Friday 23 October 2015

ನಗು


ಯಾರೋ ನಗುತ್ತಿದ್ದವನ ನಿಲ್ಲಿಸಿ
ನಗುವಿಗೆ ಕಾರಣ ಕೇಳಿದೆ,
ಕಾರಣವಿಲ್ಲದೆ ನಗುತ್ತಿರುವುದಾಗಿ ಗೊತ್ತಾಗಿ

ನಗು ಬಂತು

ಮತ್ತಿನ್ನಾರೋ ಬಂದು
ನಾ ನಗುಲು ಕಾರಣ ಕೇಳಿದಾಗ
"
ಯಾರೋ ಕಾರಣವಿಲ್ಲದೆ ನಗುತ್ತಿದ್ದವನ
ನೆನೆದು ನಗುತ್ತಿದ್ದೆ" ಎಂದು ಹೇಳಲಾಗದೆ
"
ಸುಮ್ಮನೆ" ಎಂದೆ,
ಆತನೂ ನಕ್ಕ


ಅಲ್ಲಿಗೆ ಕಾರಣವಿಲ್ಲದ ನಗು
ನಗುವಿಗೆ ನಿಜವಾದ ಕಾರಣವಾಯಿತು

ಈಗ ನಾ ನಗುತ್ತೇನೆ
ನಗಿಸುವ ಸಲುವಾಗಿ
ಕಾರಣವಿದ್ದೂ ಇಲ್ಲದಂತೆ
ಇಲ್ಲದೆಯೂ ಇದ್ದಂತೆ!!

                                  --
ರತ್ನಸುತ

Monday 19 October 2015

ಹಾಳೆಯ ಹೂವು


ಬರೆಯಲೇ ಬೇಕೆಂದು ಹಠಕ್ಕೆ ಬಿದ್ದಾಗ
ಬರೆವುದೆಲ್ಲವೂ ಸಪ್ಪೆ
ತಾನಾಗೇ ಬರೆಯಿಸಿಕೊಳ್ಳುವ ಒಂದು ಪದವಾದರೂ
ಕಾವ್ಯ ಕುಪ್ಪೆ

ಬರೆವ ನಾನೊಬ್ಬನೇ ಬಲ್ಲವನೆಂದನಿಸಿದೊಡೆ
ಬರೆಯದಿರುವುದೇ ಒಳಿತು
ಬರೆವುದೇ ಆದರೆ ಬರಿದಾಗಬೇಕು ನಾ
ಬರಹದಲಿ ಮಿಂದು ಬೆರೆತು

ಅರೆ-ಬರೆ ಬರೆವುದು, ಭಾರಿ ಏನಲ್ಲ ಇದು
ಬರಿ ಮೌನದೊಂದು ಛಾಯೆ
ಬರೆದಷ್ಟೂ ಬರಿದಾಗದ ಭಾಷೆ ನನ್ನದು
ಏನಿದರ ಮರ್ಮ ಮಾಯೆ?!!

ಬರವಿಲ್ಲ, ನೆರೆಯಿಲ್ಲ ಬಂದಷ್ಟೂ ಸಿರಿಯೇ

ಇರದಲ್ಲಿಯೂ ಸುಸ್ಥಿತಿ
ಎಲ್ಲ ಮುಗಿದಿರಲೊಂದು ಮತ್ತೆ ಮೊದಲಾಗಲು
ಹಿಡಿದಂತೆ ತಿಳಿ ಆರತಿ

ಬನ್ನಣೆಗೆ ಬಣ್ಣ, ಬವಣೆಗೂ ಬಾಣ
ಬಿನ್ನವಿದು ಭಾವಗಳಿಗೆ
ಹೆಸರಿಡಲು ಮತ್ತಷ್ಟು ಮೆರುಗು ಮೂಡುವುದು
ಹಾಳೆಯ ಹೂವುಗಳಿಗೆ!!

                                      --
ರತ್ನಸುತ

ಚಿಗುರು


ಅಲ್ಲೆಲ್ಲೋ ಒಂದು ಚಿಗುರು
ದೊಣ್ಣೆನಾಯಕನ ಅಪ್ಪಣೆ ಪಡೆಯದೆ
ಆಗಷ್ಟೇ ಕಣ್ಣು ಬಿಟ್ಟಾಗ
ಬಣ್ಣಗಳೆಲ್ಲವೂ ಬಣ್ಣ ಹಚ್ಚಿಕೊಂಡಂತೆ
ಹುಚ್ಚೆದ್ದು ಕುಣಿಯುತ್ತಿದ್ದವು

ಮರೆಯಲ್ಲೇ ಬೆಳೆದು
ಮುಗಿಲತ್ತಲೇ ಮುಖ ಮಾಡಿ
ತವರ ಗಂಟಿಗೆ ವಿರುದ್ಧವಾಗಿ
ಚಾಚಿಕೊಂಡ ತಳಿರಿನಂಚಿಗೆ

ಮುದಿತನ ಉಂಟಾಗುವುದು ಕಟ್ಟಕಡೆಗೆ

ಒಂದು ಇಬ್ಬನಿಯಾದರೂ ಎಲೆಯಮೇಲೆ

ಅವಿರತವಾಗಿ ಉಳಿದುಕೊಂಡಿದ್ದರೆ

ಕಾಲ ಕಾಲದ ದಾಸೋಹ ಕಾಲವಾಗುತ್ತಿತ್ತು

ಎಲೆಯಂಚಿನ ಮೋಜುಕೂಟದಲ್ಲಿ
ಕೆಲ ಕಾಲ ವಾಲಾಡುತ್ತ ಬೇರ್ಪಟ್ಟು
ಮಣ್ಣ ರುಚಿಸುವ ಸಣ್ಣ ಹನಿ
ಬಿಟ್ಟು ಬಂದ ರಭಸಕ್ಕೆ ಎಲೆ ಕಂಪಿಸುತ್ತಲೇ ಇತ್ತು

ಅತ್ತಕಡೆಯಿಂದ ಮುಪ್ಪು ಹಣ್ಣಾಗಿಸುತ್ತಿದ್ದಂತೆ
ಇತ್ತಕಡೆ ದೊಣ್ಣೆನಾಯಕನ ಕಣ್ತಪ್ಪಿಸಲು
ಹರಸಾಹಸ ಪಡುತ್ತಿದ್ದ ಎಲೆಯ ಆತಂಕಕ್ಕೆ
ತುಪ್ಪ ಸುರಿಯುತ್ತಿದ್ದ ತಂಬೆಲರು
ಹಿಂದೊಮ್ಮೆ ಹಿತವೆನಿಸಿದ್ದೂ ಉಂಟು!!

ಇನ್ನೆಷ್ಟು ಕಾಲ ನಾಟಕ
?
ತೆರೆ ಬಿದ್ದ ಮೇಲೆ ಬಣ್ಣ ಕಳಚಲೇಬೇಕು
,
ಉದುರಿದೆಲೆಯ ಕಣ್ಣೀರ

ಕೊಂಬೆ, ಬುಡ, ಬೇರು ಪಕ್ವವಾಗಿ ಗ್ರಹಿಸಿ
ಬೀಳ್ಗೊಡುವ ವೇಳೆ
ಮತ್ತೊಂದು ಚಿಗುರ ಹಬ್ಬ;
ದೊಣ್ಣೆನಾಯಕನ ಅಪ್ಪಣೆಯಿಲ್ಲದಂತೆ
!!

                                   --
ರತ್ನಸುತ

Friday 16 October 2015

ತೀರದ ದಾಹ


ಬಿಗಿದಪ್ಪಿದಾಗ ಅಷ್ಟೇನೂ ಬಿಗಿಯೆನಿಸದಿದ್ದರೂ
ಬಿಡಿಸಿಕೊಳ್ಳುವಂತೆ ನಟಿಸಿ ಬಸಿಯುವುದರಲ್ಲಿ
ಸೋತ ಭಾವ ಅಭಾವ
ಗೆದ್ದ ಖುಷಿಗೆ ಮರುಜೀವ!!

ಅಪ್ಪಳಿಸಿ, ಕುಪ್ಪಳಿಸಿ, ಕಂಗೊಳಿಸಿ

ಉಳಿಸಿಕೊಳ್ಳುವುದೆಷ್ಟು ಶ್ರೇಷ್ಠ?
ಎಲ್ಲಕ್ಕೂ ಬಿಡುಗಡೆಯಿಟ್ಟೊಡೆ ಅದುವೇ

ಬಡವಾಗಗೊಡದ ಅಕ್ಷಯ ಪಾತ್ರೆ

ಮುಡಿಯಿಂದೆಲ್ಲೋ ಮರೆಯಾದ ಕ್ಲಿಪ್ಪು
ಇದ್ದಲ್ಲೇ ಪೂರ್ತಿ ಚದುರಿದ ಕ್ರಾಪು
ಹಣೆಯ ಮಡತೆಯಲಿ ಬೆವರ ಖಾತೆ
ತೊದಲು ಮಾತಿಗೆ ಬಯಕೆ ಬಂತೇ?!!

ಅಷ್ಟೂ ಹೊತ್ತು ಗಡಿಯಾರ ಸದ್ದು

ಕದ್ದು ಕೇಳುತ್ತಿತ್ತು ಎಲ್ಲ ಸದ್ದನ್ನು,
ಓಡಿರಬಹುದೇ ನಿಮಿಷವಾದರೂ
?
ಯಾಕೋ ಕತ್ತಲು ಕರಗುತ್ತಲೇ ಇಲ್ಲ
!!

ಬೆರಗುಗೊಳಿಸುವ ಬೆಳದಿಂಗಳ ಮೂಟೆಗಟ್ಟಿ

ರದ್ದಿ ಕೋಣೆಗೆ ದೂಡಿದ ತಪ್ಪಿಗೆ
ದೀಪ ವಿಲವಿಲನೆ ಒದ್ದಾಡಿ ಆರಿದಾಗ
ದಾಹ ನೀಗಿಸಿಕೊಳ್ಳಲು ತಾಮ್ರ ಚೊಂಬಿಗೆ
ಇದ್ದ ನೀರೂ ಸಾಲದಾಗಿತ್ತು

ದಾಹ ನೀಗಿದರದೆಂಥ ದಾಹ?
ನಿರಂತರವಾಗಿಸಿಕೊಂಡೆವದನು

ಯಾವ ತೀರದಲೂ ತೀರದ ದಾಹ
ದಾಹದ ದಾಹ!!

                                  --
ರತ್ನಸುತ

Thursday 15 October 2015

ನವಿರು ಅನುರಾಗ

ಎಷ್ಟೆಂದು ಹುಡುಕುವುದು ನಸುಕನು
ಕಣ್ಣಲ್ಲಿ ಹೊತ್ತಿಟ್ಟು ಹಣತೆ
ಏನೆಂದು ಬರೆಯಲಿ ನಿನ್ನ ಕುರಿತು
ನೀನಾಗಲೇ ಬರೆದ ಕವಿತೆ

ಅಲ್ಲಲ್ಲಿ ಹೆಸರಿಡದ ಹೂ ಸಾಲು
ನೀ ಆಗಲೇ ನಡೆದು ಹೋದಂತೆ
ಹಸಿವಲ್ಲಿ ಬಳಲಿದ ಮನಸಿಗೆ
ನಿನ್ನೊಲವು ಮಾಗಿದ ಹಣ್ಣಂತೆ

ನಿಂತೊಮ್ಮೆ ನಕ್ಷತ್ರ ಎಣಿಸೋಣ
ಬೇಕಂತಲೇ ತಪ್ಪಿ ಲೆಕ್ಕವನು
ಅದು, ಇದು ಎನ್ನುತ ಕೂರದೆಲೆ
ಬಂದದ್ದ ಸವಿಯೋಣ ಎಲ್ಲವನೂ

ಮುತ್ತಿಟ್ಟು ನೋವನ್ನು ಮರೆಸುತ್ತ
ಮತ್ತಷ್ಟು ನೋಯಿಸುವೆ ಕ್ಷಮಿಸಿಬಿಡು
ಕನಸಲ್ಲಿ ಹೆಚ್ಚು ಕಾಯಿಸದೆ
ಬಿಡುವು ಮಾಡಿಕೊಂಡು ಬಂದುಬಿಡು

ಮೌನವನು ಸಂಭ್ರಮಿಸೋ ಆಟದಲಿ
ಮಾತಿಗೂ ಪಾಲು ಕೊಡು ಆಗಾಗ
ನನ್ನ ಹೆಜ್ಜೆಗೆ ಕೂಡು ಹೆಜ್ಜೆಯನು
ಆಗ ಇನ್ನೂ ನವಿರು ಅನುರಾಗ

                           --
ರತ್ನಸುತ

Tuesday 13 October 2015

ಬಟ್ಟೆ ತೊಟ್ಟವು

ಪುಟ್ಟ ಕಣ್ಗಳು
ಹುಟ್ಟುತ್ತಲೇ ಕಂಡದ್ದು
ತಾನು ಮಾತ್ರವೇ ಬೆತ್ತಲಾಗಿದ್ದ


ಸುತ್ತಲೂ ಬಟ್ಟೆ ತೊಟ್ಟವರೆಡೆ
ಪ್ರಶ್ನಾತ್ಮಕ ನೋಟ
ತಾ ಗೊದಲಕ್ಕೊಳಗಾಯಿತು


ಬೆಳೆ-ಬೆಳೆಯುತ್ತಿದ್ದಂತೆ
ಇಂಚಿಂಚೇ, ಇಂಚಿಂಚೇ ಬಟ್ಟೆ
ಹೆಚ್ಚುತ್ತಲೇ ಹೋಯಿತು


ತೋರ್ಪಟ್ಟ ತೊಗಲಿಗೆ ಸಿಗ್ಗು
ಇದ್ದಷ್ಟೇ ಬಟ್ಟೆಯನ್ನ ಹಿಗ್ಗಿಸಿಕೊಂಡಾಗ
ಹರಿದದ್ದು ಮಾನ


ಹುಟ್ಟಿದಾಗ ಹೆಸರಿಲ್ಲದೆ
ವಿಶ್ವಮಾನವನಂತೆ ಉಬ್ಬಿದ ಎದೆಗೆ
ಕವಚ ತೊಟ್ಟದ್ದಾಗಿದೆ
ಹೆಸರೊಂದು ಬಿದ್ದು


ತಾನೀಗ ಬೆತ್ತಲಾದವರ ಕಂಡು
ಅಸಡ್ಡೆಯಿಂದ ತಲೆ ತಗ್ಗಿಸಿಯೋ
ಕೋಪದಿಂದ ಕಲ್ಲು ಹೊಡೆದೋ
ಕಾಮನೆಯಿಂದ ಬಯಸಿಯೋ
ಅಥವ ನಿರ್ಲಕ್ಷಿಸಿದಂತೆ ನಟಿಸುತ್ತಿದೆ


ತಾನೇ ಮರೆಯಲ್ಲಿದ್ದು
ಬಯಲಿಗಿಳಿದವರ ಬಲಿಗೊಡುತ್ತಿದೆ
ಹೆಸರಿಟ್ಟ ಪ್ರಾ()ಣಿ!!


                                 -- ರತ್ನಸುತ

Friday 9 October 2015

ಕನ್ನಡ ನನ್ನದು


ಬೇಕು ಅನ್ನೋದೆಲ್ಲ ಇಲ್ಲಿ
ಸಾಕು ಅನಿಸೋವಷ್ಟು ಸಿಕ್ರೆ
ಕೈಯ್ಯ ಎತ್ತಿ ನೋಡು ಒಮ್ಮೆ
ಕಲ್ಪವೃಕ್ಷ ನೀನೇ ಆದ್ರೆ
ಮಾತು ಮಾತಿನಲ್ಲೂ ಮುತ್ತು
ಪೋಣಿಸಿಟ್ಟ ಹಾಗೆ ಕಂಡ್ರೆ


ಗರ್ವದಿಂದ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!


ಮಣ್ಣ ಬಗೆದು ಸೀಳಿದಾಗ
ಚಿನ್ನವನ್ನೇ ತುಂಬಿ ಕೊಟ್ರೆ
ಬಿತ್ತಿಕೊಂಡ ಕನಸಿಗೆಲ್ಲ
ಮೋಡವೊಂದು ಕರಗಿ ಬಂದ್ರೆ
ಜೀವ ಜೀವದಲ್ಲೂ ತಾನು
ಉಸಿರಿನಂತೆ ಬೆಸೆದುಕೊಂಡ್ರೆ


ಹೆಮ್ಮೆಯಿಂದ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!


ಬಿದ್ದ ಕಡೆಯೇ ಮತ್ತೆ ಎದ್ದು
ನಿಲ್ಲುವಂಥ ಶಕ್ತಿ ತುಂಬಿ
ಆನು, ತಾನು ಅನ್ನದಂತೆ
ಎಲ್ಲರನ್ನೂ ಕೂಡಿ ನಂಬಿ
ಕಲ್ಲು ಬೀಸಿದಲ್ಲೂ ಫಲವ
ಸವಿಯ ನೀಡುವಲ್ಲಿ ನಿಂತು


ಪ್ರೀತಿಯಿಂದ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!


ನೀನು ಮರೆತರೂನು ತಾನು
ನಿನ್ನ ಮರೆಯಲಿಲ್ಲವೆಂದು
ನಿನ್ನ ಸಲಹಿದಾಕೆ ಆಕೆ
ತಾಯಿಯಷ್ಟೇ ತೂಕವೆಂದು
ಭಾವನೆಗಳ ಬಣ್ಣಿಸೋಕೆ
ಸಿಕ್ಕ ಬಣ್ಣವಿದುವೇ ಎಂದು


ಹಾಡುತಲೇ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!


ನೀನು ಇತ್ತದಕ್ಕೂ ಹೆಚ್ಚು
ತಾನು ಇತ್ತದೆಂದು ನೆನೆ
ತನ್ನ ಮಡಿಲ ರಕ್ಷೆಯಲ್ಲಿ
ನೀನು ಸದಾ ತೊನೆವ ತೆನೆ
ಎಲ್ಲಿ ನೀನು ನೀನಾದೆಯೋ
ಅದೇ ಕಾಣು ನಿನ್ನ ಮನೆ


ಘರ್ಜಿಸಿ ನೀ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!


                     -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...