Thursday 11 June 2020

ಗಝಲ್ (ಉರಿದ ಒಡಲು ಬೆಳಗುವ ದೀಪವ ಹೇಗೆ ನಂಬಬೇಕು?)

ಉರಿದ ಒಡಲು ಬೆಳಗುವ ದೀಪವ ಹೇಗೆ ನಂಬಬೇಕು?
ಎಡವಿದ ಉಂಗುಟ ಕಲ್ಲು ದೇವರ ಏಕೆ ನಂಬಬೇಕು?

ನದಿಯ ಬಿರುಸಿಗೆ ತಟದ ಮಣ್ಣು ಕೊಚ್ಚಿ ಹೋಗುವಾಗ 
ಮಳೆಯ ಮಾತನು ಚುಗುರು ಬಳ್ಳಿ ಹೇಗೆ ನಂಬಬೇಕು?

ಪಾದರಕ್ಷೆಯಿರದೆ ಮುಳ್ಳು ಚುಚ್ಚಿ ನೋಯುವಾಗ 
ಬೆಟ್ಟದಂಚಿನ ದೇವಾಲಯಗಳ ಏಕೆ ನಂಬಬೇಕು?

ನಮ್ಮೊಳಗಿನಾತ್ಮವ ಎಚ್ಚರಗೊಳಿಸಲು ಸೋತು 
ಪರಮಾತ್ಮನನ್ನೋಲಿಸುವ ಸ್ತೋತ್ರಗಳ ಹೇಗೆ ನಂಬಬೇಕು?

ಮೌಢ್ಯಗಳ ಸರಕನ್ನು ನಂಬಿಕೆಯ ಸಂತೆಯಲಿ ಮಾರಿ 
ಮುಕ್ತಿಗೆ ಖಾತರಿ ನೀಡದ ದಲ್ಲಾಳಿಗಳ ಏಕೆ ನಂಬಬೇಕು?

ತನ್ನ ದೇವರು ಇನ್ನು ದೇವರಿಗಿಂತ ಮಿಗಿಲೆಂದು ನಂಬಿಸಲು 
ಸುಳ್ಳಾಡಿದವನು ದೇವರೇ ಎಂದು ಹೇಗೆ ನಂಬಬೇಕು?

ಮುರಿದ ಹಡಗಲ್ಲಿ ಸರ್ವಧರ್ಮ ದೇವರುಗಳ ಸ್ಥಾಪಿಸಿ 
ಸಾಗರವು ಧರ್ಮ ಮುಕ್ತವೆಂದರೆ ಏಕೆ ನಂಬಬೇಕು?

ಕಷ್ಟಗಳು ದೇವರ ಪರೀಕ್ಷೆಯೆಂದೂ, ಸುಖ-ದುಃಖಗಳು ಫಲಿತವೆಂದೂ 
ಜೀವನಾನುಭವಗಳ ಅಷ್ಟು ಸಲೀಸಾಗಿಬಿಟ್ಟರೆ ಹೇಗೆ ನಂಬಬೇಕು?

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...