Monday 24 August 2015

ಹಸಿವಲ್ಲಿ

ಹಸಿದಾಗ ಕನಸೊಂದು ಮುಸಿನಕ್ಕು ಕರೆದಿತ್ತು
ರಾತ್ರಿ ಔತಣದಲ್ಲಿ ಸತ್ತ ಹೆಗ್ಗಣಗಳು
ಬೀದಿ ದೀಪದ ಕೆಳಗೆ ಮೈ ಹರಡಿದ ಬೆಳಕು
ಅದ ಕೂಡಿ ಬಿಕ್ಕಳಿಸಿ ಸತ್ತ ನೆರಳು


ಅತ್ತ ನಾಯಿ ಬೊಗಳಿ ಇತ್ತ ಮೌನವ ಮುರಿದು
ಎತ್ತ ಸಾಗಲೂ ಚಿತ್ತ ದಿಕ್ಕೆಟ್ಟ ಹಾಗೆ
ನೂರು ಚಿಂತೆಯ ಕಂತೆ ಒಂದೊಂದೇ ತೆರೆದಾಗ
ನಿಸ್ಸಹಾಯಕ ಬೆವರು ನುಸುಳಿತು ಹೊರಗೆ


ಪಾಪ ಎಲ್ಲರ ಸ್ವತ್ತು, ಪುಣ್ಯ ಗಳಿಸಿದರಷ್ಟೇ
ತೂಗು ತಕ್ಕಡಿ ಎಂದೂ ಪಾಪದ ಕಡೆಗೇ
ಅಳತೆ ಮುಳ್ಳಿನ ರೀತಿ ಬದುಕಿನ ಕಾಲ್ದಾರಿ
ತಪ್ಪೆಂದು ತಿಳಿದರೂ ನರಕದ ಕಡೆಗೇ!!


ದೇವರೇ ನಂಬಿಸಲಿ ದೇವರಿಹನೆಂದು
ರಾಯಭಾರಿಗಳೆಲ್ಲ ದೂರ ನಿಲ್ಲಲಿ ಚೂರು
ಭೂಮಿ ಆಕಾಶವನು ಒಂದುಗೂಡಿಸುವಂಥ
ಹಸಿವಿನ ಅಳಲನ್ನ ನೀಗಿಸುವರಾರು?


ಭಾಗ್ಯಗಳು ಎಷ್ಟೆಂದು ಮನೆ ಬಾಗಿಲ ಒಳಗೆ
ಕಾಲು ಮುರಿದಂತೆ ಬಿದ್ದಿರಲು ಸಾಧ್ಯ
ಹಸಿವು ಹಸಿವನ್ನ ಮರೆಸುವ ಹಸಿವ ಹುಟ್ಟಿಸಲಿ
ಆಗ ಸಾರುವೆ "ದೇವರೇ ನೀನು ಸತ್ಯ"


                                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...