Tuesday, 4 March 2014

ಮೌನ ಪಯಣ !!

ರಕ್ತ ಸಿಕ್ತ ಹಡಗು, 
ಕೆಂಪು ಸಾಗರ, 
ಸೂರ್ಯಾಸ್ತಮದ ಸಮಯ, 
ಆಯಾಸದ ಕಂಗಳು,
ಸಿಗದ ಬಂದರು,  
ಇಲ್ಲದ ಲಂಗರು, 
ಒಂಟಿ ಪಯಣಿಗ, 
ಮೌನ ಸಂಗಡಿಗ!!
 
ಮರು ಜೀವ ಪಡೆದ 
ಎಂದೋ ಆದ ಗಾಯ 
ಆ ನೋವು 
ಕಹಿ ನೆನಪು. 
ಮೈ ಮರೆಯುವಂತಿಲ್ಲ 
ದಿಕ್ಕು ತಪ್ಪಬಹುದು;
ಯಾವ ದಿಕ್ಕು?!!
ತೀರದ ಅನ್ವೇಷಣೆ!!
 
ಗಡಿಯಾರದ
ಸುಳ್ಳು ಬರವಸೆ, 
ಇನ್ನೂ ಸದ್ದು ಮಾಡಿದೆ 
ಟಿಕ್-ಟಿಕ್-ಟಿಕ್ 
ಅದ ನಂಬುವ ಗೀಳು
ಮುಗಿಯುವಂತಿಲ್ಲ; 
ಸಮಯ ಸರಿಯಾಗಿದೆ 
ಹಾಳಾಗಲು!!
 
ಹಸಿದ ತಿಮಿಂಗಿಲಗಳ 
ನಿಲ್ಲದ ಅಳಲು;
ಮುರಿಯಬೇಕು ಹಡಗು 
ದಾಟಿಸಬೇಕು ಹಸಿವ,
ಆಗಲೇ ವಿಮುಕ್ತಿ
ಕಡಲ ಮೊರೆತಕ್ಕೆ;
ನಾ ಎಲ್ಲರಿಗೂ ಬೇಕಾದವ 
ನಿರ್ಜೀವವಾಗಿ!!
 
ಮುಟ್ಟಿ ನೋಡಿಕೊಂಡೆ 
ನಾಡಿ ಮಿಡಿಯುತ್ತಲೇ ಇತ್ತು
ತುಸು ಅವಸರದಲ್ಲಿ;
ಹಣೆಯ ಕಾವಿಗೆ
ಬೆವರೂ ಹರಿದಿತ್ತು 
ತಕ್ಕ ಮಟ್ಟಿಗೆ 
ಸಮತೋಲನದ ಕುರುಹು?!!
ಪ್ರಕೃತಿ ನಕ್ಕಿತು ಉಸಿರುಗಟ್ಟಿ!!
 
ಎಲ್ಲವನ್ನೂ ಒಂದಾಗಿಸಿತು ಕತ್ತಲು 
ಬಾನು, ಭೂಮಿ,
ನಾನು, ಕಡಲು,
ಹಡಗು, ತಿಮಿಂಗಿಲ,
ಗಡಿಯಾರ, ಮುಳ್ಳು;
ಟಿಕ್-ಟಿಕ್-ಟಿಕ್
ಸಮಯ ಸರಿಯುತ್ತಲೇ ಇದೆ 
ನಾಳೆಯ ಘೋರತೆಗೆ ಸಜ್ಜಾಗಿ!!
 
                        -- ರತ್ನಸುತ

1 comment:

  1. ಪ್ರಳಯಕೂ ಮುನ್ನ ದಿವ್ಯ ಮೌನವಂತೆ! ಹಾಗಿದೆ ಈ ಕವನದ ಹೂರಣ. ಭವಿಷ್ಯದ ಅಗೋಚರತೆಯು ಸಾಕಲ್ಲ ಮನೋಧೈರ್ಯವನ್ನು ಸಾವು ಬಡಿಯಲು!

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...