Friday 31 May 2013

ಪ್ಲೀಸ್ ಬೈಬೇಡ್ರಿ















ಮಾತಿನ ಚಾಟಿಗಿಂತ,
ಮೌನದ ಸವರು ಆಘಾತಕಾರಿ
ಚುಚ್ಚು ಮುಳ್ಳಿಗಿಂತಲೂ ಭಯಾನಕ,
ಚುಚ್ಚುವುದೆಂಬ ಗಾಬರಿ
ಹೂವಿನಂತೆ ತಲೆಯೇರಿ
ಭಾರವಾಯ್ತು ಒಲವೆಂಬ ಮಕ್ಕರಿ
ನನ್ನ ಪಾಡು ನನ್ನದು
ನನ್ನ ಗೋಳಿಗೆ ನೀವ್ಯಾಕೆ ಬಿಕ್ಕಿರಿ ?!!
ಅದೇನು ಯೋಚಿಸುತ್ತ ಕೂತಿರಿ
ಬೇಗನೆ ಎಲೆ ಹಾಕಿರಿ
ತಡವಾಗಿದೆ ಮನೆಯಲ್ಲಿ
ಕಾಯುತಿಹಳು ಕಿನ್ನರಿ
ಸೋತ ಮುಸುಡಿ ಕಂಡೊಡನೆ
ಊಟಕ್ಕೆ ಹಾಕುವಳು ಕತ್ತರಿ
ಜೇಬು ಜಣಗುಡಲು ನಕ್ಕು
ಸತ್ಕರಿಸುವ ಬಿತ್ತರಿ
ನೆನೆಯ ಬೇಕು ಸಾಯೋ ತನ್ಕ
ಆ ಮಧುರ ರಾತಿರಿ
ನಿಮ್ಮ ಆಲೋಚನೆ ಸರಿಯಿಲ್ಲ
ದಯವಿಟ್ಟು ತಿದ್ದುಕೊಳ್ಳಿರಿ
ಜೂಜು-ಮೋಜು ನಮಗೆ ಮಾತ್ರ
ಹೆಂಗಸರ ಕೇಳಿ ನೋಡಿರಿ
ಕೈಗೆ ಕೊಂಡ ಪೊರಕೆ ಏಟು
ಬೀಳದಂತೆ ಓಡಿರಿ
ಇಷ್ಟಕ್ಕೆ ನಮ್ಮ ಸ್ನೇಹ
ಮುಗಿಯಿತೆಂದರ್ಹೇಗೆ ರೀ
ಮತ್ತೊಂದಿನ ಮತ್ತೊಂದಾಟಕೆ
ಎಲ್ಲ ಸೇರಿರಿ
ಸೋತು ಗೆದ್ದು, ಗೆದ್ದು ಸೋತು
ಸಮತೋಲನ ಕಾಣಿರಿ
ಎಲ್ಲರೂ ಸೇರಿ ಈ ಗೀತೆಗೆ-
- ಜೈ ಅನ್ನಿರಿ
ಆ ಒಂದ್ಸಾರಿ, ಆ ಎರ್ಡ್ ಸಾರಿ, ಆ ಮೂರ್ ಸಾರಿ..............


                                                  --ರತ್ನಸುತ



Monday 27 May 2013

ರಾಧಾ ಮಾಧವ


























ಮಾಧವನ  ಉಸಿರಲ್ಲಿ ಬೆರೆತಳಾ ರಾಧ
ಕೊಳಲಿಂದ ಹೊಮ್ಮಿಸುತ ಶೃಂಗಾರ ನಾದ
ಹೂ ಬನದ ಅಂಗಳದಿ ಮಾಧುರ್ಯ ಗಾನ
ಚಿಟ್ಟೆ, ಗಿಣಿ, ನವಿಲುಗಳಿಗಲ್ಲಿ ನಿರ್ಬಂಧ

ಆಗಸದ ತೆರೆ ಎಳೆದ ಸಾಲು ಮೋಡಗಳು
ಘರ್ಷಣೆಯ ಕಾರಣಕೆ ಮಿಂಚು ಮೂಡಿರಲು
ಬೆಚ್ಚಿದಳು ರಾಧೆ, ಕಂಪಿಸಿತು ತನುವು
ಗೆಜ್ಜೆ ಝಲ್ಲೆಂದೊಡನೆ ಮಾಧವಗೆ ದಣಿವು

ರೆಪ್ಪೆ ಬಿಡದೇ ಬಡಿದು ನಾಚಿಹುದು ಮಾಧವನ -
- ನೇರ ಮಾದಕ ನೋಟವ ಹಾಗೆ ತಡೆದು
ಸುರಿದ ಮಳೆ ಚಳಿ ಹಿಡಿಸಿದರೂ ನಡುಗದ ಅಧರ
ನಡುಗುತಿದೆ ಇನಿಯನ ಆಲಿಂಗನವ ಪಡೆದು

ಮೊಗ್ಗಿಗೆ ಹಿಗ್ಗಿ ಹೂವಾಗುವ ಮನಭಾರ
ಬಳ್ಳಿಗೆ ಹೂವುಗಳ ಹೊತ್ತು ಮೈಭಾರ
ಕರಗಿದ ಮುಗಿಲ ಮರೆ ನೀಲಿಗೆ ಕಂಡಿತು
ಮದನ ಲೀಲೆಯ ಮೋಹಕ ಪ್ರಸಾರ

ಬೆವರಿಳಿಕೆಯಲಿ ಹಗುರಗೊಂಡಿತು ಮೋಹ
ಶಮನಗೊಂಡಿರಲು ವದನದೊಳ ಜ್ವಾಲೆ
ಒಂದೆಡೆ ಸಂವಾದ ನಡೆಸುತ್ತಿತ್ತು ಮೌನ
ಸದ್ದಿನಲೂ ನಿರ್ಲಕ್ಷಿತ ಮೇಘ ಮಾಲೆ ........

(ಈ ಕವನದಲ್ಲಿ ಯಾವುದೇ ರೀತಿಯ ತಪ್ಪುಗಳು ಕಂಡುಬಂದಲ್ಲಿ ನನ್ನನ್ನು ಕ್ಷಮಿಸಿ)

                                         --ರತ್ನಸುತ

Saturday 25 May 2013

"ಇದೊಂದು ಪ್ರೇಮ ಕಾವ್ಯ??"




















ಆಕೆಯ ಮೆಚ್ಚಿದ್ದು ಬರೇ ಕಣ್ಣುಗಳ ನೋಡಿ
ಅರಿತುಕೊಂಡದ್ದು ಮೌನ ಧೀರ್ಘ ಚರ್ಚೆ ಮಾಡಿ
ಇದ್ದಲ್ಲೇ ಹಿಂಬಾಲಿಸುತಿತ್ತವಳ ಈ ಹೃದಯ
ಮುಂದೆನಾಗಿರಬಹುದು?? ನೀವೇ ಊಹೆ ಮಾಡಿ!!!

ಎದುರಾಗುವ ಅನಿರೀಕ್ಷಿತ ಕಂಪನದ ಗಳಿಗೆ
ಇಬ್ಬರ ಎದೆಯಲ್ಲೂ ಒಂದೇ ಧಾಟಿಯ ಬಡಿಗೆ
ಅಸಹಜತೆಯ ಸಹಜತನ ಸ್ಪಷ್ಟ ಗೋಚರಿಸಿದರೂ
ಒಪ್ಪಲು ನಕಾರ ಎಳೆದ ಪ್ರಣಯ ಬೀಸಣಿಗೆ

ಭಾವ ಬರೆಯಲಂತು ರಾಶಿ-ರಾಶಿ ಕರೆಯೋಲೆಗಳ
ತಿಳಿಯದೇಕೆ ಅದಕೆ? ಆಕೆ ನೆಲೆಸಿರುವಳು ಇಲ್ಲೇ
ಆಕೆಯ ನೋಯಿಸಿದೆನೆಂಬ ಸಂಶಯದ ಚಿವುಟು
ಕಾಡಿದ ವಿಸ್ತಾರವನ್ನು ನಾನು ಮಾತ್ರ ಬಲ್ಲೆ

ಅದೆಷ್ಟು ಬಾರಿ ಎಡವಿಹೆನೋ ಆಕೆಯ ಗುಂಗಲ್ಲಿ
ಆದ ನೋವು ಅವಳ ನೆನೆಪ ಸವಿಯ ಮುಟ್ಟಲಾದೀತೇ?!!
ದಾಹವೆಂದು ಅಂಗಲಾಚಿ ಬೊಗಸೆ ಹಿಡಿದ ತಿರುಕ ನಾ
ಅಮೃತ ಪಾನವ ನೀಡಿದ ಆಕೆ ಪ್ರೇಮ ದೇವತೆ

ನಿವೇದಿಸಿಕೊಳ್ಳಲು ಆಗದ ಈ ಒದ್ದಾಟವೇ
ಜಾತಕದಲಿ ಗೀಚಲಾದ ಮಹೋನ್ನತ ಸಾಧನೆ
ಸಾಧನೆಯ ಹಾದಿಯೇ ಇಷ್ಟು ರೋಮಾಂಚಕ
ಇನ್ನೆಷ್ಟು ರಮಿಸಬಹುದು ಆ ಪ್ರೇಮ ನಿವೇದನೆ

ನಾಚಿದಕ್ಷರಗಳ ಗೀಚುತ ಮುಂದ್ಹರಿಸುತಲಿ
ಕೊನೆಗೆ ಅನಿಸತೊಡಗಿತು, "ಇದೊಂದು ಪ್ರೇಮ ಕಾವ್ಯ??"
ನಾನೇ ಬರೆದೆನೇ? ಎಂಬ ಗೊಂದಲವಿದೆ ನನ್ನೊಳಗೆ
ಆಕೆ ಬರೆಸಿರಬಹುದೆನ್ನುವುದಾದರೆ ಸತ್ಯ...........


                                                --ರತ್ನಸುತ

Friday 24 May 2013

ಕರ್ನಾಟಕದಲ್ಲಿಡ್ಕೊಂಡು ಒಬ್ಬ ಬಂಗಾಲಿ ತಮಿಳ್ ಕಲ್ತ
ಇಲ್ಲೇ ಹುಟ್ಟಿ ಇಲ್ಲೇ ಬೆಳ್ದೋನ್ ಕನ್ನಡ ಇರೋದನ್ನೇ ಮಾರ್ತ
ಮಾತೃಭಾಷೆ ಬಿಟ್ಟು ಒಬ್ಬ ಇಂಗ್ಲೀಷ್ ಮಾತಾಡ್ತಾ ಸತ್ತ
ಎಲ್ಲಾ ಕೈಮೀರ್ಹೋದ್ಮೇಲೆ  ನನ್ನತೌನೊಬ್ಬ ಕಣ್ಬಿಟ್ಟ


ಯಾರಾದ್ರು ಇನ್ನೂ ಕಣ್ಮುಚ್ಚಿದ್ದೀರಾ ಸ್ವಾಮೀ???????????????

                                                     --ರತ್ನಸುತ





Thursday 23 May 2013

ಮಳೆ ನಿಂತು ಹೋದಮೇಲೆ















ಮಳೆ ನಿಂತ ಮರುಗಳಿಗೆ
ಇಳೆಗೆ ಚೂರು ಬರವಸೆಯ-
-ಒದಗಿಸಿತ್ತು ಹನಿಯ ಕಾಯ್ದಿರಿಸಿದ ಎಲೆಯೊಂದು

ಬಿದ್ದು ತಣ್ಣಗಾಗಿದ್ದ
ನಿಂತ ನೀರಿನಲೆಯ ಬಲೆ
ಸೆರೆ ಹಿಡಿಯಿತು ಬಿದ್ದ ಹನಿಯ ಸಾಲಿಗೆ ಮತ್ತೊಂದು !!!


                                                --ರತ್ನಸುತ


Wednesday 22 May 2013

ಸಾಕು ತಾಯಿ (ಸಾಲದಾಕೆ)



























ಹೊತ್ತವಳು, ಹೆತ್ತವಳು, ಉಣಿಸಿದವಳಿವಳಲ್ಲಾ
ಬೆಚ್ಚಿದ ಬೆರಳನ್ನು ಈವರೆಗೂ ಹಿಡಿದಾಕೆ
ತಾಯಿಗೂ ಎತ್ತರದ ಸ್ತಾನವೊಂದಿರುವುದಾದರೆ -
- ಈಕೆಗೆ ಮೀಸಲಿಡಬಾರದೇಕೆ ?

ಅಮ್ಮಳಲ್ಲವಾದರೂ "ಅಮ್ಮ" ಎಂದು ಕರೆಸಿಕೊಂಡಾಕೆ
ಇದ್ದ ಚಾಚಿನಷ್ಟು ಗುಡಿಸಲೊಳಗೆ ಜಾಗ ಕೊಟ್ಟು
ಗೂಡಿನ ತುಂಬು ಗುಬ್ಬಿಗಳಲಿ ನಾನು ಮರಿ ಗುಬ್ಬಿ
ಅಳತೆ ಇಡದೆ ಸಲುಹಿದಾಕೆ ಸಮಾನ ಗುಟುಕನಿಟ್ಟು

ಸಹಿಸಿದವಳು ತುಂಟಾಟವ, ತನ್ನವನಾನೆಂದುಕೊಂಡು
ನೋವ ಮೂಲ ಬಲ್ಲವಳು ಜೊತೆಗೆ ತಾ ನೊಂದು
ದೂರಿದವಳಲ್ಲ ನನ್ನ ಕುರಿತು ಯಾರ ಬಳಿಯೂ
ಈಕೆಯ ಸೋಕಿನ ನೆರಳಿದೆ ಪ್ರತಿ ಕಥೆಯಲೊಂದು

ಇನ್ನೂ ಎಳೆದವಳೇ, ಒಂಟಿ ಬುಜಡಿ ಹೊತ್ತ ನೇಗಿಲ
ಅಗಲಿದವರು ಕೊಳೆತ ಮಣ್ಣಿನಲ್ಲಿ ನಲಿಯುತಿರಲು
ಬೇಸರದ ಅಂಚಿಗೆ ಒಂದಿಷ್ಟು ನಗೆಯ ಲೇಪ
ಇರುವ ನಾಲ್ಕು ದಿನದ ಆಟ ಗೆಲುವಿನಲ್ಲಿ ಮುಗಿಸಲು

ಅನುಭವದಕ್ಷತೆಕಾಳಿನ ಆಶಿರ್ವಚನದ ನುಡಿ
ಕಿರಿದಾಗಿಸಿತೆನ್ನ ಬೆಳೆದರೂ ಈಕೆಯ ಮೀರಿ
ಯಾರಲ್ಲಿಯೂ ಬೇಡದ ಸ್ವಾಭಿಮಾನಿ ದೇವತೆ
ಕೊಡುವುದಿವಳ ಹುಟ್ಟು ಗುಣ, ನಾ ಸಾಗುವೆ ಕೋರಿ

ಗರ್ಭಗುಡಿಯ ದೇವಾರಾಧಕ ಧರ್ಮವ ತಿಳಿಸಿದಾಕೆ
ಮೈ ಮನಸನು ಶುಚಿಗೊಳಿಸಿದ ಪವನ ಕಲ್ಯಾಣಿ
ಕರುಳ ಕೂಗು, ಸ್ವಾರ್ತದಾಳ ಇನ್ನೆಷ್ಟೇ ಇರಲಿ
ಜನ್ಮ ನೀಡಿದಾಕೆ ಸಾಕಿದಾಕೆಯ ಅಭಿಮಾನಿ.......

                           
                                        --ರತ್ನಸುತ



Tuesday 21 May 2013

ಚಿಟ್ಟೆ














ಚಿಟ್ಟೆ ಸತ್ತು ಬಿತ್ತು 
ದುಂಬಿಗಳ ಹಾವಳಿಗೆ 
ಬಿತ್ತು ಚಿಟ್ಟೆ ಸತ್ತು 

ಅಮಲೇರಿಸುವ  ಮಕರಂದವಿತ್ತು 
ದುಂಬಿಗೆ ಆಸೆ ಹೆಚ್ಚಿತ್ತು 
ಚಿಟ್ಟೆಗೆ ಚಟ್ಟ ಕಟ್ಟಿತ್ತು 

ರೆಕ್ಕೆಯ ಬಣ್ಣ ಮಾಸಿತ್ತು
ಯಾರದ್ದೋ ಹೊಸಕಿನ  ಕೈಗೆ ಅಂಟಿತ್ತು 
ಬಣ್ಣ ತೊರೆದ ಬೆತ್ತಲ ದೇಹ ಹೆಣವಾಗಿತ್ತು 

ಚಿಟ್ಟೆ ಮುದ್ದಾಗಿತ್ತು 
ನೀಡಬೇಕಿತ್ತು ನಾ ಒಂದು ಮುತ್ತು 
ಜೀವ ಮರಳಿಸೋ ಶಕ್ತಿ ಮುತ್ತಿನ ತುತ್ತಿಗಿರಬೇಕಿತ್ತು 

ಹೂವು ದುಂಬಿಗಳ ತಡೆಯಬೇಕಿತ್ತು 
ಚಿಟ್ಟೆಗಳು ಚಿರಕಾಲ ಉಳಿಯಬೇಕಿತ್ತು 
ಹೇಗಾದರೂ ನಾನು ಹೂವಾಗಿ ಚಿಟ್ಟೆಗಳ ಮಡಿಲಾಗಬೇಕಿತ್ತು............ 

                                                                  --ರತ್ನಸುತ 

Friday 17 May 2013

ಪೆದ್ದು-ಮುದ್ದು ಜೋಡಿ





















ಕೋಪಗೊಂಡ ನಿನ್ನ ಕೆನ್ನೆ ಮೋಹಗೊಂಡ ನನ್ನ -
- ಕಣ್ಣಿಗೇನೋ ಹೇಳುತ್ತಿದೆ ಅನರ್ಥ ಭಾಷೆಯಲ್ಲಿ
ಮೌನವಹಿಸಬೇಡ ಹೀಗೆ, ಏನನ್ನಾದರೂ ಗುನುಗು
ಬೈಗುಳವಾದರೂ ಸರಿಯೇ ಸ್ವಾಗತಿಸುವೆ ನಗುವಿನಲ್ಲಿ

ಕಾಯಿಸು ಈ ನಿರುದ್ಯೋಗಿಯ ಮರೆತು ಸಮಯ ಪ್ರಜ್ಞೆ
ಕಾಯುವಿಕೆಯಲ್ಲಾದರೂ ನಾ ನಿರತನಾಗುವಂತೆ
ರಾಮನಾಗಲಾರೆ, ನೀನಿದ್ದಂತೆಯೇ ಇಷ್ಟ ಪಡುವೆ
ಸ್ವೀಕರಿಸು ಒಪ್ಪುತ ನನ್ನ ಭರತನಂತೆ

ಎಣಿಸಲೇಕೆ ತಾರೆಗಳ? ಸೆಡ್ಡು ಹೊಡೆಯಬಲ್ಲ ನಿನ್ನ -
- ಕಣ್ಗಳನ್ನೇ ಮತ್ತೆ, ಮತ್ತೆ ಎಣಿಸುತ್ತ ಮಘ್ನನಾಗಲೇ ?!!
ಜೀವಮಾನವೆಲ್ಲ ನಿನ್ನ ಮುತ್ತಿಗಾಗಿ ಪರಿತಪಿಸಿ
ಸಿಕ್ಕ ವೇಳೆ ತಪಸ್ಸಿಗೆ ಅಲ್ಪ ಮುಕ್ತಿ ನೀಡಲೇ ??

ಎಟುಕದ ಮನದ ಕಿಟಕಿಯ ಬಾಗಿಲನ್ನು ತೆರೆದಿಡು
ಸಾಧ್ಯವಾದರೆ ಒಮ್ಮೆ ಇಣುಕಿ ನೋಡಿ ನಲಿಯುವೆ
ನಿನ್ನರಿಯುವ ತವಕ ನನಗೆ ನೀಗದ ಹಸಿವಾಗಿರಲಿ
ನನ್ನ ಬಾಳ ಸಕಲವನ್ನೂ ನಿನಗೊಪ್ಪಿಸಿ ಮರೆಯುವೆ

ದಿಟ್ಟದ ಮನ ಮುಟ್ಟುವ ತನ ಕಟ್ಟುವೆ ಹಾಡೊಂದನು
ಇತ್ತಣ ಭುವಿ , ಅತ್ತಣ ಗುರಿ ಹತ್ತುವೆ ಬಾನೆತ್ತರ
ನೀನಿರುವೆಯಾ ಹೇಳು ಅಜ್ಞಾತ ಗೆಳೆಯನ ಜೊತೆ ?
ನೀಡಬಲ್ಲೆ ನಿರಾಯಾಸದಿ ಬಾಳಿಗುತ್ತರ........


                                                --ರತ್ನಸುತ

Thursday 16 May 2013

ಕುಡ್ಕುರ್ ಮಾತು

ಯಂಗ್ಟಾ  : ತ್ಯಾಪೆ ಕಾಲು ಹಾಕ್ಕೊಂಡ್ ಎಲ್ಲಿಗ್ ಹೊಂಟ್ಯೋ ಮಾರ?
ಮಾರ :  ಊರಾಚೆ ಸಾರಾಯ್ ಅಂಗ್ಡಿ ಮತ್ತೆ ತೆರ್ದೈತಂತೆ ಬಾರಾ!!
ಯಂಗ್ಟಾ : ಬ್ಯಾಡ ಕಣ್ಳಾ, ಬೀದೀಗ್ ಬೀಳ್ತಾವ್ ನಮ್ಗೊಳ್  ಸಂಸಾರ
ಮಾರ : ನಾಯ್ಕ್ರೆ ಅಪ್ಪ್ಣೆಕೊಟ್ಟೊರ್ ಬಿಡ್ಲಾ ಚಿಂತೆ-ಗಿಂತೆ ದೂರ
         
            ಒಂದ್ರುಪ್ಪಾಯಂಗ್ ಮೂವತ್ ಕೆ.ಜಿ ಅಕ್ಕಿ ಕೊಡ್ತೌರಂತೆ
            ಮಾಡಿದ್ ಸಾಲ ಎಲ್ಲಾ ಮೊನ್ನೆ ಮನ್ನಾ ಮಾಡೌರಂತೆ
            ಇನ್ನೈದ್  ವರ್ಸ ನೆಮ್ದಿ ನಿದ್ದೆ, ಸಾರಾಯೇ ಕೂಳು
            ಆಮೇಲ್ ಯೋಚ್ನೆಮಾಡಿದ್ರಾಯ್ತು ಸಂಸಾರ ಹೆಂಡ್ತಿ-ಮಕ್ಳು

ಯಂಗ್ಟಾ : ಯಾರ್ಲಾ ಅವ್ನು ಪುಣ್ಯಾತ್ಮ ಇಷ್ಟಕ್ಕೆಲಾ ಕಾರ್ಣ
ಮಾರ : ಗೊತ್ತಿಲ್ವಾ? ನಮ್ ಹೊಸ ಸಿ.ಎಮ್ಮು  "ಸಿದ್ದ್ರಾಮಣ್ಣ"


                                                       --ರತ್ನಸುತ

Wednesday 15 May 2013

ರಾಗಿ ಮುದ್ದೆ ಮಹಿಮೆ

















ಕುದಿ ನೀರು ಹತ್ತು ನಿಮಿಷ ತಂಗಲನ್ನದೊಟ್ಟಿಗೆ
ಹಿಟ್ಟು ಸಿಂಪಡಿಸಿ ಉಕ್ಕಬೇಕು ತಕ್ಕ ಮಟ್ಟಿಗೆ
ಉಕ್ಕೋ ವೇಳೆ ನೀರಿನಷ್ಟು ಸಮಭಾಗದ ಹಿಟ್ಟು ಬೆರೆಸಿ
ಮತ್ತೇ ಬಿಡಬೇಕು ಹತ್ತು ನಿಮಿಷ ಕುದಿವ ಪಾಡಿಗೆ

ಗಂಜಿಗಿಂತ ಚೂರು ಧಟ್ಟ ಇರುವುದು ಮೊದಮೊದಲಿಗೆ
ಹಿಟ್ಟುಗೋಲು ಆಡಿಸಿ ಸುಮಾರು ಹೊತ್ತು ಮೆಲ್ಲಗೆ
ತೀರಾ ಧಟ್ಟವಾದರೆ ಚೂರು ಕುದಿನೀರು ಬೆರೆಸಿ
ತೆಳುವಾದರೆ ಮತ್ತೆ ಬೆರೆಸಿ ಚೂರು ಹಿಟ್ಟು ಘಟ್ಟಿಗೆ

ಬೆಂದ ಹಿಟ್ಟ ಇಳಿಸಿ ಒಲೆಯ ಬೆಂಕಿಯಿಂದ ದೂರಕೆ
ಗಂಟು ಬೀಳದಂತೆ ಕಲೆಸಿ ಹಿಟ್ಟುಗೋಲ ಹಿಂಡಿಗೆ
ಕೊರೆದು ಬಿಲ್ಲೆಯಲ್ಲಿ ಚೆಲ್ಲಿ ತೊಳೆಸು ಕಲ್ಲು ಪೀಟಕೆ
ನಂತರ ಬಿಸಿ ಮುದ್ದೆ ತೊಳೆಸಿ ಚಂಡಿನಂತೆ ಗುಂಡಗೆ

ಬಿಸಿ ಇದ್ದಾಗಲೇ ಇಳಿಸಿ ಊಟದ ತಟ್ಟೆಗೆ
ಬಸ್ಸಾರು ಬಿಸಿ ಅದ್ದಿಗೆ, ಪಲ್ಯ ಜೊತೆಗೆ ನೆಂಜಿಗೆ
ನಾಲಿಗೆಯಿಂದಿಳಿದ ಬಿಸಿ ತುತ್ತು ಅನ್ನನಾಳ ಸೀಳಿ
ಸೇರುವುದು ಕೊನೆಗೆ ಕಾದಿದ್ದ ಹಸಿದ ಹೊಟ್ಟೆಗೆ

ಉಳಿದ ಮುದ್ದೆ ವ್ಯರ್ಥವಲ್ಲ ಚೆಲ್ಲದಿರಿ ಕಲ್ಗಚ್ಚಿಗೆ
ಮೊಸರು ಬೆರೆಸಿ ಚಂದ ಹಿಚುಕಿ ಮಸಾಲೆಯೊಟ್ಟಿಗೆ
ಈರುಳ್ಳಿ, ಮೆಣಸಿನಕಾಯೊಗ್ಗರಣೆ ಬಿದ್ದರೆ
ನಳಪಾಕವಾದರೇನು ಶರಣೆಂಬುದು ಅಂಬಲಿಗೆ

ಬಣ್ಣ ಕಂಡು ಜರಿದ ರೊಟ್ಟಿ ಸಿಕ್ಕವರ ಪಾಲಿಗೆ
ಮರೆತಿರುವರು ಸಂಸ್ಕೃತಿಯ ಇಂದಿನ ಯುವ ಪೀಳಿಗೆ
ರುಚಿಯರಿತು ಆಸ್ವಾದಿಸುವವರ ನಾಲಿಗೆಗೆ ಇದು
ಮೂರುಹೊತ್ತು ಹಬ್ಬದೂಟ, ರುಚಿಬರಿತ ಹೋಳಿಗೆ ........


                                                    --ರತ್ನಸುತ

Tuesday 14 May 2013

ಧರ್ಮ- ನನಗೆ ತಿಳಿದ ಮಟ್ಟಿಗೆ

ಅತ್ತು ಕರೆಯುವುದು ಕಂದಮ್ಮನ ಧರ್ಮ
ಅಳುವ ಮುನ್ನವೇ ಉಣಿಸುವುದು ತಾಯ ಧರ್ಮ
ಧರ್ಮವನು ಪರಿಪಾಲಿಸಲು  ಇವರೀರ್ವರಿಗೆ
ಕೊಟ್ಟನಾ ಬಂಧನದ ಹೆಸರ ಆ ಬ್ರಹ್ಮ ?!!

ಚಿಗುರುವುದು ಹೂ-ಕಾಯಾಗುವ ಧರ್ಮ
ಉಗಮಿಸುವುದೇ ಕಾಯ ಉದುರಿನ ಧರ್ಮ
ಮಸಣದಲಿ ಮಣ್ಣಾಗುವ ಕೊಳೆತ ದೇಹಗಳು
ತೊಟ್ಟಿಲಿಗೆ ನೀಡಲಿ ಮತ್ತೊಂದು ಜನ್ಮ

ಕರಗುವುದು ಮೋಡಗಳ ಸಹಜ ಧರ್ಮ
ಹನಿಯುವುದ ಅನುಭವಿಸುವುದು ಮಣ್ಣ ಧರ್ಮ
ಕೊಡುವುದನು ಪಡೆದು, ಹಿಂದಿರುಗಿಸುವ ತತ್ವ
ಸಮತೋಲನದ ತಕ್ಕಡಿಯ ಹಿಡಿದ ಪ್ರೇಮ

ಅವರೆನ್ನುವುದು ನನ್ನ ನನ್ನತನದ ಧರ್ಮ
ನಾನೆನ್ನುವುದು ನಾನೇ ಶೃಷ್ಟಿಸಿದ ಧರ್ಮ
ಅವರೊಡನೆ ನಾನು, ಅವರವರೊಡನೆ ಅವರು-
-ನನ್ನೊಡನೆ ಬೆರೆತರೆ ಶಾಂತಿ ಧಾಮ

ಗೀಚುವುದು ಲೇಖನಿಗೆ ಬೆರಳಿನ ಧರ್ಮ
ಹೊರಳುವ ಬೆರಳಿಗೆ ಮನಸಿನ ಧರ್ಮ
ಅಚ್ಚಾಗಿ ಮೂಡಿದ ಪದಮಾಲಿಕೆಗೆ ಇಡಲೇ
ಓದುಗರ ಕಣ್ಮನ ಸೆಳೆಯುವ ನಿಯಮ?

                                       --ರತ್ನಸುತ


Monday 13 May 2013

ಹಸಿವನೋಡಿಸುವ್ಹಸಿವು























ಹೊರ ಬನ್ನಿ ಮನೆ ಬಿಟ್ಟು, ಮನೆ ದೇವರಿಗೆ ಬೊಟ್ಟು -
-ಕೈ ಮುಗಿದು ಹೂವಿಟ್ಟು, ದೀಪ-ಧೂಪವ ಸುಟ್ಟು 
ಹಿಡಿದ ಕೊಡಲಿಯ ಹಲ್ಲು, ಮುರಿದು ಬೀಳಲಿ ಇಂದು 
ಬಳ್ಳ-ಪಾವಿನ ಅಳತೆ, ಬೆಸ್ತು ಬೀಳಲಿ ನೊಂದು 

ಒಲೆಯ ಕಾವಿಗೆ ಆಂಟಿ ಉಳಿದ ಮನೆ ಹೆಂಗಸರ -
- ಹೊರಡಿಸಿ, ಕೆಂಡ ಭೂದಿಯ ಕಂಡು ನಲಿಯಲಿ 
ತಂಗಲು ಗಂಜಿಗೆ ಬೆರೆಸಿ ತಿಳಿ ಮಜ್ಜಿಗೆ 
ಈರುಳ್ಳಿ, ಖಾರ ಮೆಣಸಿನಕಾಯಿ ನೆಂಜಿಗೆ 

ಮಾಸಲಂಗಿಯ ತೊಟ್ಟು, ತಲೆಗೆ ಪೇಟೆಯ ಸುತ್ತು 
ಹಸಿರು ಪಚ್ಚೆಯ ಕಂಡು, ಬಿರಿದ ಒಡೆಯನ ಘತ್ತು 
ಕೊಡಲಿ ಏಟಿಗೆ ಸಿಕ್ಕ, ಧಿಟ್ಟ ಪೈರಿನ ನಿಲುವು 
ಧೀರ್ಘ ದಂಡದ ವರಸೆ, ಭುವಿಗಪ್ಪುಗೆಯ ಒಲವು 

ಶಿರವೆರಿದನ್ನಪೂರ್ಣೆಯ ರೂಪಕ ದವಸ 
ಕಣದ ಶುಭ್ರ ನೆಲ, ಗುಡುಬಂಡೆಗೆ ಕೆಲಸ 
ತೆನೆ ಪೈರು ಒಣಗಿದೆ, ಬಡಿ-ಬಡಿಯೇ ಚೆಲ್ಲಿದೆ 
ಧಾನ್ಯ ರೂಪದ ಚಿನ್ನ ಹೊಳೆಯುವ ರಾಶಿ 

ಬಳ್ಳ ತೂಗಿತು ಹೊಟ್ಟೆ ತುಂಬಿಕೊಳ್ಳುವವರೆಗೆ 
ನೀಡಿತು ಮಿಕ್ಕವನು ಮತ್ತೊಂದು ಹೊಟ್ಟೆಗೆ 
ಧಿಕ್ಕು ಪಾಲಾಗಿ  ಹರಿದ ಬಂಜರು ಬಾಳು 
ಕೂಡಿಕೊಂಡಿತು ಸಧ್ಯ ತಾ ತಕ್ಕ ಮಟ್ಟಿಗೆ 

ಹೊಸ ಉಡುಗೆ ಹಬ್ಬಗಳ ಸಂಭ್ರಮಕೆ ಕಾರಣ 
ಹಸಿದ ಮಣ್ಣಿಗೆ ಚೆಲ್ಲಿ ಗೊಬ್ಬರದ ಹೂರಣ 
ಬರಲಿ ಮಳೆ ಕೈಸೇರಲಿ ಮತ್ತೆ ಫಸಲು 
ದೇಶ ಪುಷ್ಟಿಯಾಗಲಿ, ಇರದ್ಹಸಿವಿನ ದಿಗಿಲು 


                                           --ರತ್ನಸುತ 

Saturday 11 May 2013

ತುಂಡಲೆಗಳು ತೊರೆದ ಕ(ವಿ)ತೆ


















ಮತ್ತದೇ ಮಾತು, ಮತ್ತದೇ ಜಗಳ
ಪರಿಚಯದ ಹೊಸ್ತಿಲಲಿ ಹೀಗಿರಲಿಲ್ಲ
ಮತ್ತದೇ ಮೌನ, ಮತ್ತದೇ ವಿರಸ
ನಡುವೆ ಬೆಳೆದ ಅಂತರ ಕರಗಲಿಲ್ಲ

ಮತ್ತದೇ ಮುನಿಸು, ಮತ್ತದೇ ಕೊರಗು
ಒಬ್ಬರಿಗೊಬ್ಬರು ನೆರವಾಗಬೇಕಿತ್ತು
ಮತ್ತದೇ ಜಿದ್ದು, ಕ್ಷಮೆಗಿಡದ ಸದ್ದು
ಮನಸ್ತಾಪದೊಳಗೊಂದು ವಿಷಬರಿತ ತುತ್ತು

ಅದೃಶ್ಯ ಪ್ರೀತಿ, ಆಲಸ್ಯ ಬಾಳ್ವೆ
ದಿಂಬಿಗೂ ಮಂಚಕೂ ದೂರದಲ್ಲೇ ಸರಸ
ಮಾರುದ್ದ ಸಹನೆ, ಊರುದ್ದ ಕಿಚ್ಚು
ನಗುವನ್ನೇ ಬಿಂಬಿಸದ ಕನ್ನಡಿಯ ಕಳಶ

ಇಬ್ಬಾಗ ಕೋಣೆ, ಮುಂಬಾಗ ಮುಸುಕು
ಜ್ವಲಿದ ಬೆಂಕಿಗೆ ಮಣಿದ ಆತ್ಮಾನುಬಂಧ
ಅತಿ ವೇಗ ಕೋಪ-ಶರ, ಇಂಪಿಸದ ಪ್ರೇಮ ಸ್ವರ
ಅರ್ಥ ಕಳೆದುಕೊಂಡ ಋಣಾನುಬಂಧ

ಕಾಮದೋಣಿಯ ಬಿರುಕು, ಜೀವ ವೀಣೆಯ ಮಿಡಿತ -
- ಕರ್ಕಶದ ಜೋಳಿಗೆಯ ತುಂಬು ಕವಳದ ಕಾಳು
ಮಾನವೀಯತೆ ಮರೆತ ಕೆನ್ನೆಗಂಟಿದ ಬೆರಳು
ಒಗ್ಗೂಡಿ ವಿಚ್ಛೇದಿಸಲು ಹೋರಟ ಬಾಳು

ವೇದ ಘೋಶದ ನಡುವೆ ಬೆಸೆದ ನಂಟಿನ ಗಂಟು
ವಾದ ಮಂಡನೆ ಮುಂದೆ ಸಡಿಲಗೊಂಡಿರಲು
ನ್ಯಾಯ ದೇವತೆಯೂ ಒಮ್ಮೆ ಕಣ್ಬಿಟ್ಟು ನೋಡಿದಳು
ಪರಿಚಯದ ಅಪರಿಚಿತ ಎರಡು ದೇಹಗಳು

ಹರಿದು ತೀರದ ಎರಡು ತುದಿ ಸೇರಿತು ಅಲೆ
ಇದ್ದ ಪ್ರೇಮ ಕಡಲ ತವರನ್ನು ತೊರೆದು
ಎಂದಾದರು ಮುಂದೆ ಒಂದಾಗಬಹುದೇ?
ಪ್ರಶ್ನೆಯೊಂದಿಗೆ ನಿಲ್ಲಿಸಿದೆ ಇಷ್ಟು ಬರೆದು......


                                                  --ರತ್ನಸುತ


Friday 10 May 2013

ಕತ್ತಲ ಮರೆ ಆಟ

















ಒಂದು ನಿರ್ವಿಕಾರ ತುಂಬು ಕತ್ತಲು ಆವರಿಸಿದ-
-ಏಕಾಂಗಿ ಕೋಣೆ 
ಒಂದು ಬದಿಗೆ ಚತುರ ಕುವರ 
ಮತ್ತೊಂದು ಬದಿಯಲಿ ಮೌನ ಚತುರಿ 

ಗುಟ್ಟಿನ ಪದ ಪಿಸುಗುಟ್ಟಿಗೆ 
ಶುರುವಾಯಿತು ಕುರುಡು ಸಂದರ್ಶನ 
ಇರದ ಆಕಾರದ ಊಹೆ 
ಧನಿಯ ಧಾಟಿಗೆ ಹುಸಿ ದರ್ಶನ 

ಗೊಂದಲದಲಿ ಮೊದಲಾಗಿ 
ಸುದಾರಿಸಿದ ಮಾತಿನ ಮುಂದೂಡಿಕೆ 
ಒಬ್ಬೊಬ್ಬರ ಪರಿಚಯಾಕಾಂಕ್ಷ ಮಾತು 
ಮತ್ತೊಬ್ಬರ ವಿಚಾರ ಹೊದಿಕೆ 

ಭಾವುಕತೆಯ ಕಥೆಯ ಅಂಚಲಿ 
ಜಾರಿದ ಬಿಕ್ಕಳಿಕೆ ಸದ್ದು 
ದೂರುಳಿದೇ ಮುಂದಾದ ಕೈಗಳು 
ಗಾಳಿಯನ್ನೇ ಮಾಡಿದವು ಮುದ್ದು 

ಎಲ್ಲೋ ಮೊದಲಾದರೂ ಕೊನೆಗೆ 
ಒಮ್ಮತದಲ್ಲೇ ತಲುಪಿದ ವಾದ
ಅಪಸ್ವರದ ನಡುವೆಯೂ 
ಹೊಂದುತ್ತಲಿದ್ದ ಜೋಡಿ ನಾದ 

ನೋಡು-ನೋಡುತ ವಾಲಿಕೊಂಡರು 
ಇದ್ದಲ್ಲಿಯೇ ಈರ್ವ ಮಡಿಲುಗಳಲ್ಲಿ 
ಹೆಚ್ಚು ಕಾಲ ಉಳಿಯದ ಸಡಗರ 
ಘೋರ ಬೆಳಕು ಹರಿಯಿತಲ್ಲಿ 

ನೋಟ ಬೆರೆಯಿತು, ಊಹೆ ಹುಸಿಯಿತು 
ಅಂತರವು ಅನಂತವಾಯಿತು 
ಕತ್ತಲಿಟ್ಟ ಸಿರಿಯ ಸಂಭ್ರಮ 
ಬೆಳಕು ಹರಿದು ಕಸಿಯಿತು 

ಅಭಿಪಾಯ ಬಿನ್ನವಾಗಿ, ಅಭಿರುಚಿಗಳು ಖಿನ್ನವಾಗಿ 
ವಿರಹವೇ ಆವರಿಸಿತು, ಮಾತು-ಮಾತಿಗೆ ಮೂಡಿ ಮುನಿಸು 

ಕುರುಡು ಕತ್ತಲೇ ಹಿತವಾಗಿರಲು, ಬೆಳಕು ಬಾಳನು ಮಿತವಾಗಿಸಿತು 
ನಗ್ನವಾಯಿತು ಸತ್ಯ, ಭಘ್ನವಾಯಿತು ಕಂಡ ಕನಸು.... 


                                                 --ರತ್ನಸುತ 

Friday 3 May 2013

ಶಾಂತಂ ಪಾಪಂ, ಪೋಲಿ ಕಾವ್ಯಂ

ಪೋಲಿ ಪದ್ಯ ಬರೆಯೋಕಂತ ಹಂಗೋ ಹಿಂಗೋ ಕುಂತೆ
ಕಂಡಿದ್, ಕೇಳಿದ್, ಓದಿದ್ದೆಲ್ಲಾ ತುಂಬಿಸ್ಕೊಂಡು ಮೂಟೆ
ಮನ್ಸಿನ್ ಮೂಲೆ ಗಲ್ಲಿಯಲ್ಲಿ ಪೇಚಾಟದ್ದೇ ಸದ್ದು
ಕೇಳೋದಕ್ಕೂ ಪುರ್ಸೊತ್ತಿಲ್ಲ ನಿಮ್ಸನಾದ್ರೂ ಕಾದು

ದೇವ್ರು-ದಿಂಡ್ರು ಗೆಪ್ತಿಗ್ ಬಂದ್ರು ಕೆನ್ನೆ ಬಾರಿಸ್ಕೊಂಡೆ
ಗುರುಗೋಳ್ ಕಿವಿ ಹಿಂಡ್ದಂಗಾಯ್ತು ಹೆಂಗೋ ತಪ್ಪಿಸ್ಕೊಂಡೆ
ಬಣ್-ಬಣ್ ಮಾತಿನ್ ರಂಗು, ಗುಂಗೆರಿಸ್ತಿತ್ತು ಕಿವಿಯ
ಗೆಪ್ತಿ ಆತು ಎಲ್ಲೋ ಗೆಳೆಯ ಪಿಸ್ಗುಟ್ಟಿದ್ ವಿಸ್ಯ

ತೋಟದ್ ಮನೆ ತಮಟೆ ಏಟು ಬರಿಯೋಕೊಸಿ ಘಾಸಿ
ಗುಂಡು ತೋಪಿನ ಮರಗೋಳ್ ಹಿಂದೆ ಅಡ್ಡಡ್ ಬಂದೆ ಒಸಿ
ನಾಲ್ಗೆ ಕಚ್ಕೊಂಡ್ ಹುಣ್ಣಾಗೋಯ್ತು ಅಷ್ಟರ್ ಮಟ್ಟಿಗ್ ನಾಚ್ಕೆ
ಅಲ್ಗೂ ಅಕ್ಸ್ರ ಮೂಡ್ತಾಯಿತ್ತು ಹಾಳೆ ಮ್ಯಾಲೆ ಬೆಚ್ಗೆ

ಪೋಲಿ ಟೆಂಟು, ಪೋಲಿ ಸಿನ್ಮಾ ಗೆಪ್ತಿ ಬರ್ದೇ ಇದ್ರೆ
ಪೋಲಿ ಪದ್ಯ ಅನ್ಸೋದಾದ್ರೂ ಹೆಂಗೆ ಅಂದ ಮಿತ್ರ
ಕದ್ದು ನೋಡಿದ್ ಸನ್ನಿವೇಶ ಹಂಗೇ ಕಣ್ಮುಂದ್ ಬಂತು
ಏನ್ ಬರ್ಯೋದ್? ಏನ್ ಬಿಡೋದ್? ಎಲ್ಲಾ ಮರ್ತೇ ಹೋಯ್ತು

ಹೆಂಗೋ ಹಂಗೆ ಬರ್ದು ಇಟ್ಟೆ ಸವಾಲ್ ಹಾಕ್ದೋನ್ ಮುಂದೆ
ಅರ್ಧಂಬರ್ಧ ಅರ್ಥ ಮಾಡ್ಕೊಂಡ್ ಸುಮಾರು ಅಂತಂದ
ಏನೋ ಸ್ವಲ್ಪ ತಪ್ಪು ಮಾಡಿ ಕಾಟ್ ಹೊಡ್ದಿದ್ದೆ ಒಂದ್ತುಣ್ಕು
ಅದೇನು ಅಂತ ಹೇಳೋವಷ್ಟರಲ್ ಇದ್ ನನ್ ಪ್ರಾಣ ತಿಂದ

ಲೋಕಕ್ ಹೆದ್ರಿ ಬಚ್ಚಿಟ್ಟೆ ಹರ್ದಾಕೋ ಮನ್ಸಿಲ್ದೀರಾ
ಆಗಾಗ್ ತೆರ್ದು ಓದ್ತಿರ್ತೀನಿ ಮರ್ತಿಲ್ಲ ಅದ್ನ ತೀರಾ
ಬರ್ದಿದ್ ಕರ್ಮ ಅನ್ಕೊಂಡು ಮಡ್ಚಿಟ್ಟೆ ಕಾಣ್ದಂಗೆ
ಪೋಲಿ ಪದ್ಯ ಬರ್ದೊರ್ ಕಥೆ ಇರ್ತೈತೇನೋ ಹಿಂಗೆ?!!......

                                                        
                                                                 --ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...