Friday 12 June 2015

ಬೇಕು-ಬೇಡ

ಬರಗೆಟ್ಟ ದನಿಗಿಲ್ಲಿ
ಕಿವಿಗೊಟ್ಟು ಸತ್ತಾಗ
ಮೇಲೆತ್ತಲು ನೀನು ನಗಲೇ ಬೇಡ
ಉಸಿರುಗಟ್ಟಿದ ಎದೆಯ
ಮೇಲೊಂದು ಪದ್ಯವಿದೆ
ದಯಮಾಡಿ ನೀ ಅದನು ಓದಬೇಡ

ಮುನಿಸಲ್ಲಿ ತುಟಿನೇರಕೆ
ನೋಟ ಬೀರುವೆನು
ಕಚ್ಚಿದೇಟಿಗೆ ನನ್ನ ಕೊಲ್ಲಬೇಡ
ಹೇಳಹೆಸರಿಲ್ಲದವನಂತೆ
ನಾ ಸೋತಾಗ
ದುರುಗುಟ್ಟುತ ದೂರ ನಿಲ್ಲಬೇಡ

ಗೋಡೆಗೊರಗಿ ನಿಂತ
ಗಾಢವಾದ ಹೃದಯ
ಎಳೆದ ಗೀಟ ದಾಟಿ ಹೋಗಬೇಡ
ದೂಡುವಾಟದ ನಡುವೆ
ಸೋಲೊಪ್ಪಿಕೊಳ್ಳುವೆ
ಯಾಮಾರಿಯೂ ನನ್ನ ದೂಡಬೇಡ

ಬಿಗಿಸಿಟ್ಟರೂ ಸಹಿತ
ಕದ್ದು ಜಾರಲುಬಹುದು
ಉಟ್ಟ ಸೀರೆಗೆ ಪಾಠ ಹೇಳಬೇಡ
ಕಟ್ಟಿದ ಕುರುಳಲ್ಲಿ
ಬಡಪಾಯಿ ಪ್ರಾಣವಿದೆ
ಹಾರಿಸಿ ಉಸಿರಾಡು ಅನ್ನಬೇಡ

ಬೇಡೆನ್ನುವ ನಾನು
ಎಲ್ಲ ಬೇಡೆನ್ನೆನು
ಬೇಕಾದರೆ ತಡ ಮಾಡಬೇಡ
ಸಾಕಾಗಿದೆ ಇನ್ನು
ಭ್ರಮೆಯಲ್ಲಿ ಜೀವನ
ನಾ ಅರಳುವ ಮೊದಲೇ ಬಾಡಬೇಡ!!
                                     
                             -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...