಂಚು ಹೂಡಿದ್ದ
ಚಿಂದಿ ಹಾಯುವವನ ಕನಸಿಗೂ ತೂಕವಿಲ್ಲ



ಇರುಳ ಚಂದಿರನ ನೋಡಿ ವಿರಹಿಯೊಬ್ಬ
ಕಣ್ಣೀರು ಪೋಲಾಗದಂತೆ ಅಳುತ್ತಿದ್ದ
ಅದಕ್ಕೆ ತಾಳವಾಗಿ ಕಪ್ಪೆಗಳ ವಟರು
ಸಂಗಾತಿಯಿಲ್ಲದ ಬಾಳು ಒಂದೇ ತಕ್ಕಡಿಯ ಪಾಲು



ಕಥೆಗಳೇ ಹೀಗೆ
ಯಾವಾಗ ಎಲ್ಲಿಗೆ ಬೇಕಾದರೂ ಹೊರಳಬಹುದು
ಕೇಳುವ ಮನಸುಗಳು ಕ್ರಮವಾಗಿ ಪೋಣಿಸಿಕೊಳ್ಳಬೇಕಷ್ಟೇ
ಅಲ್ಲಿಗೆ ನಿದ್ದೆಗೆ ಕಾವಲಿದ್ದವನಿಗೂ ನಿದ್ದೆ
ರಗ್ಗಿನೊಳಗೆ ಗೊಣಗುತ್ತಿದೆ ಜೀರುಂಡೆ
ಮುಂದಿನ ಕಥೆಯಲ್ಲಿ ಅದಕ್ಕೂ ಒಂದು ಪಾತ್ರ ಕೊಡಬೇಕು...



                                                      - ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...