Sunday 23 November 2014

ಚೀತ್ಕೊರಳ ಮೌನ

ತೆರೆದಿಟ್ಟ ಮನವೀಗ ಕೆನೆಗಟ್ಟಿದೆ
ಉಸಿರೆರೆದು ಸೋಸಿ ತಗೋ ನನ್ನೊಲವನು
ಎದೆಗೆದೆಯ ಕೊಟ್ಟೊಮ್ಮೆ ಕೇಳಿ ನೋಡು

ಮಾತಿಗೂ ಮೀರಿದ ಹಂಬಲವನು


ಅಂದಾಜಿಗೂ ಮೀರಿದ ಗೋಜಲ
ಹೆಣೆಯುತ್ತ ಎದೆ ವ್ಯಾಪ್ತಿ ಬಲೆಯಾಗಿದೆ
ಹೃದಯಕ್ಕೂ ನಿನ್ನನ್ನು ಬೆರೆಯುವಾಸೆ
ಆದರೆ ಪಾಪ ಬಲೆಯಲ್ಲಿ ಸೆರೆಯಾಗಿದೆ


ಕಂಡದ್ದು ಹುಸಿಗನಸು ಎಂದನಿಸಿದೆ
ನಿನ್ನ ನಿರ್ಗಮನದ ದಾರಿ ನೋಡುತಿರಲು
ಕಣ್ಣೆರಡು ಹಿಡಿದಿಡಲು ಸೋತಂತಿದೆ
ಬೇಡವೆಂದರೂ ಕಣ್ಣೀರು ಜಾರುತಿರಲು


ಮುಂಜಾನೆ ಮಂಜಲ್ಲಿ ಗಾಜು ಪರದೆ
ಅಲ್ಲಿ ಬಿಡಿಸಿಟ್ಟ ರೇಖೆಯಲಿ ನೀ ಮೂಡಿದೆ
ಸುಡು ಬಿಸಿಲ ಸರಸಕ್ಕೆ ನೀ ಕರಗಿದೆ
ನಿನ್ನ ಕಾಪಾಡಿಕೊಳ್ಳುವಲಿ ಸೋತು ಹೋದೆ


ಹೆಸರಿಟ್ಟು ಹೊರಡದಿರು ನೆನಪುಗಳಿಗೆ
ಯಾವ ಕ್ಷಣದಲ್ಲೂ ತಾವು ಪುಟಿದೇಳಬಹುದು
ಚೂಪುಗಲ್ಲಿನ ಹಾದಿ ನಿನ್ನ ಹೊರತು
ಹರಿದ ರಕ್ತವಾದರೂ ನಿನ್ನ ಸೋಕಬಹುದು!!

 
                                        -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...