Tuesday 15 July 2014

ಸಾವಿನ ಗುಟ್ಟು

ಗುಟ್ಟು ರಟ್ಟಾಗುವ ವೇಳೆ
ಬಯಲೆಲ್ಲ ಕಣ್ಣೀರ ಸುದ್ದಿ
ನಾನು ನನ್ನವುಗಳೆಲ್ಲ
ತಾಜಾ ಹೂಗಳ ಕೆಳಗೆ ರದ್ದಿ

ಅಲ್ಲಿ ಗೋಳಿಟ್ಟ ಹೃದಯಗಳಿಗೆ
ಸಾಂಬ್ರಾಣಿಯ ಹೊಗೆ
ಊದಿಕೊಂಡ ಕಣ್ಗುಡ್ಡೆಗಳೊಳಗಿಂದ
ನೆನಪುಗಳ ಒದ್ದೆ ಪಯಣ

ನೀಳ ಮೌನದ ನಡುವೆ
ಆಗಾಗ ಇಣುಕಿ ಜಾರಿಕೊಳ್ಳುವ
ಬಿಕ್ಕಳಿಕೆ ಸದ್ದು;
ತುಟಿಗಳೇನೂ ನುಡಿಯದೆ 
ಎಲ್ಲವೂ ನುಡಿದಂತೆ!!

ಮಣ್ಣಿನ ವ್ಯಾಮೋಹಕೆ
ಕೊನೆಗೂ ತೆರೆ ಎಳೆದ ಮಣ್ಣು;
ಉಸಿರಿನ ತಕರಾರೂ ಇಲ್ಲದ
ಚಿರ ನಿದ್ದೆಗೆ 
ಸಹಸ್ರ ಕಾವಲಿನ ಕಣ್ಣು!!

ಹೆಸರಿಗೂ ಅಲ್ಪ ವಿರಾಮ;
ಜನ್ಮಗಳ ಪಾಲಿನಲ್ಲಿ
ಒಂದು ಗೀಟಿಗೆ ಕಾಟು ಹೊಡೆದು
ಮುಂದೊಂದರ ತಯಾರಿಗೆ
ನಾಂದಿ ಹಾಡಿದ ಜವರಾಯ!!

ಸುಕ್ಕುಗಟ್ಟಿದ ಕೆನ್ನೆಗೆ
ಬೊಗಸೆ ನೀರ ಪ್ರೋಕ್ಷಣೆ
ನಾಳೆಗಳ ಕೌತುಕಕೆ
ತೊರೆದವರ ಪಟವ ಹೊತ್ತ
ತಡೆ ಗೋಡೆಯ ವೀಕ್ಷಣೆ!!

                    -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...