Monday 31 August 2015

ಬಂದೇ ಬರುವೆ

ಬಯಸಿ ಬಯಸಿ ಮಳೆಯಲಿ ನೆನೆದು
ಉಸಿರ ಬಿಗಿಸಿ ಹೆಸರನು ಕರೆದು
ಕಣ್ಣಿನ ಕಾವಲುಗಾರರ ದಾಟಿ
ಬರುವೆ ಕಾದಿರು ಹೂವನು ಹಿಡಿದು


ನಡುವೆ ಸುಳಿಯ ಸರಳನು ಮುರಿದು
ಎಲ್ಲ ವಿಧಿಯ ಬಾಗಿಲ ತೆರೆದು
ಸಣ್ಣಗೆ ಸತ್ತು ನುಣ್ಣಗೆ ಅತ್ತು
ಬರುವೆ ಕಾದಿರು ಹೃದಯವ ಮಿಡಿದು


ಸಾಯಂಕಾಲಕೆ ಸಾಕಾದರೂ ಸರಿ
ಮುಂಜಾವಿನ ಮಂಜಿತ್ತರೂ ಅಚ್ಚರಿ
ಬೆಳಗು ಮಬ್ಬಿನ ಹಂಗನು ತೊರೆದು
ಬರುವೆ ಕಾದಿರು ಉಂಗುಟ ಕೊರೆದು


ಬರಿಗೈ ಬಡತನ ಸವಿಸುತ ಬರುವೆ
ಹಿಡಿ ಪ್ರೀತಿಗೆ ಎದೆ ಗೂಡನು ಕೊಡುವೆ
ಮಲ್ಲಿಗೆ ಕರಗಳ ಕೋಮಲ ಸೋಂಕಿಗೆ
ಬರುವೆ ಕಾದಿರು ನಗುವನೇ ಮುಡಿದು


ಮೈಲಿಗಲ್ಲುಗಳಚ್ಚರಿ ಪಡಲಿ
ಗೇಲಿಗೈದವು ನಾಚಿಕೆ ಪಡಲಿ
ಅಂತರದಂತರ ನಂತರವಿರಲಿ
ಬರುವೆ ಕಾದಿರು ಕವಿತೆಯ ಬರೆದು!!


                                  -- ರತ್ನಸುತ

Friday 28 August 2015

Donkey and a piece of paper

A group of donkeys
Grazing on grass
Found a piece of paper


Curious they were
To see just one piece
For the entire group


They fled from grass
And tasted the paper
One after another


Only few got to taste
Rest heads down disappointed
Got back to grass


From then everyday a paper is found
Excited they run
Feed upon with dissatisfaction


That paper which tasted the first
Was the tastiest one
And nothing could match it


The donkey
Which first tasted the paper
Never existed
But yet remembered forever!!


                             -- Rathnasutha

Monday 24 August 2015

ಎರಡೊಂದ್ಲ ಒಂದು

ಎಲ್ಲ ಲೆಕ್ಕಕ್ಕೂ ಮುತ್ತೇ ಕಾಯಿ,
ಜಗಳ, ಮುನಿಸು, ಸಮರಸಕೆ
ಒಂದು ಕಾಯಿ ಹೆಚ್ಚಿಗೇ ಇಟ್ಟು
ಮುತ್ತಿನ ಲೆಕ್ಕ ತೀರಿಸಿಕೊಂಡರಾಯ್ತು


ಕತ್ತಲ ಹಾದಿಯ ನಡುನಡುವೆ
ಬೀದಿ ದೀಪಗಳ ಕೇಕೆ
ಕತ್ತಲ ಸೀಮೆಯಲ್ಲೇ ಪಾದ ಸವೆಸಿ
ಬೆಳಕ ಬಹಿಷ್ಕಾರಕ್ಕೆ ಸಂಚು ಹೂಡುವ


ಸಂತೆಯಲ್ಲಿ ಅಂತೆ ಕಂತೆಗಳ ಬಾಯ್ಮುಚ್ಚಿ
ಕೈ ಹಿಡಿದು ದಿಲ್ದಾರಾಗಿ ನಡೆವಾಗ
ಬೆರಳು ಅಂಜುಬುರುಕ ನೆರಳಿಗೆ
ಸಾಹಸ ಗಾಥೆ ಹೇಳಿಕೊಂಡಿರಲಿ


ಕನಸುಗಳ ಕಟ್ಟಲು ಪಲ್ಲಂಗ ಬೇಕಿಲ್ಲ
ನಾಲ್ಕು ಗೇಡೆಗಳ ಹಂಗಿಲ್ಲ
ಮಡಿಲಲ್ಲಿ ಹಿಡಿ ಪ್ರೇಮ ಕೌದಿಯಾದರೆ
ಕನಸುಗಳ ಪಾಲಿಗದು ರಾಜಾಶ್ರಯ


ನಾಳೆಯೆಂಬುದು ಬರದೆ ಉಳಿಯದೆಂದು
ನೆನ್ನೆಯೆಂಬುದು ಮರಳಿ ಬಾರದೆಂದು
ಕ್ಷಣದ ಸುಖದಲ್ಲಿ ಕಹಿ ಹಿಂಡಲು
ಹೆಪ್ಪುಗಟ್ಟಿದ ಹೃದಯ ಬಡಿದೇ ಒದ್ದಾಡಿತು


ತಾರೆ ಕುಸುರಿಯ ಬಾನು ಹೊದಿಕೆಗಾಗಿ
ಭುವಿಯ ತುಂಬ ನಮ್ಮ ಹೆಜ್ಜೆ ಗುರುತು
ನಾವು ನಾವಾಗಿ ಒಂದಾಗಿ ಬಾಳುವ ಆಗ
ಮೆಚ್ಚಿ ಗೊಣಗಲಿ ಲೋಕ ನಮ್ಮ ಕುರಿತು


                                        -- ರತ್ನಸುತ

ಹೇಳತೀರದವು

ಇತ್ತೀಚೆಗೆ ಬರೆದದ್ದೆಲ್ಲಕ್ಕೂ ನಿನ್ನ ನೆರಳೇ ಅಂಟಿ
ಒಂದು ಸೊಂಪಾದ ಅನುಭೂತಿ ಪದಗಳಿಗೆ;
ಹಗಲೆಲ್ಲಾ ಕಾಡಿದವುಕ್ಕೆ ರಾತ್ರಿ ಮುಕ್ತಿ,
ರಾತ್ರಿ ಕಾಡಿದವುಕ್ಕೆ ಹಗಲಲ್ಲಿ


ಹೀಗೆ ಬಿಟ್ಟೂ ಬಿಡದಂತೆ ಕಾಡುವ ಪರಿಗೆ
ಕಣ್ಣಾಲಿಗಳು ಎಲ್ಲಿ ಪಳಗಿದವೋ ಕಾಣೆ,
ಸೂಜಿಗಲ್ಲಿಗೂ ಮೀರಿದ ಶಕ್ತಿಯೆದುರು
ನಿಸ್ಸಹಾಯಕ ಕಬ್ಬಿಣದ ಹರಳಾಗುತ್ತೇನೆ!!


ದೂರ ಕ್ರಮಿಸಿದಷ್ಟೂ ಆಕ್ರಮಿಸಿಕೊಳ್ಳುವ
ನಿನ್ನ ಪಾರದರ್ಶಕ ನೋಟಕ್ಕೆ ಸೋತವುಗಳಲ್ಲಿ
ನಾ ಮೊದಲಿಗನಾಗಬಯಸುತ್ತೇನೆ,
ಸೋಲಿನ ಸರದಿಗಳ ಅಂಕಿಪಟ್ಟಿಯಲ್ಲಿ


ಒಬ್ಬರ ಉಸಿರ ಮತ್ತೊಬ್ಬರು ಸೇವಿಸುವಷ್ಟು
ಸನಿಹವಾಗುವುದರೊಳಗೆ "ಎಂಥ ಸಾವ್ ಮಾರ್ರೆ!!"
ಎಂದು ಉದ್ಗರಿಸುವಷ್ಟು ಸಿಟ್ಟು ತರಿಸಿದ್ದು
ನಿನ್ನ ಮೇಲಿದ್ದ ಅಗಾಧ ಮೋಹದಲ್ಲೇ ದೂರುಳಿಯಬೇಕಾದ ಕಾರಣಕ್ಕೆ


ಕೈ ರುಚಿಗೂ ಮೀರಿದ ಸ್ವಾದಕ್ಕೆ ಮಾರುಹೋದೆ,
ಇದೇ ಮೊದಲ ಬಾರಿಯೇನಲ್ಲ
ಆದರೆ ವಿಶೇಷವೆನಿಸುವಂತೆ ಇದೇ ಮೊದಲು
ನಿನ್ನ ಮಾತೊಳಗಿನ ಮೌನ ರುಚಿಸಿದಾಗ


ನನ್ನ ಹೆಸರ ಕಿತ್ತು
ನಿನ್ನ ಹೆಸರೊಡನೆ ಜೋಡಿಸಿಕೊಂಡಷ್ಟೇ ಸಲೀಸಾಗಿ
ನಿನ್ನ ಉಸಿರಲ್ಲಿ ಬೆರೆತು ಹೋಗುತ್ತೇನೆ
ಅಪ್ಪಣೆ ನೀಡದೆ ಕಾಯಿಸು, ಕಳ್ಳನಾಗುತ್ತೇನೆ!!


                                                   -- ರತ್ನಸುತ

ಚೂರು-ಪಾರು ಪ್ರೀತಿಯಲ್ಲಿ

ಚೂರು ನೆಲ, ಚೂರು ನಭ
ಕಣ್ಣಿಗೆ ಒಂದಿಷ್ಟು ಬೆಳಕು
ಕತ್ತಲ ಒಂದಷ್ಟು ಬೆರಗು
ಮಾತಿನ ಸುಗಂಧದೊಡನೆ
ಮೌನದ ಕಿರು ತಂಗಾಳಿ
ಬೇಕು ಚೂರು ಖುಷಿಯ ಜೊತೆ
ರುಚಿಗೆ ತಕ್ಕ ಕಂಬನಿ
ಪ್ರೀತಿಯ ಪ್ರಕಾರಗಳಿಗೆ
ಮಿಡಿವ ಮನವೇ ಮಾರ್ದನಿ!!


ಚೂರು ಹಿತ, ಬಿನ್ನಮತ
ಚೂರು ಕೋಪ ತರಿಸುತಲೇ
ಇರಲಿ ಕೊಂಚ ತಾಳ್ಮೆ,
ಬರಲಿ ಬಂದ ಹಾಗೆ
ಹಾಗೇ ತೊಲಗುವಂತೆ ನೋವು
ಅಳಿಯದಿರಲಿ ನಮ್ಮ ಒಳಗೆ
ಒಲುಮೆಯೆಂಬ ಕಾವು


ಎಡವಲೊಂದು ಕಲ್ಲು
ಜಾರಲೊಂದು ತಗ್ಗು
ಸುಧಾರಣೆಗೆ ಇರಲಿ ಒಂದು
ಸಮತಟ್ಟು ತಾಣ,
ಸಣ್ಣ ಗೂಡು ಬದುಕಲು
ಚಿಟಿಕೆ ವಿರಹ ಅದರೊಳು
ಎಲ್ಲ ಸಿರಿಯ ಮೀರಿ ಪ್ರೇಮ
ಸತ್ವಗೊಳಲಿ ಪ್ರಾಣ


ಪರ ವಹಿಸಲು ಹೆಗಲು
ಪರವಶಿಸಲು ಪ್ರಣಯ
ಪರಿಣಮಿಸುವ ಪ್ರಗತಿಯಲ್ಲಿ
ನಾ-ನೀನೇ ಮಿಗಿಲು,
ಕೊನೆ ಮೊದಲೂ ಒಂದೇ
ನಡು ಬಯಲೂ ನಮದೇ
ಕಿಚ್ಚಿಷ್ಟೂ ಪ್ರೇಮವದು
ಹಿಂಗಿಹೋಗದಿರಲು!!


ಸ್ವಗತಗಳ ಜೀವಂತಿಕೆ
ಅಸ್ತಿತ್ವದ ಹಂಬಲಕೆ
ತೊಟ್ಟಿಲಾಗುವ ನೀಡಿ
ಕಾವ್ಯ ಮೆಟ್ಟಿಲ,
ಚೂರು ಆಧರ್ಶದೊಳಗೆ
ಸ್ವಾರ್ಥವೂ ಕೂಡಿ ಇರಲಿ
ಬಾಳು ನಿಕೃಷ್ಟವಲ್ಲ
ನೀಡಬಹುದು ಬೆಂಬಲ!!


                   -- ರತ್ನಸುತ

ಕಂಡಿದ್ದು, ತೋಚಿದ್ದು ಇಷ್ಟು

ಮಹಡಿ ಮೆಲೆ ನಿಂತು
ದೂರದ ನಂದಿ ಬೆಟ್ಟದ ತುದಿಯನ್ನ
ಮೀರಿದ ಎತ್ತರಕ್ಕೆ ಕೈಯ್ಯ ಚಾಚಿ
ಒಂದು ಸುತ್ತು ನಕ್ಕಿಬಿಡುತ್ತಿದ್ದೆ,
ಬೆಟ್ಟಕ್ಕೆ ಏನೂ ಹಾನಿಯಾಗದಂತೆ
ಇದ್ದಲ್ಲೆ ತಟಸ್ಥ ಭಾವ ತಾಳಿತ್ತು!!


ಮನೆಯಿಂದ ದೇವನಹಳ್ಳಿ ಟೌನ್ ತಲುಪಲು
ಕೇವಲ ಮೂವತ್ತರಿಂದ ನಲವತ್ತು ನಿಮಿಷ
ಆಗೆಲ್ಲ ರಸ್ತೆ ಬದಿಯಲ್ಲಿ ಚಕ್ಕೋತ ಹಣ್ಣು
ಕಣ್ಣು ಹಾಯಿಸಿದಂತೆಲ್ಲ ಸಿಗುತ್ತಿತ್ತು
ಈಗ ಒಂದು ನೊಣಕ್ಕಾದರೂ ಇಲ್ಲ


ಬಹುಶಃ ಬೈಪಾಸ್ ರಸ್ತೆಯಾಗಿ
ಅಲ್ಲಿಗೆ ಎಲ್ಲ ಮಾರಾಟಗಾರರು
ಸ್ಥಳಾಂತರಗೊಂಡಿರಬಹುದಂದುಕೊಂಡು
ದಾಪುಗಾಲಿಟ್ಟವರಿಗೆ ನಿರಾಸೆ,
ಅಲ್ಲಿ ತಲೆಯೆತ್ತುತ್ತಿದ್ದ ದೈತ್ಯ ಕಟ್ಟಡಗಳು
ಅಂತರ್ರಾಷ್ಟ್ರೀಯ ಹೊಟೆಲ್ಗಳ
ಫ್ಲೆಕ್ಸ್ಗಳಲ್ಲಿ ಅಚ್ಚಾಗಿಸಿದ್ದ ಜಾಹೀರಾತುಗಳು
ಚಕ್ಕೋತ ಹಣ್ಣಿಗೆ ಶ್ರದ್ಧಾಂಜಲಿ ಕೋರಿದಂತಿದ್ದವು!!


ನಂದಿ ಕ್ರಾಸಿಂದ ನಂದಿ ಕಡೆಗೆ
ಜನ ಎಷ್ಟೊಂದು ಕಮರ್ಶಿಯಲ್ಲಾಗಿದ್ದಾರೆ,
ದ್ರಾಕ್ಷಿ ಗುಚ್ಚ ಹಿಡಿದು ನಿಂತವನಿಗೂ ಗೊತ್ತು
ಹಾಪ್ಕಾಂಸ್, ಸಿಟಿ ಮಾರ್ಕೆಟ್ಟಿನ ಬೆಲೆ
ಹೆಳಿದ್ದಕ್ಕಿಂತ ರುಪಾಯಿ ಕಮ್ಮಿ ಇಲ್ಲ


ಅಪಾರ್ಟ್ಮೆಂಟ್ ಸಂಸ್ಕೃತಿ ವಕ್ಕರಿಸಿಕೊಂಡ ಪರಿಸರ,
ಮತ್ತದರ ಘಾಟು
ನಂದಿ ಬೆಟ್ಟದ ತುದಿಯ ಮೂಗಿಗೆ ತಟ್ಟುತ್ತಿತ್ತು
ನನ್ನ ಗ್ರಹಿಕೆಗೂ ಅದು ಬಂದಿತ್ತು


ಮೊನ್ನೆ ಮಹಡಿ ಮೇಲೆ ನಿಂತು
ಕೈ ಚಾಚಿದಂತೆಲ್ಲ ಕಟ್ಟಡಗಳೇ ಅಡ್ಡಗಟ್ಟಿದವು
ಎಲ್ಲೋ ಮರೆಯಲ್ಲಿಯ ಧ್ಯಾನಿ
ಸತ್ತಂತೆ ಕಾಣುತ್ತಿದ್ದಾನೆ
ಧ್ಯಾನದ ವೇಷ ತೊಟ್ಟ ಹೆಣವಾಗಿದ್ದಾನೆ!!


                                             -- ರತ್ನಸುತ

ಎಲ್ಲ ಮುಜುಗರವ ಮೀರಿ

ಎಲ್ಲರೆದುರೇ ಕೈ ಹಿಡಿಯುವುದೇ?
ಹತ್ತಿರವೆಂದರೆ ತೀರಾ ಹತ್ತಿರ ಕರೆದು
ಗುಸು-ಪಿಸು ಮಾತಾಡಬಹುದೇ?
ಲಗಾಮಿಲ್ಲದಂತೆ ಎಲ್ಲೆಂದರಲ್ಲಿ
ಗೊಳ್ಳೆಂದು ಮನದುಂಬಿ ನಗುವುದೇ?
ಗುಡಿಯಂಥ ಗುಡಿಯಲ್ಲೂ
ಗಡಿಬಿಡಿ ಮಾಡದೆ ಚುಂಬಿಸುವುದೇ?


"ಚೂರು ತುಂಟತನ ಹೆಚ್ಚಿದೆ"
ಎಂದು ಆರೋಪಿಸುವ ಮುನ್ನ
ಮನಸನು ಮುಟ್ಟಿ ನೋಡು,
ಅಥವ ಮೆಲ್ಲಗೆ ತಟ್ಟಿ ನೋಡು
ನಿದ್ದೆಗೆ ಜಾರಿದ ತಾ ಸಾಕ್ಷಿಗಿದೆ;
ತುಂಟತನದ ಮೂಲವೂ ಅದೇ!!


ಸರಿ, ಹಾಗಿದ್ದಮೇಲೆ
ನಾನು ದೂರ ನಿಲ್ಲುತ್ತೇನೆ
ನೀನೂ ದೂರ ನಿಲ್ಲು,
ಸನಿಹಕೆ ಹಸಿರು ನಿಶಾನೆ
ಯಾರು ಮೊದಲು ತೋರುತ್ತಾರೋ ನೋಡೋಣ;
ಅದು ನಾನೇ ಆದರೆ ತಪ್ಪೇನು?
ಆಟದಲ್ಲಿ ಸೋಲುವೆನಷ್ಟೆ
ಸೋಲೊಪ್ಪಿಕೊಂಡತಲ್ಲವಲ್ಲ!!


ಉಗುರು ಬಣ್ಣದಿಂದ, ಕಣ್ಗಪ್ಪಿಗೆ
ಒಪ್ಪಿಗೆ ಪಡೆಯುವ ನಿನ್ನ ಕಣ್ಣನು
ಒಮ್ಮೆ ಗದರಿ ನೋಡಬೇಕೆಂಬ ಆಸೆ,
ಅದರುವ ರೆಪ್ಪೆ ಉದುರಿಸಿ ಮುತ್ತ
ಅಂಗೈಯ್ಯ ಸೇರುವ ಮೊದಲೇ
ಕೆನ್ನೆಗೆ ಕೆನ್ನೆ ಸೋಕಿಸಿ ರವಾನಿಸಿಕೊಳ್ಳುವೆ,
ನಿನ್ನ ಕಂಬನಿಗೆ ನನ್ನ ಕೆನ್ನೆಯೂ ತೋಯಲಿ!!


ಪತ್ರಿಕೆಗಳ ವಿಷೇಶ ಲೇಖನಗಳಲ್ಲಿ
ಸ್ತ್ರೀ ಕುರಿತಾದವುಗಳನ್ನ ಗುಟ್ಟಾಗಿ ಓದುತ್ತೇನೆ
ನಿನ್ನ ಇನ್ನಷ್ಟು ಪ್ರೀತಿಸುವ ಕಾರಣಗಳು
ಹುಟ್ಟುತ್ತಲೇ ಹೋಗುತ್ತಿವೆ,
ಬಹುಶಃ ನಾನು ಹುಲು ಗಂಡಸಾಗಿ
ಮಾಡಬಹುದಾಗಿದ್ದು ಇಷ್ಟೇ!!


                                             -- ರತ್ನಸುತ

ಹಸಿವಲ್ಲಿ

ಹಸಿದಾಗ ಕನಸೊಂದು ಮುಸಿನಕ್ಕು ಕರೆದಿತ್ತು
ರಾತ್ರಿ ಔತಣದಲ್ಲಿ ಸತ್ತ ಹೆಗ್ಗಣಗಳು
ಬೀದಿ ದೀಪದ ಕೆಳಗೆ ಮೈ ಹರಡಿದ ಬೆಳಕು
ಅದ ಕೂಡಿ ಬಿಕ್ಕಳಿಸಿ ಸತ್ತ ನೆರಳು


ಅತ್ತ ನಾಯಿ ಬೊಗಳಿ ಇತ್ತ ಮೌನವ ಮುರಿದು
ಎತ್ತ ಸಾಗಲೂ ಚಿತ್ತ ದಿಕ್ಕೆಟ್ಟ ಹಾಗೆ
ನೂರು ಚಿಂತೆಯ ಕಂತೆ ಒಂದೊಂದೇ ತೆರೆದಾಗ
ನಿಸ್ಸಹಾಯಕ ಬೆವರು ನುಸುಳಿತು ಹೊರಗೆ


ಪಾಪ ಎಲ್ಲರ ಸ್ವತ್ತು, ಪುಣ್ಯ ಗಳಿಸಿದರಷ್ಟೇ
ತೂಗು ತಕ್ಕಡಿ ಎಂದೂ ಪಾಪದ ಕಡೆಗೇ
ಅಳತೆ ಮುಳ್ಳಿನ ರೀತಿ ಬದುಕಿನ ಕಾಲ್ದಾರಿ
ತಪ್ಪೆಂದು ತಿಳಿದರೂ ನರಕದ ಕಡೆಗೇ!!


ದೇವರೇ ನಂಬಿಸಲಿ ದೇವರಿಹನೆಂದು
ರಾಯಭಾರಿಗಳೆಲ್ಲ ದೂರ ನಿಲ್ಲಲಿ ಚೂರು
ಭೂಮಿ ಆಕಾಶವನು ಒಂದುಗೂಡಿಸುವಂಥ
ಹಸಿವಿನ ಅಳಲನ್ನ ನೀಗಿಸುವರಾರು?


ಭಾಗ್ಯಗಳು ಎಷ್ಟೆಂದು ಮನೆ ಬಾಗಿಲ ಒಳಗೆ
ಕಾಲು ಮುರಿದಂತೆ ಬಿದ್ದಿರಲು ಸಾಧ್ಯ
ಹಸಿವು ಹಸಿವನ್ನ ಮರೆಸುವ ಹಸಿವ ಹುಟ್ಟಿಸಲಿ
ಆಗ ಸಾರುವೆ "ದೇವರೇ ನೀನು ಸತ್ಯ"


                                                 -- ರತ್ನಸುತ

ಚಿಗುರಿನ ಹೊಸತು

ಮಾತ ತಡೆಯಲು ಹಸ್ತ ಸಲ್ಲ
ತುಟಿಯಾದರೆ ಹಸ್ತಕ್ಷೇಪವಿಲ್ಲ
ಸತ್ತ ಮಾತುಗಳ ಮುಕ್ತಿಗಾಗಿ
ಒಮ್ಮೆ ಯತ್ನಿಸಿ ನೋಡುವ ಸಹಜವಾಗಿ


ಕತ್ತಲಾವರಿಸುತ್ತಲೇ ಮೌನ
ಕಣ್ರೆಪ್ಪೆ ಮೇಲೆ ಗೀಚಲೇ ಕವನ?
ತಾಳ ತಪ್ಪದಿರಲಿ ಸಪ್ಪಳದ ಹಾಡು
ದೀಪವೂ ನಾಚಿ ಬಳುಕುವುದ ನೋಡು!!


ಪಲ್ಲಂಗಕೆ ದಿಂಬು ಬೇಡವಾಗಿ
ಒಂದೊಂದು ಬದಿಯಲ್ಲಿ ಒಂದೊಂದು
ಮುನಿದು ನೆಲಕಪ್ಪಳಿಸಿಹುದ ಬಲ್ಲೆ
ನಸುಕು ಕಳೆಯಲಿ ಚಿಂತೆ ಬಿಡು ನಲ್ಲೆ


ಹೂವ ಹೊಸಕಿದ ಒಡಲು
ಗಂಧ ಧೂಪವ ಕೂಡಿ
ಕೋಣೆಯ ನಿರ್ಜೀವ ಗೋಡೆಗಳ
ಅಮಾನುಷವಾಗಿ ಬದುಕಿಸಬಾರದಿತ್ತು


ದೀಪ ಆರುವ ಸಮಯದ ನಿಗದಿಯಿಲ್ಲ
ಇದ್ದರೂ ನಮಗದು ಬೇಕಾಗೇಯಿಲ್ಲ
ಗಡಿಯಾರದ ಕಾಲಿಗೆ ಚುಚ್ಚಿ ಮುಳ್ಳು
ಉಳಿದಲ್ಲೇ ನರಳಿತು ದಯೆ ತೋರಲಿಲ್ಲ


ಹೊನ್ನ ಕಿರಣದ ದಿಬ್ಬಣ ಬಂದಿದೆ
ಆಗಷ್ಟೇ ಮುಚ್ಚಿದ ಕಣ್ಣ ತೆರೆಸೆ
ಆಕೆ ಹಣೆಬೊಟ್ಟ ಹುಡುಕುತಲಿದ್ದಳು
ತುಂಟ ನಗೆಬೀರಿ ಅರಳಿತು ಮೀಸೆ!!


                                         -- ರತ್ನಸುತ

ಹೀಗೂ ಬದುಕ ಕಟ್ಟಿಕೊಳ್ಳೋಣ

ಗಾಳಿ ಎತ್ತ ಬೀಸುತ್ತದೆಯೋ
ಅತ್ತಲೇ ವಾಲಿಬಿಡೋಣ
ಜೋಡಿ ಗರಿಕೆಯ ರೀತಿ


"ಇಬ್ಬನಿ ಹಿಂಗುವುದರ ಹಿಂದೆ
ಯಾವುದೋ ಸಂಕಲ್ಪವಿರಬಹುದು"
ಹೀಗಂದುಕೊಂಡೇ ಬೆವೆತುಬಿಡೋಣ


ಯಾರೋ ಇಟ್ಟ ಪಾದದಡಿಯ
ಗಂಧವೋ, ಕೆಸರೋ, ಧೂಳೋ
ನಮ್ಮ ಸೋಕುವುದು ಖಚಿತ,
ಮತ್ತೆ, ಮತ್ತೆ ಮಳೆಯನ್ನ ನೆನೆಯೋಣ
ಮತ್ತೇರುವಂತೆ ನೆನೆಯೋಣ


ಸೂರ್ಯೋದಯಕೆ ಗರಿ ಬಿಚ್ಚಿ
ಸೂರ್ಯಾಸ್ಥಮಕೆ ಬಿಗಿದಪ್ಪಿ
ಮಿಕ್ಕಂತೆ ತುಂಬೊಲವಲ್ಲಿ ತಲ್ಲೀನರಾಗಿ
ತಂಗಾಳಿಗೆ ಪರಿಚಿತರಾಗೋಣ


ಇದ್ದೂ ಇರದಂತೆ ನೊಂದು
ಇರದೆಯೂ ಇದ್ದಂತೆ ಬಿರಿದು
ಒಮ್ಮೆ ಮೊಗ್ಗು, ಒಮ್ಮೆ ಹಿಗ್ಗಿ
ಹೂವಾಗುವಾಸೆಯಲೇ ಸವೆಯೋಣ


ಹಸಿರಾಗಿ, ಕೆಂಪಾಗಿ
ಕಂದಾಗಿ, ಕಪ್ಪಾಗಿ
ಮುಪ್ಪಲ್ಲಿಯೂ ಒಪ್ಪುವಂತಾಗೋಣ
ಸಾವಲ್ಲಿಯೂ ಜೊತೆಯಲೊಂದಾಗೋಣ!!


                                            -- ರತ್ನಸುತ

ಒಮ್ಮೊಮ್ಮೆ ನಾನು

ಅರ್ಥವಿಲ್ಲದ ಮಾತಿಗೆ
ಒಳಾರ್ಥಗಳು ಸಾಕಷ್ಟಿದ್ದವು
ಆದರೂ ಅನರ್ಥಕ್ಕೇ ಮಣೆ ಹಾಕಿದೆ


ಒತ್ತಿ, ಒತ್ತಿ ಹೇಳಿಕೊಟ್ಟದ್ದ ಬದಿಗೊತ್ತಿ
ಗೊತ್ತಿದ್ದೂ ಹುಂಬನಾಗುವುದರಲ್ಲಿ
ನನಗೆ ಎಲ್ಲಿಲ್ಲದ ವಿಕೃತ ಖುಷಿ


ದ್ರಾಕ್ಷಾರಸದ ಮತ್ತಿಗಿಂತ ಮಿಗಿಲಾದ
ಅಮಲಿನ ದ್ರವ್ಯದ ಹುಡುಕಾಟದಲಿ
ನಿಶೆಯೇರಿಸಬಲ್ಲ ಎಷ್ಟೋ ಲಾಯಕ್ಕಾದವುಗಳ
ಕಡೆಗಣಿಸಿ ಅಪರಾಧವನ್ನೆಸಗಿದ್ದೇನೆ!!


ತುಟಿಗೆ ಬಂದ ಮಾತು
ಮನಸನು ಹಗುರಾಗಿಸದೆ ಹೋದಾಗ
ನುಂಗಿಕೊಂಡಾಗಿನ ಸಂಕಟಕೆ
ಆಡಿದ ಮಾತುಗಳ ಅಭಾವವೇ ಸಾಕ್ಷಿ


"ಬೆರಳ ತುದಿಯಲ್ಲಿ ತೋರುವುದಷ್ಟೇ ಹೊರತು
ಹಿಡಿಯಲು ಮುಷ್ಟಿ ಬಿಗಿಯಲೇ ಬೇಕು"
ಸತ್ಯವ ಮರೆತು ಅತೃಪ್ತ ಬೇತಾಳನಾಗಿದ್ದೇನೆ
ನನ್ನದೇ ಸಂತೆಯಲಿ ನಾನೊಬ್ಬನೇ ಅಲೆದಾಡಿ


ಎಲ್ಲವನ್ನೂ ಅಪೂರ್ಣದಲ್ಲೇ ಕೊನೆಗೊಳಿಸುತ್ತೇನೆ
ಎಲ್ಲವನ್ನೂ......


                                                   -- ರತ್ನಸುತ

ಎಲ್ಲವೂ ಹೊಸತು

ಮದುವೆ ಹೊಸತರಲ್ಲಿಯ ಎದುರುನೋಟಗಳು
ಒಂಥರ ಚಿವುಟಿ ಕಚಗುಳಿಯಿಟ್ಟಂತೆ
ನೋವಲ್ಲೂ ಹಿತ, ಹಿತದಲ್ಲೂ ನೋವು


ಆಫೀಸಿನ ಕೆಲಸದ ನಡುವೆ ಫೋನು
ಮಾತು...ಮಾತು... ಮತ್ತಷ್ಟು ಮಾತು
ಯಾರು ಮೊದಲು ಫೋನಿಡುವೆನೆಂದರೂ
ಆಚೆ ಬದಿಯಿಂದ ಜೋರು ಸಪ್ಪೆ ಸದ್ದು


ಕಾಡಿಸಿಯಾದನಂತರ ಮುದ್ದಿಸಿ
ಮುದ್ದಿಸುತ್ತಲೇ ಕಾಡಿಸುವ ಪರಿ
ಅದು ಎಲ್ಲೂ ಕಲಿತ ವಿದ್ವತ್ತಲ್ಲ
ಸ್ವಾಭಾವಿಕ ಪ್ರಕ್ರಿಯೆಯಷ್ಟೇ ಪಕ್ವ


ಎಲ್ಲರ ಕಣ್ತಪ್ಪಿಸಿದ ತುಂಟಾಟ
ಎಲ್ಲರೆದುರು ಬಯಲಾದಾಗ ನಾಚಿ
"ಆದರೇನಂತೆ?" ಎಂದು ಲೈಟಾಗಿ ತಗೆದುಕೊಳ್ಳುವುದರಲ್ಲೂ
ವಿಚಿತ್ರವಾದ ಮಜ ಸಿಗುತ್ತೆ


ಕಾಫಿಯ ಸಕ್ಕರೆ
ಸಾರಿನ ಖಾರ
ಸ್ನಾನದ ನೀರು
ಬಟ್ಟೆಯ ಇಸ್ತ್ರಿ
ಶೂವಿನ ಪಾಲಿಶ್
ರಾತ್ರಿಯ ಗೊರಕೆ
ಗುಡ್ ಮಾರ್ನಿಂಗ್
ಗುಡ್ ನೈಟ್ ವಿಶ್ಗಳು
ಲವ್ ಯೂಗಳು
ಯಾವತ್ತೂ ಇಷ್ಟೋಂದು ಮಹತ್ವ ಪಡೆದುಕೊಂಡಿರಲಿಲ್ಲ


ಸೀರಿಯಸ್ಸಾಗಿ ಸುಳ್ಳಾಡುವ
ತಾಲೀಮು ನಡೆದಿದೆ
ಚೂರು ಕಷ್ಟವಾದರೂ
ಆಗಾಗ ಕೆಲಸಕ್ಕೆ ಬಂದಾಗ
Its worthwhile!!
But, ಆಕೆ ಎಲ್ಲವನ್ನೂ ಗಮನಿಸುತ್ತಾಳೆ
She's intelligent than me!!


                                      -- ರತ್ನಸುತ

ಸ್ಥಿತಿ-ಗತಿ

ಕಂಪಿಸುತಲೇ ಅರಳತೊಡಗಿದೆ ಮನ
ಮೈದುಂಬಿ ಬಣ್ಣ
ತನು, ಮನ ನಂದನ ವನ


ಕೆನ್ನೆ ಕೆಮ್ಮಣ್ಣ ಬಣ್ಣ
ಅಂಗೈ ಚಂಡೂವ ಬಣ್ಣ
ಕಣ್ಣು ಮುಚ್ಚಿದೊಡೆ ಕನಸುಗಳ
ಬಣ್ಣ ಬಣ್ಣಗಳ ಜಾತ್ರೆ
ಮುಂಬಾಗಿಲಿಗೆ ಪಚ್ಚೆ ಪತ್ರೆ
ಎದೆಯಾಂಮೃತದ ಹೊನ್ನ ಪಾತ್ರೆ


ನೆರಳಾಕೃತಿಗಿಂತ ಕೃತಿಯಿಲ್ಲ
ಏಕಾಂತಕೂ ಮಿಗಿಲು ಸ್ಥಿತಿಯಿಲ್ಲ
ಪದಗಳ ಪರಿಶೆಯಲಿ
ಪಾವು ಗುಟುಕಿನ ಪದ್ಯ
ಬರೆಯಲು ಬರವಿಲ್ಲ
ಬರೆಯದಿರಲು ಬಲವಿಲ್ಲ


ಮೊಗ್ಗು ಹಿಗ್ಗುವಲ್ಲೂ ಪಟಾಕಿ ಸದ್ದು,
ಸೋಜಿಗದ ಸಂಗತಿಗಳ ಸಾಲು
ಹುಚ್ಚಾಟ ಹೇಳದುಳಿವುದೇ ಮೇಲು


ಅಪೂರ್ಣತೆಯೇ ಪೂರ್ಣವಾಗಿರಲು
ಪೂರ್ಣಗೊಳಿಸುವ ಯತ್ನವೂ ಅಪೂರ್ಣ!!


                                            -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...