Friday 12 June 2015

ಇಷ್ಟರಲ್ಲೇ

ಭಯವೆಂದು ಭುಜಕಾನಿ
ನಡುಗುತ್ತ ಮುತ್ತಿಟ್ಟು
ಪಡೆದದ್ದು ನೂರೆಂಟು
ಲೆಕ್ಕವೇ ಬೋರು
ಖುಷಿಯಲ್ಲಿ ಮಿಂದೆದ್ದು
ನೋವಲ್ಲಿ ಮೈ ಒದರಿ
ಸಹಜ ಸ್ಥಿತಿಯಲ್ಲೊಂದು
ಶಾಂತ ಕಣ್ಣೀರು

ಅವರ ಮಾತಿಗೆ ಎಳೆದು
ಇವರ ಬಿಟ್ಟುಕೊಟ್ಟು
ನಾವು ನಾವಾಗಿರದೆ
ನಮ್ಮನ್ನೇ ಕೆದಕಿ
ಎಲ್ಲೋ ಮರೆತ ಹಾಗೆ
ಹೆಜ್ಜೆಯಿಟ್ಟು ಕೊನೆಗೆ
ಜಂಟಿ ಸೋಲೊಪ್ಪಿದೆವು
ಕಣ್ಮುಚ್ಚಿ ಹುಡುಕಿ

ದೇವರೆದುರೇ ಬಾಗಿ
ಬೈಗುಳದ ಮಳೆಗರೆದು
ನೆತ್ತಿಗಿಟ್ಟ ಬೊಟ್ಟು
ಕರಗುತಿದೆ ಚೂರು
ಹಳ್ಳ-ಕೊಳ್ಳದ ಹಾದಿ
ಅಲ್ಲೊಂದು ಮುದಿ ಸೂರ್ಯ
ಮಂದ ಬೆಳಕಿನ ನಡುವೆ
ನಾವೆಳೆದ ತೇರು

ನಿದ್ದೆಯಿಲ್ಲದ ಇರುಳ
ಕನಸ ಕಾವಲಿನವರು
ಈಗೀಗ ಬೇಡಿಹರು
ಕೂಲಿ ಪಗಾರ
ಹಂಚಿಕೊಂಡದ್ದೆಷ್ಟೋ
ಬಚ್ಚಿಯಿಟ್ಟದ್ದೆಷ್ಟೋ
ನೂಕು ನುಗ್ಗಲಿನಲ್ಲಿ
ಎಷ್ಟೋ ವಿಚಾರ

ಮೊಗಸಾಲೆ ಚಿತ್ರಕ್ಕೆ
ಹಿತ್ತಲಿನ ಹೂಘಮಲು
ಅಂತಃಪುರದ ಬಾಗಿಲು
ಚೂರು ಸಡಿಲು
ಉಪ್ಪರಿಗೆಯ ಮೇಲೆ
ಒಣಗಿಸಿಟ್ಟ ಖಾರ
ಪಲ್ಲಂಗದ ಮೇಲೆ
ನಿತ್ಯ ಹೂ ಮುಗಿಲು
              -- ರತ್ನಸುತ

ಒಪ್ಪಿಸಿಕೊಂಡಾದಮೇಲೆ

ನಿನ್ನ ಬಿಟ್ಟು ಬದುಕಬಲ್ಲ
ಶಕ್ತಿ ನೀನೇ ಒದಗಿಸು
ಸಾವಿನಂಚಿನಲ್ಲಿ ಚೂರು
ನಕ್ಕು ನನ್ನ ಬದುಕಿಸು

ದಿಕ್ಕು ದಾರಿ ತೋಚದಂಥ
ಊರ ಹಾದಿ ತೋರಿಸು
ಒಂಟಿತನದ ಕಷ್ಟಗಳನು
ಪಕ್ಕ ನಿಂತು ಆಲಿಸು

ಕಣ್ಣು ಕಾಣದಷ್ಟು ಸಿರಿಯ
ಕಣ್ಣ ತುಂಬ ತುಂಬಿಸು
ಎಲ್ಲವನ್ನೂ ಮೀರುವಂತೆ
ನಿನ್ನ ಚಿತ್ರ ಬಿಂಬಿಸು

ಇರುವೆ ಬಿದ್ದ ಹೊಳೆಯಲೊಂದು
ಹಣ್ಣೆಲೆಯ ಉದುರಿಸು
ಉಸಿರುಗಟ್ಟಿ ಸತ್ತ ಹೆಣವ
ದೂರ ದಡಕೆ ಮುಟ್ಟಿಸು

ಬದುಕಿನಾಚೆ ಬದುಕುವುದಕೆ
ಬದುಕಲೆಂತೋ ರೂಪಿಸು
ನನ್ನ ಗುರುತಿನೆಲ್ಲೆ ತುಂಬ
ನಿನ್ನ ಗುರುತ ವ್ಯಾಪಿಸು!!
                              -- ರತ್ನಸುತ

ಮೊದಮೊದಲು

ಮೊದಲ ಮೌನಕೆ ಹೆಸರಿಡಬೇಕು
ಅದು ಯಾವ ಶಬ್ಧವೂ ತಲುಪದಂತೆ
ಮೊದಲ ಸ್ಪರ್ಶವ ಕೂಡಿಡಬೇಕು
ಅದು ಎಷ್ಟು ಸಾಧ್ಯವೋ ಜೊತೆಗಿರುವಂತೆ

ಮೊದಲ ಮಾತನು ಕೂಡಿಸಬೇಕು
ಅದು ಏನೇ ಆಗಲಿ ನೆನಪಿರುವಂತೆ
ಮೊದಲ ಮುತ್ತನು ಕಾಯಿಸಬೇಕು
ಅದು ಎಲ್ಲ ಭಾವವ ಮೀರಿಸುವಂತೆ

ಮೊದಲ ಮುನಿಸನು ಮುಂದೂಡಬೇಕು
ಅದು ಸಿಕ್ಕ ಸಿಕ್ಕಲ್ಲಿ ಎದುರಾಗುವಂತೆ
ಮೊದಲ ಕಂಬನಿ ಹಿಡಿದಿಡಬೇಕು
ಅದು ಹಿಡಿತವ ತಪ್ಪಿ ಕೈಜಾರುವಂತೆ

ಮೊದಲ ಕನಸನು ರೂಪಿಸಬೇಕು
ಅದು ಯಾವ ಕಣ್ಣಿಗೂ ನಿಲುಕದಂತೆ
ಮೊದಲ ಸೊಗಸನು ಮೋಹಿಸಬೇಕು
ಅದು ಎಂಥ ಕ್ಷಾಮಕೂ ಸಿಲುಕದಂತೆ

ಮೊದಲ ತೊದಲುಗಳ ಸೆರೆಹಿಡಿಬೇಕು
ಅದು ಎಲ್ಲ ಪಕ್ವತೆಯ ಗುರುತಿಸುವಂತೆ
ಮೊದಲು ಮೊದಲುಗಳ ಮೊದಲಿಸಬೇಕು
ಅದು ಎಲ್ಲ ಸ್ಥಾವರವ ಕದಲಿಸುವಂತೆ!!
                                       -- ರತ್ನಸುತ

ಜೀವನ ಸಂಜೀವನ

ಸುಮ್ಮನೆ ಯಾರೋ ಹಾಗೆ ಬಂದು
ಬದುಕಿಗೆ ಗಂಟು ಬೀಳುವುದಿಲ್ಲ,
ಕಾರಣಗಳು ಇರದಿದ್ದರೂ
ಹುಟ್ಟಿಕೊಳ್ಳುವ ಸಲುವಾಗಿಯೋ
ಹುಡುಕಿಕೊಳ್ಳುವ ಸಲುವಾಗಿಯೋ
ಒಂದುಗೂಡುವಾಟದಲ್ಲಿ
ಎಲ್ಲರೆದುರು ಒಂದಿಷ್ಟು ನೇಮ
ಏಕಾಂತದಲ್ಲಿ ಎಲ್ಲವೂ ಕ್ಷೇಮ

ಗೂಡಲ್ಲಿ ವಾಸ್ತವ್ಯ ಹೂಡುವ ಜೋಡಿ
ಹೆಕ್ಕಿ ತರುವ ಪ್ರತಿ ನಾರಿನಲ್ಲೂ
ಅವರ ಹೆಸರಿರಿಸಿಕೊಂಡರಷ್ಟೇ
ತಾವುಳಿದಾಗಿನ ಉಲಿಗೆ
ಮರದ ರೆಂಬೆ ತಲೆದೂಗಿ
ಚಿರಂತನವಾಗಿಸಬಹುದಾದ ಸತ್ಯ ಅರಿತಾಗ
ಕ್ಷಣ ಕ್ಷಣವೂ ಪ್ರೇಮಮಯ!!

ಮುನಿಸುಗಳು ಅಲ್ಲಲ್ಲಿ ಎದುರಾಗಿ
ಸಂತೈಸುವಿಕೆಯ ಸುಖವನ್ನೂ ನೀಡಲಿ
ಸಿಟ್ಟಿನ ಮಾತು ಸಿಹಿ ಮುತ್ತಿಗೆ ಸಿಗಲಿ
ಬಾಳ ಹೊತ್ತಿಗೆ ತುಂಬ ನೆನಪಿನ ಅಕ್ಷರಗಳ
ಮಧುರ ಕಾವ್ಯ ಮೂಡುತ್ತಲೇ
ಅನರ್ಥಗಳ ಅರಿವಾಗಿ
ಅಪಾರ್ಥಗಳು ದೂರಾಗಿ
ಅರ್ಥಗರ್ಭಿತ ಸಾಲುಗಳು ಮಾತ್ರ ಮಿನುಗಲಿ,
ಜೀವನ ಸಂಜೀವನವಾಗಲಿ!!

ತೋಚಿದ್ದಿಷ್ಟೇ

ಊರಿದಲ್ಲೇ ಸೂರು ಕಟ್ಟಿ
ಅಲುಗದಂಥ ತೇರನೆಳೆದ
ಒಂಟಿ ಮನದ ತಂಟೆತನಕೆ
ನೂರಯೆಂಟು ಸಂಕಟ;
ಒಮ್ಮೆ ಹೀಗೇ ಬಣ್ಣ ತೋರಿ
ಮತ್ತೆ ಮೊಗವ ಮರೆಸುತಿಹುದು
ಯಾಕೆ, ಏನು ಅರ್ಥವಾಗುತಿಲ್ಲ
ಮನದ ಪಲ್ಲಟ

ಬೀದಿಯಲ್ಲಿ ಸತ್ತು ಬಿದ್ದ
ನಾಯಿ ಮೂಳೆ, ರಕ್ತವಿನ್ನೂ
ಎಷ್ಟು ಜನ್ಮಕಾಗುವಷ್ಟು
ಸಾವ ಸವಿಯಬೇಕಿದೆ?
ಕಿವುಡು ಸೂರ್ಯ ಮುಳುಗುತಿಹನು
ಎಲ್ಲ ಕಂಡೂ ಕಾಣದಂತೆ
ಕತ್ತಲಲ್ಲಿ ಮೋಕ್ಷವೆಂಬುದೇನಾದರೂ
ದೊರೆವುದೇ?!!

ಮೋಡ ಕಿತ್ತು ಮೊಳಕೆಗಿಟ್ಟೆ
ಮಣ್ಣ ಕೆನ್ನೆ ಪಚ್ಚೆಗಟ್ಟಿ
ಬಿಸಿಲ ಕಂಡು ಓರೆ ನೋಟ
ವಕ್ರವಾಗಿ ಬೀರಿದೆ;
ಪ್ರಾಣ ಚಂಚಲಾಯಿತಿಲ್ಲಿ
ಮಸಣದಲ್ಲೇ ಅರ್ಧ ಜನ್ಮ
ಉಸಿರ ಕೊನೆಯಗಾಲಕಿಲ್ಲಿ
ಕಾಲ ಚಕ್ರವಾಗಿದೆ

ಸಣ್ಣ ಗೂಡಲೊಂದು ಬದುಕು
ಭವ್ಯ ಗೋಡೆ ಕುಸಿದು ಬಿದ್ದು
ಅರಮನೆಯ ಉಪ್ಪರಿಗೆ
ನಿರಾಧಾರವಾಯಿತು;
ಮುಂಚೆಯಿಂದ ದೂರವಿದ್ದ
ಧರ್ಮಬುದ್ಧಿಯೊಂದೇ ಕೊನೆಗೆ
ಸನಿಹದಲ್ಲಿ ಇದ್ದು ಅಲ್ಲಿ
ಸಮಾಧಾನ ಮಾಡಿತು

ಮುತ್ತನಿಟ್ಟ ತುಟಿಯ ಸುತ್ತ
ನೆಕ್ಕಿಕೊಂಡರೆಷ್ಟು ಸತ್ವ?!!
ತತ್ವವಿದ್ದರೂ ಅಲ್ಲಿ
ಯಾರು ಗ್ರಹಿಸುವಾತರು;
ಬದುಕ ಕಟ್ಟಿಕೊಳ್ಳುವಾಗ
ಕೆಡವಿಕೊಂಡ ಸತ್ಯವನ್ನ
ಮತ್ತೆ ಮತ್ತೆ ನೆನೆಸಿಕೊಂಡು
ಇಲ್ಲಿ ಎಲ್ಲ ಸತ್ತರು!!
                     -- ರತ್ನಸುತ

ಬೇಕು-ಬೇಡ

ಬರಗೆಟ್ಟ ದನಿಗಿಲ್ಲಿ
ಕಿವಿಗೊಟ್ಟು ಸತ್ತಾಗ
ಮೇಲೆತ್ತಲು ನೀನು ನಗಲೇ ಬೇಡ
ಉಸಿರುಗಟ್ಟಿದ ಎದೆಯ
ಮೇಲೊಂದು ಪದ್ಯವಿದೆ
ದಯಮಾಡಿ ನೀ ಅದನು ಓದಬೇಡ

ಮುನಿಸಲ್ಲಿ ತುಟಿನೇರಕೆ
ನೋಟ ಬೀರುವೆನು
ಕಚ್ಚಿದೇಟಿಗೆ ನನ್ನ ಕೊಲ್ಲಬೇಡ
ಹೇಳಹೆಸರಿಲ್ಲದವನಂತೆ
ನಾ ಸೋತಾಗ
ದುರುಗುಟ್ಟುತ ದೂರ ನಿಲ್ಲಬೇಡ

ಗೋಡೆಗೊರಗಿ ನಿಂತ
ಗಾಢವಾದ ಹೃದಯ
ಎಳೆದ ಗೀಟ ದಾಟಿ ಹೋಗಬೇಡ
ದೂಡುವಾಟದ ನಡುವೆ
ಸೋಲೊಪ್ಪಿಕೊಳ್ಳುವೆ
ಯಾಮಾರಿಯೂ ನನ್ನ ದೂಡಬೇಡ

ಬಿಗಿಸಿಟ್ಟರೂ ಸಹಿತ
ಕದ್ದು ಜಾರಲುಬಹುದು
ಉಟ್ಟ ಸೀರೆಗೆ ಪಾಠ ಹೇಳಬೇಡ
ಕಟ್ಟಿದ ಕುರುಳಲ್ಲಿ
ಬಡಪಾಯಿ ಪ್ರಾಣವಿದೆ
ಹಾರಿಸಿ ಉಸಿರಾಡು ಅನ್ನಬೇಡ

ಬೇಡೆನ್ನುವ ನಾನು
ಎಲ್ಲ ಬೇಡೆನ್ನೆನು
ಬೇಕಾದರೆ ತಡ ಮಾಡಬೇಡ
ಸಾಕಾಗಿದೆ ಇನ್ನು
ಭ್ರಮೆಯಲ್ಲಿ ಜೀವನ
ನಾ ಅರಳುವ ಮೊದಲೇ ಬಾಡಬೇಡ!!
                                     
                             -- ರತ್ನಸುತ

ಅವಳೊಬ್ಬಳೇ ಅಲ್ಲ

ಗೋಡೆಗಾನಿ ನಿಂತ ಅವಳು
ಗೋಡೆಯದ್ದೇ ಬಣ್ಣದವಳು
ಅಲ್ಲಿ ಇಲ್ಲಿ ಚಕ್ಕೆ ಉದುರಿದಂತೆ ಮೊಡವೆ ಕಲೆಗಳು
ಮರದ ನೆರಳು ಗೋಡೆ ಮೇಲೆ
ಬಿರುಕು ಬಿಟ್ಟ ನಾಕು ಮೂಲೆ
ಸುಣ್ಣ ಬಳಿಯಲಾಗಲಿಲ್ಲದಂತೆ ಇಷ್ಟು ದಿನಗಳು

ಅಷ್ಟೋ ಇಷ್ಟೋ ಕಣ್ಣುಗಳಿಗೆ
ಕಪ್ಪು ಮಸಿಯ ಬಳಿದುಕೊಂಡು
ತುಟಿಗೆ ಕೆಂಡದಂಥ ಬಣ್ಣ, ಯಾರು ಕಂಡು ಹಿಡಿದರೋ?
ದೂರದಿಂದ ಕಂಡ ಮಂದಿ
ಚಳುಕು ಹಚ್ಚಿಕೊಂಡು ಬಂದು
ಹತ್ತಿರಕ್ಕೆ ಕಂಡು ಮುನಿದು ಮೈಯ್ಯ ಮುರಿದುಕೊಂಡರು!!

ಪೇಟೆಯೆಲ್ಲ ಸುತ್ತಿ ಅವಳು
ತರುವಳಂತೆ ಪೂಸಿಕೊಳಲು
ಹತ್ತು ಹಲವು ಬಗೆಯ ವಿದೇಶಿ ಕಾಂತಿವರ್ಧಕ
ತನ್ನ ವಯಸಿನವರಿಗೆಲ್ಲ
ಕೈಯ್ಯಲೊಂದು, ಕಂಕ್ಳಲ್ಲೊಂದು
ಯಾರ ಜೊತೆಗೂ ಕೂಡುತಿಲ್ಲ ಪಾಪ ಅವಳ ಜಾತಕ

ಹೊಟ್ಟೆಗಿಲ್ಲದಿದ್ದರೂನು
ಜುಟ್ಟಿಗಿಷ್ಟು ಮೊಲ್ಲೆ ಮುಡಿದು
ಸುತ್ತುತಾಳೆ ಸುಂದ್ರಿಯಂತೆ ಊರ ತುಂಬ ಬಳುಕುತ
ಹೊಟ್ಟೆ ಉರಿಯ ಪಟ್ಟುಕೊಂಡು
ದೃಷ್ಟಿ ತಾಕಬಹುದು ಎಂದು
ಬೊಟ್ಟನಿಕ್ಕಿಕೊಳ್ಳುತಾಳೆ ಕನ್ನಡಿಯ ಹಿಡಿಯುತ

ಯಾರು ಕೂಡ ಇಲ್ಲಿ ವರೆಗೆ
ಕಂಡು ಕೇಳರಿಯಲಿಲ್ಲ
ಗುಪ್ತವಾಗಿ ಅಳುವಳಂತೆ ಊರ ದೇವರೆದುರಲಿ
ಸುತ್ತ ಮುತ್ತ ಹಳ್ಳಿ ಹೈಕ್ಳ
ಎಣಿಸಿ ಬಿಟ್ಟುಕೊಟ್ಟಿದ್ಲಂತೆ
ಅರಸಿ ಬರಲು ಬಾಗಿಲಿಗೆ ತನ್ನ ಉಕ್ಕುವಯಸಲಿ!!

ಮಗಳು ಒಂಟಿಯಾದಳೆಂಬ
ನೋವಿನಲ್ಲೇ ಉಸಿರು ಬಿಟ್ಟ
ಹೆತ್ತವರ ಜಾಗಕೀಗ ಅಜ್ಜಿ ಮಾತ್ರ ಆಸರೆ
ಹಿಂದೆ ಆದುದಕ್ಕೆ ಅವಳು
ತಲೆಯ ಕೆಡಿಸಿಕೊಳ್ಳಲಿಲ್ಲ
ಇನ್ನೂ ಹದಿಹರೆಯದವಳು ಹಲ್ಲು ಬಿಟ್ಟು ನಕ್ಕರೆ

ಬುಡ್ಡಿ ದೀಪದಲ್ಲಿ ಖಾಲಿ
ಎಣ್ಣೆ-ಬತ್ತಿ, ಬೆಂಕಿ-ಬೆಳಕು
ನೆರಳು ಕೂಡ ಅವಳ ದೂರ ಮಾಡಿಕೊಂಡ ಹಾಗಿದೆ
ಸುತ್ತ ಹಳ್ಳಿಗಳಲಿ ಅವಳ
ಹೆಸರಿನೊಡನೆ ಅಂಟಿಕೊಂಡ
ಹೆಸರುಗಳ ಪಟ್ಟಿ ಈಗ ಆಕಾಶ ಮುಟ್ಟಿದೆ!!
                                                       -- ರತ್ನಸುತ

ಸಾವಿಲ್ಲದ ಪ್ರಶ್ನೋತ್ತರ

ಯಾವ ದನಿಯನ್ನು ನಾ ಬೇಡವೆಂದಿದ್ದೆನೋ
ಯಾವ ಹಾಡನ್ನು ನಾ ಕೇಳಬಯಸಿಲ್ಲವೋ
ಯಾವ ನೋವು ನನಗೆ ರುಢಿಯಾಗಿಲ್ಲವೋ
ಯಾವ ಪ್ರಶ್ನೆಗೆ ಉತ್ತರ ಸಿಗದೆ ಉಳಿದೆನೋ
ಎಲ್ಲವೂ ಅಪ್ಪಳಿಸಿ ಎದೆ ಭಾರವೆನಿಸಿರಲು
ಮೂಕ ಮನಸಲಿ ಒಂದು ಸೂತಕದ ಛಾಯೆ!!

ಎಂದೋ ಮರೆತು ಬಿಟ್ಟ ಹಳೆ ಚಪ್ಪಲಿ
ಎಲ್ಲೋ ಮೆಟ್ಟಿ ಮುರಿದ ವಿಷದ ಮುಳ್ಳು
ಯಾವುದೋ ಹೆಸರಿಲ್ಲದ ಹೂವ ಹೊಸಕಿದ್ದು
ಎಂಥದೋ ಕೀಟವನು ಅಟ್ಟಾಡಿಸೊಡೆದದ್ದು
ಎಲ್ಲವೂ ಸೇಡಿನಲಿ ಹಿಂದಿರುಗಿದಂತಿವೆ
ಮುಖವಾಡ ಧರಿಸುತ ಎದುರಲ್ಲಿ ನಿಂತಿವೆ

ಬಂದವುಗಳಲ್ಲಾವು ಕೇಡು ಬಯಸಿದವು?
ಆಗಲೇ ನಿಷ್ಠೆಯಲಿ ಆಗಮಿಸಿದವುಗಳ
ನನ್ನಿಂದ ಬಲು ದೂರ ಕೊಂದಿರಿಸಿತು ಮೌಢ್ಯ;
ಯಾರನ್ನು ನಂಬಲಿ? ಯಾರನ್ನು ದೂರಲಿ?
ಯಾರಲ್ಲೂ ಸುಳುವಿನ ನೆರಳಿಲ್ಲ,
ಆಯ್ಕೆ ಒಂದಾದರೆ ಧಿಕ್ಕಾರ ಸಾವಿರ
ಏನು ಮಾಡುವುದೋ ಯಾರಾನ ಬಲ್ಲಿರಾ?

ಅತ್ತು ಕರೆದವರೆಡೆ ನಗುವಿನ ಸಾವಿದೆ
ನಕ್ಕು ಸತ್ತವರಲ್ಲಿ ಮತ್ತದೇ ಕಂಬನಿ
ಯಾವ ಕಣ್ಣಿಗೆ ನನ್ನ ಕಣ್ಣೀರ ಕಾಣಿಸಲಿ?
ಯಾವ ಶೃತಿ ತಂತಿಯಂಚಲಿ ದುಃಖ ಹಂಚಲಿ?
ಯಾವ ಗೋರಿಯ ಮುಂದೆ ಕಂಪಿಸುತ ಸಾಯಲಿ?

ಕೆಡುಕು ಮಾಡಿದವೆಲ್ಲ ನನ್ನವುಗಳಲ್ಲವೆಂದಲ್ಲ
ಒಂದಲ್ಲ ಒಂದು ಕಡೆ ಋಣವುಳ್ಳವುಗಳೇ,
ಕೊಡಲಿ ಹಿಡಿದ ಮಾತ್ರಕ್ಕೆ ಕೊಚ್ಚಲೇ?
ಆತುರದಿ ನನ್ನನ್ನೇ ಸೀಳಲೇ?
ಕಾದವರಿಗೆ ಕೊಟ್ಟ ಮಾತು ತಪ್ಪಲು ಒಲ್ಲೆ
ತಲುಪಿ ನಂತರ ತಲೆಯ ಉರುಳಿಸಿಕೊಳ್ಳಲೇ?

ಪ್ರಶ್ನೆಯಾಚೆ ಒಂದು ಉತ್ತರವಿದೆಯೆಂದು
ಪೂರ್ತಿ ಓದಿ ಮುಗಿಸಲು ಕೊನೆಗೆ ಚಿನ್ಹೆ(!/?)
ಪ್ರಶ್ನಾರ್ಥಕಕೆ ಬೇಡ ಉತ್ಪ್ರೇಕ್ಷೆ ಸಾಲುಗಳು,
ಆಶ್ಚರ್ಯ ಚಕಿತನಾಗಲು ಒಂದು ಚುಕ್ಕಿ
ಎಲ್ಲಕ್ಕೂ ಕೆನೆಗೆ ದೀರ್ಘ ವಿರಾಮ!!
                                             
                                      -- ರತ್ನಸುತ

ಜೋಡಕ್ಕಿ

ಪ್ರೇಮಾನ್ವೇಷಣೆಯ ಪಯಣಕ್ಕೆ
ನಂಬಿಕೆಯ ರೆಕ್ಕೆ ಪಡೆದು
ಜೋಡಿ ಹಕ್ಕಿಗಳು ಸಜ್ಜಾಗಿವೆ

ಒಲವ ಹಾದಿ, ಹಲವು ತಿರುವು
ಶೀತ-ಬಿಸಿಲು, ಮುಗಿಲು-ಕಡಲ
ಎಲ್ಲೆ ಮೀರ ಬಯಸಿವೆ

ಕೋಪ-ತಾಪ, ಮಿಂಚು-ಮಸಿ
ತ್ಯಾಗ-ಸ್ವಾರ್ಥ, ಬಾಳಿಗರ್ಥ
ತುಂಬಲೆಂದು ಹೊರಟಿವೆ

ಗೆದ್ದು ಸೋತು, ಮುದ್ದು ಮಾಡಿ
ಪೆದ್ದು ಮನದ ಸದ್ದಿಗಾಗಿ
ಹೃದಯವನ್ನೇ ತೆರೆದಿವೆ

ಜೀವ ತೇದು ರೂಪುಗೊಂಡ
ಭಾವವೊಂದ ಬಾಳಿಗಿಡಿದು
ಹೂವಿನಂತೆ ಅರಳಿವೆ!!
                         -- ರತ್ನಸುತ

ಗೂಡು ಮತ್ತು ಪಂಜರ

ಯಾರೂ ಇಲ್ಲದ ಪಂಜರದೊಳಗೆ
ಆಟವಾಡಲು ಹೋಗಿ ಸಿಕ್ಕಿಬಿದ್ದು
ಇನ್ನೂ ಹೊರಬರಲಾಗದೆ ಮಿಡುಕಾಡಿದೆ ಹಕ್ಕಿ

ಹೆತ್ತವಕ್ಕೂ ಗೊತ್ತಿಲ್ಲದ ಕಠೋರ ಸತ್ಯ,
ಪಾಪ ಅವು ಆಗತಾನೆ ಕಾಡಿಂದ ವಲಸೆ ಬಂದು
ನಾಡಿನಲ್ಲಿ ಗೂಡು ಕಟ್ಟಿಕೊಳ್ಳುತ್ತಿದ್ದವು
ಸ್ವೇಚ್ಛೆಯ ಸುಳುವಿದ್ದು ಬಂಧನದ ಅರಿವಿರದೆ

ಅತ್ತ ಗೂಡು ಸಜ್ಜಾಗುತ್ತಿತ್ತು
ನಾರು, ಬೇರು, ಕಡ್ಡಿ, ಕಸ
ತಂತಿ, ಹತ್ತಿ, ಬಟ್ಟೆ ಚೂರುಗಳಿಂದ,
ತಾಯಿ ಹಕ್ಕಿ ಪಂಜರದಲ್ಲಿಯ ಮರಿಯ ಕಂಡು
"ಅಬ್ಬಬ್ಬಾ, ಅರಮನೆ ಸಿಕ್ಕಿದ್ಯಲ್ಲೇ ನಿನ್ಗೆ!!"
ಎಂದು ಉದ್ಗಾರ ಹಾಡಿತು

ಹೊತ್ತೊತ್ತಿಗೆ ಗುಟುಕು
ಮೆತ್ತಗೆ ಹಾಸಿದ ಹುಲ್ಲ ಕುಪ್ಪೆ,
ಅಲ್ಲೇ ಚೂರು ಮಲಗಿದ್ದು
ಎದ್ದು ಹಾರಲು ಹೊರಟ ಹಕ್ಕಿಯ
ರೆಕ್ಕೆಗೆ ಸಿಗಬೇಕಿದ್ದ ಮಾನ್ಯತೆಯ
ಕಸಿದು ತೇಗುತ್ತಿತ್ತು ಸರಳು;
ಬೀಗ ಜಡಿದ ಪಂಜರವ ಸೀಳಿತು ಬೆಳಕು,
ಗೋಡೆ ಮೇಲೆ ನೋವ ನೆರಳು!!

ಅತ್ತ ಗೂಡಿನ ಹಕ್ಕಿಗಳು ಹಸಿವಲ್ಲೂ ತೃಪ್ತ
ಇತ್ತ ಒಂಟಿ ಹಕ್ಕಿಯ ಪಾಲಿಗೆ ಖಾಲಿ ನಿರ್ಲಿಪ್ತತೆ,
ಬಂದು ಹೋದವರೆಲ್ಲ ಮುದ್ದು ಮಾಡಿದವರೇ ವಿನಹ
ಯಾರ ಕಣ್ಣಿಗೂ ಬೀಳದೆ ಉಳಿಯಿತು
ಹಳೆ ಕಣ್ಣೀರ ಪಸೆ!!

ಪಾಠ ಕಲಿಸಿತು ಪಂಜರ
ಆಟದ ಬೆಲೆಗೆ
ನೊವಿನ ಆಯಾಮಗಳು ನೂರು
ಕಣ್ಣೀರೇ ಕಡೆಗೆ
ಗೂಡು ಮತ್ತು ಪಂಜರ
ಒಂದಕ್ಕೆ ದಕ್ಕಿದ್ದು ಮತ್ತೊಂದಕ್ಕಿಲ್ಲ!!
                                 
                                        -- ರತ್ನಸುತ

ದಾಸನ ದೇವಿ

ಒಂದಾಗುವ ಸೂಚನೆಯಲ್ಲೂ
ದೂರಾಗುವ ಭಾವವೊಂದಿದೆಯಲ್ಲ
ಅಬ್ಬಬ್ಬಾ, ತೀರಾ ಅಸಹ್ಯ!!

ಸ್ಪರ್ಶದ ಗಂಧವೇ ಗೊತ್ತಿಲ್ಲದ
ಮರಗಟ್ಟಿಹೋದ ಹೃದಯಕ್ಕೆ
ಕೋಗಿಲೆ ಪುಕ್ಕವೊಂದು ಹಾಡು ಕಲಿಸಿ
"ಇನ್ನೇನಿದ್ದರೂ ನೀನೇ ಹಾಡಿಕೋ" ಅಂದಾಗ
ಹೂವಾಗಿ ಅರಳಿದ ತನ್ನ ಒಡಲಿಂದ
ಪರಾಗವೊಂದು ಬೇರಾಗಿ ಒಡಲೆಲ್ಲ ಅಲೆದಾಡಿ
ಈಗ ತನ್ನ ಮೂಲವ ಹುಡುಕುತ್ತಿದೆ,
ಬಳಸಿ ಬಂದ ದಾರಿಯೇ ಮಾಯವಾದಂತಿದೆ!!

ಹ್ಮ್ಮ್.. ಸುಮ್ಮನೆ ಕೂತರೆ ಹೇಗೆ?
ನೆನಪಿನ ಕಾಮಗಾರಿಯಲ್ಲಿ ನಿರತನಾಗಿ
ಒಂದಿಷ್ಟು ಭ್ರಮೆಯಲ್ಲಿ ಸಿಲುಕಬೇಕು,
ಏಕತಾನತೆಯಲ್ಲೂ ಮಜವಿದೆ
ಅದು ನಿನ್ನ ಕುರಿತದ್ದಾಗಿದ್ದರೆ ಮಾತ್ರ!!

ಹತ್ತಿರವಿದ್ದಾಗ ಅದೆಷ್ಟು ದೂರ,
ದೂರವಾದಾಗ ಅದೆಷ್ಟು ಹತ್ತಿರದವಳು ನೀನು?!!
ಮುಗಿಲಿಂದ ದೂರಾಗಿ
ಮತ್ತೆ ಮುಗಿಲಿಗೆ ಹವಣಿಸುವ ಹುಚ್ಚು ಕಂಬನಿಯಂತೆ
ನಾ ಹರಿದು ಹರಿದು ಧನ್ಯನಾಗುತ್ತೇನೆ
ನಿನ್ನ ಕೆನ್ನೆ ಕಾಲುವೆಗಳಲ್ಲಿ!!

ಮಾತಿಗೊಂದಿಷ್ಟು ನೆಪ
ಕೋಪಕೊಂದಿಷ್ಟು ಹಠವನ್ನ
ನಾಜೂಕಾಗಿ ಬೆರೆಸಿ ತರುವವಳು
ಎಲ್ಲಕ್ಕೂ ನನ್ನನ್ನೇ ಗುರಿ ಮಾಡುತ್ತೀಯ
ಸಿಟ್ಟು, ಪ್ರೇಮ, ಕೋಪ, ತಾಪ ಇತ್ಯಾದಿಗಳಿಗೆ
ನನಗಂತೂ ನಿರ್ಲಿಪ್ತತೆಯೇ ಆಪ್ತ,
ಅದನ್ನೂ ದಯಪಾಲಿಸು!!

ಕಣ್ಣಿಗರ್ಧದಷ್ಟು ಶಕ್ತಿ ತುಂಬಿ
ನನ್ನೊಳಗೆ ಸಂಘರ್ಷಕ್ಕೆ ಕಾರಣಳಾದವಳೇ,
ಆಗಾಗ ನಿನ್ನ ಮಗುವಿನ ಗುಣದಿಂದ
ನನ್ನ ಹಗುರಾಗಿಸುತ್ತೀಯಲ್ಲ
ಅದೇ ಇರಬೇಕು ನಿನ್ನಲ್ಲಿ ನಾ ಬಲುವಾಗಿ
ಮೆಚ್ಚಿಕೊಂಡ ವಿಷಯ!!

ಹೀಗೇ ಅದೆಷ್ಟೋ ಸಲ ಕಳೆದ ನನ್ನ
ನೀನೇ ಪತ್ತೆ ಹಚ್ಚಿ ಹಿಂದಿರುಗಿಸಿದ್ದೆ
ಈಗ ಮತ್ತೆ ಕಳುವಾಗಿದ್ದೇನೆ
ತಡ ಮಾಡದೆ ದಾಪುಗಾಲಿಟ್ಟು
ಆದಷ್ಟೂ ಸನಿಹಕೆ ಬರುವಂತವಳಾಗು,
ಅಲ್ಲಿಯವರೆಗೂ ಈ ದಾಸ
ಏಕ ತಂತಿಯ ಮೀಟಿ ಜೀವಂತವಾಗಿರುತ್ತಾನೆ!!
    
                                               -- ರತ್ನಸುತ

ನೆರಳಿನೊಂದಿಗಿರಲು

ಹಿಂದಿಂದೆ ಬಂದಾಗ ಪಕ್ಕಕ್ಕೆ ಕರೆದೆ
ಪಕ್ಕದಲಿ ನಿಂತಾಗ ದೂರ ಸರಿದೆ
ದೂರವಾಗಲು ಕಣ್ಣಂಚಿನಲಿ ಸೆಳೆದೆ
ಮರುಳಾಗಿಯೇ ನಿನ್ನ ಸೆರಗಾಗಿ ಹೋದೆ

ಗಾಳಿ ಬೀಸಲು ದಿಕ್ಕು ದಿಕ್ಕಿಗೆ ಕುರುಳು
ನನ್ನ ಸಂಬಾಳಿಸಲು ನಿನಗೆಲ್ಲಿ ಸಮಯ?
ಪ್ರತಿ ಸಲವೂ ಧಾವಿಸಲು ಆ ಕೈಯ್ಯ ಬೆರಳು
ಉಗುರು ಬಣ್ಣಕೆ ಸೋಕಿದ ಕುಂಚ ಧನ್ಯ

ಮಾತಿನ ಮೇಲೊಂದು ಮಾತು ಸೋತು
ಹೊರಬಾರದೆ ಉಳಿಯಿತು ತುಟಿಯಂಚಲಿ
ಹೃದಯವೇ ಎದೆ ಸೀಳಿ ಅವಳ ಮುಖ ನೋಡುತಿರೆ
ಎದೆ ಬಡಿತವ ಹೇಗೆ ಮರೆಸಿ ಇಡಲಿ?

ಹಂಚಿಕೊಂಡ ನಗೆಯ ಸಹಿಯೊಪ್ಪಂದದಲಿ
ಜೀವಗಳ ಸಿಹಿಗನಸುಗಳ ವಿನಿಮಯ
ಎಷ್ಟೇ ಹಳಬರಾದರೂ ಬದುಕಿಗೆ
ಮಾಡಿಕೊಳ್ಳಲೇ ಬೇಕು ಕಿರುಪರಿಚಯ

ಜೊತೆಗಿದ್ದ ದಿಗಿಲು ಬಿಟ್ಟು ಹೊರಡುವ ವೇಳೆ
ಮೊಂಡು ಧೈರ್ಯಕೆ ಮಂದಹಾಸ ಪ್ರಾಪ್ತಿ
ಇಷ್ಟೆಲ್ಲ ಜರುಗಿರಲು ಗುಟ್ಟಾಗಿ ದೊರಕಿತು
ಏಕಾಂತಕೆ ಇನ್ನು ಬಂಧ ಮುಕ್ತಿ!!

ಬರೆಯದ ಕವಿತೆ

ಕವಿತೆ ಬರೆಸುತ್ತಾಳೆ ಆಕೆ
ಕೈಲಿದ್ದ ಲೇಖನಿಯ ಕಸಿದುಕೊಂಡು
ಕಣ್ಣಲ್ಲೇ ಬರೆ ಅನ್ನುವಂತೆ
ಅಮಾಯಕ ನೋಟ ಬೀರುತ್ತಲೇ
ನಿಯಂತ್ರಿಸುತ್ತಾಳೆ ಮನದ ಭಾವಗಳ;

ಆಕೆ ಜನನಿ, ಕವನ ಕೂಸು
ಮತ್ತೆ ನಾನು ಮತ್ತು ಲೇಖನಿ
ಇದ್ದರೆಷ್ಟು, ಹೋದರೆಷ್ಟು?

ಬರೆದದ್ದನ್ನೆಲ್ಲ ಎದುರಿಟ್ಟು
ನಿರೀಕ್ಷೆಯ ಕಾವಲ್ಲಿ ಮೈ ಬೆಚ್ಚಗಾಗಿಸಿಕೊಳ್ಳುವಾಗ
ಒಂದು ತಂಪು ನಗೆ ಚೆಲ್ಲಿ
ಸುಮ್ಮನಾಗದ ಅವಳು
ಅದ ಮರೆಸುವ ಯತ್ನದಲಿ
ನನ್ನನ್ನೇ ಮರೆಸಿಡುತ್ತಾಳೆ,

ನಾ ಕಳುವಾದೆನೆಂದು ಗೋಳಿಡಲಿಲ್ಲ
ಕಳ್ಳತನಕ್ಕೆ ಬೆಂಬಲವಾಗಿ ನಿಂತೆ
ಇದ್ದಷ್ಟೂ ಒಲವನ್ನ ಅವಳಲ್ಲಿ ಹೂಡಿ
ಖಾಲಿ ಹೃದಯವನ್ನ ಗುಡಿಸುತ್ತ ಕೂತೆ;

ಯಾವುದೇ ಸಮಯಕ್ಕೆ ಕರೆ ಬರಬಹುದು,
ಒಪ್ಪೊತ್ತು ಗಂಜಿ ಕಾಯಿಸಿಟ್ಟು
ಹೊಟ್ಟೆ ತಣ್ಣಗಾಗಿಸಲವಳು
ದಿನಾಲೂ ಬೇಡಿಕೆಯಿಟ್ಟು
ಅಲ್ಲೇ ನೆಲೆಯೂರಲೂಬಹುದು!!

ಅವಳು ಬರುವ ಹೊತ್ತಾಯಿತು,
ಶೂನ್ಯಕ್ಕೆ ಮರಳುತ್ತೇನೆ;
ಅವಳೇ ನನ್ನ ಮೌಲ್ಯ ಮಾಪಿಸಿ
ಹೆಚ್ಚು ಕಡಿಮೆ ಉತ್ತೀರ್ಣಗೊಳಿಸುವವಳು,
ನಾನಿನ್ನೂ ಅನುತ್ತೀರ್ಣನಾಗಿಯೇ ಉಳಿಯುವ ಆಸೆ
ಅವಳ ಕಕ್ಷೆಯ ಬಿಡದೆ
ಸುತ್ತುತ್ತಾ.. ಸುತ್ತುತ್ತಾ...
                                                -- ರತ್ನಸುತ

ಮರ ಮತ್ತದರ ಸಾವು

ಉದುರಿಬಿದ್ದ ತೆಂಗಿನ ಗರಿಯ ಕಂಡು
ಮಿಕ್ಕೆಲ್ಲ ಪಚ್ಚೆ ಗರಿಗಳು ಅರಚುತ್ತಿವೆ,
ಸಾವು ಕೇವಲ ಸಿದ್ಧಿಸಿದವರಿಗೇ ಸೀಮಿತ
ಉಳಿದವರು ಅದಕೆ ರುಜುವಾತು ಮಾತ್ರ

ಗೋಳಿಟ್ಟು ಬಿದ್ದು ಬುರುಡೆ ಸೀಳಾದ
ಎಳೆ ತೆಂಗಿನಕಾಯಿಗೆ
ಸುಕ್ಕಾದ ಸಿಪ್ಪೆಯ ಮುದಿ ಕಾಯಿ
ನಾಲ್ಕು ಕಂಬನಿಯ ಹೊರತುಪಡಿಸಿ
ಬೇರೇನನ್ನೂ ಮೀಸಲಿಡಲಾಗಿಲ್ಲ

ಭೂಮಿ ತನ್ನಲ್ಲಿ ಹುದುಗಿಸಿಟ್ಟ
ಅದೆಷ್ಟೋ ಉಸಿರು ಸತ್ತ ಜೀವಗಳಿಗೆ
ಮರುಜನ್ಮವಿತ್ತ ಪುಣ್ಯಕ್ಕೇ
ಸತ್ತವೆಲ್ಲ ಇನ್ನೂ ಭೂಮಿಯನ್ನೇ ಅವಲಂಬಿಸಿವೆ!!

ಗೆದ್ದಲು ಹಿಡಿದ ಬುಡದ ತೊಗಟು
ಪುಡಿ ಪುಡಿಯಾಗಿ ಉದುರುತ್ತಿದೆ,
ಮತ್ತೆ-ಮತ್ತೆ ನೆಲಕುರುಳುವ ದುಃಸ್ವಪ್ನ
ಮತ್ತೆ-ಮತ್ತೆ ಹೊಸ ಚಿಗುರು;
ಹರಿದ ನೆತ್ತರ ಗೋಂದು
ಅದೆಷ್ಟು ಇರುವೆಗಳ ಪಾಲಿಗೆ ಆಹಾರವಾಯಿತೋ,
ಅದೆಷ್ಟು ಇರುವೆಗಳ ಜೀವ ತೆಗೆಯಿತೋ!!

ನೆಟ್ಟವರು ಬದುಕಿಲ್ಲ,
ಬದುಕಿದ್ದವರು ನೆಟ್ಟವರ ಸ್ಮರಿಸುತ್ತಾರೆ
ಅದೇ ಮರದ ಎಳನೀರ ಸವಿಯುತ್ತ
ಉಳಿದ ಗರಿಗಳ ನೆರಳಲ್ಲಿ ನಿಂತು
"ಇದ್ಯಾವುದೋ ಸಪ್ಪೆ ತಳಿ,
ಯಾಕೋ ಸೊಟ್ಟಗೆ ನೆಟ್ಟಿದ್ದಾರಲ್ಲ?,
ಎರಡು ಮಾರು ದೂರ ನೆಡಬೇಕಿತ್ತು"
ಇಂತಿತ್ಯಾದಿಯಾಗಿ!!

ಮರ ಇಂದಲ್ಲ ನಾಳೆ ಸಾಯುತ್ತದೆ
ಇದ್ದಷ್ಟೂ ದಿನ ಕೊಂಕು ಮಾತಿಗೆ ತಲೆ ಕೆಡಿಸಿಕೊಳ್ಳದೆ
ಕೊನೆಗೆ ಒಂದೇ ಸಾವು,
ಒಳಗೊಳಗೆ ಸತ್ತದ್ದಕ್ಕೆ ಲೆಕ್ಕವೇ ಇಲ್ಲ!!
                                                     
                                               -- ರತ್ನಸುತ

ಹೌದಲ್ಲ?!!

ನಾ ದಾಸ
ನೀ ಕೀರ್ತನೆ
ಹಾಡಿಕೊಂಬುದೇ ಜೀವನ

ನಾ ರವಿ
ನೀ ಬೆಳಕು
ನೆರಳಿನಲ್ಲಿ ನಮ್ಮ ಮನ

ನಾ ಭುವಿ
ನೀ ಮುಗಿಲು
ಮಿಲನವಾದರೆ ಪಾವನ

ನಾ ಋಷಿ
ನೀ ನಶೆ
ಭಕ್ತಿಗೊಂದು ಕಾರಣ

ನಾ ನಾನೇ
ನೀ ನೀನೇ
ನಾವಾಗುವಂದೆ ನಾ

ನಾ ಮೌನಿ
ನೀ ಗಾನ
ರಾಗವೇ ರೋಮಾಂಚನ

ನಾ ಒಡಲು
ನೀ ನೆರಳು
ಪ್ರೀತಿಯೇ ಚಿರಂತನ!!
                 
               -- ರತ್ನಸುತ

ಇಲ್ಲದ ಕನಸಿನ ಸುತ್ತ

ಕನಸುಗಳು ಘಾಡ ನಿದ್ದೆ ಮಾಡುತ್ತಿವೆ
ಆದಕಾರಣ ನಿದ್ದೆ ಹತ್ತುತ್ತಿಲ್ಲ ಕಣ್ಣಿಗೆ,
ಎಲ್ಲ ಕನಸುಗಳು ಇಷ್ಟು ಬೇಗ
ನನ್ನ ಆಲಿಂಗಿಸಿ ದೂರಾಗಲು ಮಾಫಿ ಮಾಡಿದ್ದೇನೆ,
ಊಫಿ ನೀಡಿದ್ದೇನೆ ತಮ್ಮ ಪಾಡಿಗಿರಲು!!

ಒಂದು ಕನಸಿಗೆ ನಾನಾ ಮುಖ
ಮುಖವಾಡವೆಂದಲ್ಲ, ಆದರೆ ಸ್ವಲ್ಪ ಹಾಗೇ
ಒಂದು ಕನಸಿಗೆ ಮುಖವೇ ಇಲ್ಲ
ಗಿರುತು ಹಿಡಿಯಲಾಗದಂತದ್ದಲ್ಲ
ಆದರೆ ಒಮ್ಮೊಮ್ಮೆ ಕಾಡುವಂತದ್ದು;
ಭಯ ಹುಟ್ಟಿಸಿದ್ದು, ಚಳಿ ಬಿಡಿಸಿದ್ದು
ಪುಳಕ ಹೆಚ್ಚಿಸಿದ್ದು, ತವಕ ತುಂಬಿಸಿದ್ದು
ಎಲ್ಲವೂ ನಾಪತ್ತೆ,
ಹುಟ್ಟಿದ ಮೂಲಕ್ಕೇ ಮರಳಿ ಮಲಗಿರಬೇಕು?
ಅದ ಹುಡುಕುವ ಗೋಜಿಗೆ ಹೋಗಲಾರೆ!!

ಒಂದು ಕನಸು ದಿನಂಪ್ರತಿ ನನ್ನ ಪೀಡಿಸುತ್ತ
ಜಾಲಾಡುತ್ತಿದ್ದದ್ದು ಇಂದೆಲ್ಲಿ?
ಜೋಡಿ ರೆಕ್ಕೆಗೆ ಬಣ್ಣ ತುಂಬುತ್ತಿದ್ದ ತಾನು
ಹಾರುವಷ್ಟರಲ್ಲೇ ಬೆಳಕರಿದು
ಹಾಸಿಗೆಯಿಂದ ಮೇಲೇಳಿಸುತ್ತಿತ್ತು,
ನನಗೋ "ಆಗಸವ ಮುಟ್ಟಲಿಲ್ಲವಲ್ಲ!!" ಎಂಬ ಬೇಜಾರು,
ಈ ಹೊತ್ತಿಗೆ ಅದು ತಲೆಮರೆಸಿಕೊಂಡಿದೆ!!

ಕ್ಲೌಡ್ ನೈನ್ ಕಾಣುತ್ತಿದೆ
"ಅದೆಲ್ಲಿ?" ಎಂಬುದು ವ್ಯಾಕರಣಕ್ಕೆ ನಿಲುಕದ್ದು
ನಾನಾಗಲೇ ಅದ ಏರಿ ಕೂತಿದ್ದೇನೆ
ಆಗಲೇ ಸಣ್ಣ ಸವಾರಿಯೂ ನಡೆಸಿದ್ದಾಯ್ತು;
ಆಕಾಶಕ್ಕೆ ಏಣಿ ಹಾಕುವ ನೆಪದಲ್ಲಿ
ಸದಾ ಕಾಲ ನನ್ನ ಕಾಲೆಳೆಯುತ್ತಿದ್ದ ಕನಸು
ಈಗ ಯಾವ ಬಾರಲ್ಲಿ ಕೂತು ಟೈಟ್ ಆಗಿದೆಯೋ ಕಾಣೆ!!

ತಾಜಾ ತೋರಣವೊಂದನ್ನ
ತಲೆ ನೇವರಿಸಿ ಸಾಗುವಂತೆ
ಎಲ್ಲ ದ್ವಾರಗಳು ತೆರೆದುಕೊಂಡಾಯ್ತು,
ಎಲ್ಲೆಲ್ಲೂ ಸಂಭ್ರಮ ಕೂಡಿದ
ಸ್ವಾಗತದ ಅಚ್ಚೋಲೆಗಳು,
ನಾನೀಗ ಎಲ್ಲೆಲ್ಲೂ ಬೇಕಾಗಿದ್ದೇನೆ
ಆದರೆ ಎಲ್ಲೂ ಪೂರ್ಣವಾಗಿರಲಾರೆ
ಹಾಗಾಗಿ ಈ ಹೊತ್ತಿಗೆ ನನ್ನನ್ನ ನನಗೇ ಬಿಟ್ಟುಕೊಡಬೇಕು

ಕನಸುಗಳ ಕ್ಷಮೆ ಕೋರಿ
ಇಂದು ನನ್ನದೇ ಲೋಕವನ್ನ
ಕನಸಿಗಿಂತಲೂ ಸುಂದರವಾಗಿಸುವ ದಿನ,
ನಾಳೆಗಳ ಹೊಸ ಸ್ವರೂಪಗಳ ಸ್ವಾಗತಿಸುತ್ತ
ಹಳೆ ಸರಕಿಗೆ ಮಂಗಳ ಹಾಡಿದೆ
ಕನಸುಗಳೂ ಈಗ ಕನಸಾಗಿ ಉಳಿದಿವೆ!!
                                           
                                                 -- ರತ್ನಸುತ

ಸೂತ್ರವಿಲ್ಲದ ನಾಟಕ

ಇಲ್ಲ ಸಲ್ಲದ ಚಿಂತೆ
ಹೊಂಗೆ ನೆರಳಿನ ಅಡಿಯ
ಕಿರುಬೆರಳ ಉಗುರಿಂದ
ಕೆರೆದು ಗಾಯವ ಮಾಡಿ
ಬಿಸಿ ಮುಟ್ಟಿಸುವ ಹೊತ್ತು
ಯಾವ ಎಲೆ ಉದುರದೆ
ಉದುರಿದೆಲೆ ಚೆದುರದೆ
ಕಿಚ್ಚು ಹೊತ್ತಿಸಿಕೊಂತು?

ಹುಚ್ಚು ಮನಸಿಗೆ ತಾನೆ
ಎಲ್ಲಿ ಒಂದೇ ಮುಖ?
ಕ್ಷಣಕೊಮ್ಮೆ ಬದಲಾಗಿ
ಮೊದಲಾಗಿ ಕೊನೆಗೊಂಡು
ಮೂಕಾಭಿನಯದಲ್ಲಿ
ಬಣ್ಣ ತೊಟ್ಟವನನ್ನೇ
ಬದಲಾಯಿಸಿತು ಅಲ್ಲಿ
ರಂಗದಂಗಳದಲ್ಲಿ ಮಂಗನಾಟ!!

ಅತ್ತವರ ಜೊತೆ ಅತ್ತು
ಸತ್ತವರ ಜೊತೆ ಸತ್ತು
ಮಿಕ್ಕವರ ಮರೆತಂತೆ
ಸಿಕ್ಕವರು ಸಿಗದಂತೆ
ಅಟ್ಟಿಸಿ ಬಿಟ್ಟರಾ
ಒಡಲಿಗಂಟಿದ ನೆರಳ?
ಮುದ್ದು ಮಾತಲಿ ಸೆಳೆದು
ಕಪ್ಪು ಮುಸುಡಿಗೆ ಬಳಿದು

ಯಾವ ಪಾತ್ರವು ತಾನೆ
ಜೀವಂತವೆನಿಸುವುದು?
ಯಾವ ಅರ್ಥವು ತಾನೆ
ತರ್ಕವನು ನೀಡುವುದು?
ಇದ್ದವುಗಳಿದ್ದಂತೆ ಇರಲಿ
ಬಿದ್ದವುಗಳು ಎದ್ದು ಬರಲಿ
ಕೂಗುವಾಟಕೆ ಇಲ್ಲಿ
ಕೊರಳ ಬೆಂಬಲ ಸಿಗಲಿ!!

ಮುಗಿದ ನಾಟಕವನ್ನ
ಕೈ ಮುಗಿದು ಕೇಳಿದೆ
"ತಿಳಿಯಲೊಲ್ಲದು ಏನೂ
ಏನು ನಿನ್ನ ಮರ್ಮ?
ಬೆತ್ತಲಾಗು ಬಿಡಿಸಿ
ಹಸಿವ ನೀಗಿಸು ಬಡಿಸಿ
ಚಿತ್ತದ ಚೀಕ್ತಾರವನು ಆಲಿಸು
ದಯಪಾಲಿಸು ಸೂತ್ರಧಾರಿ!!"

ದೀಪ ಆರುವುದರಲ್ಲಿದೆ
ಕೋಪವೂ ಕತ್ತಲಲಿ ಲೀನವಾಗಬಹುದು,
ಕೋಪವೆಂಬುವುದೊಂದು
ಇತ್ತೆಂಬುದನ್ನೇ ಸುಳ್ಳಾಗಿಸಿ
ನಂಬಿಸಿ ಬಿಡಬಹುದು ಪ್ರಾಣ,
ಹಗುರಾಗಿ ಹಾರಾಡಿ
ಇರುವನಕ ತ್ರಾಣ,
ಮುಗಿಲ ತೋರಣದಾಚೆ ಕಂಡವರು ಯಾರು?
                                               
                                      -- ರತ್ನಸುತ

ಮಾತು ಇಷ್ಟೇ ಏಕೆ?!!

ಇಷ್ಟಕ್ಕೇ ನಿಲ್ಲಿಸಿದ್ದು ತಪ್ಪು
ರಾತ್ರಿಗಳ ಅನಾಥವಾಗಿಸಿ
ಮೌನವ ಲೇಪಿಸಿದ್ದು ಅಪರಾಧ,
ನಾವಿನ್ನೂ ಚೂರು ಮಾತಾಡಿದ್ದರೆ
ಬೆಳಕು ಬೀದಿಗೆ ಬರುತ್ತಿತ್ತೇ?!!
ಛೇ, ಈ ಕತ್ತಲನ್ನ ಲಘುವಾಗಿ ಪರಿಗಣಿಸಿದ್ದು
ನಮ್ಮ ಮೌಢ್ಯದ ಪರಮಾವಧಿ!!

ಎಲ್ಲ ಮಾತು ಮುಗಿಯುವಷ್ಟರಲ್ಲಿ
ಮತ್ತೆ!! ಎಂಬ ಉದ್ಗಾರಕ್ಕೆ
ಮತ್ತಷ್ಟು ಮಾತು ಹುಟ್ಟಿಕೊಳ್ಳುವ ಪರಿ
ಅದೆಷ್ಟು ಸೊಗಸು ಅನ್ನುತ್ತೀಯ!!
ನಾನಂತೂ ಬೇಕಂತಲೇ ಸಂಭಾಷಣೆಯನ್ನ
ಮೊಟಕುಗೊಳಿಸಿ ಖುಷಿ ಪಡುತ್ತೇನೆ
ನಿನ್ನ ಆ ಉದ್ಗಾರದಿಂದ!!

ಬೇಟಿಯಾದದ್ದು ಅದೆಷ್ಟು ಬಾರಿ?
ಸೋಕಿಕೊಂಡದ್ದು ಅದೆಷ್ಟು ಸಲ?
ಕಣ್ಣು ಅದೆಷ್ಟು ಬಾರಿ ಬೆರೆತದ್ದು?
ಇವ್ಯಾವೂ ಲೆಕ್ಕಕ್ಕೆ ಯೊಗ್ಯವಾದಂತವಲ್ಲ,
ಅಥವ ಅವು ನನ್ನ ಸೋಲಿಸಬಹುದಾದ
ಸಾಧ್ಯತೆಯಿಂದಲೇ ಹಾಗನಿಸಿದ್ದುಂಟು,
ಯಾವುದಕ್ಕೂ ಟಿಪ್ಪಣಿ ಸಹಿತ ಸಂದೇಶ
ನಿನ್ನ ಮನದಂಚೆಗೆ ರವಾನಿಸಿ
ನಂತರ ಮುಂದಿನ ಕೆಲಸದತ್ತ ಗಮನ ಹರಿಸಬೇಕು!!

ಇಷ್ಟಕ್ಕೂ ನಾವು ಮಾತಾಡಿದ್ದು ತಿರಾ ಕಮ್ಮಿ
ಬಹುಶಃ ಮುಂದಿನ ಎರಡು ಜನ್ಮಕ್ಕೆ ಸಾಕಾಗುವಷ್ಟು,
ಅದರಾಚೆಗಿನವುಗಳ ಗತಿ?
ಮತ್ತೆ, ಮತ್ತೆ ಮತ್ತಷ್ಟು ಕಾರಣಗಳು ಸಿಗುತ್ತಾ ಹೋದಂತೆ
ಮಾತು ದಡವಿಲ್ಲದ ಕಡಲಲೆಯಂತಾಗಿ
ನಿರಾಯಾಸದಿಂದ ಮುಂದುವರಿಯುತ್ತದೆ,
ಮುತ್ತುಗಳ ವಿನಿಮಯವಂತೂ
ಒಂದು ಅದ್ಭುತ ರುಚಿಕಟ್ಟು ಹಣ್ಣಿನಂತೆ

ಸಮಯದ ಮುಳ್ಳಿನಷ್ಟು ಕೆಲಸಕ್ಕೆ ಬಾರದ
ವಿನಾಕಾರಣ ಸದ್ದು ಮಾಡುತ್ತ ತಿರುಗುವ
ತಿರುಬೋಕಿ ಮನೆಹಾಳು ವಸ್ತುವನ್ನ
ನನ್ನ ಬಾಳಿನಲ್ಲೇ ಕಂಡಿಲ್ಲ,
ಸುಖಾಸುಮ್ಮನೆ ಬೆಳಕಿಗೆ ಚಾಡಿ ಹೇಳಿ
ಕೈ ಹಿಡಿದು ಕರೆತರುತ್ತಾನೆ ಅಂಗಳಕ್ಕೆ;
ಮಂಗಳವೆಲ್ಲ ಅಮಂಗಳ
ಕತ್ತಲು ಕಣ್ಮರೆಯಾಗುತ್ತಿದ್ದಂತೆ
ಮಾತು ಮತ್ತೆ ಗೂಡು ಕಟ್ಟಿಕೊಂಡು
ಬೆಚ್ಚಗೆ ಮಲಗಿಬಿಟ್ಟಿತು!!
                                        
                                                 -- ರತ್ನಸುತ

Thursday 11 June 2015

ಕಾದು ಕಾದು ಗೀಚಿದ್ದು

ಕಾಯಿಸಿದ್ದಲ್ಲದೆ
ಬರುವಷ್ಟರಲ್ಲಿ ಕಾವ್ಯ ಗೀಚೆಂದಳು,
ಪಟ್ಟು ಹಿಡಿದು ಬರೆಯುತ್ತ ಕೂತವನು
ಕತ್ತಲಾಗಿದ್ದನ್ನೇ ಮರೆತು ಹೋದೆ,
ಚಂದ್ರನೇಕೋ ನಾಚಿಕೊಂಡ
ಮುಗಿಲ ಹಿಂದೆ ಅವಿತು ಕೂತೂ
ಅದೆಷ್ಟು ಬೆಳದಿಂಗಳು!!
ಆಕೆ ಬರುವ ಹೊತ್ತಾಗಿರಬೇಕು

ಅಂಗಡಿ-ಮುಂಗಟ್ಟುಗಳ
ವಿದ್ಯುತ್ ದೀಪಳು ಹೊಳೆಯುತ್ತಿದ್ದಂತೆ
ನಾ ಕುಳಿತುಕೊಂಡಿದ್ದ ಕಾಫಿ ದುಖಾನೂ
ಮಂದ ಬೆಳಕಲ್ಲಿ ಸಿಂಗಾರಗೊಂಡಿತ್ತು,
ಆಗಷ್ಟೇ ಬೀಸಿದ ಕಾಫಿ ಬೀಜದ ಪುಡಿ
ಮತ್ತವಳ ಪರ್ಫ್ಯೂಮು ಘಮಲು
ಎರಡರ ಪಕ್ವ ಸಮ್ಮಿಶ್ರಣದ ತಿಳಿಗಾಳಿ
ನನ್ನ ಸೋಕುವುದೊಂದೇ ಬಾಕಿ

ಕಾಯುವಾಗಿನ ಖುಷಿ
ಕಾಯಿಸುವವರಿಗೆ ಎಲ್ಲಿ ಸಿಕ್ಕೀತು?!!
ಎಲ್ಲಕ್ಕೂ ಯೋಗವಿರಬೇಕು;
ಜೀವನವಿಡೀ ಕಾಯುವ ಬರವಸೆ ಕೊಟ್ಟವ
ಈ ನಾಲ್ಕು ಕ್ಷಣ ಕಾದರೆ
ಬೆಂದುಹೋಗಲಾರ,
ಕಾಯುವುದೇ ಸೊಗಸು
ಪ್ರೀತಿಸುವವರಿಗಂತೂ ತೀರಾ ಸಲೀಸು!!

ಕಾದವನ ಬಾಗಿಸುವ ಕಲೆ
ಆ ಕಣ್ಣಿಗೆ ಕರಗತವಾದಂತಿದೆ,
ಅಗೋ ನೋಡು
ನನ್ನ ಪಾಡು ಕೇಳಲು
ಚಂದಿರ ಇಣುಕುವ ಪರಿ,
ಅವನೂ ಕಾಯುತ್ತಾನೆ
ಸಾಲದ ಬೆಳಕಲ್ಲಿ
ಬೆಚ್ಚಿದ ಇಳೆಯನ್ನ ಮುಚ್ಚಲೆಂದು
ಪ್ರಣಯ ಪೌರ್ಣಮಿಯಂದು!!
                               
                                     -- ರತ್ನಸುತ

ದಾವೆ ಪತ್ರ

ಮನಸಿಗೆ ಹಚ್ಚಿಕೊಂಡದ್ದ
ಸುಲಭಕ್ಕೆ ಬಿಡಿಸಿಕೊಳ್ಳಲಾಗದಲ್ಲ?
ಹಚ್ಚಿಕೊಳ್ಳುವ ಮುನ್ನ ಎಚ್ಚರಿಸದೆ
ಬಿಡಿಸಿಕೊಳ್ಳಬಹುದಾದ ಭಯದಲ್ಲಿ ಬದುಕುವುದು
ನಿಜಕ್ಕೂ ಹಿಂಸೆಯೇ ಸರಿ!!

ಅಲ್ಲ, ಈಗ ಬಿಡುಗಡೆಯ ಮಾತೇಕೆ?
ಹದವಾಗಿ ಬೆರೆತ ಉಸಿರಂತೆ
ಎದೆಯೆಲ್ಲ ಅವಳ ನಗೆಯ ಸಹಿ,
ನಕಲು ಮಾಡಲಾಗದಷ್ಟು ಅನುಪಮ ಸ್ಮಿತ!!

ವಿಷಯಕ್ಕೆ ಬರುವುದಾದರೆ,
ನಾನೇ ಕಳುವಾಗಿದ್ದೇನೆ
ತ್ವರಿತ ದಾವೆ ಹೂಡಬೇಕಿದೆ
ಅದೂ ಬಲು ಗುಪ್ತವಾಗಿ;
ಕಿಡಿಗೇಡಿ ಕಣ್ಣುಗಳು ನನ್ನನ್ನೇ ದಿಟ್ಟಿಸುತ್ತಿವೆ,
ಎಲ್ಲವನ್ನೂ ಮೀರಿ ನ್ಯಾಯ ಕೋರಬೇಕಿದೆ
ಆದರೆ ಉಮೇದಿನ ಕೊರತೆ!!

ಟೆಂಡರ್ ಕರೆಯದೆ
ಮನಸಿನ ಎಲ್ಲ ಕಾಮಗಾರಿಗಳನ್ನೂ
ಆ ಒಂದೇ ಕಂಪನಿಗೆ ಕೊಡಲಾಗಿದೆ,
ಎಲ್ಲೂ ಭ್ರಷ್ಟಾಚಾರದ ಸುಳುವಿಲ್ಲ
ಆದರೂ ಅದು ಮನಸನ್ನೇ ದೋಚುತ್ತಿದೆ,
ಕಂಪನಿಯ ಹೆಸರೂ, ಅವಳ ಹೆಸರೂ ಒಂದೇ
ನಿಜಕ್ಕೂ ಸೋಜಿಗದ ಸಂಗತಿ!!

ನನ್ನಲ್ಲಿ ನಾನೊಬ್ಬನಿದ್ದೆನೆಂಬುದನ್ನೇ ಮರೆಸಿ
ನಾಮಫಲಕವನ್ನೂ ತಿದ್ದಿದವಳೀಗ
ಅವಳ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾಳೆ,
ಆಯಾಸದಲ್ಲೂ ಏನೋ ಸುಖ
ನಾನು ನನ್ನನ್ನೇ ಮರೆತು ಕುಣಿಯುತ್ತಿರುವ ತಿಕ್ಕಲು ಪೂಜಾರಿ!!
                                                   
                                                         -- ರತ್ನಸುತ

ಇಂದಿಗಿಷ್ಟು

ಎಷ್ಟೆಲ್ಲ ಮಾತು ಇಂದಿಗೆ
ನಾಳೆಗೆ ಏನನ್ನೂ ಉಳಿಸಿಲ್ಲ
ಹೇಗೆ ಕಾಲವ ನೂಕುವುದು?

ಮತ್ತೆ, ಮತ್ತೆ ಅದೇ ಪುಂಗಿ ಊದಿದರೆ
ಸಹ್ಯವೆನಿಸುವುದಿಲ್ಲ
ಹಾಗಂತ ಕಟ್ಟು ಕಥೆಗಳ ಹೇಳಬಹುದೇ?
ಛೆ, ಛೆ... ಅದು ಒಲ್ಲದ ಕೆಲಸ

ಹಾ.. ಒಂದು ಪರೀಕ್ಷೆಯಿಟ್ಟಿದ್ದಾಳೆ,
ಅವಳಲ್ಲಿ ನಾ ಮೆಚ್ಚಿದ ಅಂಶಗಳ
ಕಾವ್ಯ ರೂಪಕ್ಕೆ ಇಳಿಸಬೇಕಂತೆ,
ಹರಿವ ನೀರಿಗೆ ತಗ್ಗು ಸಿಕ್ಕಂತಾಯ್ತು
ಸರಾಗಮಾನವಾಗಿ ಹರಿಯಿತಿಲ್ಲಿ
ತಲ್ಲಣರಹಿತ ಭಾವ ಲಹರಿ

ಎಲ್ಲಿಂದ ಮೊದಲಾಗಿಸಿದರೂ
ಅದೇ ನಾಚಿಕೆ ಕೊನೆಗೊಳಿಸುತಲಿದೆ
ಇನ್ನೆಲ್ಲಿಂದ ಮೂಡ ಬೇಕು ಪದ ಕಟ್ಟು?
ಇಳಿಜಾರು ಸಿಕ್ಕಿತೆಂದು
ಕೈ ಸೇರದಂತೆ ಭಾವನೆಗಳು
ಹರಿದು ಹಂಚಿಹೋದಾಗ
ಆರಿಸುವುದೆಲ್ಲಿ? ಬಿಡುವುದೆಲ್ಲಿ? ಬರೆವುದೆಲ್ಲಿ?

ಒಮ್ಮೆ ಆಕೆಯ ಚಿತ್ರ ಪಟದತ್ತ
ಕಣ್ಣಾಯಿಸಲೆಂದು ಹೋದವನು
ಮರಳಿ ಸಹಜ ಸ್ಥಿತಿಗೆ ಹೊರಳಿದ್ದು
ಗಂಟೆಗಳು ಕ್ಷಣಗಳಂತೆ ಉರುಳಿದ ಮೇಲೆಯೇ,
ಆ ಕಣ್ಣು ಮಾಯಾಜಾಲವೇ ಸರಿ!!

ಎಲ್ಲಿಗೆ ಬಂದು ತಲುಪಿಬಿಟ್ಟೆ?
ವಿಲಕ್ಷಣ ನಕ್ಷತ್ರಗಳೂ ಸಪ್ಪೆ ಅನಿಸುತ್ತಿವೆ,
ಆಕೆ ಕೈ ಹಿಡಿದು ನಡೆಸದ ವಿನಹ
ಒಂದು ಹೆಜ್ಜೆಯನ್ನೂ ಮುಂದಿಡಲಾರೆ
ಇನ್ನು ಬರೆವುದೆಂದರೆ ಹೇಗೆ?!!

ಅಗೋ.. ಆಗಲೇ ಬಂತವಳ ಮೇಘ ಸಂದೇಶ,
ಮತ್ತದೇ ಮಾತು ಮುಂದುವರಿಯಿತು
ಹಳಿ ಹಂಗು ತೊರೆದ ರೈಲಿನಂತೆ!!
                                                
                                         -- ರತ್ನಸುತ

An Enigma

I'm failing to recall her face
Had she been hiding it all along?
No, it was clearly evident
Heart beats got faster n faster
I can recall all that
But her face is still puzzling me!!

She did pose like a friend
Spoke as if she knew me
Laughed at my jokes
Withheld a tear in her eye
She did gaze with comfort
All that is striking me
But why not her face?!!

All those we shared
And those we spared
For time to come
May have not been so important
But yet is a story now
Which heart recites to infinity
But for God sake, where is she?

It's not far away
Though it seems to be so
It's not near either
My dreams must learn to slow down their pace
Coz it's not just me
It's not just her
It's we who make it superlative
For a long span of life

So why is she shying away?
Or perhaps I must be doing so
A blame is to shadow my weakness
And a whisper to seek her attention!!

It's all happening
But still with an enigma
Why am I failing to recall her?!!
                                       
                                  -- Rathnasutha

ರವಿ ತಾನಳಿಯದವ

ರವಿ ಎದ್ದು ಬೆಳಕು
ರವಿ ಮುಳುಗಿ ಕತ್ತಲೆ
ಅವರಿವರು, ಇವರವರು
ಯಾರು ಮುಳುಗಿಸಿದವರು?
ಉತ್ತರ ಸಿಗುವ ಮುನ್ನ
ಮೇಲೇಳಲಿ ನೂರು ಸೂರ್ಯರು
ಒಂದು ಮೂಲದ ಬೆಳಕ
ಕೊರತೆ ನೀಗಿಸಲು!!

ರವಿ ತಾನು ಸೋತವನು
ಅಂದವರು ಕಂಬಳಿಯ
ಹೊದ್ದು ಬೆಚ್ಚಗೆ ಮಲಗಿದರು
ಚುರುಕು ಮುಟ್ಟುವ ತನಕ;
ಅಂಬರವು ಎಷ್ಟೆಂದು
ತಂಬೆಲರ ಸಹಿಸುವುದು?
ಧಗೆ ಹರಿಯುವವರೆಗೆ
ಬಗೆಹರಿಯದು ಮೌಢ್ಯ

"ಮಣ್ಣಾದವನು ಮತ್ತೆ
ಹುಟ್ಟಿಬರಲಾರನೋ ತಮ್ಮ!!"
ಹುಟ್ಟುವವರಲ್ಲೇ ನೆಲೆಸುವನು ತಾ
ಬೇರಿಂದ ಬೆಂಬಲಿಸಿ
ಹೃದಯಗಳ ಹೊಕ್ಕವನ
ಯಾರಿಂದ ತಪ್ಪಿಸುವೆ?
ಹೇಗೆಂದು ತಪ್ಪಿಸುವೆ?

ಅಗೋ ಅಲ್ಲಿ ಹರಿದುರುಳಿದ
ಕಂಬನಿಗಳ ಮೇಲೊಂದು
ಮೌನ ಆವರಿಸಿದೆ,
ಘರ್ಜನೆಯ ಅದುಮಿಟ್ಟು
ಒಳಗೊಳಗೆ ಸಂಘರ್ಷಿಸಿಕೊಳ್ಳುತ್ತ
ಸ್ಪೋಟಕವಾಗುತ್ತಿದೆ,
ಮೌನ ಸಿಡಿದಾಗ
ಎಲುಬಿಲ್ಲದ ನಾಲಗೆಯ ಮಾತು
ಸ್ತಬ್ಧ, ನಿಶಬ್ಧ!!

ಇಲ್ಲೇ ಇವೆ ಎಲ್ಲ ಪುರಾವೆ
ಇಲ್ಲೇ ಎಲ್ಲೋ ಕಳುವಾಗಿವೆ
ಬೇಕು ಶುದ್ಧ ಹಸ್ತ
ನೆತ್ತರಿಗೂ, ಕಂಬನಿಗೂ
ಸಾಂತ್ವಾನಕೂ, ಸಮರಕ್ಕೂ;
ನೋಡಿಕೊಳ್ಳಿ ಇದಯಾ ನಿಮ್ಮ ಬಳಿ?
ಇದ್ದರೆ ಯುದ್ಧಕ್ಕೆ ಸಜ್ಜುಗೊಳ್ಳಿ!!
                          
                            -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...