Wednesday 22 July 2020

ಎಲ್ಲವನ್ನೂ ಪ್ರಶ್ನಿಸುವ ಕವಿತೆಯೊಂದ ಬರೆಯಬೇಕು

ಎಲ್ಲವನ್ನೂ ಪ್ರಶ್ನಿಸುವ ಕವಿತೆಯೊಂದ ಬರೆಯಬೇಕು
ಕವಿತೆಯನ್ನೂ ರಕ್ಷಿಸುವ ಕವಿತೆಯೊಂದ ಬರೆಯಬೇಕು

ದಕ್ಕುವುದು ಮೂರು ಮತ್ತೊಂದು ಪದವೇ ಆದರೂ
ಮನದ ಮಾತ ಪೋಷಿಸುವ ಕವಿತೆಯೊಂದ ಬರೆಯಬೇಕು

ಅಕ್ಷರಗಳು ಬೇಡವಾಗಿ ರದ್ದಿಯಾದ ಹೊತ್ತಿನಲ್ಲಿ
ಕುಲುಮೆಯನ್ನೂ ಹೊತ್ತಿಸುವ ಕವಿತೆಯೊಂದ ಬರೆಯಬೇಕು

ಮುನಿದು ಮಾತು ಬಿಟ್ಟ ಮಗುವ ಮಡಿಲಿಗೆರಗಿಸಿಕೊಂಡು
ನಿದ್ದೆಯುಣಿಸಿ ಮುದ್ದಿಸುವ ಕವಿತೆಯೊಂದ ಬರೆಯಬೇಕು

ಏನೂ ತೋಚದೆ ಖಾಲಿತನವೊಂದೇ ಜೊತೆಗಿರಲು
ಎಲ್ಲವನ್ನೂ ಪ್ರೀತಿಸುವ ಕವಿತೆಯೊಂದ ಬರೆಯಬೇಕು

ನೆಚ್ಚಿ ಕದ್ದ ಸಾಲು ಎರಡು, ಅಲ್ಲಿ ಇಲ್ಲಿ ತಿರುಚಿ ಚೂರು
ಮೂಲ ಕವಿಯ ನಾಚಿಸುವ ಕವಿತೆಯೊಂದ ಬರೆಯಬೇಕು

ಯಾರೇ ಓದಿದರೂ, ಯಾರೂ ಓದದೆ ಹೋದರೂ
ಭವದ ಹಸಿವ ದಾಟಿಸುವ ಕವಿತೆಯೊಂದ ಬರೆಯಬೇಕು..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...