Thursday 26 September 2013

ಕೂಡಿಟ್ಟ ಹನಿಗಳು !!!

ಸಂಜೆ ಹೊತ್ನಾಗ್ 
ಬರ್ಯೋ ಪದ್ಯ 
ರುಚ್ಕಟ್ಟಾಗಿದ್ರುವೆ 

ಬೆಳ್ಗೆ ಹೊತ್ಗೆ 
ಹಳ್ಸೋಗೋದು 
ನೀನ್ ಓದ್ದೆ ಇದ್ದುದ್ಕೆ !!!
.....
ಹಿಂಗಾಗ್ತೈತ್ ಯಾಕೋ ಇತ್ತೀಚ್ಗೆ !!


***

ಫ್ಯಾನಿಗೆ ತಿರುಗುವುದು ಬೋರಾದರೆ 
ರಿಪೇರಿ !!
ದೇಹಕೆ ಉಸಿರು ಬೋರಾದರೆ 
ಬಂಬೂ ಸವಾರಿ !!


***

ನಿನ್ನ ಕಂಡಾಗ 
ಮರೆತ ಪದಗಳಲ್ಲಿ 
ಬರೆದ ಕವಿತೆಯ 
ಮೆಚ್ಚುವ ಮನ 
ಮೂರ್ಖ ವಿಮರ್ಶಕ !!!


***

ಕನಸೊಳಗೆ ಪಾತ್ರ ನಿರ್ವಹಿಸಿದವರಿಗೆ 
ಜೀತ ನೀಡುವಷ್ಟು ಹಣವಂತ ನಾನಲ್ಲ 
ಬೇಕಿದ್ದರೆ ಅವರವರ ಕನಸುಗಳಲ್ಲಿ 
ನನಗೊಂದು ಪಾತ್ರ ಕೊಟ್ಟು ವಜಾ ಮಾಡಿಕೊಳಲಿ !!


***

ಅವಳ ಒಂದು ಸೋಕಿಗೆ 
ನಾಕು ತಂತಿಯ ವೀಣೆ 
ನಾಕೇ ಬಾರಿ ಮೀಟಿಸಿಕೊಂಡು 
ಸುಮ್ಮನಾಯಿತು ...

ನಾಕಕ್ಕೇ ಸೀಮಿತಗೊಳಿಸಿದ 
ಸೃಷ್ಟಿಕರ್ತನ ಶಪಿಸಿ !!!


***

ಹಿಡಿಯಲು ಬೆಳಕು 
ಅಪ್ಪಲು ನೀರು 
ತಡೆಯಲು ಗಾಳಿ 
ಸವಿಯಲು ಮೌನ 
ವಾಡಿಕೆ ಆಗಿವೆ ಈ ನಡುವೆ !!!


***

ಮೆಟ್ಟಿಲೇರುವಾಗ ಎತ್ತರ ಅಳಿಯದೆ 
ಇಳಿಯುವಾಗ ಆಳ ನೋಡದೆ 
ಮುಂದರಿಯಲು ಕಪಿ ಮನಸು 
ಒಪ್ಪದ ಕಾರಣ ....

ಅತ್ಲಾಗೂ ಭಯ 
ಇತ್ಲಾಗೂ ಭಯ !!!


***

ಟೈಮ್ ಪಾಸ್ ಮಾಡೋಕೆ 
ಕಳ್ಳೆಕಾಯಿ ಕೊಳ್ಳಿ !!

ಸಿಪ್ಪೆ ಸುಲ್ಕೊಂಡು 
ಹೆಚ್ಗೆ ಟೈಮ್ ಪಾಸ್ ಆಗುತ್ತೆ 
ಕಮ್ಮಿ ತಿಂದು 
ಗ್ಯಾಸ್ ಟ್ರಬಲ್ಲೂ ತಪ್ಪುತ್ತೆ !!


***

ಕನಸಿಗೆ 
ಪುಷ್ಟಿ
ಕೊಟ್ಟದ್ದು 

ನಿಜ 
ಬದುಕಿನ 
ಬೇಸರ !!


***

ಚಂದ್ರನ 
ಮನೇಲಿ 
ಈವತ್ತು 

ಫುಲ್ 
ವೋಲ್ಟೇಜ್ 
ಕರೆಂಟು !!!


***

ದಾರಿಯುದ್ದಕ್ಕೂ 
ಸಾಲು-ಸಾಲು 
ಮರಗಳ ನೆಟ್ಟ ಅಜ್ಜಿ 
ಸತ್ತಾಗ 

ಆಕೆಯ ಅಂತ್ಯ ಸಂಸ್ಕಾರ 
ಮಷೀನ್ ಚಿತೆಯಲ್ಲಿ ನಡೆಸಲಾಯಿತು !!!


***

ಬೀಸೋ ಕಲ್ಲಿಗೆ ಸಿಕ್ಕಿ 
ನರಳಿದ ರಾಗಿಗೆ 

ಜರಡಿ, 
ರಾಜ ಗೌರವ ನೀಡಿ 
ಬೀಳ್ಗೊಟ್ಟಿತು !!!


***

ಹಾಲು-ಜೇನು ಬೆರೆತಾಗ ಬಾಳಲಿ 
ಸ್ಪೂನೊಂದು ಬೇಕು ಕಲೆಹಾಕಲು !!!


***

ಸಕ್ರೆ ಕದ್ದು ತಿನ್ನೋವಾಗ ಚನ್ನಾಗಿತ್ತು 
ಇವಾಗಿವಾಗ ಯಾಕೋ ಬೇಜಾರಾಯ್ತದೆ !!!


***

ಜೈಲಲ್ಲಿ 
ಕಂಬಿ ಎಣಿಸುತ್ತಿದ್ದವನಿಗೆ 
ತನ್ನ 
ಮಿಡ್ಲ್ ಸ್ಕೂಲ್ 
ಗಣಿತದ ಮೇಷ್ಟ್ರು ನೆನ್ಪಾದ್ರು !!


***

ತಮಟೆ ಏಟಿಗೆ 
ಕೆಪ್ಪನಾದ ಆತನ ಸಾವಿಗೆ 
ಮೌನಾಚರಣೆ ಆಚರಿಸುವ ಬದಲು 
ಬ್ಯಾಂಡ್ ಸೆಟ್ ತರಿಸಿ 
ಆತ್ಮವಂಚನೆ ಮಾಡಲಾಯಿತು !!


***

ಮೈ ಬೆಚ್ಚಗಾಗಿಸಿದ ಹೊದಿಕೆ 
ಬೆವರಿಳಿಸುವ ಕಾಲಕ್ಕೆ 
ಬೇಡವಾಯಿತು 
ಮತ್ತೊಂದು ಚಳಿಗಾಲ 
ಬರುವನಕ !!!


***

ನನ್ನ ಕನಸಿನ ವೇಘ 
ಬೆಳಕಿಗೂ ಹೆಚ್ಚು 
ಬಂದದ್ದು ನಿಜ 
ಕಂಡದ್ದು ನಿಜ 
ಆದರೂ ಅರ್ಥವಾದದ್ದು ಮಾತ್ರ 
ಐನ್ಸ್ಟೀನ್ ಫಾರ್ಮುಲಾದಷ್ಟೇ !!


***

ಐನೂರರ ಬಂದಾ ನೋಟಿಗೆ 
ಚಿಲ್ಲರೆ ಕನಸು ಬರಬಹುದೇ ??

ಅದಕ್ಕೆ 
ದೆಕ್ಕೊಂದು ಸಾಲ ಪಡೆದೆ 
ಏನೂ ಖರ್ಚಾಗದೆ !!!


***

ರಕ್ತದಂತೆ 
ಎಲ್ಲರೂ 
ಸಮಾನರು 
ಬಣ್ಣದಲ್ಲಿ 

ನಡುವೆ 
ಜಾತಿಯ 
ಅಡ್ಡ 
ಗೋಡೆ !!!


***

ಚಂದ್ರ 
ಕದ್ದು ನೋಡ್ತಲೇ 
ರಾತ್ರಿಯಿಡೀ ಎದ್ದಿದ್ದ 

ಸೂರ್ಯ 
ಎರಡು ಕೊಟ್ಟು 
ಮಲ್ಗಿಸ್ದ !!


***

ರಾತ್ರಿ ಬೀದಿ ದೀಪಗಳು 
ಬೆಳಗಿ ನಿಂತು 
ಚಳಿಗೆ ಬೆವರಿದ 
ರಸ್ತೆಗಳಿಗೆ 
ರೇಶಿಮೆ 
ವರ್ಸ್ತ್ರ ತೊಡಿಸಿವೆ !!


***

ದಿನಕ್ಕೊಂದು ರೂಪ ಬದಲಿಸುವ 
ಚಂದಿರನ 
ನವರಂಗಿ ಆಟದ ಹುಡುಗಿ 
ಮೆಚ್ಚಿದ್ದು 
ಅವನ ಮೌನವ ಕಂಡು !!


***

ನಲ್ಮೆಯ ದಿಂಬು 
ಕಣ್ಣಿನ ನಲ್ಲಿ 
ಕನಸಿನ ಚೊಂಬು 
ನಿದ್ದೆಗೆ ಕೊಳ್ಳಿ !!


***

ತೊಟ್ಟಿಡುವ ಉಪ್ಪರಿಗೆ 
ಹಸಿಗನಸು ಅದರಡಿಗೆ 
ಚಿಗುರು ಪೈರಿನ ನಾಟಿ 
ಮಾಡಲೆಂತೋ ಕಡೆಗೆ !!!


***

ರಾತ್ರಿಯಿಡೀ 
ತಂಪುಗಾವಲ್ಲಿ 
ಸುಖಿಸಿದ 
ಇಳೆಗೆ 

ಈಗ 
ತಾಪಗಾವಲಿನ 
ಕಿರಿಕಿರಿ !!!


***

ಬಣ್ಣ ಬಳಿದು 
ತನ್ನ ಜೀವನದ 
ಕೊನೆ ಪ್ರದರ್ಶನವ 
ನೀಡುತ್ತಿದ್ದವ 
ಸಂಭಾಷಣೆ ಮರೆತ 

ತನ್ನ ಮೊದಲ 
ಪ್ರದರ್ಶನದಂತೆಯೇ !!!


***

ಮುಳ್ಳಿನ ಕೈಯ್ಯಲ್ಲಿ 
ಚುಚ್ಚಿಸಿಕೊಂಡು 

ಮುಳ್ಳೇ ಚುಚ್ಚಿತು ಅನ್ನುವುದು 
ಎಂಥ ನ್ಯಾಯ ??


***

ಒತ್ತು ಗುಂಡಿಗಳೀಗ 
ಸ್ಪರ್ಶ ರಟ್ಟುಗಳು 

ಸೂಕ್ಷ್ಮ ಮೈ 
ವಿಪರೀತ ಶರತ್ತುಗಳು !!!


***

ಕಣ್ಣುಜ್ಜಿಕೊಂಡರೆ ಏನು ಬಂತು 
ಕನ್ನಡಕ ತೊಡದ ವಿನಃ 
ಕನಸುಗಳು ಅಸ್ಪಷ್ಟ !!!


***

ನೀರಿಗೆ ಬಿದ್ದ ಇರುವೆಗೆ 
ಮಳೆ ಹನಿ ಎಬ್ಬಿಸಿದ 
ಗುಳ್ಳೆಯ ರಕ್ಷೆ 

ಮತ್ತದೇ ಹನಿಯಿಂದ
ಜೀವಕೆ ಶಿಕ್ಷೆ !!


***

ತವರಿನ ತೊಟ್ಟಿಲು 
ತುಕ್ಕು ಹಿಡಿವ ಮುನ್ನ 
ತೂಗಬೇಕು ಮತ್ತೆ ಅಂದಳಜ್ಜಿ 

ಎಲೆಯಡಿಕೆ ಸುಣ್ಣವನು ಕುಟ್ಟಿ ಜಜ್ಜಿ !!


***

ಕೂತಲ್ಲಿ ಕುಟ್ಟುತ 
ಇಷ್ಟಕ್ಕೆ ಕಟ್ಟುತ 
ಬರೆಯೋಕೆ ಬಿಟ್ಟೆನು 
ಒಂದು ಚುಟುಕ 

ಸ್ಥಳ ನೀಡದೆ ಉಳಿಯೆ 
ಮನದ ಘಟಕ !!


***

ಮೊದಲ ತುತ್ತು 
ಹಸಿವ ದಾಟಿಸುವ 
"ಬರವಸೆ"

ಕೊನೆಯ ತುತ್ತು 
ಕೊಟ್ಟ ಮಾತಿಗೆ 
"ಸಾಕ್ಷಿ" !!


***

"ಕನಸು"
ನಮ್ಮದೇ ಥಿಯೇಟರಲ್ಲಿ 
ನಮ್ಮದೇ ಚಿತ್ರವನ್ನ 
ನಾವು ಮಾತ್ರವೇ 
ನೋಡ ಬಹುದಾದ 
ಪ್ರೀಮಿಯರ್ ಶೋ 

ಹಿಟ್ಟೋ, ಫ್ಲಾಪೋ 
ನಾವೇ ಡಿಸೈಡ್ ಮಾಡ್ಬೇಕು 
* ಅರ್ಥ ಆದ್ರೆ *


***

"ಆಕೆ"
ಮುಚ್ಚಿಟ್ಟ ಅಷ್ಟೂ ದಿನ 
ಮೂಸುತ್ತಿದ್ದ ಜನ 
ಬಿಚ್ಚಿಟ್ಟ ಕೂಡಲೇ 
ಮುಗಿ ಬಿದ್ದರು 

ಬಂಕೆ ಕೈಗಳ ಮೀಟಿ 
ಕಿತ್ತೆಳೆದು ಚಪ್ಪರಿಸಿ 
ಕಡೆಗೆ ಆಕೆಗೆ 
"ಹಲ(ಳ)ಸು" ಹೆಸರಿಟ್ಟರು !!!


***

ಒಣ ಗರಿಕೆ ಹುಲ್ಲು 
ಕಾಡ್ಗಿಚ್ಚು ಎಬ್ಬಿಸಿತು 
ಸುಟ್ಟು ನೆರಳಿತ್ತ 
ಆ ದಟ್ಟ ಮರವ 

ಉಚ್ಚತೆಯ ಸಾರಲು 
ನೀಚ ಕೃತ್ಯವ ಎಸಗಿ 
ಗುರಿಯಿಟ್ಟು ಬಿಟ್ಟಿತು 
ಕೇಡು ಶರವ !!!


***

ಕಂಪನಿ ಬಿಟ್ಟು ಕಂಪನಿಗೆ ಹಾರುವ 
"ಟೆಕ್ಕಿ"
ಮರದಿಂದ ಮರಕೆ ಜಿಗಿಯುವ 
"ಮಂಗ"
ತೃಪ್ತರಾಗೋದು ಅತಿಶಯ !!


***

ಮುಸ್ಸಂಜೆ ಗಾಳಿಗೆ 
ಮನ್ಸನ್ನ ತೆರ್ದಾಗ 
ಜೋತಾಕಿದ್ ಗಂಟೆ 
ಓಲಾಡ್ತಾ ಎದ್ದು 
ಒಂದೇ ಧಾಟೀಲಿ 
ಸದ್ದು ಮಾಡ್ತಿತ್ತು 

ಹಿಂದೇನೆ ಪದ್ಗೊಳು 
ಎದ್ದೆದ್ದು ಕುಣಿತಿತ್ತು !!!


***

ಬರ್ದು ಬರ್ದು 
ಸವ್ದೋದ್ 
ಬೆರ್ಳು 

ಈಗ 
ಕುಟ್ತಾ 
ಸವ್ದೋಯ್ತು !!


***

ಉಸ್ರು ಕಟ್ದಾಗ 
ಅವ್ವ ನೆನ್ಪಾಯ್ತಳೆ 

ಎದೆ ನೀವಿ 
ಉಸ್ರು ಕೊಟ್ಟು 
ನಿಟ್ಟುಸ್ರು ಬಿಟ್ಟಿರೋಳು !!


           --ರತ್ನಸುತ 

Tuesday 24 September 2013

ಮರುಜನ್ಮ !!

ಪುಡಿಗಾಸು ಹುಟ್ಟಿಲ್ಲ
ಸಹವಾಸ ಸರಿಯಿಲ್ಲ 
ಉಪವಾಸ ಗತಿಯೊಂದೆ ನನಗಾಯಿತು 
ಮನೆಗೆ ಹೊರೆ ಆಗೋದೆ 
ಬೀದಿ ನಾಯಿಯ ಪಾಡು 
ತಂಗಲು ರೊಟ್ಟಿಗೂ ಅಳಬೇಕಾಯಿತು 

ನನ್ನವರು ತನ್ನವರು 
ಯಾರಾದರೇನಂತೆ 
ಮೂರ್ಕಾಸಿನ್ಮರ್ಯಾದೆ ಸಿಗುತಲಿಲ್ಲ 
ದಂಡ ಪಿಂಡನ ಪಟ್ಟ 
ಕಟ್ಟುವರು ಎಲ್ಲೆಲ್ಲೂ 
ಬದಲಾದೆ ಅಂದೊಡನೆ ನಗುವರೆಲ್ಲ 

ದೇವರಿಗೂ ಸಲಿಗೆಯೇ 
ಸೋಲೊಂದೇ ನೀಡಿದನು 
ಗುರಿ ಕಾಣುವ ದಾರಿ ಇನ್ನೂ ದೂರ 
ಸಿಹಿಯಾದ ಮಾತಲ್ಲಿ 
ಕಹಿ ನನ್ನ ಪಾಲಾಯ್ತು 
ಒಮ್ಮೊಮ್ಮೆ ಅಂತೂ ತುಂಬಾ ಖಾರ 

ಇಂದು ಎಲ್ಲವ ಸಹಿಸಿ 
ನೆನ್ನೆ ನೆನಪಿಗೆ ಇಂದು 
ನಾಳೆಗಳ ಲಕ್ಕವನು ತಪ್ಪಬಹುದು 
ಹುಟ್ಟು ಸಾವು ಮಾತ್ರ 
ಇಲ್ಲಿರುವುದಲ್ಲ 
ಸ್ವರ್ಗ ನರಕಗಳೆರಡೂ ಇಲ್ಲೇ ಇಹುದು 

ಓಡುವ ಛಲವಿಲ್ಲ 
ನಿಲ್ಲುವ ಬಲವಿಲ್ಲ 
ಕುಂಟುತ ತೆವಳುತ ಸಾಗಿ ಪಯಣ 
ಬೇಕಿದ್ದು ಬೇಕಾದ ಹಗೆ 
ಬರಲಾರದೆ 
ಚಕಿತಗೊಳಿಸಲು ಕಾದಿಹುದೇ ಮರಣ ?

ಹಾಳೆಯೂ ತುಂಬಿತ್ತು 
ಶಾಯಿಯೂ ಮುಗಿದಿತ್ತು 
ಇನ್ನೇನಿದ್ದರೂ ಕೊನೆ ಸಾಲ ಸರದಿ 
ಮತ್ತೊಂದು ತಿರುವು 
ಮಗದೊಂದು ಆಯ್ಕೆ 
ಅವತಾರ ಬದಲಿಸಿಕೊಳ್ಳುವ ಅವಧಿ 


                              -- ರತ್ನಸುತ

Friday 20 September 2013

ಇವಳೇ ಇವಳು!!

ಇವಳೊಂದು ಮುದ್ದಿನ ಕೂಸು 
ಹೊಗಳುವುದೇ ಸುಮ್ಮನೆ ಲೇಸು 
ಇವಳೊಂದು ಸುಂದರ ಕನಸು 
ಕರಗುವುದು ಕವಿಗಳ ಮನಸು 
ಇವಳಾದಡ ಮಾತಿನ ಹಿಂದೆ 
ಆ ಮೌನದ ಸುಂದರ ಹಾಡು 
ಇವಳಿಡುವ ಹೆಜ್ಜೆಗೂ ಮುನ್ನ 
ಚಿಗುರುವುದು ಮಲ್ಲಿಗೆ ಬೀಡು 

ಇವಳೊಂಥರ ಮಿಂಚಿನ ಸೊಗಸು 
ಅಪರೂಪದ ಇಷ್ಟದ ತಿನಿಸು                             [೧]


ಆ ಮಾಧವ ಹುಡುಕಿದ ರಾಧೆ 
ಆ ಶಾರದೆ ಮೀಟಿದ ವೀಣೆ 
ಆ ಮನ್ಮಥ ಸೋಲಲು ಈಕೆ 
ಕಾರಣಳಾದಳು ತಾನೆ? 

ಆ ದುಂಬಿಯ ಹಂಬಲ ಹೂವು 
ಆ ಚಂದಿರ ಬೇಡುವ ಹೆಣ್ಣು 
ಇಬ್ಬನಿಯ ಕೂಡುವ ಬೆಳಕು 
ಆ ಸುಂದರ ಮಿನುಗುವ ಕಣ್ಣು                           [೨]


ರೇಶಿಮೆಯೋ ಸ್ಪರ್ಶದ ಸಾರ 
ಹುಣ್ಣಿಮೆಯೋ ಭಾವದ ತೀರ 
ಹೂಬನವೇ ಇದ್ದೆಡೆಯೆಲ್ಲ
ಇವಳಂದಕೆ ಹೋಲಿಕೆಯಿಲ್ಲ 


ಮಂದಿರದ ಮಂಗಳ ನಾದ 
ಇವಳಾಡುವ ಇಂಪಿನ ಮಾತು 
ಹಿಂಪಡೆವ ಮಾತಿನ್ನೆಲ್ಲಿ 
ಹೃದಯಾನೇ ಹೋಗಲು ಸೋತು                     [೩]


                        
                              -ರತ್ನಸುತ 

ನಾನ್ಯಾರು? ನಿನ್ನವನಾ ??

ಯಾವ ಊರು, ಏನು ಹೆಸರು 
ಹೇಗೆ ಹೇಳೋದು ನಾನೀಗ? 
ನನ್ನ ಗುರುತು, ನಾನೆ ಮರೆತೆ 
ಹೀಗೆ ಆಗಿದ್ದು ಯಾವಾಗ?
ಯಾರ ಕೂಗು, ಯಾವ ಮಾತೂ 
ಕೇಳದಾಗಿದೆ ಈಗೀಗ
ಹಾಗೆ ಚೂರು, ನಕ್ಕು ನೋಡು 
ಸತ್ತು ಬದುಕುವೆ ಆವಾಗ 

{ಬಾಳಿಗೆ ಬಣ್ಣವ ತುಂಬುವ ಕನಸಿಗೆ 
ಬೇಕಿದೆ ನಿನ್ನಯ ಕುಂಚದ ಕಾಣಿಕೆ}                                   [೧]


ಚಿಗುರು ಹಬ್ಬಕೆ ನೀನು ಕಾರಣ 
ಸೋಕಿದಾಗ ತರು ಲತೆಗಳ 
ಪೊಗರು ಹೂಗಳು ಸಲಿಗೆ ಮೀರಿವೆ 
ಇಳಿಸುವುದು ಚೂರು ಅಸದಳ  
ಮಂದಹಾಸಕೆ ಮೂರ್ಛೆ ಹೋದೆನು 
ಎಚ್ಚರ ನೀ ನುಡಿಯಲು
ಮನದ ಆಸೆಯು ಸಾವಿರಾರಿದೆ 
ಕಷ್ಟ ಎಲ್ಲವ ತಡೆಯಲು                                                   [೨] 


ತಾಳ ತಪ್ಪಿದೆ ಹಾಳು ಹೃದಯವು 
ನಿನ್ನ ಹೆಸರ ಪಿಸುಗುಟ್ಟುತ 
ರಾತ್ರಿ ಬೀಳುವ ಕನಸಿನೊಳಗೆ ನೀ 
ಬರಲೇ ಬೇಕು ಹಠ ಮಾಡುತ 
ನನ್ನ ಹಾಡಿಗೆ ನೀನೆ ಪಲ್ಲವಿ 
ನೀನೇ ಚರಣ, ಮುಕ್ತಾಯವೂ 
ಮೋಡ ಕರಗುವ ಸುಳಿವು ಸಿಕ್ಕರೆ 
ಭೂಮಿಗೆಲ್ಲ ಆದಾಯವೂ                                                [೩]

                    
                         --ರತ್ನಸುತ 

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...