Tuesday, 15 July 2014

ಮನದ ತುಂತುರಿನಲ್ಲಿ

ತುಂತುರು ತವಕಗಳು
ಮನದ ನೆಲವ ಹಸಿಗೊಳಿಸುತ್ತಿವೆ,
ಹೊರಗೂ ನಿಲ್ಲದ ಮಳೆ
ಆಷಾಢ ಮಾಸದ ಶಪಿತ ಮನ;
ಹುಚ್ಚು ಬಯಕೆಗಳ ಸ್ವಚ್ಛ ನಿಲುವು,
ಮೈ ಬಿಸಿ ಸುಡುತಿದೆ ಕಂಬಳಿಯ;
ನವ ನಿರ್ಮಾಣ ಕುಸುರಿ ಕಾರ್ಯಕ್ಕೆ
ಭಾವ ಪೌರರ ಆಗಮನ!!

ಮೋಡಕ್ಕೂ ಅರೆ ಮನಸು,
ಕಂತುಗಳಲ್ಲಿ ಬಂದು ನಿಲ್ಲುತ್ತಿದೆ;
ಬರಬಾರದಿತ್ತೆ ಮಗು ಅತ್ತಂತೆ,
ಯಾರೋ ಹಿಂಬಾಲಿಸಿ ಬಿಟ್ಟಂತೆ?

ಸೂರ್ಯನ ಮುಖ ನೋಡಿ
ಕೆಲ ದಿವಸಗಳೇ ಆಯಿತು;
ಸೊರಗಿ ಹೋಗಿರದಿದ್ದರೆ ಅದೇ ಪುಣ್ಯ;
ಮೈ ಶಾಖದಲ್ಲಿ ಅತಿ ಧನ್ಯ!!

ಕನಸುಗಳು ತೀರ ಹದಗೆಡುತ್ತಿವೆ,
ಹಾಗೂ ಹೆಚ್ಚು ಹಿಡಿಸುತ್ತಿವೆ;
ಸ್ಥಿಮಿತದಲ್ಲಿರದ ಉದ್ರೇಕ
ತಟಸ್ಥನಾಗಲು ಚೆದುರಿದ ಏಕಾಗ್ರತೆ!!

ಬೆರಳುಗಳಿಗೂ ಬೆತ್ತಲ ಭಾವ
ಅಗ್ನಿ ಸ್ಪರ್ಶದಿಂದ ಚೂರು ವಿಮುಕ್ತಿ,
ಸ್ಖಲನಗೊಂಡವು ಸ್ವಮಿಲನದಲ್ಲೇ
ಹಬ್ಬಬಾರದಿತ್ತು ಈ ಹಗಲ ವದಂತಿ;

ಪುಸ್ತಕಗಳಿಗೆ ಮುಖಪುಟದ ಸಾಂತ್ವನ,
ಕಣ್ಣ ನೋಟಕ್ಕೆ ಕಿಟಕಿಯ ದಿಗ್ಬಂಧನ 
ಉಗುರು ಬೆಚ್ಚಗಿನ ಪದ ಗುಚ್ಚಕ್ಕೆ
ಸಮಾಧಾನಕರ ಕಾವ್ಯ ಬಹುಮಾನ!!

                                 -- ರತ್ನಸುತ

1 comment:

  1. "ಮೋಡಕ್ಕೂ ಅರೆ ಮನಸು,
    ಕಂತುಗಳಲ್ಲಿ ಬಂದು ನಿಲ್ಲುತ್ತಿದೆ;
    ಬರಬಾರದಿತ್ತೆ ಮಗು ಅತ್ತಂತೆ,
    ಯಾರೋ ಹಿಂಬಾಲಿಸಿ ಬಿಟ್ಟಂತೆ?"

    ಒಂದು ನೂರು ಬಾರಿಯಾದರೂ ಓದಿಕೊಂಡೆ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...