Wednesday 30 December 2015

ನನ್ನರಸಿಗೆ

ಮುತ್ತಿಡುವ ಆಟದಲಿ ಮುರಿಯೋಣವೇ
ಎಲ್ಲ ನಿರ್ಮಿತ ದಾಖಲೆಗಳ?
ಹೀಗೆ ಚೂರು ಚೆಲ್ಲಾಟದ ನಂತರ
ನಡೆಸೋಣವೇ ನಾವು ಸಣ್ಣ ಜಗಳ?


ಹೊಗಳಿದ ಗಳಿಗೆ ಮುಗುಳಿನ ಗುಳಿಗೆ
ಬಂದು ತಲುಪಿದೆ ನೋಡು ಎಂಥ ಸ್ಥಿತಿ
ಒಂಟಿ ಅನಿಸುವ ವೇಳೆ ಅಂಟಿ ಕೂತಂತೆ
ನೆರಳಲ್ಲಿ ಕೂಡ ನಿನ್ನಾಕೃತಿ


ಕನಸುಗಳ ಗುತ್ತಿಗೆ ಪಡೆದಾಗಿನಿಂದ ತಾ
ಕಣ್ಣು ನಿನ್ನ ಹೊರತು ಬೇಡವೇನನ್ನೂ
ನಿನ್ನಷ್ಟೇ ಸೊಗಸಾಗಿದೆ ನನ್ನ ದಿನಚರಿ
ಬಣ್ಣಿಸುತಲಿ ಇರಲು ಬಿಡದೆ ನಿನ್ನನ್ನು


ಸ್ವಗತಗಳು ಸ್ವಾಗತಿಸಿವೆ ನಿನ್ನ ಹೆಬ್ಬೆರಳು
ಗೀರಿದ ಮೊದಲಾಕ್ಷರಕೆ ಬಡ್ತಿ ಬೇಡಿ
ಪ್ರಣಯವೇ ಪರಿಪಾಠವಾಗಿರಲು ಬದುಕಲ್ಲಿ
ಹೆಜ್ಜೆಜ್ಜೆಗೂ ಏನೋ ನಡೆದಂತೆ ಮೋಡಿ


ಗೀತೆಗೂ ಮುನ್ನ ಹೊಮ್ಮುವ ಆಲಾಪ-
-ದಂತೆ ನಿನ್ನ ಸಣ್ಣ ಕೋಪ
ವಿರಹಗಳು ಈಚೆಗೆ ಕಾಡದಾಗಿವೆ ವಿಧಿಸಿ-
-ಕೊಂಡು ಸ್ವತಃ ತಮಗೇ ಶಾಪ


ಹೊಂಗೆಯ ನೆರಳನ್ನು ಹೊಂದಿಸಿ ನಿನ್ನನ್ನು
ನನಗಾಗಿ ತಂದನಾ ಬ್ರಹ್ಮ
ಎಲ್ಲವ ಅರಿತಂತೆ ಪೂರೈಸುವ ನೀನೇ
ಪ್ರೇಮ, ಕಾಮವನುಣಿಸಿದಮ್ಮ!!


                                          - ರತ್ನಸುತ

ಈ ಚಳಿಗಾಲದ ರಾತ್ರಿಗಳು....

ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಮೈ ಸುಡುತ್ತವೆಂದರೆ
ಒಳಗೊಳಗೇ ಕರಗಿಸುತ್ತ
ಸುತ್ತ, ಮುತ್ತ ಮಿರುಗಿಸುತ್ತ
ಒಂಟಿತನವ ಮರುಗಿಸುತ್ತ
ಆಸೆಗಳ ಒರಗಿಸುತ್ತ
ಎತ್ತ ಸಾಗಲಿಕ್ಕೂ ಬಿಡದೆ
ಇತ್ತ ಸಾಯಲಿಕ್ಕೂ ಕೊಡದೆ
ನಿದ್ದೆಗೊಡದೆ ಕಣ್ಣುಗಳ
ಜ್ವಲಿಸಿ, ಜ್ವಲಿಸಿ ಕಾಡುತವೆ



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಸ್ತಬ್ಧವೆಂದರೆ
ನಿಚ್ಚಲಗೊಳಿಸುತ್ತ ಇರುಳ
ಹೆಚ್ಚಳಗೊಳಿಸುತ್ತ ವಿರಹ
ಕುಹುಕವಾಡುತ್ತ ತನ್ನ
ಬೆಂದ ಬೇಳೆ ಬೇಯಿಸುತ
ಅತ್ತ ಮಂಜ ಪರದೆ ಮಾಡಿ
ಇತ್ತ ಕೊಂಚ ಪಳಗದಂಥ
ಗರಡಿಯಲ್ಲಿ ಇರಿಸುವವು 

ಸುಳುವೂ ನೀಡದಂತೆ 



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಭಾವುಕವೆಂದರೆ
ಚಂದಿರನೊಡನಾಟದಲ್ಲಿ
ಮಿಂದೇಳುವ ಮನಸ ಕೊಟ್ಟು
ಹತ್ತಿರ ಇರುವವುಗಳಿಗೆ
ಎತ್ತರದ ಸ್ಥಾಯಿ ದೊರೆತು
ಮತ್ತೇರಿಸಿ, ಮದವೇರಿಸಿ
ಹದವಾಗಿಸಿ ಹೃದಯವನ್ನು
ಹರಿಬಿಡುವುದು ನಿಮಿಷದಲ್ಲಿ
ಕರಗಿಸಿ ನೀರಾಗಿಸಿ



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಅಗಣ್ಯವೆಂದರೆ
ಜಪಮಾಲೆಯ ಬೀಜಾಕ್ಷರ
ಕೂಡಿ ಕೂಡಿ ನೀಳವಾದ
ಕವಿತೆಯೊಂದ ಕಟ್ಟಿಕೊಂಡ
ಧ್ಯಾನಿಯೊಬ್ಬನಾಗಿಸುತ್ತ
ಬೇನೆಗೆ ಬೇರೆಯದ್ದೇ
ಉಪಮೆಗಳ ಉಪಹಾರವಿತ್ತು
ಬಿಮ್ಮನೆ ಬದುಕಿದ ಬುದ್ಧಿಯ
ಕ್ಷಣಾರ್ಧದಲ್ಲಿ ಚುರುಕುಗೊಳಿಸಿ
ಲೆಕ್ಕ ತಪ್ಪಿ ಬಿಡುವುದು



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ರಮ್ಯವೆಂದರೆ
ಇಲ್ಲದ ಜಗವೊಂದ ತಾನು
ಇಹುದೆಂದು ನಂಬಿಸಿ
ಒಳ ತಳಮಳಗಳ ಅಳೆದು
ನೇರ ನೇರ ಬಿಂಬಿಸಿ
ಖಾಲಿತನದ ಮನದ ತಣಿಗೆಗೆ
ಸವಿಯೆ ಮಧುವ ಉಣಬಡಿಸಿ
ಎಲ್ಲ ಬಿಡಿಸಿ ಒಗ್ಗೂಡಿಸಿ
ಒಲೈಸಿ ತಿಳಿಸುವುದು
ಎಲ್ಲ ಪೂರೈಸುವುದು




ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಗೌಪ್ಯವೆಂದರೆ
ಓದಿಕೊಳ್ಳುವಂತದಲ್ಲ
ಕೊಂಡು ಓದುವಂತದಲ್ಲ
ಹಂತ ಹಂತವಾಗಿ ತೆರೆದು
ಮತ್ತೆ ಎಲ್ಲೋ ಮರೆಯಾರಿ
ಸಾಗರದ ಅಬ್ಬರದಲಿ
ಸಣ್ಣದೊಂದು ತೊರೆಯಾಗಿ
ಸೆರೆಯಾಗಿ, ಬಿಡುಗಡೆ
ಇದ್ದೂ ಇಲ್ಲದಂತಾಗಿ
ಇದ್ದಷ್ಟೇ ಸೊಗಸಾಗಿ
ಎದುರು ನೋಟಕೂ ಮೊದಲೇ
ಸಿರಿಯಾಗಿ ದಕ್ಕುವುದು!!



                         - ರತ್ನಸುತ 

ಬಾ ಕೋಗಿಲೆ

ಎಲ್ಲಿ ಕಾಯುತ ಕುಳಿತೆ ಕೋಗಿಲೆ?
ಗೌಣವಾಗಿದೆ ಮನ
ಬಂದು ಒಮ್ಮೆ ನೀಡಬಾರದೇ
ಹಾಡಲೊಂದು ಕಾರಣ?


ಗೂಡು ಸ್ವತಃ ನಾನೇ ಕಟ್ಟಿದೆ
ಮೆತ್ತಗಿರಿಸಿದೆ ನಡುವಲಿ
ನಿನ್ನ ಹಂಬಲಕೊಂದು ಚಿಗುರನು
ಬೇಡಿ ಪಡೆದೆ ಮಾವಲಿ


ಬುಡಕೆ ಇಟ್ಟ ಕೊಡಲಿ ಹಿಡಿಯು
ಧೂಪವಾಗಿಹೋಗಿದೆ
ಕುಲುಮೆಯಲ್ಲಿ ಕಾದ ಕಬ್ಬಿಣ
ಊದುಗೊಳವೆಯಾಗಿದೆ


ಹಿತ್ತಲಿನ್ನೂ ಮಸಣವಲ್ಲ
ತುಂಬು ಹೂವ ಸಡಗರ
ಮತ್ತೆ ನಿನ್ನ ಕೂಗಿ ಬಿಕ್ಕಿದೆ
ಸತ್ತು ಹುಟ್ಟಿದ ಮಾಮರ


ಕಬ್ಬಗಳಿಗೆ ಹಬ್ಬವಿಲ್ಲ
ಕಬ್ಬಿಗನ ಕೈ ಹೀನವಾಗಿ
ಉಬ್ಬರಿಸಿತು ಅನಾಥ ಕೊರಳು
ನಿನ್ನ ನೆನೆದು ಘೊರವಾಗಿ


ಬಂದು ನಿಲ್ಲು ಆರಿಸುತ್ತ
ಹರಸಿ ಹೋಗು ನಿನ್ನವನ್ನ
ನಿನ್ನ ದನಿಯ ಇನಿಯನೊಡನೆ
ನಕ್ಕು ನಲಿಯಲಿ ಉಳಿದ ಪ್ರಾಣ


ನೀಡಿ ಹೋಗು ಹೊರಡೋ ಮುನ್ನ
ಕಾಯುವಿಕೆಗೆ ಚೂರು ಗರಿಮೆ
ಮುಂದಿನ ಸಲ ಬರುವ ನಿನ್ನೆಡೆ
ದ್ವಿಗುಣಗೊಳ್ಳಲಿ ಇಹದ ಒಲುಮೆ!!


                                - ರತ್ನಸುತ

Tuesday 29 December 2015

ಒಲವಿನಲಿ


ಎಲ್ಲಿ ಇರಿಸುವೆ ಹೃದಯವನ್ನು
ನನ್ನ ಅರಿವಿಗೆ ಬಾರದಂತೆ?
ಎಲ್ಲ ಹಾಡಿ ಮುಗಿಸುತೀಯ
ನನಗೆ ಏನೂ ಕೇಳದಂತೆ


ನಿದ್ದೆ ಹೊದ್ದ ಹೂವು ನೀನು
ಕನಸಿನೊಳಗೆ ಬೀಳುವಾಗ
ಮನಸಿಗಂತೂ ಸುಗ್ಗಿ ನೀನು
ಸಿಗ್ಗಿನಿಂದ ಅರಳಿದಾಗ


ನೀನು ನೆನಪಲ್ಲುಳಿದ ಮೇಲೆ
ಬಾಕಿ ಎಲ್ಲ ರದ್ದಿಯಂತೆ
ನಿನ್ನ ಒಲವು ದಕ್ಕಿತೆನಗೆ
ತೀರಲಾರದ ಸಾಲದಂತೆ


ಮೂಡಿ ಬರುವೆಯಾ ನನ್ನೊಳಗೆ
ಒಂದು ಮಧುರ ಹಾಡಿಗಾಗಿ
ಗೀಚಿ ಹರಿದ ಹಾಳೆಗಳಿಗೆ
ಸೋತು ಎರಗಿದ ಸಾಲಿನಂತೆ?


ಕಲಿಸು ಮೊದಲಿನಿಂದ ಪಾಠ
ಕೈಯ್ಯ ಹಿಡಿದು ತೀಡಿ
ತಲುಪುವ ದಿಗಂತವ
ಒಲವಿನಿಂದ ಕೂಡಿ!!


                        - ರತ್ನಸುತ

Tuesday 22 December 2015

ಸಾವಿಲ್ಲದವು

ಸಾವಿರ ಸುಳ್ಳಿನ ನಡುವೆ
ನಿಜವಾದ ಬದುಕೊಂದು
ತನ್ನ ಸಾಚಾತನವನ್ನ ಸಾರುತ್ತ
ಸುಳ್ಳಿನ ಬಣ್ಣ ಹಚ್ಚುತ್ತಲೇ
ಸುಳ್ಳನ್ನು ಸುಳ್ಳಾಗಿಸುವ ಹಾದಿಯಲಿ
ಬಹಳ ಬೇಗ ಕೊನೆಗಾಣುತ್ತಿದೆ



ಬಿತ್ತಿದ ಬೀಜದ ಸತ್ಯದಲಿ
ಹೆಮ್ಮರವಾಗುವಷ್ಟು ತೂಕ
ಸುಳ್ಳು ತಾನಾಗಲೇ ಕಳಚಿಕೊಂಡ ತೇವ,
ಈಗ ಬೀಜಕ್ಕೆ ಹೆಮ್ಮರವಾಗುವ ಆಸ್ತೆಗಿಂತ
ತೇವಾಂಶ ಗಿಟ್ಟಿಸಿಕೊಳ್ಳುವ ತವಕ



ಮೋಡದ ನಿಧಾನ ಗತಿಯಲ್ಲಿ
ಹುನ್ನಾರವುದುಗಿಹುದೆಂದನಿಸಿ
ಮಣ್ಣು ಸತ್ತಂತೆ ನಟಿಸಿದರೆ
ಅನುಕಂಪಕ್ಕೆ ಜಲಪ್ರಳಯವಾಗಬಹುದು,
ಸುಳ್ಳಾಡುವಲ್ಲಿ ಎಚ್ಚರಿಕೆಯ ನಡೆಯಿಟ್ಟರೆ
ಸತ್ಯದ ಬಾಯಿ ಮುಚ್ಚುವುದು ಖಾಯಂ



ಕನಸಿನ ಹಸಿ ಸತ್ಯ ಇಷ್ಟಪಟ್ಟವರು
ಚಿರನಿದ್ದೆಯ ಮೊರೆ ಹೋಗಿ
ಗುರುತೇ ಇಲ್ಲದಂತಾಗಿರುವುದ
ಕಪಟಿಗಳು ಒತ್ತಿ ಒತ್ತಿ ಹೇಳುವಾಗ
ನಂಬಿಕೆಗಳು ಒಂದೊಂದಾಗಿ
ಸೋತು ಶರಣಾಗುತಿವೆ



ನೆರಳು ಸುಳ್ಳಾಗದಿರಲು
ಮೂಲ ಸುಳ್ಳಾಗದಿರಬೇಕೆಂದು
ಪ್ರತಿಪಾದಿಸುವ ಆಕಾರಗಳದೆಷ್ಟು ಸತ್ಯ?
ಎಲ್ಲವೂ ಸುಳ್ಳೆಂದು ಭಾವಿಸಿದರೆ
ಕೆಲವಾರು ನಿಜದಿಂದ ನಿಟ್ಟುಸಿರು ಬಿಡಬಹುದು
ಅನ್ಯತಾ ಭಾವಿಸಿದೊಡೆ
ನಮ್ಮತನಗಳೇ ನಮ್ಮನ್ನು ದೂರಬಹುದು!!



ಸತ್ಯಕ್ಕೆ ಸಾವಿಲ್ಲ
ಅಂತೆಯೇ ಸುಳ್ಳಿಗೂ...

                                     - ರತ್ನಸುತ

Monday 21 December 2015

ತಿಂಗಳ ಕೊನೆ

ತಿಂಗಳ ಕೊನೆಯ ಬಿಲ್ಲೆಗಳೆ
ಸದ್ದೇ ಮಾಡದೆ ಎಲ್ಲಿ ಉಳಿದಿರಿ?
ಎಂದೋ ಗೂಟಕೆ ಜೋತ ಪ್ಯಾಂಟಿನ
ಜೇಬಿನ ತೂತಿಗೆ ಮುನಿದರೆ ಹೇಗೆ?


ಚಿಲ್ಲರೆಯಿಲ್ಲದೆ ಬಿಟ್ಟುಕೊಟ್ಟಿದ್ದೆ
ಅಂಗಡಿಯವನಿಗೆ ಗುರುತೇ ಇಲ್ಲ
ಲೆಕ್ಕದ ಪುಸ್ತಕ ತೋರುವ ಅಂಕಿಗೆ
ತಿಂಗಳ ಖರ್ಚು ಹೊಂದುತಲಿಲ್ಲ


ಸಾಲವ ಕೊಟ್ಟ ಸ್ನೇಹಿತರೆಲ್ಲ
ಸ್ನೇಹಿತರಲ್ಲದೆ ಉಳಿದರು ದೂರ
ಕೊಟ್ಟು ವಾಡಿಕೆಯಾಗಿದೆ ಅಲ್ಲದೆ
ಕೇಳುವುದಾದರೆ ಕೇಳಲಿ ಯಾರ?


ಎಲ್ಲೋ ಮರೆತು ಇರಿಸಿದ ಕಾಸು
ಥಟ್ಟನೆ ಕಣ್ಣಿಗೆ ಕಂಡರೆ ಹೇಗೆ?
ಅಷ್ಟೋ ಇಷ್ಟೋ ದಕ್ಕಿಸಿಕೊಂಡರೂ
ಕ್ಷಣದಲೇ ಮಾಯ ದೇವರ ಹಾಗೆ


ಬಾಧಿಸುವವುಗಳು ಬದಿಯಲೇ ಉಳಿದವು
ತಿಂಗಳು ಕೊನೆಗೊಳ್ಳುವ ಅವಧಿಯಲಿ
ಸಂಬಳದ ಸವಿ ಸವಿಯುವ ಮುನ್ನವೇ
ಸವೆವುದು ಮೊದಲ ವಾರದ ಕಡೆಯಲಿ


ಉಳಿತಾಯ ಖಾತೆಯಲ್ಲುಳಿವುದಿಲ್ಲ
ಕೇಡುಗಾಲಕಾಗುವಷ್ಟಾದರೂ
ಸಾಲ ಕೊಂಡರೆ ಬಡ್ಡಿಯ ಗೋಳು
ಕಟ್ಟಲೇ ಬೇಕು ಸತ್ತಾದರೂ!!


                                - ರತ್ನಸುತ

Sunday 20 December 2015

ಹುಟ್ಟು ಹಬ್ಬ

ಹೊಸತೇನೂ ಇಲ್ಲ ಗೆಳತಿ
ಇದೂ ಮತ್ತೊಂದು ವಾರಾಂತ್ಯವಷ್ಟೇ
ತಡವಾಗಿ ಮಲಗಿ, ಬಡವಾಗಿ ಎದ್ದು
ಬಿಡುವಾಗಿ ಕಾಲಹರಣ ನಡೆಸೋ ದಿನ!!


ಇಷ್ಟೇ ಆಗಿದ್ದರೆ ಇಷ್ಟರಲ್ಲೇ ಸಾಗುತ್ತಿದ್ದೆ
ಆದರೆ ಇಂದು ನಿನ್ನ ಜನ್ಮ ದಿನ,
ನಿನ್ನ ಕಣ್ಣೊಳಗೆ ನಿರೀಕ್ಷಾ ಶಿಖರಗಳ
ದೂರದಿಂದಲೇ ಗ್ರಹಿಸಿ
ಏರಿಳಿಯುವ ಸಾಹಸಕ್ಕೆ ಕೈ ಹಾಕದೆ
ಬೆಚ್ಚಿ ಉಳಿದಿದ್ದೇನೆ


ನಿನ್ನ ಅಚ್ಚರಿಗೊಳಿಸುವ ಅಸ್ತ್ರಗಳೆಲ್ಲ
ಪ್ರಯೋಗಕ್ಕೂ ಅರ್ಹವಲ್ಲ ಎಂದು ತಿಳಿದಾಗ
ಶರಣಾಗಿ ನಿನ್ನನ್ನೇ ಸಲಹೆ ಕೇಳಿದಾಗ
ನೀ ಮುನಿಸಿಕೊಳ್ಳಲು ಅರ್ಥವಿದೆ


ಬಿಡಿಗಾಸಿನುಡುಗೊರೆಗೆ ಬೆರಗಾಗಿ
ಬಿಗಿದಪ್ಪಿ "ಇಷ್ಟೇ ಸಾಕು ಇನಿಯ" ಅಂದಾಗ
ನನ್ನ ಅಲ್ಪತನದ ಶ್ರೀಮಂತಿಕೆಗೆ
ಹಿಡಿ ಮಣ್ಣು ಹಾಕುವಷ್ಟು ಸಿಟ್ಟು
ಇನ್ನೂ ಹೆಚ್ಚಿನದ್ದೇನಾದರೂ ನೀಡಬೇಕೆಂಬ  ಖಯಾಲಿ


ಎಲ್ಲ ಸಂದರ್ಭಕ್ಕೂ ಕವಿತೆ ಸಲ್ಲ
ಆದರೂ ಕಿರುಗವಿತೆಯೊಂದನ್ನು
ಕಾಡಿ ಬೇಡಿ ಗೀಚಿಕೊಂಡರೆ
ಅದರ ತುಂಬೆಲ್ಲ ಅಕ್ಷರ ದೋಷಗಳೇ,
ಅಷ್ಟಾಗಿಯೂ ಮೆಚ್ಚುವ ನಿನ್ನ ನಾ ಮೆಚ್ಚಿದ್ದೇ
ಇಷ್ಟರವರೆಗಿನೊಳಗಿನವುಗಳಲ್ಲಿ ಪುಣ್ಯದ ಕೆಲಸ


ನಾನೇ ನಿನ್ನ ಉಡುಗೊರೆಯೆಂದು ಹೇಳುವ
ನನ್ನ ಅಸಹಾಯಕತೆಯಲ್ಲಿಯ ಪ್ರೇಮವನ್ನೂ ಒಪ್ಪುವ ನಿನ್ನಲ್ಲಿ
ನಾ ಬೆರೆಯುವಾಗೆಲ್ಲ ಒಂದು ತೃಪ್ತ ಭಾವ,
ಅದ ನಿನಗೆ ತಿಳಿಪಡಿಸುವ ಪ್ರಯತ್ನಕ್ಕೆ
ಜಯ ಸಿಗಲೆಂದು ಪ್ರಾರ್ತಿಸುವ ನಿನಗೆ
ದಕ್ಕಿದ ನಾನೇ ಧನ್ಯನೆಂದು ಬೀಗುತ್ತೇನೆ!!


ಇಂದು ನಿನ್ನ ಹುಟ್ಟು ಹಬ್ಬ ಗೆಳತಿ
ನಾನೂ ಹೊಸದಾಗಿ ಹುಟ್ಟಿದ ಸಂತಸ
ಇಬ್ಬರಿಗೂ ಆಚರಿಸಿಕೊಳ್ಳಲು ಕಾರಣಗಳಿವೆ
ನಾ ನಿನಗೆ, ನೀ ನನಗೆ ಕಾರಣ


                                           - ರತ್ನಸುತ

Thursday 17 December 2015

ಅಹಮ್ಮುಗಳಾಚೆ

ಕ್ಷಮಿಸು ಗೆಳತಿ
ಅತ್ತಾಗ ಕಣ್ಣೀರು ಬರದಾಯಿತು
ಹಿಂದೆ ಇಟ್ಟ ಆಣೆ ಬರಿದಾಯಿತು
ನೋವು ಕೂಡ ಶಪಿಸಿ ದೂರುಳಿಯುವ ವೇಳೆ
ಗಾಯಕ್ಕೆ ಸಂತಾಪ ಸಿಗದಾಯಿತು


ನಿನ್ನ ಕಣ್ಣೀರ ಬಿಸಿ
ಬೆಚ್ಚಗಾಗಿಸಿತೆನ್ನ ಬೆರಳುಗಳ,
ಅದು ಅಷ್ಟೊಂದು ಬೇಯಲು
ಕಾರಣ ನಾನೇ?
ಅಥವ ನಾನೆಂಬ ಅಹಮ್ಮೇ?!!


ಯಾವ ದಿಂಬಿಗೆ ಕನಸನುಣಿಸಿದೆಯೋ
ಅದೇ ದಿಂಬಿಗೆ ಕಂಬನಿ?
ಅರ್ಥವಾಗದ ಗೀಟು ಎಳೆಯಿತು
ನಿನ್ನ ಕಣ್ಣ ಲೇಖನಿ
ಓದೋ ಶಿಕ್ಷೆ ಹೊರತು ಬೇರೆ
ಕಠಿಣವಾದುದ ವಿಧಿಸಿ ನೋಡು!!


ಮಾತು ಮುಳ್ಳಿನ ಹಾಸಿಗೆ
ಸಲ್ಲದು ಹೊತ್ತಿಗೆ
ಇರುಳು ಮುಳುಗಿ ಬೆಳಕು ಹರಿಯಲಿ
ತಾಳ್ಮೆ ಇರಲಿ ತಾಳ್ಮೆಗೆ
ಬಿಂಬಕಾಗಿ ಇಣುಕು ನೂಕಲು
ಒಡೆಯದಿರಲಿ ಒಲವ ಗಾಜು


ಜೋಗುಳಕ್ಕೆ ಮಂಪರು ಬಡಿದಿದೆ
ನಾಲಗೆ ಮುದುಡಿ ಮಲಗಿದೆ
ಕಣ್ಣು ತೇವದ ಕಡಲ ತೀರ
ಮತ್ತೆ ಮತ್ತೆ ನೆನೆದಿದೆ
ಹೊತ್ತು ಮುಳುಗಲಿ ಬೀಟ್ಟುಗೊಡುವ
ಕ್ಷಣವ ಅದರ ಪಾಡಿಗೆ!!


ನೋವು ಕೊಡದ ಪ್ರೀತಿಯನ್ನು
ಒಪ್ಪದವನು ಆದ್ದರಿಂದ
ಇಗೋ ಚೂರು ಸಹಿಸಿಕೋ
ಮುನಿಸು ನಾಳೆಗೂ ಉಳಿಸಿಕೋ!!


                               - ರತ್ನಸುತ

ಮೋಹದ ತೀರ್ಪು

ಕಾಡಿಗೆಯ ಸಣ್ಣ ಎಳೆ
ಕಣ್ಣಂಚಿನ ತುಂಬ
ಎಂಥದೋ ಸಂಚನು ಹೂಡುತಿಹುದು
ಜುಮುಕಿಯ ಉಯ್ಯಾಲೆ
ಮುಂಗುರುಳ ಬೆನ್ನಲ್ಲೇ
ಏನನೋ ಪಿಸುಗುಡುತ ನಾಚುತಿಹುದು



ಇಲ್ಲೆಲ್ಲೋ ಕಂಡದ್ದು
ಇನ್ನೆಲ್ಲೋ ಗೋಚರಿಸಿ
ಯಾರೋ ದೋಚದೆ ಬಿಟ್ಟ ಹೆಜ್ಜೆ ಗುರುತು
ಕಂಬ ಕಂಬಗಳೊಳಗೆ
ನಿನ್ನ ಬೆರಳಿನ ಬಿಂಬ
ರಿಂಗಣಿಸಿತು ಇಂಪು ನಿನ್ನ ಬೆರೆತು



ಯಾವ ಸಂಗತಿಯಲ್ಲೂ
ಸಂಗಾತಿ ನಿನ್ನ ಮುಖ
ಯಾರ ಬಳಿ ಹೇಳಿಕೊಳ್ಳಲಿ ನೋವ
ಸುಮ್ಮನೆ ಇದ್ದರೂ
ಪ್ರತಿಧ್ವನಿಸುತಿದೆ ಮತ್ತೆ
ಬಿಟ್ಟೂ ಬಿಡದಂತೆ ಮಧುರ ಭಾವ



ಬೆಳಕ ಬೆಳಗುವ ನಿನ್ನ
ಬೆಳದಿಂಗಳಂಥ ಮೊಗ
ಬಳಿಕ ಮಾಸಿದರಿಲ್ಲ ಇರುಳಿಗರ್ಥ
ನನ್ನ ಹೊರತು ನಿನ್ನ
ಯಾರೂ ನೋಡದ ಹಾಗೆ
ಕುರುಡಾಗಲೆನ್ನಲದು ಅಲ್ಪ ಸ್ವಾರ್ಥ



ಸಾಕು ಮಾಡಿದರಲ್ಲಿ
ಸಾಕಾಗುತಿಲ್ಲ ಇದು
ಇನ್ನೂ ಬೇಕೆನ್ನುವ ಹುಚ್ಚು ಬಯಕೆ
ಮುಪ್ಪಾಗದಿರಲಿ ತಾ
ತಪ್ಪುಗಳ ಸರಣಿಗೆ 
ವಯಸು ಕುರುಡೆನ್ನುವರು ಇದಕೇ!!

                                      
                                    - ರತ್ನಸುತ

ಹೃದಯ ಗೀತೆ


ನೀ ಹೀಗೆ ನಕ್ಕರೆ
ನಾ ಹೇಗೆ ಉಳಿಯಲಿ?
ಇನ್ನೆಂದೂ ನಗಬೇಡ ಹೀಗೆ,
ನೀ ಇರದೆ ಹೋದರೆ
ನಾ ಹೇಗೆ ಬಾಳಲಿ?
ನೆರಳಿಲ್ಲದ ಇಳೆಯ ಹಾಗೆ


ಬಿಡಿಗೂದಲಲ್ಲಿನ
ಬಿಡಿಗನಸಿನ ಘಮ
ತಟ್ಟುತಿದೆ ಎದೆಯನ್ನು ಬಿಡದೆ,
ನೂರಾರು ಸಾರಿ ನಾ
ಸತ್ತು ಬದುಕುಳಿದೆನು
ಜೀವಕ್ಕೆ ಹೊಣೆಯೆಂದೂ ನಿನದೇ!!


ಎಲ್ಲ ಸರಿಸುತ್ತ ನೀ
ನನ್ನನ್ನೇ ಆರಿಸು
ಹಠದಲ್ಲಿ ಮಗು ಬಯಸಿದಂತೆ,
ಕಣ್ಣಲ್ಲೇ ತಾಳವ
ಹಾಕುತ್ತಾ ಹೋದೆ ನೀ
ಹೇಗುಳಿಯಲಿ ಕುಣಿಯದಂತೆ?


ಎಲ್ಲಕ್ಕೂ ನಾಚಿಕೆ
ರೂಢಿ ಈಚೀಚೆಗೆ
ಪರಿಹಾರವೇನಿದಕೆ ಹೇಳು?
ಬರೆವ ಪದವೆಲ್ಲವೂ
ಬರಿಯ ಸುಳ್ಳಾಗದೆ
ಪರಿಹಾಸ ಬೇಡುತಿವೆ ಸಾಲು


ಹಿಂದಿರುಗು ಒಮ್ಮೆ
ಕರೆಯುವ ಮುನ್ನ
ಕೊರಳಲ್ಲಿ ಉಳಿಯಲಾ ಹೆಸರು,
ನೀ ನನ್ನವಳು, ನಾ
ನಿನ್ನವನು ಎಂಬುದೇ
ಬಡಪಾಯಿ ಪ್ರೇಮಿಯ ಪೊಗರು!!


                                 - ರತ್ನಸುತ

Wednesday 2 December 2015

Chennai- I pray for you


I felt you were a red-hot pan
A sweat releasing factory
As busy as a hungry bee
An oven where I got baked


A dream of many little eyes
A city with opportunities
On Sea shore sand those memories
Evenings where sun set finally


As clean you were also filthy
Like any other cities were
With all the rush and pain you gave
I had a peace of mind I swear


You had no rains
You were good with it
When it rained
Wow!! Yes, you got it


But now I see you
From a far distance
How could you get
So worst n worst


Now fight it hard
And be Chennai
Coz I don't want to
See you cry!!


               - BHARATH

ಹಕ್ಕಿ ಗೂಡಿನ ಕತೆ


ಎತ್ತಲಿಂದಲೋ ಹಾರಿ ಬಂದ ಹಕ್ಕಿ
ಬೋಳು ಮರದ ತುತ್ತ ತುದಿಯ
ಸಿಡಿಲು ಬಡಿದ ರೆಂಬೆಯಲ್ಲಿ ಗೂಡು ಕಟ್ಟಿತು


ಬುಡದಲ್ಲುಳಿದವುಗಳೆಲ್ಲ ಕಂಡವು
ಗಾಳಿ ಬೀಸಿದಾಗ ಉರುಳಬಹುದೆಂದವು
ಪಾಪ ಹಕ್ಕಿ ಬುದ್ಧಿಹೀನ ಅಂದುಕೊಂಡವು


ಮೊದಲ ದಿನ ಜೋರು ಮಳೆ
ಬುಡದ ಹಕ್ಕಿಗಳೆಲ್ಲ ಬೆಚ್ಚಗುಳಿದು ಕ್ಷೇಮ
ತುತ್ತ ತುದಿಯ ಮೊಟ್ಟೆ ಕಾವಿಗೆ ಕ್ಷಾಮ
ಅದೊಂದ ಹೊರತು ಪಡಿಸಿ
ಮಿಕ್ಕಂತೆ ಅದು ಅನೂಪ ಪಕ್ಷಿಧಾಮ


ನಕ್ಕ ಬಾಕಿ ಹಕ್ಕಿಗಳಿಗೆ
ಮೂಕ ಹಕ್ಕಿ ಏನೋ ಹೇಳ ಹೊರಟಿತು
ಕೇಳುವ ಸೌಜನ್ಯವಿರದೆ
ತಮ್ತಮ ಗೂಡುಗಳನು ಗಟ್ಟಿಗೊಳಿಸುವಲ್ಲಿ
ಅವು ನಿರತವಾದವು


ಅಂದು ಸಂಜೆ ಹಿಡಿದ ಮಳೆ
ರಾತ್ರಿ ಮೀರಿ ಹಗಲು ದಾಟಿ
ಸಂಜೆ ವೇಳೆಗೊಂದಿಷ್ಟು ತಣ್ಣಗಾಯಿತು


ಮೂಕ ಹಕ್ಕಿಯಂಗೈಯ್ಯಲಿ ಪ್ರಾಣ ಹೀಡಿದು
ರೆಕ್ಕೆ ಬಡಿದು ಕಣ್ಣು ತೆರೆಯಿತು
ಗೂಡು ಮುಳುಗಲಿನ್ನು ಒಂದು ಬಾರು ಉಳಿಯಿತು
ಬುಡದ ಗೂಡು ಸಹಿತ ಮೊಟ್ಟೆ ಕೊಚ್ಚಿ ಹೋಗಿತ್ತು
ಹೆತ್ತಂಮ್ಮಂದಿರ ಅಳಲೂ ಕೇಳದಾಯಿತು


ಮತ್ತೆ ಶನಿ ಹಿಡಿದಂತೆ ಮಳೆ ಹಿಡಿಯಿತು
ಎತ್ತಲೂ ಹೋಗಲಾಗದಂತೆ ಹಕ್ಕಿ ಉಳಿಯಿತು
ಕತೆ ಮುಗಿಯದಂತೆ ಮತ್ತೆ ಮುಂದುವರಿಯಿತು!!


                                                - ರತ್ನಸುತ

Tuesday 24 November 2015

ರಿನೈಸನ್ಸ್ (Renaissance)

ಎಲ್ಲರೂ ಸತ್ತು ಮತ್ತೆ ಹುಟ್ಟೋಣ್ವಾ?
ಬ್ರಹ್ಮ, ಅಬ್ರಹಂ, ಇಬ್ರಾಹಿಂ ಒಪ್ಪಿದ್ದಾರೆ
ಬನ್ನಿ ಎಲ್ಲರೂ ಸಾಯೋಣ
ಎಲ್ಲವನ್ನೂ ಸಾಯಿಸೋಣ


ಮನುಕುಲದ ಹುಟ್ಟು ಎಲ್ಲಿಂದ? ಯಾರಿಂದ?
ಹೇಗಾಗುವುದೆಂಬ ಚಿಂತೆ ಬೇಡ
ಒಗಟುಗಳ ತಗಾದೆ ಬೇಡ
ಮೊದಲುಗಳ ಮೂಲ ಹುಡುಕುತ್ತ
ಮೆದುಳುಗಳು ಕೊಳೆವುದು ಬೇಡ
ನೆನ್ನೆಗಳ ಸಮರ್ಥನೆಗೆ ಇಂದು-ನಾಳೆಗಳ ಕಳೆವುದು ಬೇಡ


ಹುಟ್ಟು ಹುಟ್ಟಾಗಿರಲಿ, ಸಾವು ಗುಟ್ಟಾಗಿರಲಿ
ಪುನರ್ಜನ್ಮಗಳ ಕಂತೆ ಪುಟಗಳೆಲ್ಲ ಹರಿಯಲಿ
ದೇವರೇ ಇಳಿದು ಬಂದು ತಾ ದೇವರೆಂದರೂ
ದೇವನೊಬ್ಬನೇ ಎಂದು ಯಾರೇ ಸಾರಿದರೂ
ದೇವರು ಮತ್ತೆ ಹುಟ್ಟಿ ಬರುತ್ತಾನೆಂದರೂ
ದೇವರು ಮೊದಲು ನಮ್ಮಲ್ಲಿ ನೆಲೆಸದ ಹೊರತು
ಅದು ದೇವರೆಂಬುದೇ ಇಲ್ಲವೆನ್ನದ ಹೊರತು
ಅದು ಅದಾಗಿ ಅವ/ಅವಳಾಗದ ಹೊರತು
ದೇವರನ್ನ ದೂರವಿಟ್ಟೇ ನೋಡೋಣ


ಒಂದು ಹಸಿವಿಗೆ ನೂರು ಕೈ
ಒಂದು ನೋವಿಗೆ ನೂರು ಮನಸು
ಒಂದು ಅಳಲಿಗೆ ನೂರು ಕಣ್ಣು
ಸಂಸ್ಕೃತಿಯ ಅಡಿಪಾಯದ ಮೇಲೆ
ಭವ್ಯ ಬಂಗಲೆಗಳ ಕಟ್ಟೋಣ,
ಕೋಣೆಯಲ್ಲಿ ದೇವರ ಕಟ್ಟಿ ಹಾಕುವುದು ಬೇಡ
ಅದಕ್ಕೂ ಸ್ವತಂತ್ರ ತಂತ್ರದ ಅರಿವಾಗಲಿ
ಅನ್ಯ ಗ್ರಹಗಳೇನಾದರೂ ಬದಲಾದ ಭೂಮಿಯಿಂದ ಕಲಿವಂತಿದ್ದರೆ
ದಾರಾಳವಾಗಿ ಅದು ಕಲಿಸಲಿ
ಆದರೆ ದೇವರಾಗಿ ಅಲ್ಲ!!


ಸಾವು ಸ್ವಸ್ಥ್ಯ ವೃದ್ಧಿಸುವುದಾದರೆ
ಇಡಿ ದೇಶ ದೇಶಗಳು ಸ್ಮಶಾಣಗಳಾಗಲಿ
ಆದರೆ ಮನುಷ್ಯರು ಹೀಗೂ ಇದ್ದರೆಂಬ
ಕುರುಹುಗಳ ಉಳಿಸದಿರಲಿ ಸಾಕು!!


                                          - ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...