Tuesday 31 December 2013

ಕೊನೆ ಹನಿಗಳಲ್ಲೊಂದು ವಿನಂತಿ !!

ಈಗಾಗಲೇ ತಂಬಿಗೆ ತುಂಬ 
ನೋವುಗಳು ತುಳುಕಾಡಿ ಚೆಲ್ಲಾಡಿ 
ತೀಕ್ಷ್ಣಗೊಂಡಾಗಿವೆ 
ಅದಕೊಂದು ಮತ್ತಷ್ಟು ಸಿಂಪಡಿಸಿ 
ಮತ್ತೆ ಚೆಲ್ಲುವುದು ಬೇಡ 
ವರ್ಷ ಮುಗಿಯುವ ವೇಳೆ 
ಶುಚಿಗೈಯ್ಯೆ ಮನಸಿಲ್ಲ 
ಮಂಕು ಮನದೊಳಗೆ ಸ್ತಬ್ಧ ನಿರ್ಲಿಪ್ತತೆ 
 
ಕನಸುಗಳು ಕಾಲೂರಿ ಬೇಡಿ 
ನಿದ್ದೆಯಲ್ಲೊಂದಿಷ್ಟು ಜಾಗ ಪಡೆದು 
ಅಸ್ತಿತ್ವವುಳಿಸಿಕೊಂಡಾಗಿವೆ 
ಈ ನಡುವೆ ಚೂರು ಮೊಂಡಾಗಿವೆ 
ಜಾಗರೂಕನಾಗಿ ಅದನು 
ಸಂಬಾಳಿಸಿ ಬಂದಿರುವೆ
ಮುಂದುವರೆಯೆ ಬಿಡಿ ಮುಂದೆ 
ಹೊಂದುಕೊಂಡು ಅವುಗಳೊಡನೆ
 
ನಾನೆಷ್ಟೇ ತಿಳಿಗೇಡಿಯಾದರೂ 
ನನ್ನ ನಾ ಎಂದೂ ಕೊಲ್ಲುವಷ್ಟರ-
ಮಟ್ಟಿಗೆ ದ್ವೇಷಿಸಿದವನಲ್ಲ
ಹಾಗಂತ ಪ್ರೀತಿಸಿದವನೂ ಅಲ್ಲ
ಅದರ ನಡುವಿನ ಸಣ್ಣ ರೇಖೆಯ ಮೇಲೆ 
ಬಾಳು ಬೆಳೆಸಿದ ನಾನು 
ಯಾವುದರ ಪರವೂ ಅಲ್ಲ 
ವಿರೋಧಿಯೂ ಅಲ್ಲ 
 
ಹೀಗಿದ್ದೂ, ಹೀಗಿರುವುದರ ಪಾಲಿಗೆ 
ಅಸಮಾದಾನದ ಅಪಸ್ವರ ಎಬ್ಬಿಸದೆ 
ಸದಾ ಒಂದು ನಗೆ ಬೀರಿ 
ಬೆಂಬಲವಾಗಿದ್ದ ನನ್ನತನವ 
ಹೀಗೆ ಪೋಷಿಸಲು ಬಿಡಿ 
ಕಣ್ಣು ಮಂಜುಗಟ್ಟುವನಕ 
ಉಸಿರು ಭಾರವಾಗುವನಕ 
ಪ್ರಾಣ, ದೇಹ ತೊರೆವ ತನಕ 
 
ಆಗಾಗ ಅನಾಥ ಭಾವ ಶಿಶುಗಳ-
ಕಲೆಹಾಕಿ ಅಕ್ಷರದ ತುತ್ತಿಟ್ಟು 
ಸಾಲುಗಳ ನಿರ್ಮಿಸಿ 
ಚರಣವಾಗಿಸುವಲ್ಲಿನ ಖುಷಿ 
ನನ್ನ ಪಾಲಿಗಿರಲಿ ಹೀಗೆ 
ಹೆಚ್ಚೇನೂ ಬಯಸದೆ 
ಹುಚ್ಚನಾಗುವ ಮುನ್ನ 
ಸ್ವಚ್ಛ ಬರೆಯ ಬೇಕಿದೆ 
 
ಕೊನೆ ಹನಿಗಳೇ!!
ನಿಮಗಿಲ್ಲದ ಜಾಗ ಮಸಲ್ಲೇಕೆ?
ಬನ್ನಿ, ಕೂಡಿಕೊಳ್ಳಿ ಹೃದಯಂಗಮವಾಗಿ 
ಇದ್ದವುಗಳೊಡನೆ ಒಬ್ಬರಾಗಿ
ಅತಿರೇಕವ ಮನ್ನಿಸಿ
ಕಬ್ಬಿಗನಲ್ಲದ ಕಬ್ಬಿಗನ 
ಕಬ್ಬದಿ ಬೆರೆತು ಮುಕ್ತವಾಗಿ 
ನನ್ನಂತರಂಗದಿ ಸಂಯುಕ್ತವಾಗಿ 

                       -- ರತ್ನಸುತ 

೨೦೧೪ರ ಹೊಸ್ತಿಲಲಿ !!

ಹೊಸ ವರ್ಷದ ಮೊದಲ ದಿನ-
ಮಾತ್ರವೇ "ಹೊಸ ವರ್ಷ"
ಮಿಕ್ಕೆಲ್ಲವೂ ಅದೇ ಹಳೆ 
ಬಾಲಂಗೋಚಿಗಳು 
 
ಎಣಿಕೆಗೂ ಮುನ್ನ ಕಳೆವ 
ಇಣುಕಿಗೂ ಮುನ್ನ ಬರುವ 
ಆ ಮುಂದಿನ ದಿನಗಳ ಪಟ್ಟಿ 
ಸಿಕ್ಕಷ್ಟೇ ಸಲೀಸಾಗಿ ಕಳುವಾಗುವಂಥವು 
 
ನೆನ್ನೆ ಮೊನ್ನೆಯಷ್ಟೇ ೨೦೧೩ರರ 
ಅಭ್ಯಂಜನದಲ್ಲಿ 
ಶೀಗೇಕಾಯಿ ಕಣ್ಣಿಗೆ ಬಿದ್ದು 
ಅತ್ತ ಸದ್ದು ಇನ್ನೂ ಮಾಸಿಲ್ಲ 
 
ಅಂದು ತೊಟ್ಟ ಹೊಸ ಉಡುಪು 
ಬೀರೂವಿನಲ್ಲಿ ಹಾಗೇ ಇದೆ 
ಮಡಿಸಿಟ್ಟುದು ಮಡಿಸಿಟ್ಟಂತೆ
ಅದೇ ಹೊಸತು ವಾಸನೆಯ ಹೊತ್ತು 
 
ನೆನಪುಗಳೆಷ್ಟು ಉದಾರ!!
ಇಡಿ ಜೀವಮಾನದ ಸರಕು
ಜೊತೆಗೆ ಹೀಗೊಂದು ವರ್ಷದ- 
ಹಿಂದಿನವುಗಳಿಗೂ ಜಾಗ ಕೊಟ್ಟಿವೆ 
 
ಒಂದೊಂದನೂ ಮರುಕಳಿಸಲು 
ಉಳಿದಿರುವುದಿದೊಂದೇ ದಿನ 
ನಾಳೆ, ಎಲ್ಲವೂ ಹೊಸತು 
ಗೌಪ್ಯ, ಥೇಟು ನಾಳೆಗಳಂತೇ!!
 
ಕನ್ನಡಿಗೇಕೆ ಕಿರು ಪರಿಚಯ 
ಅದೂ ನನ್ನಂತೆ ಹಳಸು ವಸ್ತು 
ಕಣ್ಣೀರು ಉಪ್ಪುಪ್ಪಾಗಿಯೇ ರುಚಿಸಬಹುದು 
ತುಸು ನಗುವಿಗೆ ತುಟಿ ಜಗ್ಗಬಹುದು 
 
ಉತ್ಸಾಹಕ್ಕೇನೂ ಕುಂದಿಲ್ಲ 
ಆದರೆ ಉತ್ಸಾಹ ಪಡುವ ಯೋಗ್ಯತೆಯೇ-
ಒಂದು ಯಕ್ಷಪ್ರಶ್ನೆ 
ಚಿರಪರಿಚಿತ ನಿರುತ್ತರ ಪ್ರಶ್ನೆ 
 
ಬೇಡೆಂದರೆ ಬಾರದೆ ಉಳಿಯದು 
ದೊಣ್ಣೆ ನಾಯಕನಪ್ಪಣೆಗೆ 
ಬರಲಿ ಎಂದಿನಂತೆ 
ನಾನೂ ಬರಮಾಡಿಕೊಳ್ಳುವೆ ಹಿಂದಿನಂತೆ 
 
ಹರಿದು ಬರುವ ಶುಭಾಶಯಗಳೇ 
ಇಗೋ ನನ್ನ ಆಶಯ 
ಶುಭವೋ, ಅಶುಭವೋ 
ಜಾರಿಯಲ್ಲಿರುವುದು ಸಹಜ ಅಭಿನಯ 

                                -- ರತ್ನಸುತ

Monday 30 December 2013

ಹಲೋ....ಎಕ್ಸ್ಕ್ಯೂಸ್ ಮೀ !!

ಬೆಣ್ಣೆಯಂಥ ಮಯ್ಯಿ ನಂದು 
ಕಿಚ್ಚು ಹೊರಿಸಬೇಡಿ 
ಕರಗುವಾಗ ನನ್ನ ಸಮಕೆ 
ನೀವೂ ಕರಗಬೇಡಿ
ದೂರ ಉಳಿಯುವಷ್ಟು 
ನಿಮ್ಮ ಕಣ್ಣಿಗೆ ನಾ ಹಬ್ಬ 
ಸ್ವಂತವಾಗಿ ಬಿಡುವೆ ಒಲಿಸಿ-
-ಕೊಳ್ಳಿ ನಿಮ್ಮಲೊಬ್ಬ 

ಅಧರ ಜೇನ ಕುಂಬವೆಂದ
ಯಾರೋ ಒಬ್ಬ ಹುಂಬ 
ಅಂದಿನಿಂದ ಇಳಿಸಲಾಗುತಿಲ್ಲ 
ಅದರ ಜಂಭ 
ಉಬ್ಬಿನಡಿಯ ನೋಟದಲ್ಲಿ 
ಕಾಯಿಸಿಟ್ಟ ಕಲ್ಲು 
ಬಾಟಲಿಗಳು ಖಾಲಿ ಆದ್ರೆ 
ಸಾಲ ಕೊಡುವೆ ಕೇಳು 

ಕಟ್ಟು ಕಥೆಯ ಸಾರಬೇಡಿ 
ಸಿಗದೆ ಇದ್ರೆ ನಾನು 
ಹಿಡಿಯ ಹೊರಟ ಕೈಗೆ 
ನಾ ಜಾರು ಮೈಯ್ಯ ಮೀನು 
ಊರ ತುಂಬ ಗೆಳೆಯರಿದ್ರೂ 
ನನ್ನ ಹೆಸರು ಶೀಲ 
ಗಿಳಿಯ ಶಾಸ್ತ್ರ ಕೇಳಿ ಬಂದೆ 
ನಾನು ರಂಭೆ ಮೂಲ 

ಸಣ್ಣ ತಪ್ಪು ಮಾಡುವಾಸೆ 
ಬಹಳ ದಿನಗಳಿಂದ 
ದೊಡ್ಡ ತಪ್ಪುಗಳಿಗೆ ಬೇಸರಾ-
-ಗಿದ್ದರಿಂದ  
ಎಲ್ಲಿ ಕೈಯ್ಯೆತ್ತಿ 
ತುಂಟರನಿಸಿಕೊಂಡವರು 
ಕುಸ್ತಿ ಆಡೊ ಮೊದಲೇ ಯಾಕೆ 
ಹರಿಸುತೀರಿ ಬೆವರು 

ನನ್ನ ಊರು ನಿಮ್ಮ ಊರು 
ಕಾರ್ಡು ಹೊಡಿಸಿ ಕೊಡ್ರೀ 
ಫೋನು ಬಿಲ್ಲು ಬಾಕಿಯುಂಟು  
ಡೆಡ್ಡು ಅದರ ಬ್ಯಾಟ್ರೀ 
ಒಂದು ಕಾಲು ಮಾಡಿ ಕೊಡುವೆ 
ಬ್ಯಾಲೆನ್ಸುಳಿಸದೇನೆ 
ನನ್ನ ಸಾಕೋದಕ್ಕೆ ಜೋರು ಆಸ್ತಿ 
ಇದೆ ತಾನೆ?

ಹೊತ್ತು ಮೀರಿ ಆಯ್ತು ಇನ್ನು 
ಹೋಗಿ ಬರಲೇ ನಾನು 
ಟಾರ್ಚು ಹಿಡಿದು ಮನೆ ತನ್ಕ 
ಜೊತೆ ಬರ್ತೀರೇನು?
ಹೆಂಡ್ತಿ ಬೈದ್ರೆ ನನ್ನ ಮೇಲೆ 
ದೂರಬೇಡಿ ಮತ್ತೆ 
ನನ್ನ ಹೆಸರ ಮರೆಯಬೇಡಿ 
ಸಿಗುವೆ ನಾಳೆ ಮತ್ತೆ 

                  -- ರತ್ನಸುತ 

ಚೆಲುವೆ ನೀನು ನಕ್ಕರೆ !!

ನೀ ಹಿಂದಿರುಗಿ ನಕ್ಕಾಗ
ಜಾರಿದ ಮನಸುಗಳ
ಲೆಕ್ಕ ಹಾಕುತ್ತಾ ಹೋದರೆ
ಕೈ ಬೆರಳು ಸಾಲದಾಗಿ
ತಲೆ ಕೆಟ್ಟು ಹುಚ್ಚನಾಗುತ್ತೇನೆ !!
ನೆಪ ಮಾತ್ರಕೆ ಈ ದೂರು,
ಆದರೆ ಒಳಗೊಳಗೇ ನಕ್ಕು
ಖುಷಿ ಪಡುತ್ತೇನೆ

ನಿನ್ನಾಸರೆ ಪಡೆದ ಕನಸುಗಳು
ಈಗಲೂ ಬೆಚ್ಚಗಿವೆ
ಎದೆಯ ಗುಡಾಣದಲ್ಲಿ.
ಮರಿ ಹಾಕುವ
ನವಿಲು ಗರಿಗಳಿಗೆ
ಉಚಿತ ಕಾವು ಕೊಟ್ಟು
ಮೊಳೆಯುವ ಆಸೆಗಳಿಗೆ
ಖಚಿತ ಸ್ಥಾನವಿಟ್ಟು

ನನ್ನುಸಿರ ಮಾರ್ದನಿಯಾಗಿ
ನಿನ್ನ ಪಿಸುಗುಟ್ಟು
ವಿನಾಕಾರಣ ಮಾತು ತೊದಲುವುದು
ಆಡುವುದ ಬಿಟ್ಟು
ನೀ ಹಿಗ್ಗಿದರೆ, ನನಗಲ್ಲಿ ಸಿಗ್ಗು
ಬಿಕ್ಕಲು ನಾ ತಬ್ಬಿಬ್ಬು
ನಿನ್ನ ಕಣ್ಣೀರಿಗೆ ಧಾವಿಸುವ
ನನ್ನೀ ಭುಜವೇ ಜವಾಬು

ಕ್ಷಣ-ಕ್ಷಣಕ್ಕೂ
ಹೊಸ ರೂಪ ತಾಳುವ ನೀನು
ಒಮ್ಮೆ, ಒಗಟಿನ ಸುಳುವಾದರೆ
ಮತ್ತೊಮ್ಮೆ, ಒಗಟಿಗೇ ಒಗಟು
ನನ್ನ ಮನದ ಬೋಳು ಮರ-
ಬಿಟ್ಟ ಪ್ರೇಮ ಫಲಕೆ
ನಿನ್ನೊಲುಮೆಯೇ ರಕ್ಷೆ ನೀಡಬಲ್ಲ
ತೊಗಟು

ಇಗೋ ಸಾಲು-ಸಾಲು
ನಿನ್ಹೆಸರಲಿ ಪೋಳಾದ ಅಕ್ಷರ
ಈ ನಡುವೆ ಹೀಗೇ
ಸಮಯದ ಪಾಲಿಗೆ ನಾ ಬಕಾಸುರ 
ಮತ್ತೊಮ್ಮೆ ನಕ್ಕ ನಿನಗೆ 
ಮತ್ತೊಂದು ಕಾವ್ಯದರ್ಪಣೆ 
ಈ ಬಾರಿ ಚೂರು 
ಭಾರಿ ಪ್ರಮಾಣದ ನಿವೇದನೆ 
                 
                   -- ರತ್ನಸುತ 

Sunday 29 December 2013

ಹೂಕಲ್ಲು

ಮನಸಿನ ಸ್ತಬ್ಧ ಕೊಳದಲ್ಲಿ
ಒಗೆದ ಕಲ್ಲು
ರಿಂಗಣದ ಅಣುವಾಗಿ
ತಾಳವಿಲ್ಲದ ತಳವ
ಎಷ್ಟು ಬೇಗ ಸೇರುವುದೋ
ಅಷ್ಟೇ ಸಲೀಸಾಗಿ
ಅಲೆಗಳೂ ಸಾಯುವುದು
ಸುಳುವಿಲ್ಲದಂತೆ

ಅದೇ ಮನದ ಕೊಳದಲ್ಲಿ
ತೇಲಿ ತಾ ನೀರ ಹೂ 
ಮಜಲುಗಳಲಿ ಮಂದಗತಿಯ
ಬಿನ್ನು ಹತ್ತಿ ವಿಹರಿಸುವುದು
ಸಣ್ಣ ತಲ್ಲಣಗಳ ಬಿಡಿಸಿ
ಪ್ರಶಾಂತತೆಯ ಕೆಣಕುವುದು 
ಕೊಳದ ನಿದ್ದೆ ಕೆಡಿಸುವುದು
ಮುದ್ದೆಗಟ್ಟಿ ಮಡಿವನಕ 

ಒಗೆದ ಕಲ್ಲು ಗುಪ್ತ ತಾನು 
ಮುಳುಗಿಸಿದೊಡಲ ಪಾಲಿಗೂ 
ಪಡೆವುದು ಹೊಸ ಆಕಾರ 
ನೀರ್ಹರಿವಿಗೆ ಸಿಕ್ಕಿ 
ಕೊಳ ಕೊಳವಾಗಿ ಉಳಿಯದೆ 
ಕಡಲಾಗುವ ಹೊತ್ತಿಗೆ 
ಎದ್ದ ಅಲೆಯ ಜೊತೆಗೆ ಕದ್ದು 
ತಾ ತೀರವಾಗಬಹುದು 

ಕೊಳೆತ ಹೂವ ಮುಕ್ತ ಭಾವ 
ನೆನ್ನೆಗೆ
ಇಂದಿಗೆ? ನಾಳೆಗೆ?
ಹೂವ ನಾರು ನಾರಬಹುದು 
ಬಿಟ್ಟು ಕೊಡದ ಕೊಳದಲಿ 
ಒಂದರ ಸಾವಿನ ಹಿಂದೆ 
ಸಾವಿರದ ಸಾವಿರ ಹೂ-
-ಗಳಿದ್ದರೆ? ಇರದಿದ್ದರೆ?

ಕಲ್ಲು ಕಲ್ಲೇ 
ಹೂವು ಹೂವೇ 
ಕಲ್ಲಿನೊಳಗೊಂದು ಹೂವು
ಹೂವಿನೋಳಗೊಂದು ಕಲ್ಲು 
ಅವುಗಳೊಳಗಿನ ಸಮರ 
ಅದುವೇ ಅವುಗಳಸ್ತಿತ್ವ
ಕಾಲ ಕಾಲಕೆ ಅವವುಗಳಿಗಿದೆ 
ಅವುಗಳದ್ದೇ ಮಹತ್ವ ...... 

                    -- ರತ್ನಸುತ 

Friday 27 December 2013

ಜಾಯೆಯೆಂಬ ಮಾಯೆ!!

ತಾಂಬೂಲಕೆ ಸುಣ್ಣ ಹೆಚ್ಚಿ
ಕೆಂಪೇರಿ ಸುಟ್ಟ ನಾಲಿಗೆಯ
ಗಾಳಿಗೆ ಚಾಚಿ, ಸಕ್ಕರೆ-
ಅಕ್ಕರೆ ಬೀರುವಾಕೆ, ಭಾವ ನೌಕೆ 
 
ಬೇಕಿದ್ದ ಬೇಡದೇ ಪಡೆಯೆ 
ಗುನುಗದೆ, ಗೊಣಗದೆ
ಹೆಗಲ ಬಿಟ್ಟಿಳಿಯದೆ 
ಅಂಟಿ ಕೂರುವಾಕೆ, ಮುದ್ದು ಕೂಸು   
 
ಮುನಿಸಿನ ಜೊತೆಗೂಡಿ 
ಮಾತಿನೊಡನೆ ಕಣ್ಣ ಮುಚ್ಚಾಲೆ-
ಆಡುತಲೇ ಕೊನೆಗೆ ತಾನೇ 
ಸೋಲೊಪ್ಪುವಾಕೆ, ಆಲೆಯ ಜಲ್ಲೆ 
 
ಭೇದವಿಲ್ಲದ ಬೆವೆರ 
ಕೊಡಿಸುವ ಕಾಯಕದಿ 
ಸಮಪಾಲು ಬೆಂಬಲವ 
ಸೂಚಿಸುವಾಕೆ, ಕಾರ್ಯೇಷು ದಾಸಿ 
 
ನರಕ ನಾಕದ ನಡುವೆ 
ಜೀಕು ಉಯ್ಯಾಲೆಯಲಿ 
ಶಿಥಿಲಗೊಳ್ಳದ ಹಿಡಿಗೆ 
ತಡೆಯೊಡ್ಡದಾಕೆ, ನೆರಳಿನ ಸಾಥಿ
 
ಒಗಟಾಗಿಯೇ ಉಳಿದು 
ಬಾಳೆಂಬ ಒಗಟನ್ನು-
ಬಿಡಿಸುತಲೇ ತನ್ನಿಲುವ 
ಸಾಬೀತು ಪಡಿಸುವಾಕೆ, ಬಾಳ ಕನ್ನಡಿ 

ಹೊರೆಗಳಿಗೆ ತೊರೆಯಾಗಿ
ಹರಿದಲ್ಲಿ ಚಿಗುರಾಗಿ
ಹರಿಣಿಯೇ ತಾನಾಗಿ
ಎದೆಯಲ್ಲಿ ಜಿಗಿದಾಕೆ, ಪದ ವೈಖರಿ

ಅಳಿದರೂ ಮುಗಿಯದ 
ನೆನಪುಗಳ ಬಿಡಿ ಹೂವ 
ಉಚಿತ ಕಟ್ಟಿ ಕೊಟ್ಟ 
ಹೂವಾಡಗಿತ್ತಿ, ರಮ್ಯ ಕಾದಂಬರಿ 

                         -- ರತ್ನಸುತ

Thursday 26 December 2013

ಕಡಲ ಸಾಕ್ಷಿ !!

ಹುಚ್ಚೆಬ್ಬಿಸುವ ಮನೋರಥಗಳು 
ಒಂದರ ಹಿಂದೆ ಮತ್ತೊಂದರಂತೆ 
ತಮ್ಮ ಪಾಡಿಗೆ ತಾವು ಗಾಂಧಾರಿಯರಂತೆ  
ಕಣ್ಣಿಗೆ ಪಟ್ಟಿ ಬಿಗಿದು ಸೆಳೆಯುತ್ತಿವೆ 
 
ಅಮಾನುಷ ಬೇಡಿಕೆಗಳ ಬೆಂಬಲದ 
ಮೈಥುನದ ನಂತರದ ದಣಿವು 
ಯಾವ ಅಮೃತ ಕಡಲನ್ನೂ ಒಪ್ಪದೇ 
ಬತ್ತಿದ ಬಾವಿಗಳ ದಿಟ್ಟಿಸುತ್ತಿವೆ 
 
ನಕ್ಷತ್ರಗಳ ಕಿತ್ತು ಗರ್ವಿಸಿದ ರೋಮಗಳ 
ತುದಿಗೆ ಬಿಗಿದಾಗಲೇ
ರೊಮಾಂಚನಕೆ ಬಿಡುವು 
ಚಂದ್ರನಲ್ಲದ ನನ್ನಲ್ಲಿ ಜೊನ್ನ ತಿಮಿರು 
 
ಬರಿ ತೊದಲ ವಯ್ಯಾರದಿಂಚರ 
ಇನ್ನಷ್ಟು ಅಸ್ಪಷ್ಟ, ಮತ್ತಷ್ಟು ಪಕ್ವ 
ಇಡಿ ಮೈಯ್ಯ ಹಿಂಡಿ ಹಿಡಿದಿಟ್ಟ ಕಣ್ಣ ಕುಂಬದ 
ಜೇನ ಬುಟ್ಟಿಯ ಸತ್ವ 
 
ಹೂವಲ್ಲಿನ ಘಮಕೆ ಒಡಲ ಬೀಡು 
ಮಾತಿಲ್ಲದಾಗಲೇ ಮೌನ ಹಾಡು 
ಚಿವುಟಿದ ರತಿಯೊಳಗೆ ಮನ್ಮಥನ ಭಂಗ 
ಸಮರವಾಯಿತು ಪ್ರಣಯ ನಾಟ್ಯ ರಂಗ 

ಪುಷ್ಕರದ ಮಡಿಲಿಗೆ ಹೂ ಬಾಣ 
ವಿನಿಮಯದ ಮೈತ್ರಿಗೆ ಸೋತ ತ್ರಾಣ 
ನಿರ್ಲಿಪ್ತ ನೋಟದಲಿ ಗೆದ್ದ ತೃಪ್ತಿ 
ಪ್ರಕೃತಿಗೆ ಪರಿಪೂರ್ಣತೆಯ ಪ್ರಾಪ್ತಿ 

ಕೊಳಲ ಗಾತ್ರದ ಮಿಂಚು
ಸ್ಖಲಿಸಿ ತಣ್ಣಗೆ ಮುದುಡಿ
ತಲೆ ಬಾಗಿದೆ ಕೊನೆಯ ಉಸಿರ ದೋಚಿ 
ಅಲೆಯ ಅವರೋಹಣಕೆ ಕಡಲೇ ಸಾಕ್ಷಿ !!

                                   -- ರತ್ನಸುತ 

ಕೂಗಿಗೆ ಕಾಯದೆ ಎಚ್ಚರವಾಗಿ !!

ಕಥೆಗಳು ಇನ್ನೆಷ್ಟು ದಿನ
ತುಂಬಿಸಬಲ್ಲವು ಹೊಟ್ಟೆಯ?
ಎಲ್ಲಕ್ಕೂ ಅಂತ್ಯವಿದೆ!!
 
ಮೋಡಕ್ಕೂ ಮೈ ಭಾರವಾದಾಗ 
ಸೋ ಎಂದ ಸುರಿ ಮಳೆಗೆ 
ಭೂಮಿ ತತ್ತರಿಸುವುದು ಸತ್ಯ 
ಭ್ರಮೆಗಳೆಲ್ಲ ಹನಿಗೆ ಸಿಕ್ಕಿ
ಮುದ್ದೆಯಾಗುವ ಕಾಗದದ ದೋಣಿಗಳಷ್ಟೇ!!
 
ಬೇಡಿಕೆಯಿಟ್ಟ ಕೈಗಳಿಗೆ 
ಬಾಚುವುದೇನು ದೊಡ್ಡ ಮಾತು?
ಬೆನ್ನಿನ ತುರಿತಕೆ ಎಟುಕದ ಉಗುರು  
ಎದುರಿಗಿದ್ದ ಬೆನ್ನ ಪರಚಲು ಎಷ್ಟು ಹೊತ್ತು?
 
ಕಂಬನಿ ಜಾರಿ ತುಟಿ ಹೊಕ್ಕಾಗ 
ನಾಲಿಗೆ ಚಪ್ಪರಿಸಿ, ಕ್ಷಣ ನಿಲ್ಲುವ ಅಳು 
ಅದು, ದೈತ್ಯ ನೋವಿಗೆ ಆ ಒಂದು
ಹನಿಯ ಸವಾಲು, ಗೆದ್ದ ಪೊಗರು 
 
ಕೊಳೆತ ಕವಳದ ಮೇಲೆ 
ಅಂಡೆರಿಸಿ ಕೂತ ನೊಣಗಳಿಗೆ 
ನಾಳೆ ಕಾಣಬಹುದಾದ ಕ್ರೌರ್ಯದ ಪರಿವೇ ಇಲ್ಲ
ಹುಣ್ಣಲ್ಲಿ ನೆತ್ತರು ಕಾಯೋದಿಲ್ಲ 
 
ಗೋಳಾಡುವ ಕೊರಳು ಘರ್ಜಿಸಬಹುದು 
ಗೋವು ಹುಲಿಯಾಗಬಹುದು 
ಕೆಂಪು ಮಣ್ಣನು ಸೀಳಿ ಕುಡಿಯೊಡೆಯುವ ಬೀಜ
ಮಣ್ಣನೇ ನುಂಗಬಹುದು 
 
ಎಚ್ಚರವಾಗುವ ಕೂಗಿಗೆ ಕಾಯದೆ 
ಮುಂದಾಗಿಸಿ ಕೊಡುಗೈ ಚಾಚಿ 
ಹಸಿವಿನ ರೋಗಕೆ ವೈದ್ಯರು ಬೇಕೆ?
ಹಂಚಲು ನೀಡುವ ಶಿವ ಮೆಚ್ಚಿ !!

                                 -- ರತ್ನಸುತ 

Wednesday 25 December 2013

ನಾ ಕಾವ್ಯವಾಚಿಸಿದಾಗ

ಕಂಪಿಸಿದ ಕೈಯ್ಯಲ್ಲಿ ಹಿಡಿದ
ಅದೆಂಥದೋ ಹೂವಿನ ದಳಗಳೂ ಕಂಪಿಸಿದ್ದವು
ಆಗತಾನೇ ಅರಳಿದ ಆ ಹೂವ
ಮೊಗ್ಗಾಗಿಸುವ ಹುಂಬನೊಬ್ಬ ನನ್ನಲ್ಲಿದ್ದ

ಎಲ್ಲರೂ ಕೇಳಿದವರೇ
ಕಂಪನಕೆ ಕಾರಣವೇನೆಂದು
ನನ್ನದೂ ಅದೇ ಪ್ರಶ್ನೆ
"ಕಾರಣವೇನು?"

ಇಡಿ ಜಗತ್ತು ನೆಟ್ಟ ನೋಟಕ್ಕೆ
ನನ್ನ ಬಡ ಜೀವ
ಸಹಿಸುವುದಾದರೂ ಹೇಗೆ?!!
ಅದಕ್ಕಾಗೇ ಆಗಿರಬಹುದೇನೋ ಹಾಗೆ?!!

ಅಕ್ಷರಗಳಲ್ಲಿ ತಕ-ತಕ ಕುಣಿಯಲು
ನಾನು ಮಾತ್ರ ಸ್ಥಿರವಾಗಿದ್ದರೆ!!
ಛೆ..ಛೆ.. ನಾ ಅವಕೆ ಮಾಡಿದ ಅವಮಾನ
ನಡುಕವೇ ಸೂಕ್ತ ಸನ್ಮಾನ!!

ನಾನು ನಾನೆಂಬುದ ಮರೆತು
ಸಾಲುಗಳು ನನ್ನವೆಂಬುದನ್ನೇ ಮರೆತು
ಒಪ್ಪಿಸಿ ಮುಗಿಸಿದ ಮರುಕ್ಷಣ ಮೌನ
ನನ್ನೊಳಗಿನ ತಲ್ಲಣಕ್ಕೆ ಚಪ್ಪಾಳೆಯ ಉಪಶಮನ

ಚಿತೆಯಲ್ಲಿ ಅಗ್ನಿಸ್ಪರ್ಶಿಸಿಕೊಂಡು
ಅಲ್ಲಿಂದ ಹಾರಿ ಹರಿವ ನದಿಗೆ ಜಿಗಿದು
ದಂಡೆಗೆ ಈಜಿ ಮೈ ತಡವಿಕೊಂಡೆ
ಸಧ್ಯ ಬೊಬ್ಬೆಗಳಾವೂ ಮೂಡಿರಲಿಲ್ಲ ...

                                        -- ರತ್ನಸುತ

Tuesday 24 December 2013

ಅವಳ ವ್ಯಾನಿಟಿ ಬ್ಯಾಗಲ್ಲಿ !!

ಮರೆತಂತೆ ಆಕೆ ಬಿಟ್ಟು ಹೋಗಿರುವಳು 
ಎದೆಯಲ್ಲಿ ಅವಳ ವ್ಯಾನಿಟಿ ಬ್ಯಾಗ
ಇಡಿ ಆವರಣ ಬಟಾ ಬಯಲಾಗಿದ್ದೂ 
ಅದ ಮಾತ್ರ ಇಡಲು ಇಲ್ಲದ ಜಾಗ 
 
ಒಪ್ಪದ ಮನಸಲ್ಲಿ ಮುಂದುವರೆದೆ
ತಡೆದಂತೆ ತೆರೆದು ನೋಡುವ ಸಲುವೆ 
ಕಿಸೆಯೊಳಗೆ ಕಿಸೆ, ಒಳಗೆ ಮತ್ತೊಂದು ಕಿಸೆ
ಕಳೆದು ಹೋಗಿದ್ದೆ ನಾ ಗುಟ್ಟುಗಳ ನಡುವೆ  
 
ಏನೂ ಬರೆಯದ ಖಾಲಿ ಚೀಟಿಯೊಂದು 
ಶಾಯಿ ಮುಗಿದ ಹಸಿದ ಲೇಖನಿ 
ಸುಕ್ಕು ಹಿಡಿದ ಒಂದು ಕರವಸ್ತ್ರದಂಚಲಿ 
ಇಂಗದೆ ಉಳಿದಿತ್ತು ಕಣ್ಣ ಹನಿ 
 
ಅಧರ ಲೇಪದ ಕಡ್ಡಿ, ಕಣ್ಗಾಡಿಗೆ 
ಅಂಟಿನಂಟಿರದಿತ್ತು ಹಣೆ ಬಿಂದಿಗೆ 
ಬಾಚಣಿಕೆ ಹಲ್ಲಿಗೆ ಪುಡಿಗೂದಲು
ಬೈತಲೆ ಬೋಟ್ಟಿಗೆ ಅದು ಕಾವಲು 
 
ಕಳೆದ ಜೋಡಿಗೆ ಒಂಟಿಯಾದ ಜುಮುಕಿ
ನಕಲಿ ಗೆಜ್ಜೆ, ಅಸಲಿ ಸದ್ದ ಗಿಲಕಿ 
ಗೋರಂಟಿ, ನಡು ನೆರಿಗೆಯ ಹಿಡಿ ಪಿನ್ನು 
ಸಾಕು ಬಿಡಿ ಹೇಳಲಾರೆ ಮೆತ್ತಿನ್ನೇನು !!
 
                                    -- ರತ್ನಸುತ

Monday 23 December 2013

ನಾನಾಗಿ ಬರೆದಿಲ್ಲ, ನೀವಾಗಿ ಓದಿ !!

ಸಮಯ ಸಿಕ್ಕಾಗ
ಮುಳ್ಳಿನ ಕಾಲೆಳೆಯಬೇಕು 
ಆ ಸಮಯಕ್ಕಾಗಿ 
ಮುಳ್ಳಿನ ಕಾಲಿಗೇ ಬೀಳಬೇಕು 
 
ಅಲೆಗಳೆದುರು ಈಜುವ
ಮೋಜಿನ ಜೀವನದಲ್ಲಿ 
ಈ ತೀರ ನಿರಂತರ 
ಆ ತೀರ ಅಗೋಚರ 
 
ಮರಳಲ್ಲಿ ಮನೆ ಕಟ್ಟಿ 
ಉಪ್ಪರಿಗೆಯಡಿಯಲ್ಲಿ 
ಬಿತ್ತಿಕೊಂಡ ಕನಸುಗಳು 
ಲೆಕ್ಕ ಮೀರುವಷ್ಟು, ದಂಡ ಪಿಂಡಗಳು 
 
ಗೋಪುರಕ್ಕೆ ಮೆಟ್ಟಿಲಿಂದಲೇ 
ಕೈ ಮುಗಿದು 
ದೇವರಿಗೂ ಅಪರಿಚಿತ ನಾನು 
ನೈತಿಕತೆ ಉಳಿಸಿಕೊಳ್ಳದವ
 
ನೆನಪುಗಳು ಶೂಲ 
ಮಾತೇ ಬಂಡವಾಳ 
ಹೆಜ್ಜೆ ಗುರುತುಗಳಂತೂ 
ನಾರುತಿವೆ ಕೊಳೆತು 
 
ಇದರ ನಡುವೆ
ಅಂಟಿದ ನೆರಳು ಬೇರೆ 
"ಹೋಗ್ಹೋಗಯ್ಯ ದಮ್ಮಯ್ಯ!!" ಅಂದರೂ 
ಜೊತೆಗುಳಿದ ಮಾನಗೆಟ್ಟ ಪೀಡೆ 
 
ಬೆನ್ನಿಗಂಟಿದ ಶನಿಗೂ ಸಾಕಾಗಿ 
ಜಾಡಿಸಿ ಒದ್ದನೇನೋ ಎಂಬಂತೆ
ಆಗಾಗ ಎಡವಿ ಬಿದ್ದೆ 
"ಎಚ್ಚರ" ಅದು ಹಗಲ ನಿದ್ದೆ 

ನೇರ ನೋಡುವನಕ 
ನಾ ಕಂಡ ಲೋಕ 
ನಿಕೃಷ್ಟ, ನೀರಸ, ನಿರಾಕಾರ 
ಅಪೌಷ್ಟಿಕ ಬದಕಲ ಕೂಸು

ನಿಜವೆಂಬುದು 
ಕಣ್ಣಿನೆದುರ ಕನ್ನಡಿ 
ಅದ ಚೂರುಗೊಳಿಸಿದೆನೆಂಬ 
ಮೊಂಡು ತರ್ಕವಾದಿ ನಾನು 

ನಾನೇ ಪ್ರಧಾನ ಪಾತ್ರ-
-ಧಾರಿಯಾದ ಈ ಸಾಲುಗಳಲ್ಲಿ 
ಪರರನ್ನ ಕೂರಿಸಿ, ತೂಗಿಸಿ 
ಖುಷಿ ಪಡುವ ಹುಂಬ 

ನಾನಾಗಿ ಬರೆದದ್ದು ಸುಳ್ಳು 
ನಾನೇ ಬರೆದದ್ದು ಸತ್ಯ 
ನಾನ್ಯಾರೋ ಹುಡುಕಾಡಬೇಡಿ ಮತ್ತೆ 
ನೀವಾಗಿರುವಿರಿ ಸಧ್ಯ...... 

                          -- ರತ್ನಸುತ 

Friday 20 December 2013

ಸಾವುಗಳ ನಡುವೊಂದು ಬದುಕು !!

ದಣಿದ ಕಣ್ಣನು ಮೆಲ್ಲ 
ಮುಚ್ಚಿಕೊಳ್ಳುವ ಗಳಿಗೆ 
ಎದುರಾದ ಸ್ವಪ್ನದಲಿ 
ನಾ ಸಾಯುತಿದ್ದೆ 
ನಾನೇ ಕೂಡಿಟ್ಟು 
ಕಾವಲಿಟ್ಟ ಬಯಕೆ-
-ಗಳ ಉರಿ ಜ್ವಾಲೆ-
-ಯಲಿ ಬೇಯುತಿದ್ದೆ 
 
ಅತ್ತು ಕರೆದರೂ ತಾನು 
ಎತ್ತ ಹೋಯಿತೋ ತೇಲಿ 
ಇದ್ದಲ್ಲಿ ಕಲ್ಲಾಗಿ 
ಉಳಿದಂಥ ಮೋಡ?
ಕಣ್ಣ ತಪ್ಪಿಸಿ ಬೆನ್ನ 
ಹಿಂದೆ ಅಡಗಿತು ಪವನ 
ಮಾತನಾಡದೆ ಉಳಿಯಿತು 
ನದಿಯು ಕೂಡ 
 
ಸುಟ್ಟ ಚರ್ಮದ ಬೊಬ್ಬೆ 
ನೀರ ಗುಳ್ಳೆ ರೀತಿ 
ಮೂಡಿ ಹಿಂದೆ ಹಾಗೇ 
ಒಡೆದು ಬಿಡುತಿತ್ತು 
ಹಸಿ ಮಾಂಸ ಮುದ್ದೆ
ಚೀರುತ್ತಿತ್ತು ನೋವಲಿ 
ಎಲುಬಿಗೂ ಕೂಡ ಅದು 
ಕೇಳುತ್ತಲಿತ್ತು 
 
ನೂರು ಹದ್ದಿನ ಕಣ್ಣು 
ನನ್ನ ಚಿತೆ ಸುತ್ತ 
ಗೊಲಾಕಾರದಲಿ 
ಹಾರಾಡಿದಂತೆ 
ಬೆಂದ ಮೈ ಅಲ್ಲೂ 
ಭಯವನ್ನು ಬಿಟ್ಟಿಲ್ಲ 
ಮುಂದೆ ಉಂಟಾಗುವ 
ನೋವಿನದೇ ಚಿಂತೆ 
 
ಕೈ ಕಟ್ಟಿ ನಿಂತವರು 
ಕಂಬನಿ ಹರಿಸಿದರು 
ನನ್ನ ಹಿಡಿ ಭಸ್ಮವ 
ಕಳಶದಲಿ ತುಂಬಿಸಿ 
ಉಳಿದಂತೆ ಎಲ್ಲವನು 
ಅಲ್ಲೇ ಬಿಟ್ಟರು ನನ್ನ 
ಪಂಚಭೂತಗಳಲ್ಲಿ 
ಒಂದಾಗಿಸಿ 
 
ಸತ್ತದ್ದು ನಿಜ ನಾನು 
ಅಂದಿಗಷ್ಟೇ ಅಲ್ಲ 
ಹಿಂದೆಯೂ, ಇಂದಿಗೂ 
ಮುಂದೆಯೂ ಸಾಯುವೆ 
ಸಾವಿನ ನಡುವೆ 
ಬದುಕೆಂಬುದೊಂದಿದೆ ನೋಡಿ 
ಅದರ ಸಲುವೇ ಮತ್ತೆ 
ಉಸಿರಾಟ ಬೆಳೆಸುವೆ ..... 
 
                    -- ರತ್ನಸುತ 

Thursday 19 December 2013

(ಕಾ)ಡ (ಮ)ಲ್ಲಿಗೆ

ಕಾಡ ಮಲ್ಲಿಗೆ ಕಂಪು
ನಾಡ ದುಂಬಿಯ ಪಾಲು
ಮಾರುಕಟ್ಟೆಯಲಿ

ಬೇಡಿ ಬಂದವೋ ಹಸಿದ
ಹೊಟ್ಟೆ ಹೊತ್ತವು ಅಲ್ಲಿ
ಉಟ್ಟ ಬಟ್ಟೆಯಲಿ

ಚಿಟ್ಟೆಯೊಂದಿದೆ ಕಾದು
ಕೆಟ್ಟ ಬಣ್ಣದ ರೇಖೆ
ರೆಕ್ಕೆಗಳ ತಾಳಿ

ಯಾರ ಪಾಲಾಗಲು
ಬಯಸಿದೆಯೋ ಒಮ್ಮೆ ಆ
ಹೂವನ್ನೂ ಕೇಳಿ !!

                 -- ರತ್ನಸುತ

ಎಲ್ಲ ಹೇಳಾಗಿದೆ !!

ತಾವರೆ ಎಲೆ, ಮೇಲೆ 
ಕಂಡ ಆ ಲೋಕವ 
ಅದರಡಿಯ ಕೆಸರಿಗೆ 
ವರ್ಣಿಸದೆ ಉಳಿಯಿತು 
ಕೆಸರೆಡೆಗೆ ಮುಖ ಮಾಡಿ 
ಕಚ್ಚಿ ಉಳಿದ ಕಾಂಡ-
-ದ ವೇದನೆಯ ತಾನು 
ಬಚ್ಚಿಟ್ಟುಕೊಂಡಿತು 
 
ಚಾಚಿ ಅರಳಿದ ಹೂವು 
ಗೀಚಿಕೊಂಡಿತು ಓಲೆ 
ಮರುಳಾಗಿ ಮರದ 
ಕೋಗಿಲೆ ಹಾಡಿಗೆ 
ಕೊಕ್ಕರೆಯು ದಾಪು- 
-ಗಾಲಲಿ ಬೇರ ಕೆದಕಿತು 
ಕಚಗುಳಿಯ ಭಾವ 
ದಳಗಳಿಬ್ಬನಿಗೆ 
 
ತಾನೊಬ್ಬ ನೆಂಟ 
ಮೊಗ್ಗನರಳಿಸಿದವ 
ದಂಡೆ ಮೇಲೆ ಕೂತು 
ಬಿಡಿಸಿದ ಚಿತ್ರ 
ಆಕೆಯೋ ಆತನ 
ಕಂಡಾಗಿನಿಂದಲೇ 
ಗುಟ್ಟಾಗಿ ಬರೆದು-
-ಕೊಂಡಳು ಪ್ರೇಮ ಪತ್ರ  
 
ಸಂಜೆ ತಂಪಿಗೆ ತಾನು 
ಮೈದೆರೆದ ಹೂವು  
ಕರಿ ಕಂಬಳಿಯ 
ಹಿಡಿದು ಸಜ್ಜಾಗಿರೆ 
ಗೆಜ್ಜೆ ಸದ್ದನು ಮಾಡಿ 
ಸೆರಗು ಹಾಸಿದ ನಾರಿ 
ಅಲ್ಪ ಸುಖ ನೀಡಿ 
ಆಗಲೇ ಕಣ್ಮರೆ 
 
ಗೂಬೆಗಣ್ಣಿಗೆ ಬಿದ್ದು 
ಇನ್ನಿಲ್ಲವಾದ ನೊಣ 
ಮಾದರಿ ಆಯಿತು 
ತನ್ಮುಂಪೀಳಿಗೆಗೆ 
ವಾರವಾಯಿತು ಒಣಗಿ 
ತೆಂಗಿನ ತೆಕ್ಕೆಯ 
ಬಿಟ್ಟು ಬೀಳದ ಗರಿಯು 
ಒಲೆ ಸೇರೋದ್ಹೇಗೆ?
 
ಬಾನ ಸವರಿ ಹೊರಟು
ಪಡುವಣದ ಎದೆಗೊಂದು 
ಗಾಯ ಮಾಡಿತು ಅಲ್ಲಿ 
ಮುಳುಗಡೆಯ ಸೂರ್ಯ 
ಶಿಳ್ಳೆ ಹೊಡೆಯುತ ಮೇಲೆ 
ಏರು ದೀಪದ ಬತ್ತಿ 
ಹುಚ್ಚು ಕೋಡಿ ಬಯಕೆ 
ಜೊತೆ ಕೆಟ್ಟ ಪ್ರಾಯ 
 
ಹೇಳಿ ಹೊರಟರೆ ಮುಂದೆ 
ನಾಚಿಕೆಯ ಬೇಲಿ 
ನುಲಿದ ಬೆರಳು ಚೂರು 
ಹಿಂಜರಿದಿದೆ 
ಗುಟ್ಟುಗಳು ನನ್ನಲ್ಲಿ 
ಬೆಚ್ಚಗಿವೆ ಮಲಗಿ 
ಇಷ್ಟು ಹೇಳಲು ಎಲ್ಲ 
ಹೇಳಾಗಿದೆ!!

             -- ರತ್ನಸುತ  

ಊದುಗೊಳವೆ ಹಾಡು

ಇರುಳ ಹಾಸಿಗೆ ಮಡಿಲು
ತುಂಟ ಗೊಲ್ಲನ ಕೊಳಲು
ಹೊಮ್ಮಿ ಬರಲು ನಾದ
ತೆಕ್ಕೆಯಾದಳು ರಾಧ

ಮಾತು ಮುಗಿಯುವ ವೇಳೆ
ನಾಚಿ ಹೊರಳಿದ ಹಾಳೆ
ಪದವೊಂದು ತಾ ಉಕ್ಕಿ 
ಶೃಂಗಾರವೇ ಬಾಕಿ

ಕಚ್ಚಿದೊಡೆ ನಾಲಿಗೆಯು
ಹುಚ್ಚೆದ್ದು ಪುಳಕದಲಿ
ಮೂಡಿತು ಸೊಲ್ಲು
ಹಚ್ಚಾದ ಸಾಲು

ಕಣ್ಗಪ್ಪು ಕರಗಿ
ಕೆಂಪೆದ್ದ ಕೆನ್ನೆ
ಹಸಿದ ಬಾಯಿಗೆ ಸಿಕ್ಕ 
ಹಸಿ ಕಡಿದ ಬೆಣ್ಣೆ

ಕೊಳಲು ಮೂಖಿ ತಾನು
ಬಿಸಿಯುಸಿರು ಸೋಕಿ
ಮೆಲ್ಲ ನುಡಿಯಿತು ವೀಣೆ
ತಂಗಾಳಿ ತಾಕಿ

ಮತ್ತೆ ಊದುವ ಕೊಳವೆ
ಹಾಳೆ ಹೊರಳುವ ಸಲುವೆ
ಕವಿದ ಕತ್ತಲ ಕಾವ್ಯ
ಜೊನ್ನ ಶಿಶುವೆ !!

                  -- ರತ್ನಸುತ

Tuesday 17 December 2013

ಈ ನಡುವೆ ಹೀಗಾಗಿರುವೆ !!

ಮಂಪರುಗಣ್ಣಿನ ಮುಂಪಹರೆಯಲಿ 
ಅಡಗಿದ ನಿನ್ನ ಗುರುತಿಸುವೆ 
ಅಂಕಣವಿಲ್ಲದೆ ಹೋದರೂ ನಿನಗೆ 
ಮನಸಲೇ ಕಾವ್ಯವ ಗೀಚಿಡುವೆ 
 
ಮುತ್ತಿಗೆ ಹಾಕುವ ಮೋಹವ ಸೀಳಿ 
ಮುತ್ತಿಗೆ ಕಾಯುವ ಗುಣವಿಡುವೆ 
ಸಣ್ಣಗೆ ನಕ್ಕರೂ ಅಂದಿಗೆ ಸಾರ್ಥಕ-
-ತೆಯ ದಿನಚರಿ ತುಂಬಿಸುವೆ 
 
ಬಿಕ್ಕಳಿಕೆಯ ಬರಿಸದೆ ಇರಿಸಲು ನಾ 
ನೆನಪನು ದೂರ ಸರಿಸಿರುವೆ 
ಅಂಟಿ ಜೊತೆಗಿರುವ ನೆರಳೊಂದಿಗೆ 
ಒಪ್ಪಂದಕೆ ಸಹಿ ಹಾಕಿರುವೆ 
 
ಗುಟ್ಟಿನ ಬೆನ್ನನು ಹತ್ತಿ ನಿನ್ನಯ
ರೇಖಾ ಚಿತ್ರವ ಬಿಡಿಸಿರುವೆ 
ತೀರದಿ ಬಿಟ್ಟ ಹೆಜ್ಜೆ ಹಚ್ಚೆಯ 
ಒಂದೂ ಬಿಡದೆ ದೋಚಿರುವೆ 

ನಾಳೆಯ ದಿನಗಳ ಕಾಣಲು ಆಗಲೆ 
ಲೆಕ್ಕಾಚಾರಕೆ ಇಳಿದಿರುವೆ 
ನುಲಿಗೆಯ ನಾಲಿಗೆ ತಾಳಕೆ ಈಗಲೆ 
ನಿನ್ನ ಜಪಿಸುತ ಕೂತಿರುವೆ 

ನಿನ್ನೊಲುಮೆಯನು ಸಂಪಾದಿಸುವ 
ಕಾಮಗಾರಿಯಲಿ ಮುಳುಗಿರುವೆ 
ನನ್ನವಳಾಗಿ ಒಲಿಯುವುದಾದರೆ 
ಕಾಯುವಿಕೆಯಲೇ ಉಳಿದಿರುವೆ 

ಕೈಯ್ಯಲಿ ಕೈಯ್ಯಿ, ಹೆಜ್ಜೆಗೆ ಹೆಜ್ಜೆ 
ಜೊತೆಯಾಗಲು ಸ್ವರ್ಗವ ಪಡೆವೆ 
ನಿನ್ನ ಸನ್ನೆಯೇ ನನಗೆ ಆಜ್ಞೆ 
ಬೇಕಾದರೆ ಉಸಿರನೇ ಬಿಡುವೆ

                             -- ರತ್ನಸುತ 

Monday 16 December 2013

ಹಾಗೇ ನೆನೆಯುತಾ !!

ಸುಳ್ಳಾಡುವ ಮುನ್ನ
ಒಂದು ನಿಜ ಹೇಳುವೆ 
ಮನಸಾರೆ ನಾ ನಿನ್ನ ಇಷ್ಟ ಪಡುವೆ 
ಕಲ್ಲಾಗುವ ಮುನ್ನ 
ಒಮ್ಮೆ ನಾ ಹಾಡುವೆ 
ನೀ ಕೇಳದಿದ್ದಲ್ಲಿ ಪ್ರಾಣ ಬಿಡುವೆ 
 
ಮುಗಿಲಾಗುವ ಮುನ್ನ 
ನಾ ನಿನ್ನ ಹೀರುವೆ 
ಹಾವಿಯಾಗಿ ಹಿಂದೆ ಬಿಟ್ಟು ಕೊಡುವೆ 
ಹರಿದಾಡುವ ಮುನ್ನ 
ನಾ ನಿನ್ನ ತಡೆಯುವೆ 
ಒಡೆದು ನಿನ್ನೊಂದಿಗೇ ಹರಿದು ಬರುವೆ 
 
ಸಿಹಿ ಮುತ್ತಿಗೂ ಮುನ್ನ 
ಒಂದಿಷ್ಟು ಕೆಣಕುವೆ 
ಮತ್ತೊಮ್ಮೆ ಕೋಪಕೆ ಗುರಿಯಾಗುವೆ 
ಸಹಮತದ ಸರಸಕೆ 
ಮೌನವಾಮಂತ್ರಿಸಿ 
ಮಾತುಗಳಿಗಲ್ಪ ವಿರಾಮವಿಡುವೆ 
 
ಕನಸಿಗೂ ಮುನ್ನ 
ನಿನ್ನ ನೆನೆದು ಹಾರುವೆ 
ನೀನಿರದ ಕನಸ ನಾ ದೂರ ಇಡುವೆ 
ಬೇಟಿಗೂ ಮುನ್ನ 
ನಿನ್ನಷ್ಟಕ್ಕೆ ಮಣಿಯುವೆ 
ನಿನ್ನ ನಗುವಲ್ಲೇ ಗೆಲುವನ್ನು ಪಡೆವೆ 
 
ಕಂಬನಿಗೂ ಮುನ್ನ 
ರೆಪ್ಪೆ ಅಂಚಿಗೆ ಬರುವೆ 
ಬಡಿದಾಗ ಹರಿಸದೆ ಬೊಗಸೆ ಹಿಡಿವೆ 
ಅಳಿಸೆನು ಅಂತನದೆ 
ಸಹಜ ಆಣೆ ಇಡುವೆ 
ನಿನ್ನ ನೋವಿಲಿ ನಾ ಜೊತೆಯಾಗುವೆ 
 
                               -- ರತ್ನಸುತ 

Friday 13 December 2013

ಅನಾಮಿಕ ಗೆಳತಿ!!

ಕಡಲ ತೀರದಲ್ಲಿ ಗೀಚೆ 
ಅಳಿಸಿ ಹೋಗುತ್ತಿತ್ತು ಹೆಸರು
"ಅನಾಮಿಕ" ಎಂದು ನಿನಗೆ
ನಾಮಕರಣ ಮಾಡುವಾಸೆ


ಕತ್ತಲ ಹಂಬಲಿಸಿದ ಮನ 
ಏಕಾಂತದಿ ಮರುಗಿರಲು 
ಬೆಳಕ ತಂದ ಗೆಳತಿ ನಿನ್ನ 
"ಪ್ರಣತಿ" ಎಂದು ಕರೆವ ಆಸೆ 

ಬರಡು ಬಿರುಕಿನೆದೆಯ ಮೇಲೆ 
ಸೋನೆ ಪಸರಿ ಹೋದೆ ನೀನು 
ಮೇಘ ಸಾಲು ಸಾಲ ಕೊಟ್ಟ 
ಚಿತ್ತ ಮಳೆಯ ಮುತ್ತು ನೀ

ಅಡುಗೆ ಒಲೆಯ ಕಾವಿನಲ್ಲಿ 
ಚಿತ್ತು ಮಾಡಿ ಗೀಚಿಕೊಂಡ 
ಇದ್ದಲ ರೇಖೆಯ ರೂಪಿ 
ಕೃಷ್ಣವೇಣಿ ರಾಗಿಣಿ  

ನಿದ್ದೆ ತರಿಸದಂತೆ ಕಣ್ಣ 
ರೆಪ್ಪೆ ಮೇಲೆ ನಾಟ್ಯವಾಡಿ 
ಹೆಜ್ಜೆ ಗುರುತ ಬಿಡದೆ ಹೋದ 
ಮತ್ಸಕನ್ಯೆ ನೈದಿಲೆ 

ಎಲ್ಲೇ ಹೋದರಲ್ಲಿ ನಿನ್ನ 
ಬೇಡಿ ಕಾಡುತಿತ್ತು ನೆರಳು 
ವಶೀಕರಣ ಮಾಡಿಕೊಂಡ 
ಮಾಯಗಾತಿ ಅನ್ನಲೇ?

ಸುತ್ತ ಮುತ್ತ ಘಮಲು ಸೂಸಿ 
ಪಾನಮತ್ತ ಮಾಡಿದವಳೇ 
ಗತ್ತಿನಲ್ಲಿ ಮೆಟ್ಟಿ ನಿಂತ 
ಷೋಡಶಿ ಶಿರೋಮಣಿ 

ಕುಂಬ ತುಂಬ ಪಾನಕಕ್ಕೆ 
ಬೆಲ್ಲ ಹೆಚ್ಚು ಬೆರೆಸಿ ತಂದು 
ಕಾಣದಂತೆ ರುಚಿಸಿ ಕೊಟ್ಟ 
ದೈವ ರೂಪಿ ಕನ್ಯೆ ನೀ

ಚಿಗುರು ಮೀಸೆ ಹೈದನಲ್ಲಿ 
ಪ್ರೌಢತನದ ಮಿಂಚು ಹರಿಸಿ 
ಪೋಲಿ ತುಂಟನೆಂದು ಕರೆದ 
ಪ್ರಣಯರಾಣಿ ಕಾಮಿನಿ 

ನಾಲ್ಕು ಮಾತಿನಲ್ಲೇ 
ನಾಕವನ್ನು ತೋರಿದವಳು ನೀನು 
ಮಾಯೆ, ಜಾಯೆ, ತಾಯೇ 
ಬಾಳ ಕಟ್ಟಿಕೊಟ್ಟ ಮಾಲಿನಿ 
                  
                        -- ರತ್ನಸುತ 

Thursday 12 December 2013

ಮೌನ ಮುರಿದ ಮರುಗಳಿಗೆ !!

ಅಕ್ಕ ನೋಡೆ, ಅವನೇ ನನ್ನವ 
ನನ್ನ ಎತ್ತಿ, ಬಳಸಿ, ಕುಕ್ಕಿ 
ಮೈಯ್ಯೆಲ್ಲ ನೇವರಿಸಿ, ಹಿಂಡಿ 
ಹುಣ್ಣಾಗಿಸಿದವ, ಹಣ್ಣಾಗಿಸಿದವ 

ಇದಕ್ಕೂ ಮೊದಲು ನಾ ಕಲ್ಲು 
ಆಕಾರವಿಲ್ಲದ ಜಡ ಕಲ್ಲು 
ಎಲ್ಲರೂ ಕಂಡದ್ದು ಅಂತೆಯೇ 
ಈತನೇ ಅದರೊಳಗೆ ನನ್ನ ಕಂಡವನು 

ಎಷ್ಟು ಜೋಪಾನ ಮಾಡಿದ ಗೊತ್ತೇ?
ನಿರ್ಜೀವಿ ನನಗೆ ತವಕ ಹುಟ್ಟಿಸಿದ 
ಉಸಿರಾಡಲು, ಹೆಸರಾಗಲು 
ಕಣ್ಣಲ್ಲೇ ಚಪ್ಪರವ ಕಟ್ಟಿ ಮೈನೆರೆಸಿದಾತ 

ಈತನ ಜೊತೆ ಕಳೆದ ಆ ರಾತ್ರಿ
ನಿದ್ದೆಗೆಟ್ಟು ಕಣ್ಣ ಕೆತ್ತಿಸಿಕೊಂಡ ಪರಿ!!
ಆಗಲೇ ನಾ ಇವನ ಕಂಡು ನಾಚಿದ್ದು 
ನಾ ಹೆಣ್ಣೆಂದು ತೋಚಿದ್ದು!!

ನನ್ನೊಂದಿಷ್ಟೂ ಮರೆಮಾಚದೇ 
ಅಂದವ ಸಂಪೂರ್ಣ ಗ್ರಹಿಸಿದಾತ 
ನನ್ನೆದೆಗೆ ಉಳಿಯಿಟ್ಟ ಚೋರ 
ತುಟಿ ಪಕ್ಕ ಚುಕ್ಕೆಯೇ ಭಾರ 

ಇಂದು ನೋಡೆ ಅವನಲ್ಲಿ, ನಾನಿಲ್ಲಿ 
ನನ್ನ ಕೈಗಳ ಕಟ್ಟಿ ಆತ ಜೋಡಿಸಿಹನು 
ಹೆಣದ ಮೇಲೆ ಸತ್ತ ಹೂವಿಗೆ ತಾನು 
ಬೊಗಸೆಯೊಡ್ಡಿ ಬೇಡಿ ಕಾದಿಹನು 

ನನ್ನ ತಾಕುವ ಜನ, ನನ್ನವರಲ್ಲ 
ನನ್ನಂತರಂಗವ ಬಲ್ಲವರಲ್ಲ 
ನಾನಿಲ್ಲಿ ಪ್ರದರ್ಶನದ ವಸ್ತು ಮಾತ್ರ 
ನನ್ನ ಹೆಸರಲ್ಲಿ ಅಗೋ ಧರ್ಮ ಚತ್ರ 

ಹೊರಟ ನೋಡೆ ಅಕ್ಕ, ತಡೆ ಅವನ ಚೂರು 
ಹೇಳಲು ಉಳಿದ ಮಾತುಗಳಿವೆ ನೂರು 
ದೇವರಾಗುವ ಮುನ್ನ ನಾ ಅವನ ದಾಸಿ 
ಈಗಲೂ ಅವನಲ್ಲೇ ಮನಸಿಟ್ಟ ಪ್ರೇಯಸಿ 

ಯಾಕೆ ಅಕ್ಕ ನಿನಗೆ ಕಣ್ಣಲ್ಲಿ ನೀರು?
ನಿನ್ನ ಮನಸಲ್ಲಿನ್ನೂ ಉಳಿದವನು ಯಾರು 
ನನ್ನವನೇ? ಹಾಗಿದ್ದರೆ ನಾ ನಿನ್ನ ಸವತಿ?
ನಿನ್ನ ಕಥೆ ಹೇಳೆ, ಕೇಳೋಣ ಪೂರ್ತಿ 

//ಮೌನ ಮುರಿದ ಮರುಗಳಿಗೆ//

ತಂಗಿ ಕೇಳೆ, ನಿನ್ನವನೇ ನನ್ನವ...... 

                                  -- ರತ್ನಸುತ 

Tuesday 10 December 2013

ನಾ ನಿಜಕ್ಕೂ ಬದಲಾದವ?!!

ಮೌನ ನಿನಗೆ ಒಪ್ಪುತ್ತದೆ
ಅದರ ಆಚರಣೆಯ ಭರದಲ್ಲಿ
ಮಾತುಗಳ ಕಟ್ಟಿ 
ಮೂಲೆಗುಂಪು ಮಾಡಿದ ನಿನ್ನ 
ಮಾತನಾಡಿಸಿದಷ್ಟೂ ಸಿದ್ಧಿಸದ-
ಉತ್ತರ, ಸಮ್ಮತಿಯೋ?
ನನ್ನ ಕಣ್ತಪ್ಪಿಸಲು ನೆಪವೋ?
ಅಥವ ಘೋರ ಜಪವೋ?
 
ಹೆಜ್ಜೆ ಗುರುತ ಬಿಟ್ಟು ಹೋದೆ 
ಒಗಟಿಗೆ ತಿರುವು ಕೊಟ್ಟು 
ಹಿಂಬಾಲಿಸಲೆಂದೇ?
ಸಂಬಾಳಿಸಲೆಂದೇ?
ನಾನಂತೂ ಎರಡೂ ಮಾಡದೆ 
ಮಗ್ನನಾಗಿ ಕಾಯುತ್ತ ಕುಳಿತೆ 
ಆ ಗುರುತುಗಳನ್ನೇ ಹೊಣೆ ಮಾಡಿ 
ನಿನ್ನ ಸೇರದ ಸೋಲಿಗೆ 
 
ಅದೆಷ್ಟೋ ಬಾರಿ ನೀ 
ಮೌನದಲ್ಲೇ ಕಪಾಳಕೆ ಬಾರಿಸಿದ್ದೆ!!
ಅದು ನನಗೆ ಸಿಹಿ ಮುತ್ತಾಗಿತ್ತು 
ತೇಲಾಡಿಸುವಷ್ಟು ಮತ್ತಾಗಿತ್ತು 
ಹಸಿದ ಮನಸಿಗೆ, ಕಾದ ಕನಸಿಗೆ 
ಹೊಟ್ಟೆ ತುಂಬಿಸುವ ತುತ್ತಾಗಿತ್ತು 
ನಿರ್ಗತಿಕನ ಪಾಲಿಗೆ 
ಕೂಡಿಟ್ಟ ಸ್ವತ್ತಾಗಿತ್ತು 

ನೀ ಜಗ್ಗಿದ ತುಟಿಗೆ 
ನಾ ತುಂಡಾಗುವ ಭೀತಿಯಲ್ಲಿ 
ಕಣ್ಣು ಮುಚ್ಚಿದ ನೆನಪು 
ಪ್ರಸ್ತುತದಲ್ಲೂ ಕಣ್ಮುಂದಿದ್ದಂತಿದೆ 
ನೀ ಹೆಸರ ಮರೆತಾಗ 
ನಾ ನಕ್ಕು ತೊದಲಿದ್ದು 
ನೀ ಗೊತ್ತಿದ್ದೂ ಮರೆತಂತೆ ನಟಿಸಿದ್ದು 
ನನಗೂ ಗೊತ್ತಿತ್ತು, ನಾನೂ ನಟನೇ?!!

ಕಣ್ಣಂಚಿನ ಹನಿಯ 
ಕಿರುಬೇರಳಿಂದ ಮೀಟಿ 
ಅಂಗಿಗೆ ಒರೆಸುವಾಗ
ಸಿಕ್ಕಿ ಬಿದ್ದ ನನಗೆ 
ಅದು ನಿನ್ನ ಬೀಳ್ಗೊಡುಗೆಗೆ  
ಗುರುತೆಂದು ಹೇಳುವ ತಾಕತ್ತು 
ಇರಲಿಲ್ಲವೆಂಬ ವಿಷಯ 
ನಿನಗೂ ತಿಳಿದಿತ್ತು?

ಇದ್ದಷ್ಟೂ ದಿನ ನೀ ಮೌನಿ
ನೆನಪಲ್ಲಿ ನಿನ್ನ ಮಾತಿಗೆ ತಲೆ ಬಾಗಿ 
ಮೌನಕ್ಕೆ ವಾಲೀರುವೆ,
ಅನುಚಿತವೆನಿಸಿದರೂ ನಿಜವಾಗಿ 
ನಾನು ನಾನೆಂಬ ಸತ್ಯ 
ನಿನಗೂ ಸುಳ್ಳನಿಸಬಹುದು 
ಒಮ್ಮೆ ಧಾವಿಸು, ಕಣ್ಹಾಯಿಸು 
ನಿನಗೆ ಯೋಗ್ಯನಾಗಬಹುದು, ನಾ ಈಗಲಾದರೂ..............?!!
 
                                                -- ರತ್ನಸುತ 

Monday 9 December 2013

ಆ ಮೂವರ ನಡುವೆ !!!

ಒಂದು, ಎರಡು, ಮೂರು 
ಮರಳಿ ಒಂದರಿಂದ ಶುರು 
ನಾಲ್ಕೈದಾರರ ಸರದಿ?
ಇನ್ನು ಮಿಕ್ಕವುಗಳ ವರದಿ?
ಇದ್ದೂ ಇರದಂತಿದ್ದವು 
ಇದ್ದೇನು ಲೆಕ್ಕ!!
ಲೆಕ್ಕದಲಿ ಪಾಲ್ಗೊಳ್ಳದ ಅಂಕಿ
ಫಲಿತಾಂಶದಲಿ ಇಣುಕೋ ಮೂಖ ಪ್ರೇಕ್ಷಕ
 
ನಾಲ್ಕು ಸದಾ ನೆರಳಾಗಿತ್ತು 
ಮೂರರ ಪಾಲಿಗೆ 
ಮೀರುವ ತವಕವಿದ್ದರೂ, ಅದಕೆ- 
ಸಿಕ್ಕ ಪಟ್ಟವೇ ಬೇತಾಳ 
ಅದರ ಹಿಂದಿನವುಗಳ ಅಬ್ಬರ, 
ಅಬ್ಬಬ್ಬಾ ಒಬ್ಬಿಬ್ಬರಾ?!!
ಎಷ್ಟೇ ಆಗಲಿ, ಲೋಕದ ಕಣ್ಣಿಗೆ 
ಉತ್ತಮರು ಆ ಮೂವರೇ!!
 
ಒಂದಕ್ಕೆ ಒಮ್ಮೆ ಕನಸು ಬಿತ್ತು 
ಎರಡರೆದುರು ಸೋತಂತೆ 
ಎರಡಕ್ಕೂ ಅದೇ ಥರದ ಕನಸು 
ಮೂರರೆದುರು ಸೋತಂತೆ 
ಮೂರಿಗೆ ಇಬ್ಬರನ್ನೂ ಗೆದ್ದಂತೆ 
ಬೊಗಸೆ ಮೀರುವಷ್ಟು ಕನಸು 
ಇನ್ನುಳಿದವುಗಳ ಕನಸು?
"ಬಿಡಿ, ಯಾತಕ್ಕೆ ಕಾಲಹರಣ!!"
 
ಕೊನೆಗುಳಿದ ಅಂಕಿಗೆ ತನ್ನ-
ಯಾರೂ ಮೀರಿಸಲಾರರೆಂಬ ಪೊಗರು 
ಆ ಪೊಗರನ್ನು ಮೀರಿಸುವ ಸಲುವೇ 
ಕೊನೆಗೊಂದು ಸೊನ್ನೆ 
ಮತ್ತಷ್ಟು ಪೈಪೋಟಿ, ಮತ್ತಷ್ಟು ಓಟ 
ಮೊದಲಿದ್ದ ಸೊನ್ನೆಗೆ ಬೆಲೆ ಕಡಿಮೆ 
ಕೊನೆ-ಕೊನೆಗೇ ಹೆಚ್ಚು ಮಹಿಮೆ 
ಇದೇ ಭಾರತೀಯರ ಹಿರಿಮೆ!!
 
ಅನಂತಾನಂತ ಲೆಕ್ಕಾಚಾರದಲ್ಲಿ 
ಪ್ರಚಾರಕ್ಕೆ ಸಿಕ್ಕವು ಅನೇಕ 
ವಿಚಾರಕ್ಕೆ ಸಿಕ್ಕವು ಅನೇಕ 
ಆದರೂ ಆ ಮೂವರೇ ಪ್ರತ್ಯೇಕ 
ಮೊದಲೆಲ್ಲಿಂದಲೇ ಆಗಿರಲಿ,
ಎಲ್ಲೇ ಕೊನೆಗೊಂಡಿರಲಿ 
ಚಿನ್ನ, ಬೆಳ್ಳಿ, ಕಂಚಿನ ಬಿಲ್ಲೆ
ಕುಗ್ಗಿದ ಆ ಮೂವರ ಕೊರಳಿಗೇ!!

ನಾನೆಂಬವ ನಾಲ್ಕನೆಯದರಲ್ಲಿ 
ಒಂದು ಸಣ್ಣ ಚುಕ್ಕಿ ಭಾಗ 
ಅವಗೆ ಮೂರರಲ್ಲಿ ಒಂದನ್ನು
ದಕ್ಕಿಸಿಕೊಳ್ಳುವ ಹುಂಬ ರೋಗ
ಇದ್ದಲ್ಲೇ ಉಳಿದು ತಟ್ಟುವ ಚಪ್ಪಾಳೆ 
ಗಿಟ್ಟಿಸಿಕೊಳ್ಳುವಲ್ಲಿ ಸೋತಿದ್ದರೂ 
ಸೋತವರಲ್ಲಿ ಉತ್ತಮನೆಂಬ 
ತೃಪ್ತಿಗೂ ಇದೆ ಅವನಲ್ಲಿ ಜಾಗ!!
 
                           -- ರತ್ನಸುತ 

Wednesday 4 December 2013

"ಮುಖ್ಯಾಂಶಗಳು - ನರರು ನಾಡಿನಿಂದ ಕಾಡಿನೆಡೆಗೆ"

ಬಂದವೋ ಹಿಂಡು ಹಿಂಡಾಗಿ 
ಉದ್ದ, ಗಿಡ್ಡ ಬಾಲವುಳ್ಳವು 
ಕೆಂಪು, ಕಪ್ಪು ಮೂತಿಯುಳ್ಳವು  
ಪಿಳ್ಳೆಗಳ ಅಪ್ಪಿ ಹೊತ್ತುಕೊಂಡವು 
ಕರೆಂಟು ತಂತಿ ಮೇಲಿಂದ 
ಮನೆ ಮಾಳಿಗೆ ಮೇಲೆ ಹಾರಿ 
ತೆಂಗಿನ ಮರದಲ್ಲಿ ತಂಗಿ 
ಜೋಳದ ಹೊಲಗಳಿಗೆ ತೂರಿ 
 
ಊರಾಚೆ ಕೆರೆಯಲಿ ಈಜಿ 
ದಂಡೆ ಮೇಲೆ ಮೈ ಒದರಿ 
ವಾನರ ಸೇನೆಯ ದಾಳಿ 
ಈ ಕೇರಿ, ಆ ಬೀದಿಗಳಲಿ 
ಪಟಾಕಿ ಸಿಡುಕಿಗಿನ್ನೆಷ್ಟು ದಿನ 
ಬೆಚ್ಚಿ ಬೀಳಿಸುವ ಸಂಚು?
ಅವುಗಳಿಗೂ ಅನುಭವವುಂಟು 
ಬಲಾಬಲ ಈಗ ಮ್ಯಾಚು 
 
ದಿನಸಿ ಅಂಗಡಿ ಡಬ್ಬಿಯೊಳಗೆ 
ಒಣ ದ್ರಾಕ್ಷಿ ಮಂಗ ಮಾಯ
ಪುಟ್ಟ ಕಂದನು ಕೈಲಿ ಹಿಡಿದ 
ಲಾಲಿಪಪ್ಪಿಗೆ ಪರಚು ಗಾಯ  
ಮನೆ ಆಚೆ ಒಣಗಿಸಿಟ್ಟ 
ಸಂಡಿಗೆ ಸೀರೆ ಸಹಿತ ಲೂಟಿ 
ಕಲ್ಲು ಹೊಡೆದರೆ ಬೆನ್ನು ಹತ್ತುವ 
ಒಂದೊಂದೂ ಭಾರಿ ಘಾಟಿ 
 
ತಾಳಲಾರದೆ ಇವುಗಳ ಕಾಟ 
ಊರು ಬಿಟ್ಟವರೆಷ್ಟು ಮಂದಿ 
ಉಳಿದವರು ಮನೆಗಳಿಗೆ ಗ್ರಿಲ್ಲು 
ಹಾಕಿಕೊಂಡು ತಾವೇ ಬಂದಿ 
ಅಧಿಕಾರಿಗಳು ಬಂದು ಹೋದರು 
ತಾವೂ ವೀಕ್ಷಿಸಿ ಮಂಗನಾಟ 
ಭಯದ ಬದುಕಿಗೆ ಮುಕ್ತಿಯಿಲ್ಲದೆ 
ಕಾಣು ಜನರ ದೊಂಬರಾಟ 
 
ಕಾಡ ಕಡಿದರು ನಾಡ ಬೆಳೆಸಿ 
ಹಸಿರ ಮೇಲೆ ಕಾಂಕ್ರೀಟ್ ಸುರಿದು 
ಎತ್ತರದ ಕಟ್ಟಡಗಳೆದ್ದವು  
ಅಭಿವೃದ್ಧಿಯ ಹೆಸರ ಪಡೆದು 
ಬಂಡ ಮೃಗಗಳು ಕೆರಳಿದವು 
ಬಂಡಾಯ ಗುಣವ ಮೈಗೂಡಿಸಿ 
ಮುತ್ತಿಗೆ ಹಾಕಿದವು ಮೆಲ್ಲಗೆ 
ತಮ್ಮ ಮನೆ-ಮನಗಳನು ಅರಸಿ 
 
ಬುದ್ಧಿ ಜೀವಿಯ ಪೆದ್ದತನದಲಿ 
ಭೂ ಮಾತೆಯ ಅತಿಕ್ರಮಣ 
ನೆನ್ನೆಗುಳಿದವು ಇಂದಿಗಿಲ್ಲ 
ಇಂದಿಗಿದ್ದವು ನಾಳೆ ಮರಣ 
"ಮುಖ್ಯಾಂಶಗಳು - 
ನರರು ನಾಡಿನಿಂದ ಕಾಡಿನೆಡೆಗೆ"
ಕಾಡು ಪ್ರಾಣಿಗಳ ಸುದ್ದಿ ವಾಹಿನಿ
ದಿನವೂ ಸಾರುವುದು ಇದೇ ಸುದ್ದಿಯನ್ನ .... 

                                 -- ರತ್ನಸುತ 

Tuesday 3 December 2013

ಹೀಗೊಂದು ದೊಡ್ಡ ಸಮಸ್ಯೆ !!

ಒಂದೇ ಒಂದು ಬಿಳಿಗೂದಲಿಗೆ 
ನಿದ್ದೆಗೆಡಿಸುವ ಶಕ್ತಿ 
ಅಬ್ಬಬ್ಬಾ ಇದೆಂಥ ಸೋಜಿಗ!!

ಒಂದು ಎರಡಾಗಿ, ಎರಡು ಹತ್ತಾಗಿ 
ಹತ್ತು ಸಾವಿರಾರುಗೊಂಡಾಗ 
ನಿದ್ದೆಯೇಲ್ಲಿ, ಪ್ರಾಣವೇ ಹೋದಂತೇ 

ಯೌವ್ವನಾವಸ್ಥೆಯಲ್ಲಿ ಇದ್ದವು ಸಾಲದೆ 
ಇದೊಂದು ವಕ್ರ ದೆಸೆ 
ಚಿಂತೆ ಮೂಟೆಯೊಳಗೆ ಮತ್ತೊಂದು ಕಂತೆ 

ಬಂದ ಸಂಭಂದಗಳೆಲ್ಲ ಹಾಗೇ ಹಿಂದಿರುಗಲು 
"ಹುಡುಗನಿಗೆ ವಯಸ್ಸು ಹೆಚ್ಚಾಗಿದೆ"ಯೆಂದು 
ಮೂವತ್ತರೊಳಗಿನ ಮೈಗೆ ಎಪ್ಪತ್ತರ ಭಾಸ 

ಪುರೋಹಿತ ಕೇಳುತ್ತಾನೆ ಅರ್ಚನೆ ಮಾಡುವಾಗ 
"ಮಕ್ಕಳ ಹೆಸರು ಸ್ವಾಮಿ?"
ಅಯ್ಯೋ, ನಾನಿನ್ನೂ ಬ್ರಹ್ಮಚಾರಿ ಸ್ವಾಮಿ!!

ನನಗಿಂತಲೂ ಐದೋ, ಹತ್ತೋ ವರ್ಷ ಸಣ್ಣವರು 
ಅಂಕಲ್ ಅಂದರೆ ಅಡ್ಡಿಯಿಲ್ಲ
"ತಾತ" ಅಂದುಬಿಟ್ಟರೆ? ಅಲ್ಲಿಗೆ ನಾ ಗೋತ!!

ಬಿಳಿಗೂದಲ ಕಪ್ಪು ಮಾಡಿದರೆ?
ಉದುರುವುದೇನೋ? ಬೋಳಾಗುವೆನೇನೋ?
ಯಾರೂ ಕೊಡುತ್ತಿಲ್ಲ ಸಮಾದಾನಕರ ಸೂಚನೆ, ಅದೇ ಯೋಚನೆ!!

ಒಂದು ದಿನ ಇಡೀ ತಲೆ ಹಿಮಗಟ್ಟಿದ ಶಿಖರವಾಗಿ 
ಅಲ್ಲಲ್ಲಿ ಕರಿ ಬಂಡೆಯ ರೇಖೆಯ ಇಣುಕು 
ಅಯ್ಯೋ ಇನ್ನೇಕೆ ಬದುಕಿರಬೇಕು!!

ಕಣ್ಣು ಬಿಟ್ಟರೆ ಗೊತ್ತಾಯಿತು, ಅದು ಕನಸು 
ನಿಲುವುಗನ್ನಡಿಯಲ್ಲಿ ನಡುಗುತ್ತಲೇ ಬಿಂಬಿಸಿಕೊಂಡೆ 
ಆ ಒಂದು ಬಿಳಿಗೂದಲು ಗಹಗಹಿಸಿ ನಗುತ್ತಿತ್ತು..... 

                                                   -- ರತ್ನಸುತ 

ಜೂಲಿ, ಮತ್ತವಳ ಜೋಡಿ !!

ನಿನಗೆಲ್ಲೋ ಲಜ್ಜೆ?
ತೂಕಡಿಕೆ ತಿಮ್ಮ!
ಮಂಪರಲೇ ಮೈ ಮರೆತು 
ದಿನಗಳೆದೆಯಲ್ಲ!
ಈಗ ಕಣ್ಣುಜ್ಜಿ ಏನು ಬಂತು?
ನಿನ್ನ ನಂಬಿ ಹೋದೆ ಸೋತು.  
ಕೊಂದು ಬಿಟ್ಟೆ ವಿಶ್ವಾಸವ 
ಪರಮ ದ್ರೋಹಿ !!
 
ಎಲ್ಲೋ ಬೀದಿಯಲಿ ಸಿಕ್ಕೆ 
ಅನಾಥನಾಗಿ 
ಯಾರೂ ಮೂಸಿ ನೋಡಿದವರಲ್ಲ 
ನಿನ್ನ 
ಒಲ್ಲದ ಮನಸಿಂದ ಎತ್ತಿ 
ವಿರೋಧಗಳ ನಡುವೆ 
ಮನೆಗೆ ತಂದುಕೊಂಡೆ 
ಇನ್ನು ನೀನು, ಛೇ!!
 
ಕುದಿಸಿದ ಘಟ್ಟಿ ಹಾಲೇ 
ಎರೆದದ್ದು ನಿನಗೆ 
ತಿಂಡಿ ಡಬ್ಬಿಯ ಬಿಸ್ಕತ್ತು, ಬ್ರೆಡ್ಡು
ಮೂಳೆ, ಮಾಂಸ ವಾರಕ್ಕೊಮ್ಮೆ 
ನಿನಗಾಗಿ ಕಟ್ಟಿದೆ 
ಒಂದು ಪುಟ್ಟ ಗೂಡು 
ಕಟ್ಟುವ ಬರದಲ್ಲಿ 
ಹೊಸ ಜೀನ್ಸು ಹರಿದುಕೊಂಡೆ 
 
ನನ್ನ ಅವಸರವನ್ನೂ ಲೆಕ್ಕಿಸದೆ 
ನಿನ್ನ ಅವಸರಕ್ಕೆ ಧಾವಿಸಿದೆ 
ಬೀದಿ-ಬೀದಿ ಸುತ್ತಿ 
ನಿನ್ನ ಹಿಂದೆ ಅಲೆದೆ 
ನಿಂತಲ್ಲಿ ನಿಂತೆ 
ಹೋದಲ್ಲಿ ಎಚ್ಚರ ವಹಿಸಿದೆ
ಯಾರೂ ನೋಡದಂತೆ 
ನಿನ್ನ ಮಾನ ಕಾದೆ 
 
ಆ ಮೂರನೇ ಬೀದಿಯಲ್ಲೇ 
ನಾಲ್ಕಾರು ಬಾರಿ ಸುತ್ತಿಸಿ 
ನಿನ್ನ ಕಣ್ತಂಪು ಮಾಡಿಕೊಂಡೆ 
ಜೂಲಿಯ ಕೆಕ್ಕರಿಸಿ 
ತಡೆದೆನೇ? ಪ್ರಶ್ನಿಸಿದೆನೇ?
ನಿನ್ನ ಪಾಡಿಗೆ ಬಿಟ್ಟೆನಲ್ಲ?
ಬೆಂದ ಬೇಳೆಯ 
ಮತ್ತಷ್ಟು ಬೇಯಿಸಿಕೊಳ್ಳಲಿಕ್ಕೆ 

ಇನ್ನು ನನ್ನದೊಂದು ಕೋರಿಕೆ 
ಅಸಾಧ್ಯವೇನಾಗಿರಲಿಲ್ಲ, 
ಸಂದೇಶದೊಟ್ಟಿಗೆ ಹೂ-
-ಬುಟ್ಟಿಯ ನನ್ನವಳಿಗೆ ತಲುಪಿಸ ಬೇಕಿತ್ತು 
ಆದರೆ ನೀನು, 
ನಡುದಾರಿಯಲ್ಲಿ ಜೂಲಿ ಕಂಡಳೆಂದು 
ಎಲ್ಲ ಮರೆತೆಯಲ್ಲ?
ಈಗ ಕೆಲಸ ಕೆಟ್ಟಿತಲ್ಲ!!

ಜೂಲಿಯ ಒಡತಿ ನನ್ನವಳು 
ನಿನ್ನಂತೆ ನಾನೂ ಅಂದುಕೊಳ್ಳುವಳು 
ಮುಖ ತೋರಿಸಲಿ ಹೇಗೆ?
ಮಾತನಾಡಿಸಲಿ ಹೇಗೆ?
ಎಲ್ಲವೂ ಎಡವಟ್ಟಾಯಿತು
ನಿನ್ನಿಂದ 
ಮೆಚ್ಚುಗೆ ಗಳಿಸಬೇಕು ಈಗ 
ಮೊದಲಿಂದ ...... :((

                         -- ರತ್ನಸುತ 

Monday 2 December 2013

ಯಥಾಪ್ರಕಾರ !!

ಮರುಭೂಮಿಯ ಮರಳಿಗೆ ನೆಲೆಯೆಲ್ಲಿ?
ಬೀಸುವ ಗಾಳಿಯ ದಿಕ್ಕಿಗೆ ಮೈಯ್ಯೊಡ್ಡಿ 
ಇದ್ದಷ್ಟೂ ಸಾಲದೇ, ಇನ್ನೂ ಮರುಳಾಗಿ 
ಉರುಳುರುಳಿ ತಲುಪುವ ತೀರ, ಯಥಾಪ್ರಕಾರ
 
ಬಯಲೊಳು ಹಿಡಿದ ದೀಪದ ಬೆಳಕು, ಬಳುಕು 
ನನ್ನ ಪದಗಳ ಹುಟ್ಟು, ಸಾವಿನ ಗುಟ್ಟು 
ಹೊತ್ತಿಕೊಳ್ಳುವುದೇ ಅಪರೂಪ, ಇನ್ನು ಹೊಂದಿಸಿ,
ಕಾಯಿಸಿ ಬಿಟ್ಟರೆ; ಬತ್ತಿ ಊದುವುದು ಬಂಗಿ 
 
ತರಂಗದೊಳಗೆ ಇಣುಕಿದಾಗ ಗೋಚರಿಸುವ-
-ನಾನು, ಅದೇ ನನ್ನ ಭಾವ 
ಎಲ್ಲವೂ ಸ್ಪಷ್ಟವಾಗದೊಡಗಿದರೆ ನಾನು ನಾನೇ 
ಆಗ, ಉಳಿದದ್ದೂ ಮರೆಯಾಗುವುದದರ ಸ್ವಭಾವ 
 
ಕಟ್ಟಿ ಹಾಕಿ, ಪೆಟ್ಟು ಕೊಟ್ಟು, ಬಂಡಾಯವಗಿ 
ನೆತ್ತರಿನಲ್ಲಿ ಬರೆದೆ, ಚೂರೂ ಕನಿಕರವಿಲ್ಲದೆ 
ಮುಗಿದ ಶಾಯಿಗೆ ಕಣ್ಣೀರೇ ಆಸರೆ 
ಹಾಳೆಗೂ ಅರ್ಥವಾಗದ ಸಾಲು, ನನಗೂ ಸಹಿತ 
 
ಪ್ರೇಮಕೆ, ಮೋಹಕೆ, ದುಃಖಕೆ ಒಂದೆರಡು ಸಾಲು 
ಹಿಂದೆ ಕುರಿ ಮಂದೆ ಸಾಲು 
ಎಲ್ಲವೂ ಬಡಕಲು ಭಿಕ್ಷುಕ ಪಶುಗಳು 
"ಭವತಿ ಭಿಕ್ಷಾಂದೇಹಿ", ಓದುಗರೆದುರು  

ಅನುಕರಿಸಿ, ಅನುಸರಿಸಿ ಅನವರತ  
ಅನುಭವಿಸುವುದನ್ನೇ ಮರೆತಿರುವೆ, ಗಮನಿಸಿಲ್ಲೀ-
-ತನಕ, ಹಿಂದಿನ ಸಾಲು ಮುಗಿವನಕ 
ಇನ್ನೂ ಗಮನಿಸದೆ ಹೋದ ಅಜ್ಞಾತ ನಾನು
 
ಮುದಿ ಎಲೆಗಳ ಮತ್ತೆ-ಮತ್ತೆ ಜೋಡಿಸಿ 
ಮೆತ್ತಿಕೊಂಡೆ ಬೋಳು ಮರದ ರೆಂಬೆಗೆ 
ಉದುರುವುದನ್ನೂ ಸಂಭ್ರಮಿಸಿ, 
ಮತ್ತೆ ಮೆತ್ತುವುದನ್ನೂ.
ಇದರ ನಡುವೆ ಒಂದು ಕವನ. ಯಥಾಪ್ರಕಾರ

                                           --ರತ್ನಸುತ  

ಮನೆಗೊಂದು ಬಾಗಿಲು, ಅಜ್ಜಿಯೂ ಇರಬೇಕು !!

ಯಾವ ಪ್ರಶ್ನೆಗೂ ಸಿಗದ ಉತ್ತರ 
ಸಿಕ್ಕರೂ ಅದು ಅಸಮಂಜಸ 
ವಿನಾಕಾರಣ ನಗು, ಕಣ್ಣೀರು 
ತನ್ನಿಷ್ಟದ ಮಾತು, ರಾಗ, ತಾಳ 

ತಲೆ ತುಂಬ ಬೆಳ್ಳಿ ಕುರುಳು 
ಎಲ್ಲೋ ಒಂದೆರಡು ಉಳಿದ ಹಲ್ಲು 
ಸುಣ್ಣಗಾಯಿ ತೀಡಿ-ತೀಡಿ ಬಿಳಿ ತೋರ್ಬೆರಳು 
ದಿನವಿಡೀ ಕುಟ್ಟಾಣಿ ಕುಟ್ಟುವಳು 

ಸೊಂಟಕ್ಕೆ ಸಿಕ್ಕಿಸಿದ ತಾಂಬೂಲ ಚೀಲ 
ಎಲೆ, ಅಡಿಕೆ, ಕಡ್ಡಿಪುಡಿ, ಹೊಗೆ ಸೊಪ್ಪು 
ಚಲಾವಣೆಯಲ್ಲಿಲ್ಲದ ಒಂದು ಪೈಸೆಯಿಂದ್ಹಿಡಿದು 
ನಾಲ್ಕಾಣಿಯ ಹಿಡಿ ಚಿಲ್ಲರೆ 

ತಾತ ಕೊಡಿಸಿದ ಜೋಡಿ ಮೂಗುತ್ತಿ 
ಬಿಳಿ ಕಲ್ಲ ಓಲೆ, ಚಿನ್ನದ ಸರ 
ಕಿತ್ತುಕೊಂಡ ಕುಂಕುಮ, ಹೂವು 
ಮಿಂಚು, ಸಿಂಗಾರ 

ಆದ ವಯಸ್ಸಿಗೆ ಪ್ರತಿಬಾಗಿದ ಬೆನ್ನು 
ಅರುಳು-ಮರುಳು ನೂರರ ಅಂಚು 
ಮಿತಿ ಓಡಾಟ, ಆಹಾರ, ಕಾಫಿ-ಟೀ 
ಸೆಂಚುರಿ ಹೊಡೆವಳು ಗ್ಯಾರಂಟೀ 

ಸಾಯುವಳೆಂದು ಅಪ್ಪನ ಮದುವೆ 
ಮಾಡಿಸಿ ಸತ್ತನು ಆಗಲೇ ತಾತ 
ಸಾವಿನ ಕದವ ತಟ್ಟಿ ಬಂದು 
ತಾತನ ಪಟಕೆ ಮುಗಿದಿಹಳೀಕೆ 

ಮಗುವೊಂದಿರುವ ಹಾಗೆ ಮನೆಯೊಳಗೆ 
ಅವಲಂಬಿತ ಪ್ರತಿಯೊಂದಕ್ಕೂ 
ದೂರ ನೆಂಟರ ಗುರುತು ಹಿಡಿಯಲು 
ನಂಟು ಬೆಸೆಯಲು ಇವಳಿರಬೇಕು 

ನಮ್ಮ ನಾಳೆಯ ದರ್ಶನ ಇಂದೇ 
ಮಾಡಿಸುತಿರುವಳು ಉಚಿತದಲಿ 
ಕೊನೆ ಘಟ್ಟವ ತಲುಪಿಹಳು
ಬದುಕಿನ ಸಿಹಿ-ಕಹಿಗಳ ರುಚಿಸುತಲಿ .... 

                                    --ರತ್ನಸುತ 

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...