Wednesday, 15 April 2020

ಎಲ್ಲ ಹೇಳಿ ಮುಗಿಸಬೇಡ

ಎಲ್ಲ ಹೇಳಿ ಮುಗಿಸಬೇಡ
ಚೂರು ಉಳಿಸು ನಾಳೆಗೆ
ಬಿನ್ನವಾದ ಬಣ್ಣ ಹೊಸೆವ
ಉಳಿಸಿಕೊಂಡ ನೂಲಿಗೆ

ಬಾಗಿಲಲ್ಲಿ ನಿಂತು ತಿರುಗಿ
ಹೋಗಿ ಬರುವೆ ಎನ್ನುವೆ
ತಡೆದು ಹಿಡಿವ ಮನಸಿನಲ್ಲೇ
ಬಿಟ್ಟು ಕೊಡತ ಬಳಲುವೆ
ಮತ್ತೆ ಸಿಗುವ ವೇಳೆಗಾಗಿ
ಹೊತ್ತು ಕಳೆದು ನೋಡುತ
ದಾರಿ ತುಂಬ ನೆರಳ ಹಾಸಿ
ಹೂವ ಚೆಲ್ಲಿ ಕಾಯುವೆ

ಗಮನವಿರಲಿ ನನ್ನ ಕಡೆಗೆ
ಊರ ತುಂಬ ಚೆಲುವರೇ
ಒಂಟಿಯಾಗಿ ನಡೆದು ಬರಲು
ಅಂಕೆಯಲ್ಲಿ ಉಳಿವರೇ?
ಕೊಟ್ಟು ಕಳಿಸಲೇನು ನೆರಳ
ಬೆರಳ ಹಿಡಿದು ನಡೆಸಲು?
ಸಿಟ್ಟಿನಲ್ಲೂ ಚಂದ ನೀನು
ಬಿಕ್ಕಿಯಾಳು ಅಪ್ಸರೆ!

ದೂರ ದೂರ ಕ್ಷಣಿಕ ಮಾತ್ರ
ಕೂಡ ಬಲ್ಲೆ ನಿಮಿಷದಿ
ನೆನೆದು ನೋಡು ಅಲ್ಲೇ ಸಿಗುವೆ
ಕುಂಟೋ ಬಿಲ್ಲೆ ಆಟದಿ
ಕಣ್ಣ ತೇವ ಹೊತ್ತ ನೋವ
ಹಗುರಗೊಳಿಸಿ ಮರಳುವೆ
ನರಳುವಿಕೆಯು ಹೊರಳಿದಾಗ
ಸಿಗುವ ಪುಟವೇ ನೆಮ್ಮದಿ!

ಎಲ್ಲ ಹೇಳಿ ಮುಗಿಸಬೇಡ
ಚೂರು ಉಳಿಸು ನಾಳೆಗೆ
ಮೌನದಲ್ಲಿ ನೂರು ಅರ್ಥ
ಕಂಡುಕೊಳುವ ಬಾಳಿಗೆ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...