Tuesday, 15 July 2014

ಕವಿತೆ

ಕವಿಗೆ ಕವಿತೆಯೇ ಅಸ್ತ್ರ,
ತನ್ನಿಷ್ಟಕೆ ಬರೆಯಲು
ಇನ್ನಾರನೋ ಇರಿವುದು;
ಹಿತವಲ್ಲ ಪ್ರತಿ ಸಲವೂ
ಪ್ರತಿಯೋರ್ವರ ನಿಲುವಿಗೆ!!

ಬಿಕ್ಕಿದವರ ಕಣ್ಣೀರ
ಸಂಪಾದಿಸುವವುಗಳು,
ಬೋಳು ಬರದ ಛಾಯೆ
ಸತ್ವ ಕಳೆದವು ಹಲವು;
ಮಿಕ್ಕವೆಲ್ಲ ಲೆಕ್ಕವಷ್ಟೆ
ಮುರು ಮತ್ತೊಂದು!!

ಕನಸ ಕಿತ್ತು ತಿಂದ
ಬಕಾಸುರ ಭಾವಗಳು
ನಿದ್ದೆಯಲ್ಲೂ ಪ್ರಾಸ ಬದ್ಧ
ಕಾವ್ಯವಾಗಿ ಹೊಮ್ಮಿ
ಗಿಜುಗುಡುವ ಜೀರಂಗಿಯಂತೆ!!

ಕಸದಲೂ ಹಾಳೆಯ ಚೂರು
ಕೆಸರಲೂ ಪದ್ಮ ಪುಷ್ಪ
ಕುಸುರಿಯ ಹೆಸರನಿಟ್ಟು
ಜಾರಲಾನಂದ ಬಾಷ್ಪ;

ನೀಳ ಸಾಲ ನಡುವು
ಮಡದಿಯ ನಿತಂಬವೋ?
ಜನನನಿಯ ಮಡಿಲೋ?
ಗೆಳತಿಯ ಗೌಪ್ಯ
ಸೆರಗ ಹಿಂದಿನ ಸಿರಿಯೋ?!!
ಮಾರ್ಮಿಕ, ಪ್ರಚೋದಕ
ಪ್ರಚಾರಕ, ಪ್ರಭಾವಿಕ!!

ಗಿರಿ ಅಂಚಿನ ಹಿಮವು
ಗರಿ ಕುಂಚದ ಘಮವು
ಮನ ಮೈಲಿಗೆ ಸೂತಕವೂ
ಹೃದಯಾಂತರಾಳ ಪುಳಕವೂ;
ಮೌನ ಮುರಿವ ಸಿತಾರ
ಸದ್ದು ಗದ್ದಲ ಬಿಡಾರ
ಚಿಣ್ಣರ ಚಿಲಿಪಿಲಿ
ಬಣ್ಣದ ಓಕುಳಿ!!

ಮಧ್ಯಂತರ ಮುಗಿದು
ಮನ್ವಂತರ ದಾಟಿ
ವಾರಾಂತ್ಯದ ಬಿಡುವಿಗೆ
ಕಾಯದ ನಿರಾಧಾರ ಪದಗುಚ್ಚ
ಕೂಸು ಬಿಟ್ಟ ಹೆಜ್ಜೆ ಗುರುತು
ಬಾಣದಷ್ಟೇ ತೀಕ್ಷ್ಣ 
ಕಣ್ಣ ಕಾಡಿಗೆ ನೀರು
ಒಂದು ದೀರ್ಘ ಉಸಿರು!!

                       -- ರತ್ನಸುತ

1 comment:

  1. ಕವಿತೆಯ ಹುಟ್ಟು ಗುರ್ತಿಸುತ್ತಾ ತಾವು ಬರೆದಂತೆ:
    ’ವಾರಾಂತ್ಯದ ಬಿಡುವಿಗೆ
    ಕಾಯದ ನಿರಾಧಾರ ಪದಗುಚ್ಚ’
    ದಿಟ...

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...