Thursday 8 October 2015

ಇಷ್ಟದ ಕವಿತೆ


ನಿನ್ನ ಕವಿತೆಯಾಗಿಸುವ ಬರದಲ್ಲಿ
ಕವಿಯಾಗಲೊಪ್ಪದ ಮನ
ಒಂದೊಂದೇ ಅಕ್ಷರವ ಪೋಣಿಸುವಾಗ
ಬೆರಳ ಕಚ್ಚಿಕೊಳ್ಳುತ್ತೇನೆ


ನೆತ್ತರ ಘಮಲಿನ ಸೋಂಕಿಗೆ ಬೆಚ್ಚಿ
ಎದೆ ಭಾಗದ ಅಂಗಿಗೆ ಒರೆಸಿಕೊಂಡಾಗ
ಅಲ್ಲೂ ಮೂಡಿತು ಕವಿತೆ
ನೀ ಅಲ್ಲೂ ಅರಳುತ ಕುಳಿತೆ!!


ಇಷ್ಟೇ ಸಾಕೆಂದು ಬಿಟ್ಟಾಗ
ಮತ್ತಷ್ಟು ಭಾವ ತಂತಿಯ ಬಿಗಿದು
ನೀ ಏಕಮುಖವಾಗಿ ಮೀಟುವಾಗ
ನಾ ವಿಮುಖನಾಗಲು ಹೊರಟೂ
ಪ್ರಮುಖನಾದದ್ದೇ ಸೋಜಿಗ


ಗಾಜಿನ ಮೇಲೆ ಗಾಜನು ಜೋಡಿಸಿಯೂ
ಸ್ಪಷ್ಟತೆ ವಿರಾಜಮಾನವಾಗಿರುವಾಗ
ಯಾವ ಸಂಶಯಕ್ಕೆ ಬಲಿಯಾಗಬೇಕು?
ಬಹುಶಃ ನಾವು ನಿಜವಾಗಿ ಕಣ್ದೆರೆಯಬೇಕು!!


ಕಿರುಬೆರಳ ಕೊನೆ ಆಸೆ
ನಿನ್ನ ಕಿರುಬೆರಳ ಸಹವಾಸ
ಜೀವದ ಬೇಡಿಕೆ ನಿನ್ನ ಶ್ವಾಸ
ಅದರಾಚೆ ಬರೆದ ಕವಿತೆಗಳೆಲ್ಲ
ತೀರಾ ಮೋಸಕ್ಕೆ ಮೋಸ!!


ಕವಿತೆ ಸಿದ್ಧವಾಗುವುದಿಲ್ಲ
ಒಪ್ಪೊತ್ತಿನ ಅಡುಯಂತೆ
ಅದ ಕಟ್ಟುತ್ತಲೇ ಇರಬೇಕು
ಗಿಟ್ಟಿಸಿಕೊಂಡಂತೆ ಕಷ್ಟಕ್ಕೆ
ಹುಟ್ಟಿಸಿ ಬಿಟ್ಟಂತೆ ಇಷ್ಟಕ್ಕೆ!!


                       -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...