Friday, 20 February 2015

ದೇವರ ಕಣ್ಣೀರು


ಸಾವೇ ಇಲ್ಲದ ದೇವರು
ಏದುಸಿರು ಬಿಡುತ್ತಿದ್ದಾನೆ
ಸಾವ ಕಂಡು

ಬಹುಶಃ ಆತನಿಗೂ
ಪ್ರಾಣ ಬೆಲೆ ಅರಿವಾಗಿರಬೇಕು
ಕ್ಷಣಕೆ;

ಹಣೆಗಂಟಿದ ಬೆವರ ಸಾಲ
ಮರೆಸಲಾರದಷ್ಟು ಮುಗ್ಧ,
ಲೋಕ ತಲ್ಲಣಗಳೆಲ್ಲ ಅವನೊಳಗೆ

ಅರೆ ಗಳಿಗೆ ಸ್ತಬ್ಧ!!

ಅವನ ಗದ್ದುಗೆ ಅಲುಗಾಡುತ್ತಿದೆ
ಅವನದ್ದೇ ಕಂಪನಕ್ಕೆ,
ಹೃದಯ ಈಗಷ್ಟೇ ವೃದ್ಧಿಗೊಳ್ಳುತ್ತಿದೆ

ಮಿಡಿತಗಳು ಕಿವಿ ಕದವ ತಟ್ಟುವಷ್ಟು
ವಿಪರೀತವಾಗ ತೊಡಗಿವೆ

ಚಿತೆ ಮೇಲೆ ಉರಿದ ಹೆಣ
ಜಲಾಗ್ನಿ ರಾಗದಲ್ಲಿ ಇಂಪಾಗಿ ಹಾಡುತ್ತ
ಬೇಯಲು ಕಾರಣ
ಮೇಲೆಲ್ಲೋ ದೇವರ ಹತೋಟಿಗೆ ಸಿಗದೆ
ಕೆಳ ಜಾರಿದ ಕಣ್ಣೀರೇ ಇರಬೇಕು

ತಲೆಗೊಂದು ಕೊಡೆ ಹಿಡಿದವರು
ಚಿತೆಯ ಹತ್ತಿರಕ್ಕೂ ಸುಳಿಯದೆ
ದೂರುಳಿದಾಗ
ದೇವರು ಇನ್ನಷ್ಟು ಬಿಕ್ಕುತ್ತಾನೆ
ಮಳೆ ಜೋರಾಗುತ್ತದೆ!!

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...