Tuesday 29 September 2015

ಮುಗಿಯಲಾರದೆ


ಎಂದೆಂದೂ ನಿನ್ನ ಕೊಂಡಾಡುವಂಥ
ಕಲೆಯೊಂದ ಕಲಿಸು ಬಾರೆ
ಪಳ ಪಳನೆ ಹೊಳೆವೆ ಒಂದೇ ಸಮನೆ
ಕೋಲಾರ ನಿನ್ನ ಊರೇ?!!


ಹೃದಯದಲಿ ನಿನ್ನ ಹೊರತಾಗಿ ಯಾರೂ
ಬಿಟ್ಟಿಲ್ಲ ಹೆಜ್ಜೆ ಗುರುತು
ಅನುಮಾನವನ್ನು ಬಗೆಹರಿಸಿಕೊಳಲು
ದುರ್ಬೀನು ಹಾಕಿ ಹುಡುಕು


ಮರೆತಂತೆ ನಿನ್ನ ಹೆಸರನ್ನು ನೆನೆದು
ನಟಿಸುತ್ತ ಕಾಡಬೇಕು
ನಿನಗೊಂದು ಮುದ್ದು ಹೆಸರಿಟ್ಟು ಕರೆವೆ
ದಯಮಾಡಿ ತಿರುಗಬೇಕು


ಅಲ್ಲಲ್ಲಿ ನನ್ನ ಕೊಲ್ಲುತ್ತೆ ನಿನ್ನ
ನಗುವೊಂದೇ ರಾಮ ಬಾಣ
ನೀ ಕೊಟ್ಟು ಬಿಟ್ಟ ನೆನಪಿನ ಬುಟ್ಟಿ
ಮನಸಿಗೆ ಪಂಚಪ್ರಾಣ


ಎಲ್ಲಿದ್ದರೇನು ಹೇಗಿದ್ದರೇನು
ನಿನ್ನಲ್ಲಿ ಬಂಧಿ ನಾನು
ಕನಸಲ್ಲೂ ನಿನ್ನ ಎದೆ ಬಾಗಿಲಲ್ಲಿ
ಕಾಯುತ್ತ ಕೂರಲೇನು?


ಇಷ್ಟಕ್ಕೆ ಎಲ್ಲ ಮುಗಿದಿಲ್ಲ ಕೇಳು
ಉಳಿಸಿಟ್ಟೆ ಚೂರು ಬಾಕಿ
ನನ್ನರ್ಧ ಜೀವ ಕೈ ಜಾರಿ ಹೋಯ್ತು
ಹೊರಟಾಗ ನೀನು ಸೋಕಿ!!


                                  -- ರತ್ನಸುತ

Monday 28 September 2015

ಅತೀತ


ಅತಿ ಸಣ್ಣ ಸುಳ್ಳು
ನಮ್ಮೊಲವಿಗೊಂದು
ಹುಳಿ ತೊಟ್ಟು ಹಿಂಡುವಾಗ
ಮಂಜು ಹನಿಯೇ
ಅಂಜಿಕೆಯೇ ಬೇಡ
ಒಡೆವಂತದಲ್ಲ ಪ್ರೇಮ


ಅತಿ ಘೋರ ಕನಸು
ಮಿತಿ ಮೀರುವಾಗ
ಗತಿಗೆಡುವ ಶಂಕೆಯೇಕೆ?
ಕಣ್ತೆರೆದು ನೋಡು
ನಿಜವುಂಟು ಎದುರು
ಉಲ್ಲಾಸದಲ್ಲಿ ನಲಿದು


ಅತಿ ಮೌಲ್ಯವಾದ
ಉಡುಗೊರೆಯ ಕೇಳು
ಕೊಡಬಲ್ಲೆ ನಿಮಿಷದಲ್ಲೇ
ಒಂದೊಮ್ಮೆ ಕಿರಿದು
ಅನಿಸಿದರೆ ಹೇಳು
ಹೃದಯವನೇ ಸೀಳಿ ಕೊಡುವೆ


ಅತಿ ಮದುರ ವಾಣಿ
ಶೃತಿಗೊಪ್ಪೋ ವೀಣೆ
ನಿನ್ನ ಕಣ್ಣ ಚಲನ
ಎದೆಯಲ್ಲಿ ಬಿಡದೆ
ಗುನುಗುಟ್ಟುವಂಥದಾ-
ನಿನ್ನ ತುಂಟ ಮಾತು


ಅತಿರೇಖವಲ್ಲ
ಅತಿ ಸರಳವಾದ
ಬಣ್ಣನೆಗೂ ಸಿಗುವ ನೀನು
ಚಿರಪರಿಚಯಕ್ಕೂ
ಮರು ಪರಿಚಯಿಸುವ
ಅಪರೂಪವಾದ ಚೆಲುವೆ!!


                     -- ರತ್ನಸುತ

Wednesday 23 September 2015

ಬಣ್ಣದ ಗುರುತು


ಚಿಟ್ಟೆ ಹಾರಿ ಬಂತು
ಏನೊ ಅಂತು
ಭುಜದ ಮೇಲೆ ಕುಂತು


ಅರ್ಥವಾಗಲಿಲ್ಲ ನನಗೆ
ಎಳ್ಳಿನಷ್ಟೂ
ಅದರ ಮಾತು


ಚಿಟ್ಟೆ ಹಾರಿ ಹೋಯ್ತು
ಚೂರು ಬಣ್ಣ
ಅಲ್ಲೆ ಮೆತ್ತಿ ಬಿಟ್ಟು


ನೆತ್ತರೋ, ನೆಕ್ಟರೋ
ಯಾವ ಹೂವ ಕಣ್ಣೀರೋ
ಬಿಡಿಸಲಾಗದೊಗಟು


ಗೊಂದಲದಲೇ ಹೊರಟು ನಿಂತೆ
ಬೂಟಿನಡಿ ಅಳುವ ಸದ್ದು
ಹೊಸಕಿ ಬಿಟ್ಟ ಚಿಗುರು
ದುಃಖಿಸಿತು ಪೊಗರು


ಚಿಟ್ಟೆ ಮತ್ತೆ ಕಾಣಲಿಲ್ಲ
ಭುಜದ ಬಣ್ಣ ಮಾಸಲಿಲ್ಲ!!


                           -- ರತ್ನಸುತ

Monday 21 September 2015

ನಾನು ಯಾರು?

ಒಂದು ಕುಂಚವಿದ್ದರೆ ಕೊಡಿ
ಬಣ್ಣದಲಿ ಅದ್ದದೆಲೆ
ನನ್ನ ನಾನೇ ರೂಪಿಸಿಕೊಳ್ಳಬೇಕು


ಒಂದು ರೀತಿ ಮಾಯಾ ಕುಂಚವಂದುಕೊಳ್ಳಿ,
ನನ್ನ ಯಾರೂ
ಬಣ್ಣ ಹಚ್ಚಿಕೊಂಡವ ಅನ್ನಕೂಡದು ಅಷ್ಟೆ


ಇದು ನನ್ನ ಕೊನೆ ಆಸೆ,
ಕೊನೆಗಳನ್ನೆಲ್ಲ ಅಲ್ಲೇ ಕೊನೆಗೊಳಿಸಿ
ಕೊನೆಗೆ ಕೊನೆ ತಲುಪಿದ್ದೇನೆ


ಬಣ್ಣ ಹಚ್ಚಲೇ ಬೇಕಾದರೆ
ಕುಂಚದ ತುತ್ತ ತುದಿಗೆ
ನನ್ನ ಅಹಮ್ಮಿನ ಪರಿಚಯವಾಗಿಸಿ
ನಂತರ ಬಂಡಾರದಲಿ ಅದ್ದುತ್ತೇನೆ
ಬಣ್ಣ ಅಷ್ಟಕ್ಕೂ ಹತ್ತಿದರೆ ನಂತರದ ಮಾತು


ಇಲ್ಲಿ ನೋಡಿ
ಹೇಗನಿಸುತ್ತಿದ್ದೇನೆ ಈಗ?
ಗೊಂದಲವಿಲ್ಲದೆ ನಿಜ ಹೇಳಿ
ನಾನು ಬದುಕುತ್ತಿರುವುದೇ ನಿಮಗೋಸ್ಕರ,
ಅಷ್ಟಲ್ಲದೆ ಕಸರತ್ತು ನಡೆಸುವ ದರ್ದೇನಿತ್ತು?!!


ಸರಿ, ನಿಮಗೊಪ್ಪಿಗೆಯಾಗುವವರೆಗೂ
ನನ್ನ ಮರು ರೂಪಿಸಿಕೊಳ್ಳುತ್ತಲೇ ಇರುತ್ತೇನೆ
ಸರಿಯೆನಿಸಿದಲ್ಲಿ ನಿಲ್ಲಿಸಿ, ಅಲ್ಲೇ ನಿಲ್ಲುತ್ತೇನೆ..
ಮತ್ತಿನ್ನಾರೋ ರಾಗ ತೆಗೆಯದ ವಿನಹ!!


ಒಂದೆಡೆ ನಿಲ್ಲದ ನನಗೆ
ನೀವೇ ಒಂದು ಹೆಸರಿಟ್ಟುಬಿಡಿ
ಸ್ವಂತಿಕೆಯೇ ಇರದ ನನಗೆ 
ಇಟ್ಟ ಹೆಸರಲ್ಲೇ ಕರೆಯಬೇಕೆಂಬ ಆಸೆಯಿಲ್ಲ
ಇದ್ದರೂ, ಅದು ಎಂದೋ ಸತ್ತು ಹೋಗಿದೆ


ನಾನು ನಾನಲ್ಲ ಎಂದು ನಂಬಿಸುವುದಕ್ಕೆ
ಯಾವುದೇ ಪುರಾವೆಗಳು ಬೇಕಿಲ್ಲ
ನಾನು ನಿಮ್ಮ ಮಾತನ್ನು ನಂಬುತ್ತೇನೆ
ನಂಬಿಕೆಯೇ ನನ್ನ ಇಷ್ಟು ದೂರ ಕರೆ ತಂದದ್ದು!!
ಈಗ ಹೇಳಿ ನಾನು ಯಾರು?!!
                                         -- ರತ್ನಸುತ

ಸಿದ್ಧಾರ್ಥನಾಗುವ ಕನಸು ಕೈ ಬಿಡಬೇಕು


ಶಾಂತನಾಗಿರುವ ಬುದ್ಧನ ಕಂಡಾಗ
ಸಿದ್ಧಾರ್ಥನ ವೈಭೋಗಗಳೆಲ್ಲ ಧೂಳೆನಿಸುತ್ತವೆ


ಕಂಪ್ಯೂಟರಿನ ಪರದೆಯ ಮೇಲೆ
ಕಣ್ಮುಚ್ಚಿಯೇ ಕಣ್ತೆರೆಸುವಾತನು
ಲಾಕ್ ಆಗುವ ಮುನ್ನ ಹೇಗಿದ್ದನೋ
ಅನ್ಲಾಕ್ ಆಗುವಾಗಲೂ ಹಾಗೇ ಇರುತ್ತಾನೆ


ಸಿದ್ಧಾರ್ಥನಾಗಲು ಹಂಬಲಿಸಿದ ಮನಸು ಮಾತ್ರ
ಲಾಕ್ ಆದಾಗ ನಿರಾಳ
ಅನ್ಲಾಕ್ ಮಾಡುವ ಮೊದಲೇ ಕರಾಳ!!


ಕಸದ ಬುಟ್ಟಿಯಲಿ ಚಿಂದಿ ಕಾಗದಗಳು
ಎಂದೋ ಉಪಯುಕ್ತ ಸರಕು,
ನನ್ನನ್ನೇ ನೋಡಿಕೊಂಡಂತಾಗುತ್ತದೆ
ಆತ್ತ ಮುಖ ಮಾಡುವಾಗಲೆಲ್ಲ


ಕ್ರೆಡಿಟ್ ಕಾರ್ಡಿನ ಬಳಕೆಯ ಸಂದೇಶಗಳು
ಆಗಾಗ ಫೋನ್ ಮೆಮೋರಿ ಫುಲ್ ಆಗಿಸುವಾಗ
ವ್ಯಾಲೆಟ್ ತೆಗೆದು ಕಾರ್ಡ್ ಕಿತ್ತೆಸೆವಷ್ಟು ಕೋಪ
ಅಲ್ಲಿಗೆ ಎಲ್ಲವೂ ಮುಗಿದಂತಲ್ಲ!!


"ಪರ್ಸನಲ್ ಲೋನ್ ಬೇಕೆ?"
ಎಂದು ಇನ್ಕಮಿಂಗ್ ಕಾಲುಗಳು ಕಾಲೆಳೆದಾಗ
"ಬೇಕು..." ಎಂದು ಕೂಗುವಾಸೆ
ನಾಳೆಗಳು ಕಣ್ಮುಂದೆ ಬಂದು
ಹಾಗೇ ಬಾಯ್ಮುಚ್ಚಿಸಿಬಿಡುತ್ತವೆ!!


ಇನ್ಬಾಕ್ಸ್ ತುಂಬ ಇಂಪಲ್ಲದ
ಇಂಪಾರ್ಟೆಂಟ್ ಮೇಲ್ಗಳೇ
ಎಲ್ಲಕ್ಕೂ ಟೈಮ್ ನೀಡದ ಹೊರತು
ತೊಲಗಿಸಿಕೊಳ್ಳುವ ಯೋಗವಿಲ್ಲ


ಆಗಲೇ ಬುದ್ಧ ನೆನಪಾಗುತ್ತಾನೆ
ವಾಲ್ಪೇಪರಿನ ತುಂಬ ನಗು ಚೆಲ್ಲುತ್ತ,
ಅವನ ಮುಖ ನೋಡುತ್ತಲೇ ಅನಿಸುತ್ತೆ
"ಸಿದ್ಧಾರ್ಥನಾಗುವ ಕನಸು ಕೈ ಬಿಡಬೇಕು"


                                        -- ರತ್ನಸುತ

Friday 18 September 2015

ನೀನೇನಾ


ನೀನೇ ಇದ್ದೆಯಾ ಮರದ ನೆರಳಲಿ
ತಂಪು ಬೀರುತ ಎಂದಿನಂತೆ?
ನೀನೇ ಇಟ್ಟೆಯಾ ಹೆಸರ ಹೂವಿಗೆ
ಎಂದೂ ನಗುನಗುತಿರುವಂತೆ?


ನೀನೇ ಬರೆದೆಯಾ ನಭದಿ ಚಿತ್ರ
ದಿನಕೊಂದು ರೂಪು ಪಡೆವಂತೆ?
ನೀನೇ ಕೊಟ್ಟೆಯಾ ನಿಗದಿ ವಿಳಾಸ
ಚಂದಿರ ತಪ್ಪದೆ ಮೂಡುವಂತೆ?


ನೀನೇ ತಿಳಿಸಿ ಕೊಟ್ಟೆಯೇನು
ಶಬ್ಧವೂ ಇಂಪಾಗುವಂತೆ?
ನೀನೇ ಬಿಡಿಸಿ ಬಿಟ್ಟೆಯೇನು
ಬೆಳಕು ಸಪ್ತವಾಗುವಂತೆ?


ನೀನೇ ಕಂಡುಕೊಟ್ಟಿರಬೇಕು
ತಂಬೆಲರಿಗೆ ಬೀಸಲೊಂದು ದಿಕ್ಕು?
ನೀನೇ ಒದಗಿಸಿ ಬಿಟ್ಟೆಯೇನು
ಉದುರಿದೆಡೆ ಚುಗುರೊಡೆವ ಹಕ್ಕು?


ನೀನೇ ಹೂಡಿದ ಸಂಚು ತಾನು
ಮಿಂಚು ಹುಳುವಿಗೆ ಸ್ಪೂರ್ತಿಯಾಯ್ತೇ?
ನೀನು ಬರೆಯದೆ ಬಿಟ್ಟ ಪದಗಳೂ
ದಿವ್ಯ ಕಾವ್ಯ ಸಂಕಲನವಾಯ್ತೇ?


ನೀನು ನೋಯಿಸದಿರೆಂತು ನೋವು?
ನೀನು ಕಾಯಿಸದಿರೆಂತು ಕಾವು?
ನೀನು ಕೊಡುವುದೇ ಆದರೆ
ಅತಿ ಚಂದವಾದೀತಲ್ಲ ಸಾವು?!!


                                     -- ರತ್ನಸುತ

Wednesday 16 September 2015

ಒಂದು ಮುಟ್ಟಿನ ಕಥೆ

ನೋವ ಹೇಳಿಕೊಳ್ಳಬೇಕನಿಸುವಾಗಲೇ
ದೇವರ ಕೋಣೆಗೆ ನಿಷೇಧ ಹೇರುವಂತಾದರೆ
ದೇವರು ನಮಗೆ ಬೇಡ



ಮತ್ತೆ, ನನ್ನ ಪತಿ ದೇವರೆಂದು ಅಪ್ಪಿತಪ್ಪಿಯೂ ಅನ್ನದಿರು,
ಮುಟ್ಟಿನ ವೇಳೆ ನಿನ್ನ ದೂರವಿಟ್ಟೇನು.
ನಿನ್ನ ಸ್ಥಾನ ಇಗೋ ನನ್ನ ಎದೆಯ ಮೇಲೆ,
ಅದೆಂಥ ಸಂದರ್ಭವಾದರೂ ಸರಿ!!



ಹಿಂಜರಿಕೆಯಲ್ಲಿ
ಅದೇನನ್ನೋ ಕೊಂಡು ಬನ್ನಿ ಎಂದು
ಚೀಟಿಯಲ್ಲಿ ಬರೆದು ಕೊಟ್ಟಾಗ
ಅವಿವೇಕಿಯಂತೆ ಪ್ರಶ್ನೆ ಕೇಳುವ ನನ್ನ
ಸಾಧ್ಯವಾದರೆ ಒಂದು ನೂರು ಬಾರಿಯಾದರೂ ಕ್ಷಮಿಸಬೇಕು ನೀನು!!



ಹೌದು, ನನಗೆ ಇದೆಲ್ಲ ಹೊಸತು
ಯಾರೂ ಈವರೆಗೆ ಇವನ್ನೆಲ್ಲ ಹೇಳಿಕೊಟ್ಟಿರಲಿಲ್ಲ,
ಹೇಳಿಕೊಡಬೇಕಿತ್ತೆಂಬುದು ನನ್ನ ಅಲ್ಪತನ!!



ಬೆಳವಣಿಗೆಯ ಲಕ್ಷಣಗಳನ್ನ
ಲಿಂಗ ಬೇದ ಮಾಡದೆ ತಿಳಿಗೊಡುವ
ಮುಕ್ತ ಶಾಲೆಯಾಗಬೇಕಿತ್ತು ಮನೆ,
ಆದರೆ ಸಮಾಜದ ತಾರತಮ್ಯದ ಪಿಡುಗು
ಗಂಡು ಮಕ್ಕಳನ್ನ ಇಂಥವುದರಿಂದ ದೂರವಿಟ್ಟಿತ್ತು.
ಇನ್ನು ಅಂತರ ಸಲ್ಲ
ನಾ ನಿನ್ನ ಹತ್ತಿರವೇ ಇರುವೆನಲ್ಲ!!



ದಿನಗಳ ಎಣಿಸುವಲ್ಲಿ ನಾನೂ ಬೆರಳ ಸವೆಸುತ್ತೇನೆ
ಕಡೆ ವರೆಗೂ ನೀ ನುಂಗುವ ನೋವ
ಸಾಧ್ಯವಾದಷ್ಟೂ ಜೀರ್ಣಿಸಿಕೊಂಡು.
ಹೇಳಲಾಗದ್ದ ಹೇಳುವ ಮೊದಲೇ ಗ್ರಹಿಸಿ
ಆದಷ್ಟೂ ಖುಷಿಯ ಪಸರಿಸುತ್ತೇನೆ!!



ಸಿಡುಕು, ಮುನಿಸು, ಜಗಳಗಳ ಇತ್ಯರ್ಥಕ್ಕೆ
ತಿಂಗಳು ಪೂರ್ತಿ ಬಾಕಿಯಿದೆ
ಮುಲಾಜಿಲ್ಲದೆ ತರಾಟೆಗೆ ತಗೆದುಕೋ ನನ್ನ,
ನನಗೀಗೀಗ ಚೂರು ಚೂರೇ ಎಲ್ಲ ಅರ್ಥವಾಗುತ್ತಿದೆ
ಎಲ್ಲೂ ಅಪಾರ್ಥದ ಬಿರುಕು ಮೂಡದಂತೆ
ಎಚ್ಚರಗೊಳ್ಳಬೇಕೆಂದೇ ಎಚ್ಚರಿಕೆಯಿಂದಿದ್ದೇನೆ!!



                                              -- ರತ್ನಸುತ

Tuesday 15 September 2015

ಪ್ರತಿವಾದ


ಪೋಲಿ ಕವಿತೆಯ ಗೇಲಿ ಮಾಡುವ
ಖಾಲಿ ತಲೆಯ ಓದುಗರೇ
ಬೇಲಿ ದಾಟದೆ ಉಳಿದುಕೊಂಡಿರಿ
ಈಚೆಗೆ ಬನ್ನಿ ಕಣ್ದೆರೆದು


ತಾಳಿ ಚೂರು ಟೀಕೆಗೂ ಮುನ್ನ
ತಿಳಿಸಿ ಬಿಡುವೆವು ಒಳ ಅರ್ಥ
ತಿದ್ದಿಕೊಳ್ವಿರಿ ನಿಮ್ಮ ಚಿಂತನೆ
ಆಗ ಒಂದೇ ಸರತಿಯಲಿ


ಸಹಜತೆಯಿಲ್ಲದ ಕವಿತೆಯು ವ್ಯರ್ಥ
ಅಂದವರು ಹಿಂದೆ ನೀವು
ಆಸಹಜತೆಯ ಮೊರೆ ಹೋಗದೆ ಅದಕೇ
ನೇರ ಮಂಡಿಸಿದೆವು ವಿಷಯ


ಹಿರಿಯರು ನೀವು ಹಿರಿತನವಿರಲಿ
ಕಿರಿಯರ ಕಿವಿ ಹಿಂಡಿರಿ ತಿದ್ದಿ
ಆದರೆ ಸಹನೆಗೂ ಸೀಮೆ ಉಂಟು
ಮೀರುವ ಯತ್ನ ಮಾಡದಿರಿ


ವಿಚಲಿತಗೊಳಿಸುವ ಬಾಣಗಳುಂಟು
ಅಂತೆಯೇ ಕದಲಿಸುವವು ಕೂಡ
ಎಲ್ಲಿ ಯಾವುದು ನಾಟುವ ಋಣವೋ
ನಿಶ್ಚಯಿಸುವುದಕೆ ನಾವ್ಯಾರು?


ಹೋಗಲಿ ಬಿಡಿ, ಮನ ಘಾಸಿಸಿಕೊಳದಿರಿ
ಸಿಟ್ಟಿಗೆ ಎಲ್ಲಿದೆ ಕಡಿವಾಣ
ಮಡಿಯನು ಬಿಟ್ಟು, ಒಟ್ಟಿಗೆ ಕೂತು
ಪೋಲಿ ಕವಿತೆಯ ಕಟ್ಟೋಣ!!


                                        -- ರತ್ನಸುತ

Wednesday 9 September 2015

ಅಮೃತ ಗಳಿಗೆ


ಹೊಕ್ಕಳ ಕೆಳಗೆ ಮಕ್ಕಳ ಬರಹದಂತೆ
ಸಿಕ್ಕಿಸಿಕೊಂಡಿದ್ದ ನೆರಿಗೆಯ ಅಚ್ಚು
ಅರ್ಥವಾಗದ ಲಿಪಿಯ ಪದ್ಯವೋ? ಗದ್ಯವೋ?
ಮಧ್ಯೆ ಅಲ್ಲಲ್ಲಿ ಮುರಿದಿರಬೇಕು ಬಳಪ
ಸ್ಥಳ ಬಿಟ್ಟು ಮುಂದೆ ಮತ್ತಷ್ಟು ಅಕ್ಷರ!!



ರವಿಕೆಯ ಕೊಂಡಿ ಮುಂಬದಿಗೋ? ಹಿಂಬದಿಗೋ?
ಹುಡುಕಿ ಗೆದ್ದಿದ್ದಕ್ಕಿಂತ ಊಹೆಯಲಿ ಸತ್ತದ್ದು ಹೆಚ್ಚು,
ಕಗ್ಗಂಟಲ್ಲದಿದ್ದರೂ ಜಟಿಲ ಪಟ್ಟಿ
ಒಂದೆಳೆಯ ಹಿಡಿದೆಳೆದರೆ ಮುಂದೆಲ್ಲ ಸ್ವಚ್ಛ ಬಯಲು!!



ಎದೆಯ ಹಿಗ್ಗನು ಮರೆಸಿದ ಸೆರಗಿನ ಕಸೂತಿ
ಅಲ್ಲಿ ಗಂಡು ನವಿಲುಗಳ ನರ್ತನ.
ಕೆಂಗಣ್ಣ ಕೆಣಕಿ ತಾವ್ ತಲೆ ಮರೆಸಿಕೊಂಡಾಗ
ಬೆತ್ತಲಾಗಿಸಲೊಂದು ದಿಟ್ಟ ಸವಾಲು
ಬೆವರ ಹನಿಯ ಸುಂಕದ ಸೋಂಕಿನ ತೆರಿಗೆ
ಜಾರಿದವು ಕತ್ತಲ ಕೋಣೆಯ ಮರೆಗೆ!!



ಕಾಲುಂಗುರವೇ ಬಲ್ಲದು ಬೆರಳ ಲಜ್ಜೆ
ಹಸ್ತದ ಸಮಸ್ತ ಪಾಲು ಹಸ್ತಕೆ ಹಸ್ತಾಂತರ
ಬಿಸ್ತರವು ಬಾಯ್ಬಡಿದುಕೊಂಡಿತೊಮ್ಮೆಲೆಗೆ
ತಲೆ ದಿಂಬಿಗೊಂದು ಬಿಂದುವಿನ ಸ್ಪರ್ಶ
ನನ್ನಿಂದ ಜಾರಿ, ನಿನ್ನನ್ನು ಹೀರಿ, ನಮ್ಮನ್ನು ಮೀರಿ



ಬೈತಲೆ, ಬೊಟ್ಟಿನ ಹುಡುಕಾಟ ಆಮೇಲೆ
ಕಳೆದಿರಲೂ ಬಹುದು
ಅಥವ ಇರಲೂ ಬಹುದು ಬೆನ್ನಲ್ಲೇ.
ಕಾಣು ಕಣ್ಣಲ್ಲೇ ಒಮ್ಮೆ
ಮನಸಲ್ಲಿ ಕಂಡ ತರುವಾಯ,
ಹಿಡಿ ಕೈಯ್ಯ ಮೈ ಬಳಸಿ ಒಂದು ಸಾರಿ
ಮತ್ತೊಂದು ಸಾರಿ... ಬಾರಿ ಬಾರಿ...!!



                                                 -- ರತ್ನಸುತ

Tuesday 1 September 2015

ಇರುಳಚ್ಚರಿ

ಮುತ್ತಿಗೆ ಸುಲಭಕೆ ದಕ್ಕುವ ನಿನ್ನ
ತುಸು ದೂರದಲೇ ಮುದ್ದಿಸುವೆ
ತುಟಿಗೆ ತಲುಪಿಸಿ ಮೌನದ ಬಿಸಿಯ
ಒಡಲುದ್ದಗಲಕೂ ಹಬ್ಬಿಸುವೆ


ಬಯಸದೆ ಮೂಡಿದ ಬಿರುಸಿನ ಬಯಕೆಯ
ಬಯಸಿ ಬಯಸಿ ಮರೆಸಿಡುವೆ
ಕನಸಲಿ ಬರೆದ ರತಿ ಕಾವ್ಯವನು
ಕಣ್ಣಲಿ ಕಟ್ಟಿ ಒಪ್ಪಿಸುವೆ


ಮಧುರಾತಿಮಧುರ ಇರುಳಚ್ಚರಿಗಳ
ಅಚ್ಚೆಯಂತೆ ನಮೂದಿಸಿವೆ
ಎಲ್ಲಿಯೆಂದು ನೀ ಹುಡುಕಬೇಡ
ಕೊನೆಯಲ್ಲಿ ನನ್ನಲೇ ಬಿಂಬಿಸುವೆ


ಮಾಗಿ ಕೆಂಪು, ಹೂವಂಥ ನುಣುಪು
ನಿನ್ನಂಥ ವಿಸ್ಮಯಕೆ ಹೆಸರಿಡುವೆ
ಅಕ್ಷರಕ್ಕೇ ಮಾತ್ಸರ್ಯ ತರಿಸಿ
ಒಂದೊಂದೇ ಇಳಿಸಿ ಮುಡಿಗಿಡುವೆ


ಒಂದು ಮಾತು ಮತ್ತೊಂದು ಮಾತು
ಮಾತೆಲ್ಲ ಮುಗಿಯಲು ಕಾದಿರುವೆ
ಇಂಥ ಹೊತ್ತು ಮತ್ತಷ್ಟು ಸಿಗಲಿ
ಎಂತೆಂಬ ಹಂಬಲಕೆ ಜೋತಿರುವೆ


                                    -- ರತ್ನಸುತ

ಕನಸುಗಳೇ ಹೀಗೆ

ಕನಸಲಿ ಎಚ್ಚೆತ್ತು ಕನವರಿಸುತಲಿತ್ತು ಕಣ್ಣು
ಅದೆಷ್ಟು ಕನಸೊಳಗಿನ ಕನಸುಗಳೋ!!


ನಿಜದಿ ಎಚ್ಚರಗೊಳ್ಳಲು ಸೀಮೆ ದಾಟಿ
ಬಾಗಿಲುಗಳ ಮುರಿದು ಬರಬೇಕಿತ್ತು
ಹಾಸಿಗೆಯ ಮೇಲಿಂದ ನಿರ್ಭಾವುಕನಾಗಿ
ಆಕಳಿಸುತ್ತ ಮೇಲೆದ್ದು ಕೂರಲಿಕ್ಕೆ


ಪಕ್ಕ ಮಲಗಿದ್ದವರು ವಿಷಯವೇನೆಂದು ಕೇಳುತ್ತಾರೆ
ಏನೆಂದು ಹೇಳಲಿ? ಯಾವುದರ ಕುರಿತು ಹೇಳಲಿ?


ಒಂದರಿಂದ ಮತ್ತೊಂದಕ್ಕೆ ಸೂಜಿ ನೇಯ್ದ
ದಾರದಂತೆ ಸಲೀಸಾಗಿ ಸಾಗಿದವು
ಅದೇ ದಾರಿಯ ಹಿಡಿದು ವಾಪಸ್ಸಾಗುವಾಗ
ಗೋಜಲಾಗಿ ಪರಣಮಿಸಿದ್ದೇ
ಅದೆಷ್ಟೋ ಕನಸುಗಳ ತುಂಡರಿಸಲು ಕಾರಣ


ಹೋದ ದಾರಿಗೆ ಮೈಲಿಗಲ್ಲು ನೆಡುವಷ್ಟು
ಪುರುಸೊತ್ತು ಕೊಡದ ಇರುಳು
ಬೆಳಕಿನ ಗುಲಾಮಗಿರಿ ನಡುವೆ ಸಾಯುತ್ತದೆ,
ಮತ್ತೆ ಹುಟ್ಟುತ್ತದೆ ಸಾಯಲಿಕ್ಕೆ


ಇರುಳುಗನಸುಗಳ ಬದುಕು ನಿಜಕ್ಕೂ ನಿಕೃಷ್ಠ!!

ನಕಲಿ ಜೋಡಣೆಗಾದರೂ ನಿಲುಕಬೇಕು
ಒಮ್ಮೊಮ್ಮೆ ಮನಸನ್ನ ಹಗುರಾಗಿಸಿಕೊಳ್ಳಲು,
ಊಹುಂ.. ಸುತಾರಾಂ ಒಪ್ಪದು!!


ಕನಸುಗಳೇ ಹೀಗೆ
ನನ್ನ ಪಾಲಿನ ಮಟ್ಟಿಗೆ!!


                                              -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...