Tuesday, 16 September 2014

ಚಿಗುರ ಹಬ್ಬ

ಕತ್ತರಿಸಿದ ಕರುಳಿಗೆ
ಕ್ಲಿಪ್ಪು ಹಿಡಿ ಸಿಕ್ಕಿದ್ದು
ಹಸಿದ ಹೊಟ್ಟೆಗೆ ಈಗ
ನಾಲಗೆಯ ಹಂಗು;
ತಾಯಿಗಿನ್ನೂ ಮಂಪರು,
ಎಳೆ ಬೆರಳ ಚೀಪುತ್ತ
ಹಸುಗೂಸಿನ ಅಳಲು;
ತಾಯೆದೆಯ ಜಿನುಗು!!

ಲೋಕಗಣ್ಣ ತಪ್ಪಿಸಿ
ಸುತ್ತಿಕೊಂಡ ಕೌದಿ
ಬೆತ್ತಲ ಸತ್ಯಗಳ
ಇನ್ನೆಷ್ಟು ಮರೆಸೀತು?
ಬಿಸಿ ಶಾಖದ ಹೊದಿಕೆ
ಇಟ್ಟು ಬೆಚ್ಚಗೆ ಚೂರು
ಹಳದಿ ಹರಡಲುಬಹುದು
ನೀಡದ ಹೊರತು!!

ಅಲುಗದ ಜನನಿ
ಹಾಸಿಗೆಯ ಸವರಿದಳು
ಅಲ್ಲೆಲ್ಲೋ ತಾಯ್ತನದ
ಹಳೆ ಜೋಜೋ ಲಾಲಿ;
ಅಮ್ಮಳಿಂದಮ್ಮಳಿಗೆ
ಮೊದಲ ಹಸ್ತಾಂತರ
ನೋವ ಮರೆತಳು ತಾನು
ತುಂಬು ನಗುವಲ್ಲಿ!!

ಕಣ್ಣು ಯಾರಂತೆ?
ಮೂಗು ಯಾರಂತೆ?
ಬಣ್ಣ ಕೆಂಪು
ಕಿವಿಯ ಆಲೆ ಇದ್ದಂತೆ;
ಸಣ್ಣ ಹುಟ್ಟು ಮಚ್ಚೆ
ಮೊದಲ ಹನಿ ಉಚ್ಚೆ
ಹಾಲು ಗಲ್ಲದ ಗಡಿಗೆ
ಪುಟಾಣಿ ಕವಿತೆಯಂತೆ!!

ಏರು ದನಿ ಅಳಲು
ಅದ ಮೀರಿ ನಿಂತ
ಮೌನ ಅಂಗಳವನ್ನೂ
ನಾಚಿಸುವ ಮೌನ;
ಕಣ್ಣ ಮಸಿ ತಡವಿ
ಅಲ್ಲಲ್ಲಿ ಬೆರಳು
ಗಾಳಿಯಲಿ ಎಡವಿ
ಹಣೆ ಚುಕ್ಕಿ ಬಣ್ಣ!!

ತೊಟ್ಟಿಲಿಗೆ ಸಿಂಗಾರ
ಕತ್ತಲಿಗೆ ಕರ್ಪೂರ
ಪ್ರತಿ ದಿನವೂ ಮನೆ ತುಂಬ
ತುಂಬು ಜಾತ್ರೆ;
ಕಾದ ಹಂಡೆ ನೀರು
ಕೆಂಡ ಆರದ ಒಲೆಯು
ಒಳಗೆ ಬೇಯಲು ಬಿಟ್ಟ
ಬೇವ ಪತ್ರೆ!!

ಸದ್ದೊಂದು ಹಾಡು
ಇರದಿದ್ದರೊಂದು
ಒಟ್ಟಾರೆ ಮನೆಯೊಂದು
ಗಂಧರ್ವ ಲೋಕ;
ಎಳೆ ಪಾದ ಸವರಿ
ಮೈ ಮರೆತ ಜೀವಕೆ
ಹಂತ ಹಂತಕೂ
ಲಭಿಸಿದಂತೆ ಮಧುರ ನಾಕ!!

                  -- ರತ್ನಸುತ

1 comment:

  1. ಮಡಿಲು ತುಂಬಿದ ಆನಂದಕೆ ತಾಯಿಗೆ ತುಂಬಿದ ಭಾವ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...