Friday, 10 January 2014

ಹುಚ್ಚು ಕುದುರೆ ಮನಸು

ಸೇಡಿನಲ್ಲಿ ಸುಖಿಸುವ ಮನ 
ಸುಡುಗಾಡನು ಕಡೆಗಣಿಸಿ 
ಗೋರಿಗಳ ಗದ್ದಿಗೆ ಮೇಲೆ 
ಸತ್ತವರ ಎದೆಯಿಂದ
ಚಿಗುರಿ ಬೆಳೆದ ತುಳಸಿ ತುದಿಯ 
ಚಿವುಟುವಾಗಿನೋವ ಕಂಡು 
ಕೇಕೆ ಹಾಕಿ ನಗುವ ಮುನ್ನ 
ತಾ ಸತ್ತ ಸತ್ಯ ಮರೆತಿತ್ತು 
 
ಕಂಡದ್ದೆಲ್ಲವ ತಾನು 
ತನದಾಗಿಸಿಕೊಳ್ಳುವ ಹಠ 
ಬಿಡಲೊಲ್ಲದ ಕೂಸು ಮನ 
ಹಸಿವಿನ ಸಾಗರದಲ್ಲಿ 
ಈಜಲಾರದೆ ಸೋತಾಗ 
ಅಲೆಗಳೇ ದಡ ಸೇರಿಸಿ-
-ದಂಶವ ಮೂಲೆಗಿರಿಸಿ 
ಸಾಗರವನೇ ಮಥಿಸಿತ್ತು 

ದಿಕ್ಕು ತೋಚದ ಬಯಲ 
ಗುರುತು ನೀಡದ ದಾರಿಯ 
ಅಂಗಲಾಚಿಕೊಂಡ ನೆನಪ 
ಸಲೀಸಾಗಿ ಅಳಿಸಿ ಹಾಕಿ 
ಬಯಲ ಸುಟ್ಟು, ಬೇಲಿ ನೆಟ್ಟು
ದಕ್ಕಿದಕ್ಕೂ ಮೂರು ಪಟ್ಟು 
ಆಸೆ ಪಟ್ಟ ಹುಚ್ಚುತನವ 
ಸಮರ್ಥಿಸಿಕೊಂಡಿತ್ತು 

ಬೆಂಬಲದ ಬುಡವ ಬಿಟ್ಟು 
ಹಂಬಲದ ಗರಿಗಳೆಡೆಗೆ 
ನಾಳೆಗಳ ಬಿಂಬಿಸುತ್ತ  
ಹಾರಹೊರಟ ಹುಂಬ ಮನ 
ಕುಂಬಾರನ ಒಲೆಯಲ್ಲಿ 
ಬೇಯದ ಮಣ್ಣಿನ ಮುದ್ದೆಯ 
ನಿರಾಕರಣೆಯ ನಡುವೆಯೂ 
ಗಡಿಗೆಯೆಂದು ಕರೆದಿತ್ತು 

ಮಡಿವಂತಿಕೆಯ ಮರೆತು 
ತನ್ನ ನೇಮದಲ್ಲಿ ತಾನು 
ನಿರ್ನಾಮದ ಹಾದಿಯಲ್ಲಿ 
ಬೆಳೆಸಿದ ಪಯಣದ ಕುರಿತು 
ಉಕ್ಕು ನುಡಿ, ಸೊಕ್ಕು ನಡೆಯ 
ಪ್ರದರ್ಶಿಸುವ ಯತ್ನದಲ್ಲಿ 
ತನ್ನರಿವಿಗೆ ಬಾರದಂತೆ 
ಹಲವು ಬಾರಿ ತೊಡರಿತ್ತು 

ತಿದ್ದ ಹೊರಟ ಕೈಯ್ಯ ಕಡಿದು 
ಗೆದ್ದೆನೆಂಬ ಭ್ರಮೆಯ ತಾಳಿ 
ಅಲ್ಲದ ಮುಖವನ್ನು ಮರೆಸೆ 
ಮುಖವಾಡದ ಮೊರೆ ಹೋಗಿ 
ಇದ್ದ ಅಸಲಿತನವ ಮರೆತು
ಹೆಸರ ಮಸಿಯ ಮಡಿಲಲಿಟ್ಟು 
ಚಂದ ಬದುಕ ತಿರುಚಿ ತಾನು 
ಮರುಕ ಪಡುತ ಬಿಕ್ಕಿತ್ತು  

                     -- ರತ್ನಸುತ 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...