Tuesday 25 November 2014

ನಮಗೊಂದು ಹೆಸರು ಕೊಡಿ

ನಮಗೆ ಊರಿಲ್ಲ, ಸೂರಿಲ್ಲ
ಇದ್ದ ಕಾಡು ಈಗಿಲ್ಲ
ಜಿಗಿ-ಜಿಗಿದು ಮೆರೆಯಲಿಕ್ಕೆ 
ಕನಸಿನ ಕೊಂಬೆಗಳಿಲ್ಲ
ಕಸಿದು ತಿನ್ನುವ ಚಾಳಿ
ಬೇರೆ ದಾರಿ ತಿಳಿದಿಲ್ಲ;
ನಾವು ಯಾರೆಂದು ಕೇಳದಿರಿ
ನಮಗೆ ಹೆಸರೆಂಬುದೇ ಇಲ್ಲ!!
ಊರೂರು ಅಲೆದಲೆದು
ಪೀಡೆಗಳನಿಸಿಕೊಂಡೆವು
ಕೆಂಗಣ್ಣಿನ ಖಾರ ನೋಟಕೆ
ನಾವೂ ಸಹ ಬೆಚ್ಚಿದೆವು
ಹಸಿದಾಗ ವಿಧಿಯಿಲ್ಲದೆ
ನಿಮ್ಮ ಶಾಪಕೆ ಗುರಿಯಾಗಿ
ಸ್ವಾಭಿಮಾನವ ಬಚ್ಚಿಟ್ಟೆವು
ಚೂರು ಚೂರಾಗಿ!!
ಮಹಡಿಗಳ ಮೇಲೆ
ಓಡೋಡಿ ಗದ್ದಲವೆಬ್ಬಿಸಿದೆವು
ತುಂಟಾಟದ ವಯಸು ನಮದು
ಆಟಕೆ ಮೈದಾನಗಳಿಲ್ಲ;
ಯಾರೋ ಅಟ್ಟಿಸಿದರೆಂದು
ನಿಮ್ಮ ಮೇಲೆರಗಿದೆವು
ಆತ್ಮ ರಕ್ಷಣೆಯೇ ಹೊರತು
ಪರಚುವ ಮನಸಿಲ್ಲ!!
ಇನ್ನೂ ಪುಕ್ಕಲು ಮರಿಗಳ
ಎದೆಗೆ ಬಾಚಿ ಇಳಿದೆವು
ಹೋರಾಟದ ರಣರಂಗದಿ
ಸಮರವನ್ನೆದುರಿಸಿ;
ನಿಮ್ಮ ಹಿತ್ತಲ ತೆಂಗು
ಮತ್ತದರ ಗರಿ ಸಪ್ಪಳ
ಜೋಗುಳವಾದವು ನಮಗೆ
ತಂಬೆಲರ ಹೊದಿಸಿ!!
ಜಂಬೋ ಸರ್ಕಸ್ಸುಗಳಲಿ
ಬೀದಿ ಕುಣಿತ ನಾಟಕದಲಿ
ಮೃಗಾಲಯದ ಬೋನಿನಲ್ಲಿ
ಬಂಡವಾಳವಾದೆವು;
ಅಲ್ಲೆಲ್ಲ ಇಟ್ಟ ಹೆಸರು
ಒಪ್ಪುವಂತವಲ್ಲ ಎಮಗೆ
ಅದಕಾಗಿ ನಿಮ್ಮಲೊಂದು
ಬೇಡಿಕೆಯನ್ನಿಟ್ಟೆವು!!
                   --ರತ್ನಸುತ

ಗಹನವಾದ ಗೀಟುಗಳು

ಬೆಂಕಿಯ ನೆರಳಲಿ ನಡುಗಿದ ಆತ್ಮಕೆ
ಮುಗಿಲೇ ನೀಡಿತು ಕಂಬಳಿ ಹೊದಿಕೆ
ಗಾಳಿಯ ಸಂಚಿಗೆ ಬೆಂಕಿಯು ಬೆಚ್ಚಿತು 
ಮುಗಿಲೂ ಬೆದರಿತು ಆತ್ಮದ ಜೊತೆಗೆ
ಸಾಗರ ದಣಿವನು ನೀಗಿಸಲಾಗದ
ಬೆತ್ತಲ ಮೋಡವ ಶಪಿಸುವ ವೇಳೆ
ಕಂಬನಿ ಜಾರಿತು ಸಣ್ಣಗೆ ಅಲ್ಲಿ
ಹಸಿವಿನ ಕ್ರಾಂತಿಯ ತಣ್ಣನೆ ಜ್ವಾಲೆ
ಮರದ ಗಾಯದ ಗೋಂದಿಗೆ ಅಂಟಿದ
ನೊಣಕೆ ಕೊನೆ ಉಸಿರಾಟದ ಸರದಿ
ಬುಡವು ಅಲುಗಾಡಿತು ನಿಂತಲ್ಲೇ
ಬೇರಿಗೆ ಒಪ್ಪಿಸಿ ಸಾವಿನ ವರದಿ
ಇದ್ದಿಲು ಉರಿದು ಸಾರಿತು ಸದ್ದನು
ಪುಟಿದ ಕಿಡಿಯನು ಅಪ್ಪಿತು ಸೆರಗು
ಅರೆ-ಬರೆ ಬೆಂದ ಮಾಂಸವ ಮೇಯಲು
ನರಿ ಹರಿಸಿದ ಕಣ್ಣೀರಿಗೂ ಕೊರಗು
ಚಿಟ್ಟೆ ಬರೆಯಿತು ಕಾಣದ ಹೂವಿಗೆ
ರೆಕ್ಕೆಯ ಬಸಿದು ಪ್ರೇಮದ ಪತ್ರ
ಬೆಟ್ಟದ ದೇವರ ಗೋಪುರ ಉರುಳಿ
ಉಳಿಯಿತು ಅಡಿಯಲಿ ನೆತ್ತರ ಚಿತ್ರ
ಮೌನದ ದಡದಲಿ ಮಾತಿನ ಸಂಭ್ರಮ
ಹತ್ತಿರವಾದವು ದೂರದ ಅಲೆಗಳು
ಎಲ್ಲವ ಮೀರಿ ತಪ್ಪಿಸಿಕೊಳ್ಳಲು
ಸಿಲುಕಿದೆ ನನ್ನದೇ ಮೋಸದ ಬಲೆಯೊಳು!!
                                   -- ರತ್ನಸುತ

ನನ್ನ ಕಥೆ

ನಾನು ಖಾಲಿಯಾಗಿದ್ದೇನೆ
ತುಂಬಿಸುವ ಪ್ರಯತ್ನಗಳು ಸೋತು
ಈಗ ಎಲ್ಲಕ್ಕೂ ತಿಲಾಂಜಲಿ ಹಾಡಲಾಗಿದೆ
ನನ್ನ ಹುಡುಕುವ ಕುತೂಹಲಕೆ
ಸಿಗದ ಎಲ್ಲ ಸುಳುವುಗಳೂ ಬಯಲಾಗಿವೆ
ನಾನಾರೆಂಬುದು ಪ್ರಶ್ನೆಯಲ್ಲ, ಅಪ್ರಸ್ತುತ ಪ್ರಲಾಪ
ನೀರಿನ ಬಣ್ಣಕ್ಕೂ, ಗಾಳಿಯಾಕಾರಕ್ಕೂ
ನಡುವಿನ ಸಣ್ಣ ಒಗಟು ನಾನು
ಕೈ ಚಾಚಿಕೆ ಸಿಗದ ಬಾನು, ಇನ್ನೂ ಹೇಳಹೋದರೆ ಮಣ್ಣು
ನನ್ನ ಕೂಗಿಗೆ ನಾನೇ ಮಾರ್ದನಿ
ಅದಕ್ಕೂ ನಾನೇ ಕಿವಿ;
ನಾ ಬರೆಯದ ಕವಿತೆಗಳಿಗೆಲ್ಲ ಸ್ವಯಂಘೋಷಿತ ಕವಿ
ನಾನು ಕನಸಿನ ಕತ್ತಲು
ಬೇಡದ ಕಾಮದ ನಡುವೆ ಹರಿವ ಕಣ್ಣೀರು,
ನಿರ್ಲಜ್ಜ ಬೆವರು
ನಾ ದೇವರ ಅನುಯಾಯಿ
ಎಂದೂ ಅವನ ಕಣ್ಣಿಗೆ ಬೀಳದವನು
ಅವನೇ ನಾನೆಂದು ಪ್ರತಿಪಾದಿಸುವವನು
ನಾ ನರಕದ ಬಾಗಿಲು
ಸ್ವರ್ಗದ ನಕಲಿ ಕೀಲಿ
ನನ್ನ ನೀಗಿಸುವುದು ಸಾವೊಂದೇ
ನಾನು ಖಾಲಿಯಾಗಿದ್ದೇನೆ…
                                               -- ರತ್ನಸುತ

ದೊರೆಸಾನಿಯ ಸಂಗಡ

ಸೆಳೆದ ನಿನ್ನ ಕಣ್ಣ ಕುರಿತು
ಬರೆದು ಅತೃಪ್ತಿಯಿಂದ ಬಿಸಾಡಿದ ಕಾಗದಗಳೆಲ್ಲ
ತಿಪ್ಪೆಯ ರಸಗೊಬ್ಬರವನ್ನು ಶ್ರೀಮಂತವಾಗಿಸಿದವು;
ಅದ ಫಲಿಸಿಕೊಂಡ ಬಳ್ಳಿಯ ಒಂದು ಹೂವು
ನಿನ್ನ ಮುಡಿಯೇರದಿದ್ದರೆ
ಪ್ರೇಮ ಕೃಷಿ ಪರಿಪೂರ್ಣವಲ್ಲ!!

ಮೊರದಲ್ಲಿ ಹಸನಾದ ದವಸದ ಕಾಳಿಗೆ
ನೀ ಕೊಟ್ಟ ಗಾಜಿನ ಬಳೆಗಳ ಪರಿಚಯಕೆ
ಮೊಳಕೆಯೊಡೆದರೆ ಅದಕೆ ನೀನೇ ಹೊಣೆ;
ಬರಗಾಲದ ಬಯಲು ಹಸಿಯಾದರೆ
ದವಸಕ್ಕೆ ಹಂಬಲಿಸಿ ಸಸಿಯಾದರೆ
ಬಾಗೀನ ಪಡೆಯಲು ಸೀರೆಯುಟ್ಟು ಬಾ!!

ಒಲೆ ಮೇಲೆ ಇರಿಸಿದ ಹಾಲು
ಕಿಚ್ಚು ಹೊತ್ತಿಸುವಂಥ ನಿನ್ನ ನಗೆಯಿಂದ
ಉಕ್ಕಿ ಚೆಲ್ಲಾಡಿದೆ ಕೋಣೆಯ ತುಂಬ;
ಸಾರಿಸಿದ ಒಲೆ ಮೇಲೆ ರಂಗವಲ್ಲಿ
ನೀ ಮೂಡಿಸಿದ್ದು ಸುಳ್ಳು ಅನ್ನದಿರು ಪಾಪ
ಮಸಿಭರಿತ ಉಸಿರಾಟ ನಿಲ್ಲಬಹುದು!!

ಕಣಜದ ಕೋಣೆಯಲಿ ನೀ ಬಡಿಸಿ ಬಂದ
ಗೆಜ್ಜೆಯ ಸದ್ದಿಗೆ ಕಿವಿಯಾದ ಗೋಡೆಗಳು
ಜೀವಂತವಾಗಿವೆ ಮತ್ತೆಮತ್ತೆ
ಅದನೇ ಪ್ರತಿಧ್ವನಿಸಿಕೊಂಡು;
ಎಣ್ಣೆ ತೀರಿದ ಹಣತೆ ಉರಿದು ಬೀಳುತಿದೆ
ನಿನ್ನ ತಾ ನೋಡಲಾಗದ ದೌರ್ಭಾಗ್ಯಕೆ!!

ಗೋಡೆಗೆ ಜೋತು ಏಕ ಚಿತ್ತನಾಗಿ
ನಿನ್ನ ಚಲನ-ವಲನ ಗಮನಿಸುತಲೇ
ಉನ್ಮತ್ತನಾದ ನೇಗಿಲು
ಜೋಡಿ ಎತ್ತುಗಳಿಗೆ ನಿನ್ನ ಬಣ್ಣನೆ ಒಪ್ಪಿಸಿ ಹೂಳುವಾಗ
ನೀ ತಂದ ತಂಬಿಗೆಯ
ಮಜ್ಜಿಗೆಯ ಗುಟುಕಲ್ಲಿ ನಿರಾಯಾಸ ನನಗೆ
ಧನ್ಯತೆ ನೀ ಮೆಟ್ಟಿ ನೇಗಿಲ ಗೆರೆಗೆ!!

ಕುರಿ ಕಂಬಳಿಯ ಮೆಲೆ
ನೀ ಕಂಡ ಕನಸುಗಳ ಸಾಕ್ಷಿಗೆ
ಬತ್ತದ ತಲೆದಿಂಬು;
ಹೊದ್ದ ಚಾದರ ಎಲ್ಲವ ಎಣಿಸಿ
ಲೆಕ್ಕ ಒದಗಿಸಿತೆನಗೆ
ರೆಪ್ಪೆ ಕಾವಲ ನಡುವೆ
ನನ್ನ ಕಣ್ತುಂಬೋ ಗಳಿಗೆ!!

                                                           -- ರತ್ನಸುತ

Sunday 23 November 2014

ಸೂತಕದಲ್ಲೇ ಅರಳಿದ ಕವನ

ಪಟ್ಟು ಹಿಡಿದು ಕೂತೆ 
ಚಟ್ಟವೇರಿ ಬಂದ ಸಾಲು 
ಥಟ್ಟನೆ ಎದುರಾಗದೆ 
ಆ ಬೀದಿ, ಈ ಬೀದಿ ಸುತ್ತಾಡಿ 
ಕೊನೆಗೆ ನನ್ನ ಮನದ ಸ್ಮಶಾಣದಲ್ಲಿ 
ಮಣ್ಣಾಗಲು ಬಂದೇ ಬಿಟ್ಟಿತು!!

ಇನ್ನೂ ಜೀವಂತವಾಗಿದೆ ಸಾಲು 
ಕವಿತೆಯ ಚಟ್ಟ ಅದನ್ನು ಕಟ್ಟಿಹಾಕಿದೆ 
ಉಸಿರಾಡದಂತೆ ಒತ್ತಾಯಪೂರ್ವಕವಾಗಿ;
ಕಣ್ಣೀರ ಪಸೆ ಬಯಲಾಗಿ 
ಮಣ್ಣಾಗಿಸಲು ಮನಸಾಗಿಲ್ಲ
ಆದರೂ ಕಾರ್ಯನಿಷ್ಠೆಯ ಪಾಲಿಸಿ 
ಗುಂಡಿಯ ಮುಚ್ಚಿಬಿಟ್ಟೆ!!

ಚಟ್ಟದ ಅಲಂಕಾರಗಳನ್ನ 
ಗೋರಿಗೆ ಪರಿಚಯಿಸಿ
ಗಂಧ ಮೆತ್ತಿದ ಬಿದಿರ ಕಾಲು ಮುರಿದು 
ಮಕಾಡೆ ಮಲಗಿಸಿದೆ;
ಒಳಗೆ ಸಾಲು ಸಾಲ ಹಡೆದು 
ಮಣ್ಣಿಂದಾಚೆ ಮೊಳೆದು
ಗೋರಿಯ ನಿಲುವುಗಲ್ಲಿಗೆ 
ಹಬ್ಬಿ ಮುದ್ದಾಡಿತು!!

ಕವಿತೆ ಅಂದರೆ ಅನುಭವ 
ಕಲ್ಲಿಗೆ ಆಗಿದ್ದೂ ಅದೇ;
ತಾನು ವಾಚಿಸುತ್ತಿದ್ದ ಕವಿತೆಯನ್ನ 
ಆಲಿಸುತ್ತಲೇ ಬಳ್ಳಿ ಬಿಗಿಯಾಗಿ 
ಕಲ್ಲೂ ಕರಗಿತು 
ಅಲ್ಲಿದ್ದ ಗೋರಿಯೂ ಸಮತಟ್ಟಾಗಿ 
ಇಲ್ಲವಾಯಿತು!!

ಮನಸಿಗೆ ಅಂಟಿದ್ದ ಸೂತಕ 
ಬಿಟ್ಟುಕೊಳ್ಳುತ್ತಲೇ 
ಮತ್ತೆಲ್ಲೋ ಸೂತಕದ ಛಾಯೆ;
ಬೆರಳನ್ನೂ ಬೆಪ್ಪಾಗಿಸಿ 
ಹಾಳೆಗೆ ವರ್ಗಾವಣೆಯಾದಾಗಲಷ್ಟೇ 
ಮನಸು ಹಗುರಾಗಿದ್ದು!!

                             -- ರತ್ನಸುತ 

ಚೀತ್ಕೊರಳ ಮೌನ

ತೆರೆದಿಟ್ಟ ಮನವೀಗ ಕೆನೆಗಟ್ಟಿದೆ
ಉಸಿರೆರೆದು ಸೋಸಿ ತಗೋ ನನ್ನೊಲವನು
ಎದೆಗೆದೆಯ ಕೊಟ್ಟೊಮ್ಮೆ ಕೇಳಿ ನೋಡು

ಮಾತಿಗೂ ಮೀರಿದ ಹಂಬಲವನು


ಅಂದಾಜಿಗೂ ಮೀರಿದ ಗೋಜಲ
ಹೆಣೆಯುತ್ತ ಎದೆ ವ್ಯಾಪ್ತಿ ಬಲೆಯಾಗಿದೆ
ಹೃದಯಕ್ಕೂ ನಿನ್ನನ್ನು ಬೆರೆಯುವಾಸೆ
ಆದರೆ ಪಾಪ ಬಲೆಯಲ್ಲಿ ಸೆರೆಯಾಗಿದೆ


ಕಂಡದ್ದು ಹುಸಿಗನಸು ಎಂದನಿಸಿದೆ
ನಿನ್ನ ನಿರ್ಗಮನದ ದಾರಿ ನೋಡುತಿರಲು
ಕಣ್ಣೆರಡು ಹಿಡಿದಿಡಲು ಸೋತಂತಿದೆ
ಬೇಡವೆಂದರೂ ಕಣ್ಣೀರು ಜಾರುತಿರಲು


ಮುಂಜಾನೆ ಮಂಜಲ್ಲಿ ಗಾಜು ಪರದೆ
ಅಲ್ಲಿ ಬಿಡಿಸಿಟ್ಟ ರೇಖೆಯಲಿ ನೀ ಮೂಡಿದೆ
ಸುಡು ಬಿಸಿಲ ಸರಸಕ್ಕೆ ನೀ ಕರಗಿದೆ
ನಿನ್ನ ಕಾಪಾಡಿಕೊಳ್ಳುವಲಿ ಸೋತು ಹೋದೆ


ಹೆಸರಿಟ್ಟು ಹೊರಡದಿರು ನೆನಪುಗಳಿಗೆ
ಯಾವ ಕ್ಷಣದಲ್ಲೂ ತಾವು ಪುಟಿದೇಳಬಹುದು
ಚೂಪುಗಲ್ಲಿನ ಹಾದಿ ನಿನ್ನ ಹೊರತು
ಹರಿದ ರಕ್ತವಾದರೂ ನಿನ್ನ ಸೋಕಬಹುದು!!

 
                                        -- ರತ್ನಸುತ

ರತಿ-ಮತಿ, ಸ್ಥಿತಿ-ಗತಿ

ಚುಂಬನದಿಂದ ಚಂದವಾದುದ್ದಲ್ಲ
ಚಂಚಲತೆಯಿಂದ ಚಂದ ಕಣೆ
ನಮ್ಮ ಪ್ರೇಮ ಪುಸ್ತಕದ ಮುಖಪುಟ;

ಒಳೆಗೆಲ್ಲ ಗುಟ್ಟಿನನಾವರಣ,
ಅದರೊಳಗೂ ಗೌಪ್ಯತೆ
ಕೈ-ಕೈ ಹಿಡಿದು ಪುಟ ಹೊರಳಿಸುವಾಗ
ಗಮನ ಮಾತ್ರ ಮತ್ತೆಲ್ಲೋ!!


ನಿನ್ನ ಅಂಗಮುದ್ರೆಗೂ, ಅಂಗುಷ್ಠಕೂ
ಮೀಸಲಿಟ್ಟು ಬರೆದ ಕವನ
ಹರಿದ ಕಾಗದದ ಚೂರುಗಳಂತೆ
ಮರು ಹೊಂದಾಣಿಕೆಯ ಬಯಸಿವೆ;
ಜೋಡಿಸುತ್ತ ಕೂತರೆ ಇರುಳು ನಾಚಿ
ಕೆಂಪೆದ್ದು ಬೆಳಕಾಗಿಬಿಡಬಹುದು,
ತಗಾದೆ ತೀರುವಂತದ್ದಲ್ಲ!!


ನವಿರು ಕೂದಲ ಶೀಗೆಕಾಯಿ ಘಮ
ಮತ್ತದರ ಉನ್ಮತ್ತ ಘಾಟು
ಸೀದ ಹೃದಯಕ್ಕೆ ಸಣ್ಣ ಏಟು;
ಎಟುಕದಂತಿರಿಸಿದ ಬೆರಳಿಗೂ
ಮಿಟುಕದಂತಿರಿಸಿದ ರೆಪ್ಪೆಗೂ
ನಿತಂಬದ ಪಾರಾಯಣ!!


ಅಲ್ಲಲ್ಲಿ ತೊಡರಿದ ತಪ್ಪುಗಳ ತಿದ್ದಿ
ಒಪ್ಪುಗೆಯ ಪಡೆವುದೇ ಪುಣ್ಯ
ನಗೆ ಉಕ್ಕಿದರೆ ಬಾಳು ಧನ್ಯ!!


ಕೊನೆಗೊಂದು ಕೀಟಲೆ,
ಗಲಾಟೆಯಿಲ್ಲದ ಸಮರ;
ಚೆದುರಿದ ಚಾದರಕೆ ಎಲ್ಲವ ತಿಳಿಪಡಿಸಿ,
ಸರಿಪಡಿಸಿ ಗೌಣವಾಗಿಸಿದ ಮೇಲೆ
ಪುನರಾವರ್ತನೆಗಳಿಗೆ ಸುಕ್ಕಾಗಿ
ಹಾಲು ಚೆಲ್ಲಿದ ಬೆಕ್ಕಾಗಿ ಮುದುಡಿಕೊಂಡಾಗ
ಮಂದಹಾಸಕ್ಕೆ ಚಂದ್ರಹಾಸವೂ ನಾಚಿತು!!


                                       -- ರತ್ನಸುತ

ಜೀವ-ಜೀವಗಳ ನಡುವೆ

 (1)
ಅಲ್ಲೊಂದು ಜೀವ-
ಮೌನದ ಸಮರದಿ ಸೋಲನು ಕಂಡು...

ಸರಹದ್ದುಗಳ ಒಳಗೇ ಉಳಿದು
ಚೀತ್ಕಾರದ ಚಿತ್ತಾರವು ಚೆದುರಿ
ನಡುವೆ ಬಿಕ್ಕಳಿಕೆಗಳಿಗೆ ಹೆದರಿ
ಕಂಬನಿಯೊಳಗೆ ಗೀಚಿದ ಸಾಲು
ಹರಿಯಿತು ಕೆನ್ನೆಯ ಸುಕ್ಕನು ಬಳಸಿ
ಕಾದೆವು ಉತ್ತರಗಳಿಗೆ ಈ ದಿನ
ಏಳುವ ಪ್ರಶ್ನೆಗಳಿಲ್ಲದೆ ಉಳಿದು


ಇಲ್ಲೊಂದು ಜೀವ-
ಕೊರಳಾಗುವೆವು ನಿಮ್ಮ ದನಿಗೆ
ನೆರಳಾಗುವೆವು ಅನವರತ
ಬದಲಾಗಲಿ ಈ ಬೆಳವಣಿಗೆಗಳು
ಸ್ವೇಚ್ಛೆ ನಿಮ್ಮದೇ ಆಗಿಸುತ


(2)
ಅಲ್ಲೊಂದು ಜೀವ-
ಹೂವಿನ ಪಕಳೆಯ ಮೃದು ಭಾವನೆಯಲಿ
ಉಗುರಿನ ಗುರುತನು ಮರೆಸುವೆವು
ಇನ್ನೂ ಮೊಗ್ಗಿನ ನಿರ್ಮಲ ಮನದಲಿ
ಒತ್ತಾಯದಲೇ ಅರಳುವೆವು
ನರಳುವೆವು ಹೆಜ್ಜೆಜ್ಜೆಯಲೂ
ಹಿಂದಿರುಗಲು ಹೆದರುತ ಹಾದಿಯಲಿ
ಮರೆಸುವೆವು ಗಾಯಗಳ ನೋವನು
ಸಮಾಜ ನೋಟಕೆ ಅಂಜುತಲಿ


ಇಲ್ಲೊಂದು ಜೀವ-
ಭರಿಸುವೆವು ನಿಮ್ಮ ಭಾರವನು
ಹೊಣೆ ಹೊತ್ತು ಹಗುರಾಗಿಸುತ
ನೀಡುವೆವು ಅಭಯ ಹಸ್ತ ನಿಮಗೆ
ಹಾರಿರಿ ಆಗಸ ಮೀರಿಸುತ


(3)
ಅಲ್ಲೊಂದು ಜೀವ-
ಅಕ್ಷರ ಕಲಿಸುವ ಗುರುಗಳೇ ಕೇಳಿ
ನಾವೆಂದಿಗೂ ನಿಮ್ಮಾಸರೆ ಬಳ್ಳಿ
ಅಪ್ಪ, ಅಮ್ಮ ನಂತರ ನೀವೇ
ದಾರಿ ದೀಪದ ಹಿತ ಬೆಳಕಲ್ಲಿ
ಬಂಧು, ಬಳಗ ನಿಮ್ಮೊಳಗೆಮ್ಮನು
ಉಳಿಸಿರಿ ನಗುವಿನ ಸಿರಿಯಾಗಿ
ಎಡವದ ಹಾಗೆ ನಡೆಸಿರಿ ನಮ್ಮನು
ಹಿಡಿಗೆ ಚಾಚಿದ ಬೆರಳಾಗಿ


ಇಲ್ಲೊಂದು ಜೀವ-
ಇರುವೆವು ನಿನ್ನ ರಕ್ಷಣೆಗೆ
ಸರಿಯಾದುದ ಕಲಿಸೋ ಶಿಕ್ಷಣಕೆ
ನೀ ನೀಡದ ಶಾಪಕೆ ಪ್ರತಿಯಾಗಿ
ನಾವಿರುವೆವು ನಿಮ್ಮ ಜೊತೆಯಾಗಿ


(4)
ಅಲ್ಲೊಂದು ಜೀವ-
ಆಗುವಿರಾ ಹಾರಾಟಕೆ ನೀವು
ಬೆಂಬಲ ಸೂಚಕ ರೆಕ್ಕೆಗಳು
ಚುಕ್ಕಿಗಳಾಟಕೆ ಕರೆದಿವೆ ನಮ್ಮನು
ಕವಿದಿರೆ ಸುತ್ತಲೂ ಕಾರಿರುಳು
ನೀಡುವಿರಾ ನಿಮ್ಮೊಪ್ಪಿಗೆ ಕೂಡಲೇ
ಚಂದಿರನಂಗಳದಿ ಒಮ್ಮೆ
ಸುತ್ತಿ ಬರುವ ಆಸೆಯಾಗಿದೆ
ಒಬ್ಬಂಟಿತನದ ಹಂಗಿರದೆ


ಇಲ್ಲೊಂದು ಜೀವ-
ಹಾರು ಓ ಸ್ವತಂತ್ರ ಹಕ್ಕಿಯೇ
ಅನುಮಾನಗಳೇ ಇರದಂತೆ
ಇನ್ನು ಬದುಕ ನೀನೇ ರೂಪಿಸು
ಎಲ್ಲವೂ ನಿನ್ನಿಷ್ಟದಂತೆ....

      
                           -- ರತ್ನಸುತ

ಒಂದಿಷ್ಟು ತಿಳಿದದ್ದು

ಆಲದ ಮರದ ಕೆಳಗೆ
ಕಲ್ಲು ಬೆಂಚಿನ ಮೇಲೆ
ಕೂತು ತೂಡಿಸುವವನ ಕೇಳಿ ನೋಡು...

ಈ ಜಗತ್ತಿನ ಚಿತ್ರಣವನ್ನ
ಸೊಗಸಾಗಿ ಬಣ್ಣಿಸುತ್ತಾನೆ
ತಾ ಕಂಡ ಕನಸುಗಳ ಮಸಾಲೆ ಬೆರೆಸಿ!!


ಮದುವೆ ಮನೆಯ
ಬಚ್ಚಲ ಪಾತ್ರೆ ತಿಕ್ಕಿ ತಿಕ್ಕಿ
ಕೈ ಸವೆಸಿಕೊಂಡವಳ ಕೇಳಿ ನೋಡು
ಅದ್ಭುತ ರುಚಿಗಳ ಪಾಕ
ಆಯಾ ಪಾಕದ ಪದಾರ್ಥಗಳನ್ನ
ಪಟ್ಟಿ ಮಾಡುತ್ತಾಳೆ ಅಲ್ಲಲ್ಲಿ ಕಣ್ಣೀರು ಸುರಿಸಿ!!


ಬಸ್ ನಿಲ್ದಾಣದ ಆಜುಬಾಜು
ಭಿಕ್ಷೆ ಎತ್ತುತ್ತ ಕಾಲ ಕಳೆದವನ
ಸಮಯದ ಮಹತ್ವ ತಿಳಿದು ನೋಡು
ಸಮಯಕ್ಕೂ, ಚಿಲ್ಲರೆ ಕಾಸಿಗೂ
ಸಂಬಂಧ ಬೆಸೆದು ಬೋಧಿಸುತ್ತಾನೆ
ವ್ಯವಹಾರಸ್ತನಂತೆ ಹರಕಲು ಬಟ್ಟೆ ಧರಿಸಿ!!


ಆಸ್ತಿಕನ ವಿಚಾರಗಳಿಗಿಂತ
ನಾಸ್ತಿಕನ ವಿಚಾರಧಾರೆಯಲ್ಲಿ
ದೇವರನ್ನ ಹುಡುಕಿ ನೋಡು
ಜನನ, ಉಳಿವು, ಅಳಿವುಗಳ
ಸಂಪನ್ನ ಸತ್ವ ಸಾರದ ಅರಿವಾಗುವುದು
ಅಲ್ಲಲ್ಲಿ ಷರತ್ತುಗಳ ದಂಡ ವಿಧಿಸಿ!!


ಒಂದೇ ದಿನದ ಬದುಕೆಂದರಿತರೂ
ಆ ದಿನದ ಮಟ್ಟಿಗೆ ಸಂಪೂರ್ಣ ಬದುಕುವ
ಹೂವಲ್ಲಿ ಬದುಕಿನ ಕುರಿತು ಅರಿತು ನೋಡು
ಚಿಕ್ಕ ಚಿಕ್ಕ ವಿಷಯಗಳ
ವಿಶೇಷವಾಗಿಸಿಕೊಳ್ಳುವ ವಿಚಾರ ಮೂಡುತ್ತದೆ
ವಿವೇಚನೆಗಳಿಗೆ ವಿವೇಕವ ತೊಡಿಸಿ!!


                                            -- ರತ್ನಸುತ

ಆಕೆಯ Someಕಲನದಿಂದ

ತಡ ಮಾಡಿ ಬರಬೇಡ
ಕೊಡಲೇನೂ ತರಬೇಡ
ಕೊಟ್ಟದ್ದು ಕೊಂಡದ್ದು ಲೆಕ್ಕಕಿಲ್ಲ;

ಮುಗಿಲಾದರದು ಕೂಡ
ತಡವಾಗಿ ಕರಗುವುದು
ಮೈದೆರೆದ ಬುವಿಗಾವ ಕೋಪವಿಲ್ಲ!!


ಅದು ಬೇಡ, ಇದು ಸಾಕು
ಇದ್ದುದ್ದರಲೇ ಬದುಕು
ಎಂಬೆರಡು ಮಾತಿನಲಿ ನಿಂತೆ ನಾನು;
ಅದುಮಿಟ್ಟು ಅಸೆಗಳ
ಹದಗೆಟ್ಟ ಬಯಕೆಗಳ
ಮೆದುವಾಗಿ ನಗುವಿನಲೇ ಕೊಂದೆ ನೀನು!!


ಸಿಹಿ ಗಾಳಿಯಲಿ ನಮ್ಮ
ಸಹಿಯಾದ ಒಪ್ಪಂದ
ಒಲವೆಂಬ ವಹಿವಾಟು, ಹೃದಯ ಸಂತೆ;
ನೂರೊಂದು ಮಾತಿನಲಿ
ನೆರವೇರದ ಬಂಧ
ಮೌನಕ್ಕೆ ಶರಣಾಗಿ ಹೊಸೆದುಕೊಂತೇ?!!


ತಡ ಮಾಡಿದೆ ಮತ್ತೆ
ಜಗಳಾಟಕೆ ನೀನೇ
ಹೊಸತೊಂದು ಕಾರಣವ ಕೆದಕಿ ಕೊಟ್ಟು;
ನಿನ್ನನ್ನು ಕಂಡಂದು
ನಾ ನೆಟ್ಟ ಹೂ ಬಳ್ಳಿ
ಬಾಗಿಹುದು ದಿನಕೊಂದು ಹೂವು ಬಿಟ್ಟು!!


ಮಬ್ಬಲ್ಲಿ ಮಸಿಯಾದ
ತುಟಿಯಂಚಿನ ಕವಿತೆ
ಮಡಿಲಾದುದು ಮತ್ತೆ ನಿನ್ನ ಕೆನ್ನೆ;
ಓದುವ ನೆಪದಲ್ಲಿ
ಮರೆಸಿಟ್ಟುಕೊಂಡವಳು
ಸಂಕಲನ ಹೊರ ತರುವ ಆಸೆಯೇನೆ?!!


                                   -- ರತ್ನಸುತ

ಗಡಿಯಾರದ ಮುಳ್ಳು ಚುಚ್ಚಿಕೊಂಡು

ಕಾಲವನ್ನ ಹಿಂದಕ್ಕೆ ಸರಿಸಬೇಕು
ಗಾಡಿಯಾರದ ಮುಳ್ಳಿನೆದುರು ಬಿಕ್ಕುತ್ತ ಕೂತೆ,
ಯಾವುದನ್ನೂ ಲೆಕ್ಕಿಸದೆ ಮುಂದೆ ಸಾಗಿತು;...

ಜಾರಿದ ಕಂಬನಿಯನ್ನೂ ಹಿಂಪಡೆಯಲಾಗಿಲ್ಲ!!


"ಹೌದು" ಅಂದಿದ್ದ ಕಡೆ ಬೇಡವೆಂದು
ಬೇಡವೆಂದಿದ್ದ ಕಡೆ ಹೌದೆಂದು
ಬದಲಾವಣೆಗಳ ಗಮನಿಸಬೇಕಿತ್ತು;
ಗಡಿಯಾರ ಚೂರು ಮನಸು ಮಾಡಬಹುದಿತ್ತು!!


ದುಡುಕಿದ ಕಡೆ ಸಾವಕಾಶದಿಂದ
ನಿರ್ಭಾವುಕನಾದಲ್ಲಿ ಭಾವುಕತೆಯಿಂದ
ಚೂರು ಹಗುರಗೊಳ್ಳಬೇಕಿತ್ತು
ಗಡಿಯಾರ ಚೂರು ಮನಸು ಮಾಡಬಹುದಿತ್ತು!!


ಕಾಲೆಳೆದವರ ಕಾಲಿಡಿದು ಬೇಡಲು
ಕೈ ಕೊಟ್ಟವರ ಕೈ ಹಿಡಿದು ನಡೆಯಲು
ಕಣ್ಣಾದವರ ಕಣ್ಣಲ್ಲಿ ಕಣ್ಣಿಟ್ಟು ಕಾಯಲು
ಹುಣ್ಣಾದವರ ನೋವನ್ನು ಮಥಿಸಲು

ಅತ್ತವರ ಕೆನ್ನೆ ಸವರಲು
ಅಳ ಬೇಕಾದಲ್ಲಿ ಎದೆ ತುಂಬಿ ಅಳಲು
ಸೋಲನ್ನು ಗೆಲ್ಲಲು, ಗೆಲ್ಲಲೆಂದು ಸೋಲಲು
ಹಿಂದಕ್ಕೆ ಮರಳಿ ಹೊರಳಬೇಕಿತ್ತು
ಗಡಿಯಾರ ಚೂರು ಮನಸು ಮಾಡಬಹುದಿತ್ತು!!


ಗಡಿಯಾರ ನಿಂತಿತು
ಕಾಲ ಸಾಗುತ್ತಲೇ ಇತ್ತು
ಮುಳ್ಳನ್ನು ಹಿಡಿದು ಹಿಂದಕ್ಕೆ ನೂಕಿದೆ,
"ಮರುಳೇ" ಅಂದಂತೆ ಮುರಿದು ಬಿತ್ತು;
ವರ್ತಮಾನದ ಬೆರಳಿಗೀಗ
ಮುರಿದ ಗಡಿಯಾರದ ಮುಳ್ಳು ಚುಚ್ಚಿದೆ,
ನೋಡ ನೋಡುತ್ತ ನೆತ್ತರೂ, ನೋವೂ ಹಳಸುತ್ತಿವೆ!!


                                                    -- ರತ್ನಸುತ

ಕ್ವಾಪದ್ ಪದ್ಯ

ಬಚ್ಲು ಸಾರ್ಸಿದ್ ಪೊರ್ಕೆ ಹಿಡ್ದು
ಮಕ ಬೆಳ್ಗ್ತೀನ್ ದರ್ಬೇಸಿ
ಕಣ್ಣಿಗ್ಕಾಣ್ದಂಗ್ ಎಲ್ಬಿದ್ಸತ್ತೆ...

ಉಗಿ ಬೇಕು ಕ್ಯಾಕರ್ಸಿ


ಮಾನ ಮರ್ವಾದೆ ಅಂತ
ಏನ್ರಾ ಐತಾ ನಿನ್ ಜನ್ಮುಕ್ಕೆ
ನಂಗೇ ಯಾಕ್ ಗಂಟ್ಬೀಳ್ಬೇಕಿತ್ತು
ಏನ್ ಹೇಳ್ಬೇಕು ನನ್ ಕರ್ಮುಕ್ಕೆ


ಬೇಡ್ಕಂಡ್ ತಿನ್ನೋ ನಿನ್ ನಂಬ್ಕಂಡ್ರೆ
ಆಯ್ಕಂಡ್ ತಿನ್ನೋದ್ ತಪ್ಪಲ್ಲ
ಕೈಯ್ಯೋ ಕಾಲೋ ಮುರ್ಯೋಗಂಟ
ನನ್ ಮನ್ಸಿಗ್ ನೆಮ್ದಿ ಸಿಕ್ಕಲ್ಲ


ಮೈಯ್ಯೆಲ್ಲ ಕಜ್ಜಿ ಗಾಯುಗ್ಳಾಗಿ
ಕೆರ್ಕೊಳ್ಳೋಕುಗ್ರು ಬರ್ದಿರ್ಲಿ
ನಿನ್ ಕಟ್ಕೊಂಡೋಳು ಆಸ್ತಿ-ಪಾಸ್ತಿ
ಎಲ್ಲ ಹೊತ್ಕೊಂಡ್ ಓಡೋಗ್ಲಿ


ನಿನ್ ಸತ್ ಗಂಡ್ಜನ್ಮುಕ್ಕೊಂದಿಷ್ಟ್ ಬೆಂಕಿ
ಎಳ್ಳು-ನೀರು ಸುರ್ದೋಗ
ಯಾವ್ ಡಾಕ್ಟ್ರೂ ಮಾತ್ರೆ ಕೊಡ್ದಂಗೆ
ಬರ್ಬೇಕು ನಿಂಗೆ ದೊಡ್ರೋಗ


ನಿನ್ ಹಳೆ ಕಿತ್ತೋದ್ ಜೋಡ್ನಂಗೆ
ಕೊಳ್ತು ನಾರೋ ತಿಪ್ಪೆಗೆಸಿಯ
ಇದೇ ಕೊನೆ, ಮತ್ತೇನ್ರ ನೀನು
ಹುಟ್ಬಂದ್ ಕಣ್ಣಿಗ್ ಬಿದ್ದೀಯ


ನಿನ್ ಸುತ್ತೋ ಚಾಪೇಲ್ ಇರ್ವೆ ಬಿಟ್ಟು
ಸತ್ರೂ ಸಾಯೋಕ್ ಬಿಡ್ಬಾರ್ದು
ನಿನ್ ಬಾಯಿಗ್ ಸುರ್ಯೋ ಮಣ್ಣು ಕೂಡ
ಮೂಸೋ ಹಂಗೆ ಇರ್ಬಾರ್ದು


                                   -- ರತ್ನಸುತ

ದೂರದಿಂದಲೇ ಹತ್ತಿರವಾಗಿ

ಸಲುಗೆಯ ಮಟ್ಟವ ಏರಿಸು ಚೂರು
ಇನ್ನೂ ಸನಿಹಕೆ ಬರುವೆನು ನಾ
ನಿನ್ನ ಬೆರಳಿನ ತಕದಿಮಿಯಿಂದಲೇ...

ಬರೆಯದೆ ಮೂಡಿದೆ ರುಚಿಗವನ!!


ಭರಿಸುವೆ ನಿನ್ನಯ ನಗುವಿನ ಭಾರವ
ತುಂಬುತ ಹೋಗು ಎದೆಯೊಳಗೆ
ಮುಡಿಸುವೆ ಆಸೆಯ ಕಟ್ಟಿದ ಹೂವನು
ಕಣ್ಣಿಗೆ ಸಿಕ್ಕರೆ ಅರೆ ಗಳಿಗೆ!!


ನೆರಳಿಗೆ ನಾಚಿಕೆ ತರಿಸುವ ನಿನ್ನನು
ನೆಟ್ಟಗೆ ನೋಡುವುದೇ ಭಾಗ್ಯ
ಒಳ್ಳೆ ತನಗಳು ನಿನ್ನನು ನೆಚ್ಚಿವೆ
ಹಾಳಾದರೂ ಅದುವೇ ಪುಣ್ಯ!!


ಉಗುರಿನ ಮದಿರೆಯ ಹೀರಿದ ಗಲ್ಲಕೆ
ಅಂಟಿದ ಕೆಂಪನೆ ಲೇಪನ ನಾ
ಹುಣ್ಣಿಮೆಯೆಂಬುದು ಕೇವಲ ಕಲ್ಪನೆ
ನೈಜ್ಯತೆ ನಿನ್ನ ಆಗಮನ!!


ತೊರೆ ಹರಿವಿಗೆ ಧರೆ ವಿಧಿಸಿದ ತಿರುವಲಿ
ನೊರೆಯಾಗುವೆ ನಾ ತೊರೆ ನೀನು
ಮಳೆಗರೆಯುವ ಸಮಯಕೆ ನವಿಲಾಗು ನೀ
ನಿನ್ನಯ ಸೊಬಗಿಗೆ ಗರಿ ನಾನು!!


                                     -- ರತ್ನಸುತ

ಮೊದಲ ಕವನದ ಗುಂಗಲ್ಲಿ

ಬರೆದ ಮೊದಲ
ಮುರುಕಲು ಕವಿತೆಯನ್ನ
ಚಡ್ಡಿಯ ಜೇಬಿನಲ್ಲೇ ಬಿಟ್ಟು ...

ವರ್ಷಗಳೇ ಕಳೆದು
ಮೊನ್ನೆಯಷ್ಟೇ ಸಿಕ್ಕಿತು;

ಚಡ್ಡಿ ನಡುವಿಗೆ ಹತ್ತಲಿಲ್ಲ
ಕವಿತೆ ತಲೆಗೆ ಹತ್ತಲಿಲ್ಲ!!


ನೀಲಿ ಶಾಯಿಯ ಗೀಟಿನಲ್ಲಿ
ಮುಗ್ಧತೆಯ ಕೊಂಬು
ನೋವು ಕೊಡದ ಒತ್ತು
ಪರಿಯಿಲ್ಲದ ಶೈಲಿ
ನಡುಕದ ವರ್ತುಲ
ತಿರುವಿಲ್ಲದ ತಿರುವು
ಎಲ್ಲವೂ ಅಪ್ರತಿಮ;


ಬರೆದದ್ದು ನಾನಲ್ಲವೆಂಬ
ಅಹಂಕಾರದ ಹುಸಿ ನಿಲುವು;
ನಂತರ
ನನ್ನದೇ ಎಂಬ ಸಮಜಾಯಿಶಿ!!

ಯಾತಕ್ಕಾಗಿ ಬರೆದೆನೋ
ನೆನಪಿಲ್ಲದಷ್ಟು ಹಳೆಯದೇನಲ್ಲ;
ಸುಮಾರು ಐದು ವರ್ಷದ ಹಿಂದಿನ
ವಿಷಾದಮಯ ಕವಿತೆ;


ಓದಿಗೆ ಎಟುಕಿದ್ದು ಮಾತ್ರ
ನೆನಪಿನ ಸಿಹಿ ತಿನಿಸು ಡಬ್ಬಿ!!

ಅಂದಿನ ತಪ್ಪುಗಳಿಗೆ ಹೋಲಿಸಿದರೆ
ಇಂದಿನವುಗಳಿಗೆ ಎಗ್ಗಿಲ್ಲ;
ಖಾಲಿ ಅಕ್ಷರಗಳೇ ವಿನಹ
ಚೆಲ್ಲಿಕೊಂಡರೂ ಸದ್ದಿಲ್ಲ!!


ಅದು ವಿಜಿಟಿಂಗ್ ಕಾರ್ಡಿನ ಹಿಂದೆ
ಸಣ್ಣ ಚೌಕದೊಳಗೆ ಅರಳಿದ
ಕಾಡು ಮಲ್ಲಿಗೆಯಂಥ ಚೆಲುವು;

ಶೀರ್ಷಿಕೆಗಾಗಿ ಕಾಯದ
ಅದ್ಭುತ ಕಾವ್ಯ


ನನ್ನ ಬೆರಳು ಹಡೆದ
ಮೊದಲ ಕೂಸು
ಇನ್ನೂ ಉಸಿರಾಡುತ್ತಿದೆ;
ಈಗ ಅದಕ್ಕೊಂದು ಶೀರ್ಷಿಕೆ ಕೊಟ್ಟು
ಅಂದವ ಮೊಟಕುಗೊಳಿಸಲಾರೆ!!


                               -- ರತ್ನಸುತ

ಹೀಗೊಂದು ಮಿಂಚೋಲೆ

ನೀವು ಹಳ್ಳಿ ಜನ,
ನಾಗರೀಕತೆ ಚೂರು ಕಮ್ಮಿ;
ಒಳ್ಳೆಯವರು ಅಂದ ಮಾತ್ರಕ್ಕೆ...

ನಿಮ್ಮ ಸಂಬಂಧ ಬೆಳೆಸೋದು
ಮುಜುಗರದ ಸಂಗತಿ!!


ನಮ್ಮ ಮನೆಯ ನೆಲದ
ಮಾರ್ಬಲ್ಲಿನ ತಂಪಿಗೂ
ನಿಮ್ಮ ಮನೆ ರೆಡ್ಡಾಕ್ಸೈಡ್
ಸಾರಿಸಿದ ನೆಲದ ಅಂಟಿಗೂ
ಅಜಗಜಾಂತರ!!


ನಾವು ಮನೆಯಲ್ಲೆ ಪಾದ ರಕ್ಷೆ ಧರಿಸಿ
ಹೊರಗೊಂದು ಒಳಗೊಂದೆಂಬಂತೆ
ಬೇರೆ ಬೇರೆ ಜೋಡು ಇಟ್ಟವರು;
ನಿಮಗೆ ಹೊರಗಾಗಲಿ, ಒಳಗಾಗಲಿ
ಪಾದಗಳೇ ರಕ್ಷೆ!!


ನಮ್ಮ ಹುಡಿಗಿ ಪಟ್ಟಣದ ಜೀವನಕ್ಕೆ
ತೀರ ಒಗ್ಗಿಹೋಗಿದ್ದಾಳೆ;
ಇಲ್ಲಿಯ ಧೂಳು-ಹೊಗೆ ಮಿಶ್ರಿತ ಗಾಳಿ
ಫಾಸ್ಟ್ ಫುಡ್ ಕಲ್ಚರ್ರು
ಜನ ಜಂಗುಳಿ, ಹೊಟ್ಟೆ ಕಿಚ್ಚಿನ ಬೇಗೆ
ಕಾಂಕ್ರೀಟಾರಣ್ಯ, ಮಲ್ಟಿಪ್ಲೆಕ್ಸ್-ಮಾಲ್ಗಳು
ಅಲ್ಲಿವೆಯಾ?


ಹಸಿರನ್ನು ಆಸ್ವಾದಿಸಲು
ತಿಂಗಳಿಗೊಮ್ಮೆ ಟ್ರೆಕ್ಕಿಂಗ್ ಹೋದರೆ
ಆ ಸ್ವರ್ಗ ಮಜಭೂತಾಗಿರುತ್ತದೆ;
ಸ್ವರ್ಗದಲ್ಲೇ ವಾಸಿಸಿದರೆ
ಬೇಜಾರು ಹುಟ್ಟೋದು ಖಂಡಿತ;
ರೋಗಗ್ರಸ್ತ ಪಟ್ಟಣಗಳೇ ನಮ್ಮ ಆಯ್ಕೆ!!


ಕ್ಷಮಿಸಿ;
ನಿಮ್ಮ ಮಟ್ಟಕ್ಕಿಳಿವ
ಅನಿವಾರ್ಯತೆ ನಮಗಿಲ್ಲ,
ನಮ್ಮ ಮಟ್ಟಕ್ಕೇರುವ ಯೋಗ್ಯತೆ ನಿಮಗಿಲ್ಲ!!

ಇಂತಿ,
ಹೆಣ್ಣೆತ್ತ ನತದೃಷ್ಟರು....

                                        
                                        -- ರತ್ನಸುತ

ಮಾಡರ್ನ್ ಲವ್ ಸ್ಟೋರಿ

ಗುಲ್ಕನ್ನು ಗುಣದವಳೇ
ನಾ ಬನ್ನು ಆಗುವೆನು
ಬಂದೆನ್ನ ಮೇಲೊಮ್ಮೆ ಲೀನಳಾಗು;

ಕೆಮ್ಮಣ್ಣ ಕೆನ್ನೆಯಲಿ
ಕೀವುಣ್ಣು ಮೂಡಿದರೆ
ನನ್ನನ್ನೇ ಗುರಿ ಮಾಡಿ ಶಾಂತಳಾಗು!!


ಲ್ಯಾಂಟರ್ನು ಹಚ್ಚಿಡು
ಗಾರ್ಡನ್ನಿನಲಿ ಕಾದು
ಮಾಡರ್ನು ಡ್ರೆಸ್ಸಿನಲಿ ಕಂಗೊಳಿಸುತ;
ಮೂನಂತೂ ಕೊಡಲಾರೆ
ಜಾಮೂನು ತಂದಿರುವೆ
ಸ್ವೀಕರಿಸು ಮನಸಾರೆ ನಾಚಿ ನಗುತ!!


ಊರೆಲ್ಲ ವಿಲ್ಲನ್ಸು
ನಾನೊಬ್ಬನೇ ಪ್ರಿನ್ಸು
ಪ್ರಿನ್ಸಸ್ಸು ನೀನಾಗು ರಿಂಗು ತೊಡಿಸಿ;
ಎದೆ ವಾಲಿನ ಮೇಲೆ
ಇಡಬೇಡ ಕ್ಯಾಂಡಲ್ಲು
ಏನೊಂದೂ ನುಡಿಯದೆ ತಲೆಯ ಕೆಡಿಸಿ!!


ಗೋಲ್ಡನ್ನು ಹಾರ್ಟಿನಲಿ
ಹಾಲ್ಮಾರ್ಕಿನ ಮುದ್ರೆ
ಟೆನ್ಷನ್ನು ಪಡಬೇಡ ನಾ ಒರಿಜಿನಲ್ಲು;
ನನ್ನ ಸರ್ವಿಸ್ಸಿನಲಿ
ಮೋಸವೆಂಬುದೇ ಇಲ್ಲ
ಲವ್ವಲ್ಲಿ ನಾ ಪಕ್ಕ ಪ್ರೊಫೆಷನಲ್ಲು!!


ರೋಸನ್ನು ಕೊಡಬಂದೆ
ಚಾಕ್ಲೇಟಿನ ಸಹಿತ
ಗ್ರೀಟಿಂಗು ಕಾರ್ಡಿನಲಿ ಸಣ್ಣ ಬರಹ;
ಈ ಲೈಫು ಫುಲ್ಲಲ್ಲ
ಡ್ರೀಮ್ಸಂತೂ ಮುಗಿಯೊಲ್ಲ
ಲವ್ವಲ್ಲಿ ನೀ ನನಗೆ ಸಿಗದ ವಿನಹ!!


                                  -- ರತ್ನಸುತ

ಸಾವಿನ ದಡದಲ್ಲಿ

ಮತ್ತೆ ಮತ್ತೆ ತಾಕಿಸಬೇಡ
ನೊರೆ ಅಲೆಗಳ ಮನದ ದಡಕೆ;
ನೀ ಮುಟ್ಟಿ ಹೋದದ್ದು ಆಯಿತು...

ನೊರೆ ಗುಳ್ಳೆಗಳ ಸಾವಲ್ಲಿ ನನ್ನ ಬಿಟ್ಟು!!


ನೀ ಹೊತ್ತು ತಂದ ಕಪ್ಪೆ ಚಿಪ್ಪು,
ಮುತ್ತಾಗುವ ಮುನ್ನ ಸತ್ತ ಹನಿ,
ಮರಳು, ಶಂಖ, ಉರುಟುಗಲ್ಲು
ಅಂತ್ಯ ಸಂಸ್ಕಾರಕ್ಕೆ ಮೂಖ ಸಾಕ್ಷಿಯಾಗಿವೆ;


ಸೂರ್ಯ ಮುಳುಗುವ ವೇಳೆ
ತಣ್ಣನೆ ಗಾಳಿಗೂ ನಿನ್ನ ಸೋಂಕಿದೆ;
ಮರು ಉಸಿರನ್ನು ಬೇಡುತ್ತಿದೆಯಾದ್ದರಿಂದ
ಉಸಿರಾಟದಲ್ಲೇ ಸಾಯುವ ಭಯ ನನಗೆ!!


ಮರಳ ತೋಡಿ ಅಡಗಿಸಿಟ್ಟ ಕೈಗಳು
ಇನ್ನೆಷ್ಟು ಹೊತ್ತು ತಪ್ಪಿಸಿಕೊಳ್ಳಲು ಸಾಧ್ಯ?
ಕಣ್ಣೀರ ಒರೆಸಲಾದರೂ ಎದ್ದು ಬರಲೇ ಬೇಕು,
ಇಲ್ಲ, ಕಣ್ಣೀರ ಹರಿಸದಿರಬೇಕು!!


ನಿನ್ನ ಮೊರೆತಕ್ಕೆ ಮರುಕ ಪಟ್ಟ
ನನ್ನ ಅಸ್ಮಿತೆಗಳ ಸಾಲು ಶರಣಾಗತಿಯಲ್ಲಿ
ಸಣ್ಣ ಬಿಕ್ಕಳಿಕೆಗಳೆದ್ದರೆ
ನೀವಲು ಬಂದ ನೆಪದಲ್ಲೇ ಕೆನ್ನೆಗೆ ಬಾರಿಸು;


ಚಂದ್ರನ ಚೆಲ್ಲಾಟಕ್ಕೆ ಹುಟ್ಟಿಕೊಂಡ ಜೊನ್ನು
ನನ್ನೆದೆಮೇಲೆ ಅಚ್ಚೆ ಬಿಡಿಸುತ್ತಿದೆ;
ಚುಚ್ಚಿದ ಸೂಜಿಯಂಚಿನ ವಿಷ
ಹೃದಯವ ಮುತ್ತುವ ಮುನ್ನ
ಮತ್ತೊಂದು ಅಲೆಯೇರಿ ಬಾ,
ಹುಟ್ಟಿನ ಸಾವಿಗೂ
ಸಾವಿನ ಹುಟ್ಟಿಗೂ
ನಿನ್ನ ಮಡಿಲನ್ನೇ ತೊಟ್ಟಿಲಾಗಿಸು!!


                                       -- ರತ್ನಸುತ

ಹಸಿವಿನ ಹೋರಾಟದಲ್ಲಿ

ಚಿತ್ರಸಂತೆಯಲ್ಲಿ ನನ್ನದೊಂದು ಚಿತ್ರ ಮಾರಾಟಕ್ಕಿದೆ,
ಅಲ್ಲಿ ಕೋರೆ ಹಲ್ಲಿನ ಮುದುಕ
ಬೀಡಿ ಸೇದುತ್ತ ಬೋಳು ಮರದಡಿ ಕುಳಿತು...

ಬಣ್ಣ ಬಣ್ಣದ ಕನಸು ಕಾಣುತ್ತಿದ್ದಾನೆ!!


ಕನಸನ್ನ ಬಿಡಿಸುವಷ್ಟು ಕಲೆಗಾರ ನಾನಲ್ಲ,
ಮುದುಕನ ಕಣ್ಣಲ್ಲಿ ನಿಮಗದು ಕಂಡರೆ
ನೀವೇ ಅಪ್ರತಿಮ ಕಲೆಗಾರರು;
ಬೆಲೆ ಕೇವಲ ನಿಮ್ಮ ಒಪ್ಪೊತ್ತಿನ ಊಟದಷ್ಟು,
ಅದರೊಟ್ಟಿಗೆ ನನ್ನ ನಗುವನ್ನೂ ಫ್ರೀಯಾಗಿ ಪಡೆದುಕೊಳ್ಳಿ!!


ಅರೆರೆ, ಜೋರು ಗಾಳಿ ಬೀಸಿ
ಮರ ಅಲುಗಾಡುತ್ತಿದೆ
ಮೊದಲೇ ಮುಪ್ಪಿನ ಮರ
ಹಿಂದೆಯೇ ಜೋರು ಮಳೆ ಬೇರೆ;
ಮಣ್ಣು ಶಿಥಿಲಗೊಳ್ಳುತ್ತಿದೆ
ಈಗಲೋ-ಆಗಲೋ ಮರ ಉರುಳ ಬಹುದು!!


ಬೀಡಿ ಖಾಲಿಯಾಗುವನಕ ಅಲ್ಲೇ ಕೂರಲು
ಮುದುಕನಿಗೇನು ಬೆಪ್ಪೇ?
ಆತನಿಗೂ ಮರದ ಅರ್ಧದಷ್ಟು ವಯಸ್ಸಾಗಿದೆ;
ಏನು ಮಾಡಬೇಕಿತ್ತೋ ಅದನ್ನೇ ಮಾಡಿದ,
ಮನೆ ಕಡೆ ಓಡಿದ!!


ಅವ ಅತ್ತ ಓಡಿದಂತೆ
ಮರ ಧೊಪ್ಪನೆ ನೆಲಕ್ಕುರುಳಿತು;
ಇದ ಕಂಡು ಸುಮ್ಮನೆ ಬಿಟ್ಟಾರೇ ಮಂದಿ?
ಮಳೆಯನ್ನೂ ಲೆಕ್ಕಿಸದೆ
ವಾರಸುದಾರರ ಸೋಗಿನಲಿ ಬಂದು
ಹರಿದು ಹಂಚಿಕೊಂಡು
ಗುರುತಿಗಾದರೂ ಏನನ್ನೂ ಉಳಿಸದಂತೆ ದೋಚಿದ್ದಾರೆ!!


ಇನ್ನೆಲ್ಲಿ ಕಂಡಾನು ಮುದುಕ?
ಮನೆಯಲ್ಲೇ ಕೊನೆ ಉಸಿರೆಳೆದಿರುತ್ತಾನೆ;
ಕೊನೆಗೆ ಉಳಿದಿರುವುದು ನಿರ್ಭಾವುಕ ಮಣ್ಣು,
ಬಿಟ್ಟರೆ ಅದನ್ನೂ ದೋಚುವವರಿದ್ದಾರೆ;
ಬೇಗ ಕೊಂಡುಕೊಳ್ಳಿ ನನ್ನ ಚಿತ್ರವನ್ನ,
ನಿಮ್ಮ ಒಪ್ಪೊತ್ತಿನ ಊಟದ ಬೆಲೆಗೆ!!


                                                       -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...