Friday, 17 October 2014

ಒಲವಲ್ಲಿ ನಾಲ್ಕು ಕಿವಿಮಾತು

ಕೋಪಕ್ಕೂ ಕೊಡುವ ಪ್ರಾಮುಖ್ಯತೆ
ಇಷ್ಟು ಬೇಗ ರಾಜಿಯಾಗುವುದು ಬೇಡ
ಮುಂದೆ ಕೋಪವೂ ಕೃತಕವಾದರೆ
ಜಗಳಗಳು ಕಲೆಗುಂದುವ ಭಯವಿದೆ!!
ಸಮಯಕ್ಕೂ ಸಿಗಲಿ ಸನ್ಮಾನ
ಹೇಳಿದ ಸಮಯಕ್ಕೆ ಬಾರದ ನಾವು
ಒಬ್ಬರನ್ನೊಬ್ಬರು ಕಾಯಿಸದೆ ಕ್ಷಮಿಸಿಬಿಡುವುದು
ಕಾಯುವಿಕೆಗೆ ಅಗೌರವ ಸೂಚಕ!!
ಮುತ್ತು ಮುತ್ತಿಗೂ ಲೆಕ್ಕವಿಡುವ
ಕೊಟ್ಟಾಗ ಪಡೆವ ಉಮ್ಮಸ್ಸು
ಪಡೆದಾಗ ಕೊಟ್ಟ ಖುಷಿ ಹೆಚ್ಚಾದರೆ
ಪ್ರತಿ ಮುತ್ತೂ ಸ್ಮರಣೀಯ!!
ದಾಖಲಿಸುವ ಪ್ರತಿ ಬೇಟಿಯನ್ನೂ
ಆ ಆವರಣ, ಆ ಅನುಭವ
ಆ ವಿವಿಧ ಭಾವ ಭಂಗಿಗಳ ಸೆಳೆತ-
-ಮೊರೆತಗಳ ದೀರ್ಘ ಕಾಲ ಮರುಕಳಿಕೆಗೆ!!
ಮಾತು ಸೋತಾಗ ಮೌನವಹಿಸುವ
ಒತ್ತಾಯಿಸಿ ಗೆಲ್ಲಿಸುವುದು ಗೌಣ;
ಕೆಲವೊಮ್ಮೆ ಮಾತಿನ ಮೆರವಣಿಗೆಗಿಂತ
ಮೌನ ಅರ್ಥಗರ್ಭಿತ ಮಾರ್ಮಿಕ ಕವನ!!
ಬಿಟ್ಟುಗೊಡುವ ಜಿದ್ದು ಹಠಗಳ
ಒಮ್ಮೊಮ್ಮೆ ಕೊಟ್ಟು ಬಿಟ್ಟವುಕ್ಕಿಂತ
ಬಿಟ್ಟುಕೊಟ್ಟವುಕ್ಕೇ ಹೆಚ್ಚು ಮೌಲ್ಯ
ಅದುವೇ ನಮ್ಮೊಲವ ಪ್ರಾಭಲ್ಯ!!
                                 -- ರತ್ನಸುತ

1 comment:

  1. ’ಒಬ್ಬರನ್ನೊಬ್ಬರು ಕಾಯಿಸದೆ ಕ್ಷಮಿಸಿಬಿಡುವುದು
    ಕಾಯುವಿಕೆಗೆ ಅಗೌರವ ಸೂಚಕ!!’
    ಈ angleನಲ್ಲಿ ನಾನು ಯೋಚಿಸಿಯೇ ಇರಲಿಲ್ಲ!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...