Tuesday, 15 July 2014

ಝುಮ್ಮಯಂ

ಒದ್ದೆ ತುರುಬನು ಬಿಗಿದು
ಕಣ್ಣ ಬೆಳಕಲ್ಲದ್ದಿ
ಹಾಲು ಕೆನ್ನೆ ಧರಿಸಿ
ಸೀಳೋ ನಗುವ ಚೆಲ್ಲಿ
ಬರಬೇಡ ನೀ ಹಾಗೆ
ನನ್ನ ಬಳಿಗೆ,
ಮೂಗುದಾರ ಕಿತ್ತು
ಶರತ ಚಳಿಗೆ!!

ಚರಣ ತಾಕಿಸುವಾಗ
ನಡುವ ಬಾಗಿಸಿ,
ಕಸೂತಿ ಕಲೆಯ
ರವಿಕೆ ತೋರಿಸಿ,
ಕಾಲೆಳೆವೆಯೇನು? ನೀ
ಮನ ಸೆಳೆವೆಯೇನು?
ಧ್ಯಾನ ಭಂಗಕೆ ನನ್ನ
ಈಡು ಮಾಡಿ!!

ಕಡುಗತ್ತಲ ಶಯ್ಯೆ
ಸುತ್ತ ಮಿಂಚುವ ಪರದೆ
ಸೊಳ್ಳೆ ಕಡಿದರೂ ಮುಧವು
ತಲೆ ದಿಂಬಿಗೂ ಒಲವು;
ನರ ತಂತಿ ಮೀಟದೆಯೇ
ಹರಿದ ಇಂಚರ ಗುಚ್ಚ
ತಳಮಳದ ಉಂಗುಟವು
ನಿರ್ವಿಕಾರ ಕುಂಚ!!

ಶುದ್ಧ ಸುಧ
ಪುಷ್ಕರಿಣಿಯ
ತೆರೆ ಮರೆಯ ಪೇಯ;
ಜಯ ಜಯ ಜಾಯೇ
ಜರ್ಜರಿತ ಮಾಯೆ
ಸುರತ ಸುರ ತಾಯೇ;
ಅಂಬೆಗಾಲಿಗೂ ನೋವು
ಪಾದಂಗಳ್ ಬಲಿತಿರೆ!!

ಅಧರ ಹೃದಯದ ಉದರ
ತುಂಬಲೆಂತು ಸಾಧ್ಯ,
ಕೊಡಗಟ್ಟಲೆ ಹಸಿವು
ಬಿರಿದ ಬಾವಿ;
ಬತ್ತಿ ಅಂಚಿನ ಚೂಪು
ಬೆಂಕಿ ಸೋಕದ ಉರುಯು
ವಿರಹದೆಣ್ಣೆಗೆ ಅಲ್ಲಿ
ಜ್ವರದ ತಾಪ!!

ಹೂವ ಕೊನೆ ಉಸಿರು
ಸಾಲು ಶವ ಯಾತ್ರೆ
ಹೂವಿಗೆ ಹೂವೇ,
ನಾರಿಗೂ ಹೂವೇ;
ಮುಟ್ಟಿ ನೋಡಲು ಹಣೆ
ಒಲೆಯ ಮೇಲಿನ ಹೆಂಚು,
ತುಟಿ ಮೇಲೆ ಹಿಂಗದ
ಮಂಜು-ಮುತ್ತು!!

                 -- ರತ್ನಸುತ

1 comment:

  1. "ಜಯ ಜಯ ಜಾಯೇ
    ಜರ್ಜರಿತ ಮಾಯೆ
    ಸುರತ ಸುರ ತಾಯೇ;"
    ನೆಚ್ಚಿಗೆಯಾಯಿತು.

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...