Sunday 27 July 2014

ಕಣ್ಣು ಮತ್ತು ಕನ್ನಡಕ

ನನ್ನ ನೋಟ ಅಸ್ಪಷ್ಟವೆನಿಸಿದಾಗೆಲ್ಲ
ಕನ್ನಡಕ ತೆಗೆದು ಬಿಸಿ ಉಸಿರನೂದಿ
ಅಂಗಿ ಕೊನೆಯಲ್ಲಿ ತುಸು ಮೆಲ್ಲಗೆ ಒರೆಸಿ
ಮೂಗಿನ ಮೇಲೇರಿಸುವ ಮುನ್ನ
ಕಿವಿ ಮರೆಯ ಒಪ್ಪಗೂದಲು ಉಸಿರಾಡುವಂತೆ
ಕಣ್ಣಂಚಿನ ತೊಗಲು, ಮೈ ಮುರಿದಂತೆ
ಅಪರೂಪದ ಮಿತ ಸಂಭ್ರಮಾಚರಿಸುವಾಗ
ತೆರೆ ಎಳೆವ ಸೂತ್ರಧಾರಿ ನಾನೇ ಆಗುತ್ತೇನೆ!!

ಸಮಸ್ಯೆ ಕನ್ನಡಕದ್ದಲ್ಲ, ಕಣ್ಣಿನದ್ದೇ ಎಂದು
ನಂಬಿಸುವ ಪ್ರಯತ್ನವಾದರೂ ವ್ಯರ್ಥ;
ಕಣ್ಣು ಸರ್ವಾಧಿಕಾರತ್ವದ ಪ್ರತೀಕ
ಭಾವುಕತೆಯ ಪ್ರತಿಬಿಂಬ
ಹಠದ ಸಾರಥಿ, ಚಟದ ಗಾಲಿ;
ಹೀಗಿರುವಾಗ ಬೆಟ್ಟು ಮಾಡಿದರೂ
ಚುಚ್ಚಿದಷ್ಟೇ ನಿಷ್ಟೂರ ಇಂದ್ರಿಯ!!

ಗಾಜಿನ ಚೌಕಟ್ಟಿನ ಹೊರಗೆ 
ಸೀಮೆ-ಸೀಮೆಯಾಚೆಯ ಸೀಮೆಗಳು;
ಆದರೂ ಒಂದೇ ಜಗತ್ತು,
ಒಪ್ಪುವುದೆಷ್ಟು ಸರಿ, ಜರಿವುದೆಷ್ಟು ತಪ್ಪು?
ಗಾಳಿ, ಮಳೆ, ಬಿಸಿಲ ದಾಳಿಗೆ
ದೈತ್ಯ ಗೋಡೆಗಳು ಬಿರುಕು ಬಿಟ್ಟವು,
ಮನಸು-ಮನಸುಗಳ ನಡುವೆ
ಬಿರಿಯುವ ಸೂಚನೆಗಳೇ ಇಲ್ಲ!!

ಕಣ್ಣು ನೋಟದಷ್ಟೇ ಪೂರ್ಣ
ಕಾಣದ ದಾರಿಗಳ ಪಾಲಿಗೆ ಹುಟ್ಟು ಕುರುಡು
ಕ್ಷಿತಿಜವನ್ನೂ ಬಣ್ಣಿಸಬಲ್ಲ ಬಂಡ ಕವಿ
ಆಸೆ ಪಟ್ಟವುಗಳ ಪಾಲಿಗೆ ಕೋವಿ ಕುದುರೆ;
ಹಗಲ ಬೆಳಕಿಗವಲಂಬಿತ
ಇರುಳ ನಿರಾವಲಂಬಿತ ಕನಸಿನೊಡೆಯ
ಬಾಣ ಗುರಿಯ ರಾಯಭಾರಿ
ಕುಲ-ಸಂಕುಲಗಳ ಅಡಿ ಬರಹ!!

ನಾನು ನಾನೇ ಎಂದು ದಿಟ ಪಡಿಸುವ
ಕನ್ನಡಿಯೊಳಗಣ ಬಿಂಬಕ್ಕೂ
ಕನ್ನಡಕ ಮುಖೇನ ನೋಡುವಾಗಲಷ್ಟೇ
ನಾನು ಸ್ಪಷ್ಟ "ನಾನು"
ಇಲ್ಲವಾದರೆ ನಾನೂ, ಅವನೂ ಕುರುಡರೇ!!

ಮನಸಿನ ಕಣ್ಣಿಗೂ ತೊಡಿಸುವುದಾಗಿದ್ದರೆ
ಎಂದೋ ತೊಡಿಸಬಹುದಾಗಿತ್ತು;
ಯಾಕೋ ಮನಸು 
ಮಂಜು ಮುಸುಕಿನ ಹಾದಿಯಲ್ಲೇ ಚಲಿಸಿದಂತಿದೆ!!

                                                    -- ರತ್ನಸುತ

ಮಧ್ಯಂತರ ತಿರುವು

ನೆನಪಿಗೆ ಏಣಿ ಹಾಕುವಾಗೆಲ್ಲಾ
ಜಾರುವ ಹಸಿ ನೆಲ;
ಅಡ್ಡಗಲ್ಲಿಟ್ಟರೂ ತಡೆಯಲೊಲ್ಲ
ಏಣಿಯ ಕಾಲುಗಳಿಗೆ
ನೆಲಕುರುಳಿ ಮಕಾಡೆ ಮಲಗುವ ತೆವಲು;
ಅಟ್ಟದ ಮೇಲಿಟ್ಟ ಕಟ್ಟುಗಳ ಮೇಲೆ
ಬಹುಕಾಲ ಉದುರಿಸದ ಧೂಳು!!

ಹೆಂಚು ಜಾರಿ ತಲೆ ಒಡೆದ ಕಥೆಯ
ಉಪ್ಪರಿಗೆಗೆ ಸಾರಿ ಸಾರಿ ಹೇಳಿದರೂ
ಒಪ್ಪದಿರುವುದರಿಂದಲೇ ದೂರು ಹಿಂಪಡೆದು
ಅಂಗಳದಲ್ಲಿ ವಿರಾಗಮಾನವಾಗಿ ಕುಳಿತೆ;
ಒಡೆದ ಹೆಂಚಿಗೆ ಮಾಳಿಗೆ ಸೋರುವುದು ದಿಟ,
ಏಕಾಂತವಾಸದಲಿ ತಲೆ ಗೀರುವ ಚಟ!!

ಹಿತ್ತಲ ಬಾವಿ ಬತ್ತಿ ಹೋದದ್ದು
ಸೇದುವ ಬಿಂದಿಗೆಗೆ ಗೊತ್ತಿಲ್ಲವೇನೋ!!
ನೇಣಿಗೆ ಶರಣಾದಂತೆ ಹಗ್ಗಕ್ಕೇ ಗಂಟುಬಿದ್ದು
ಎಂದೋ ಎಸೆದ ಗಾಜಿನ 
ಶೋಕೇಸು ಗೊಂಬೆಯನ್ನ ಮೇಲೆಳೆಯಲಿಕ್ಕೆ
ತುದಿಗಾಲಿಗೆ ಬಿಡುವುಗೊಡದಂತೆ
ನಿಂತದ್ದೇ, ನಿಂತದ್ದು;
ಅಡಿಗೆ ಚೂರಾಗಿರಬಹುದೆಂಬ ಅರಿವೂ ಇಲ್ಲದೆ!!

ಗೋಡೆ ಬಿರುಕಿನ ನಡುವೆ ಇರುವೆ ಗೂಡು
ಬೆತ್ತಲು ಮರದ ಕೊಂಬೆಯಿಂದ ದುಃಖಿತ ಹಾಡು
ರಸ್ತೆ ನಡುವೆಯ ಹೊಂಡದ ಬಾಳು
ಪಕ್ಕಕೆ ಜಿಗಿದ ಉರುಟುಗಲ್ಲು
ಒಣಗಿ ರಟ್ಟಾದ ನಾಯಿ ನೆರಳು
ಉದುರಿ ಮುಪ್ಪಾದ ಎಲೆಯ ಒಡಲು
ಹಾರಿದ ಪಕಳೆ, ಚೀರಿದ ಮೌನ
ಹನಿ ಜಾರಿದ ಬಂಡೆಕಲ್ಲೊಡಲ ಬಣ್ಣ!!

ಕಣ್ಣ ಚುಚ್ಚಿದ ಸೂಜಿಯ ಮೊಂಡುತನಕೆ
ನೆತ್ತರ ಮಡುವಿನ ಗುಡ್ಡೆಯೊಳಗೆ
ನೆನ್ನೆಗಳ ನಕಾರಾತ್ಮಕ ಛಾಯೆ;
ಮುಂದೆಲ್ಲೋ ಅಕಾಲಿಕ ತಿರುವು,
ಒಂದು ಜೊತೆ ಚಪ್ಪಲಿ ಸವೆಸಿ
ಮತ್ತೊಂದ ಕೊಂಡುಕೊಳ್ಳಬೇಕನಿಸುವಾಗ
ಕಾಲಿಲ್ಲದಿರುವುದು ಅರಿವಾಯ್ತು;
ಮಧ್ಯಂತರ ಜೀವನ ಮೊದಲಾಯ್ತು!!

                                        -- ರತ್ನಸುತ

ಕರಾಳ ಇರುಳುಗಳು

ಆಕಳಿಸುವ ಮುನ್ನ ದೇವರ ನೆನೆದು
"ಒಳ್ಳೆ ಕನಸು ಬೀಳಿಸು ಪರಮಾತ್ಮ" ಎಂದು
ಮುಚ್ಚಿದ ಕಣ್ಣುಗಳ ಸುತ್ತ
ಬೇಲಿ ನಿರ್ಮಿಸಿ, ಕಾವಲಿರಿಸಿಕೊಂಡರೂ
ಅದಾವ ಅಡ್ಡ ದಾರಿ ಹಿಡಿದು ಬರುತಾವೋ
ಪ್ರಾಣ ಹಿಂಡಿ ಹಿಪ್ಪೆ ಮಾಡಲು
ನಕಲಿ ಮುಖವಾಡ ಧರಿಸಿದ 
ಅನಾಮಿಕ ದುಃಸ್ವಪ್ನಗಳು?!!

ಕತ್ತಲ ನಿಲುವೂ ಒಂದೇ
ದಮ್ಮಯ್ಯ ಅಂದರೂ ಕರಗದು;
ಹಾಸಿಗೆ ಮುಳ್ಳಾಗಿ, ದಿಂಬೂ ಮುಳುವಾಗಿ
ಹೊದ್ದ ಚಾದರದೊಳೆಲ್ಲ ಹಸಿದ ಬೆಕ್ಕುಗಳ
ನಿಲ್ಲದ ಪರದಾಟ;
ಕನಸಲ್ಲಿಯ ಹೆಗ್ಗಣಗಳ ಹಿಡಿದು
ಕತ್ತು ಸೀಳಿ ನೆತ್ತರ ಹೀರಿದರಷ್ಟೇ ಉಪಶಮನ!!

ಕಪಾಟಿನ ತೆರೆದ ಬಾಗಿಲು
ಅನಾಥ ಗಾಳಿಯ ತಾಳಕೆ ಕುಣಿದು
ತೃಪ್ತಿಯಾಗುವಷ್ಟು ತಗಾದೆ ಮಾಡಿರಲು
ಗಂಟೆಗೊಮ್ಮೆ ರೋಗಗ್ರಸ್ತ ಗಡಿಯಾರ
ಕೆಮ್ಮಿ, ಕೆಮ್ಮಿ ಸುಮ್ಮನಾಗುವುದು
ಗಂಟೆಯವರೆಗೂ ನಿದ್ದೆ ತರಿಸದೆಲೆ!!

ಯಾರೋ ನಸುಕಿನ ಮುಸುಕಿನಲ್ಲಿ
ಬೇಲಿ ಸೀಮೆಗೆ ಬೆಂಕಿ ಇಟ್ಟರೆಂಬ ಗುಮಾನಿ;
ಕಮಟು ವಾಸನೆಗೆ ಮೂಗು ಮುಚ್ಚಿದೆ
ಮನಸಿಗೆ ಒಂದೇ ಅಸಮಾಧಾನ;
ಲಾಂದ್ರ ಹಿಡಿದು ಹೊರಟೆನೇ ಹೊರತು
ಬೊಗಸೆ ನೀರು ಕೊಂಡೋಗಿದ್ದರೆ
ಆಗಷ್ಟೇ ಚಿಗುರಿದ ಬಳ್ಳಿಯ ಉಳಿಸಬಹುದಿತ್ತು!!

ಈಗ ಎಲ್ಲವೂ ಸುಗಮ
ಎಲ್ಲೆಲ್ಲೂ ಕಾಲು ದಾರಿಗಳೇ
ಸಿಕ್ಕ-ಸಿಕ್ಕವರು, ಸಿಕ್ಕ-ಸಿಕ್ಕಲ್ಲಿ ಲಗ್ಗೆಯಿಟ್ಟು
ದಾಟಿ ಬಿತ್ತುತ್ತಿದ್ದಾರೆ ವಿಷ ಬೀಜಗಳ
ಕನಸುಗಳು ಹದಗೆಡುತ್ತಿವೆ 
ಇನ್ನು ಆ ಪರಮಾತ್ಮನೇ ಕಾಪಾಡಲಿ!!

                                -- ರತ್ನಸುತ

ಹೀಗಿದ್ದರೊಳಿತು

ಮುನ್ನುಡಿಗೆ ಮಂಪರು ತರಿಸುವ ಕವನಗಳ
ಗೀಚಿಟ್ಟು ಕೂತರೆ ಓದ ಬರಬೇಡ
ಬೇಕೆಂದೇ ಬಿಟ್ಟ ಖಾಲಿ ಹಾಳೆಗಳ
ನಿನ್ನ ನೆನಪ ಕುರುಹು ಎಂದನಿಸಬೇಡ

ಇಂತಿಷ್ಟು ಹಠದಲ್ಲಿ ಇನ್ನಷ್ಟು ಗೋಗರೆವೆ
ಅಪ್ಪಿ-ತಪ್ಪಿಯೂ ನೀ ಹಿಂದಿರುಗಬೇಡ
ಬಹಳಷ್ಟು ಮಾತುಗಳು ಕಣ್ಣೀರ ಬೇಡುವವು
ಯಾವುಗಳಿಗೂ ತೀರ ಲಕ್ಷ್ಯ ಕೊಡಬೇಡ

ಸಾವಿಗೆ ಶರಣಾಗಿ ಕತ್ತು ಸೀಳುವ ವೇಳೆ
ಹರಿತ ಖಡ್ಗದ ಮೇಲೆ ನಗುತ ಉಳಿ ಬೇಡ
ಚಿಂತೆ ಸಂತೆಯ ಸರಕು ಹೊತ್ತಿರಲು ತಲೆ ಮೇಲೆ
ಭಾರ ಚೀಲವ ಹೊತ್ತು ಎದುರು ಸಿಗ ಬೇಡ

ತಡರಾತ್ರಿ ಮಳೆಯಲಿ, ಮುಜಾವ ಕನಸಲಿ
ಸುಳಿದಾಡುತ ನೀ ನಿದ್ದೆಗೆಡಬೇಡ
ಬರಿಗೈಯ್ಯ ಸಿರಿಗೆ, ಬರಿ ಮಾತ ಮೋಡಿಗೆ
ಮರುಳಾಗಿ ಕೈ ಬೆರೆಳ ಚಾಚಿ ನಿಲ್ಲಬೇಡ

ಮನಸೆಂಬೋ ಮಂದಿರದಿ ಮಲ್ಲೆ ಮುಡಿದು ಬಂದು
ಧ್ಯಾನಸ್ಥನಾದವನ ದಣಿವಾಗಬೇಡ 
ಏನೂ ಬೇಡದ ನಿರ್ಲಿಪ್ತ ಭಾವುಕತೆ
ಮಾತುಕಥೆಗೆ ನಿಗದಿತ ಸಮಯ ಬೇಡ

ಎದುರಾದ ಪ್ರತಿ ಬಾರಿ ಹೊಸಬಳಂತೆ ನಟಿಸು
ಪರಿಚಿತ ಮುಗುಳು ನಗು ಬೀರಲೇ ಬೇಡ
ನಿನ್ನ ಹೃದಯ ಶುದ್ಧ, ಅಪ್ರತಿಮ, ಅದ್ವಿತಿಯ
ಹಾಳಾದ ನನ್ನದಕೆ ಬದಲಿ ಕೊಡಬೇಡ!!

                                       -- ರತ್ನಸುತ

ಅಜ್ಜಿಯ ಆಷಾಢ

ಆಷಾಢ ಗಾಳಿಯ ನಡಿವೆ
ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ
ಇಹಲೋಕ ತ್ಯಜಿಸಿದ ಗಂಡನ ನೆನಪಲ್ಲಿ
ನೂರರ ಸಮೀಪದ ಹಣ್ಣು ಮುದುಕಿ
ಒಂದು ಕೈಯ್ಯಲ್ಲಿ ಹಣೆಗಾಗುವಷ್ಟು 
ಪುಟ್ಟ ಕೈಗನ್ನಡಿ,
ಮತ್ತೊಂದು ಕೈ ಬೆರಳಂಚಿನ ವಿಭೂತಿ ಹಿಡಿದು
ಹಣೆಗೆ ಮುತ್ತುವ ಮುನ್ನ
ಪಂಚಭೂತಗಳಲ್ಲಿ ಪಲಾಯನಗೊಂಡಿತು!!

ಬಾಗಿದ ಬೆನ್ನೊರಗಿದ ಗೋಡೆ
ಹೇಳದ ವ್ಯಥೆಗಳಿಗೆ ಹಸಿಯಾಗಿ,
ಊರ್ಗೋಲ ಹಿಡಿ ಸವೆಯುವಿಕೆಗೆ
ಸಾಂತ್ವನ ಉಣಿಸುವ ವೇಳೆ
ನೆಲದ ಮೇಲೆ ಚೆಲ್ಲಾಡಿಕೊಂಡ ಬರಣಿ ಧೂಳು,
ಚೀಲದ ಚೂರಡಿಕೆ, ಕಡ್ಡಿ ಪುಡಿಗೆ 
ಒಂದು ನೀಳ ಮೌನ ಶಾಂತಿ ಕೋರಿದಂತೆ
ಮತ್ತಲ್ಲೇ ಪಲಾಯನ!!

ಚೆದುರಿದ ಬಿಳಿಗೂದಲ ಗಂಟಿಗೆ
ಸವೆದ ಮೊಣಕೈಯ್ಯ ಪ್ರತೀಕಾರ,
ಹೆಗಲ ಮೇಲೆ ನಿಲ್ಲದೆ ಜಾರುವ ಕುಪ್ಪಸ,
ವಿನಾಕಾರಣ ಕಂಬನಿಗೆ ಹಸ್ತದ ನಿರಾಧಾರ;

ಸುಕ್ಕು ಮುಖದಲ್ಲಿ ನಗುವಿನ ಹುಡುಕಾಟ;
ಅದು ತುಟಿ ಅಂಚಿನಲ್ಲಲ್ಲದೆ 
ಕಣ್ಣ ಮಿಂಚಿನಲ್ಲಾದರೂ ಸಿಗಬಹುದೆಂಬ 
ಹುಂಬು ಗೆರೆಗಳ ಸಾಲು!!

ಊತ ಕಂಡ ಪಾದಗಳಿಗೆ
ಊರ ತುಂಬ ಗೆಳೆಯರು,
ಇನ್ನೂ ಕುಟ್ಟುವವರು ಕೆಲವರು
ಗೋರಿ ಕಟ್ಟಿನಡಿ ಹಲವರು;

ತವರು ಮರೆತ ಹೆಣ್ಣಿಗೆ
ಅಪರೂಪದ ಸಡಗರ,
ದೂರದೂರ ನಂಟು ಮುರಿದು
ಇದ್ದ ಮನೆಯೇ ಪಂಜರ!!

                           -- ರತ್ನಸುತ

ಸ್ವಗತಗಳು

ಬರಬಾರದಿತ್ತೇ ನೀನೊಮ್ಮೆ 
ಕಣ್ಣ ಹನಿಯೊಂದು ಜಾರಿ ಕಳೆದಂತೆ?
ಸಿಗಬಾರದಿತ್ತೇ ಈ ನಮ್ಮ 
ನೆನಪು ಮತ್ತೊಮ್ಮೆ ಮೈದುಂಬಿಕೊಂಡತೆ?

ನಗಬಾರದಿತ್ತೇ ನೀ ಅಂದು
ಅರಳೋ ಹೂವೊಂದು ಗುಟ್ಟನ್ನು ನುಡಿದಂತೆ?
ಕೊಡಬಾರದಿತ್ತೇ ಹೂ ಮುತ್ತು
ಮತ್ತೆ ಯಾವತ್ತೂ ನಾ ಬೇಡಿ ಸಿಗದಂತೆ?

ಬಲವಾಗದಿತ್ತೇ ಹಿಡಿ ಕೈಯ್ಯಿ
ನಾವು ಬೆಸೆದಂಥ ಬಂಧವ ಮುರಿದಂತೆ?
ಕೊರಳಲ್ಲೂ ಕಹಿಯ ವಿಷವಿತ್ತೇ
ಮಾತು ಕ್ರೌರ್ಯಕ್ಕೆ ತಿರುಗಿ ಇರಿದಂತೆ?

ಮನಸಾಗದಿತ್ತೇ ಮರುಳಂತೆ
ಹುಚ್ಚು ಕನಸೆಲ್ಲ ಕೂಡಿಟ್ಟುಕೊಂಡಂತೆ?
ಬಯಲಾಗದಿತ್ತೇ ನಮ್ಮೊಳಗೆ
ಒಲವು ಆಗಷ್ಟೇ ಮೈನೆರೆದ ಪದದಂತೆ?

ಸೊಗಸಾಗಿ ಸಿಗ್ಗು ಪಡಬೇಕೆ
ನವ ಜೋಡಿ ಮೊದಮೊದಲು ಸಿಕ್ಕಂತೆ?
ಹಳೆ ಜಾಡ ಗುರುತು ಹಿಡಿಬೇಕೆ
ಹೊಸತು ಗುರಿಯತ್ತ ಜೊತೆಯಲ್ಲಿ ನಡೆದಂತೆ?

ತಡ ಮಾಡದೆ ಮತ್ತೆ ಸೇರೋಣ
ಯಾವ ಸಂಕೋಚಕೂ ಚಿತ್ತ ಕೆಡದಂತೆ
ಬಿಡಲಾಗದೆ ಅಪ್ಪಿಕೊಳ್ಳೋಣ
ಜೀವ ಎರಡಾಗಲು ಗಡುವು ಕೊಡದಂತೆ!!

                                       -- ರತ್ನಸುತ

ಮೌನವ ಕೆದಕುತ್ತ

ಕಣ್ಣ ಸಪ್ಪಳವನ್ನೂ ಆಲಿಸುವ ಮೌನ
ಕಣ್ಣೀರ ಸಾಂತ್ವನದ ಸ್ನೇಹಿತ;
ಪಿಸುಗುಡುವ ಮನಸಿಗೆ ಆಪ್ತ,
ಏಕಾಂಗಿ ತಲ್ಲಣಗಳ ಮೋಹಿತ!!

ಮೌನ ಮಾತಾದಾಗ ತಿಳಿ-
ಭೂಕಂಪನಗಳು ಎದೆಯಿಂದೆದೆಗೆ
ರಿಂಗಣಿಸುವಾಗ ನಿಟ್ಟುಸಿರು;
ಎದೆಗೊಟ್ಟವರ ಪಾಲಿಗೇದುಸಿರು!!

ಮುದ್ದು ಮಾತಿಗೊಮ್ಮೊಮ್ಮೆ
ಹದ್ದು ಮೀರುವ ಹಸುಗೂಸು,
ಇನ್ಕೆಲವೊಮ್ಮೆ ಮೀರಿದ ಹಠದಲ್ಲಿ
ಮುನಿವ ಪ್ರಳಯಾಂತಕ!!

ತನ್ನೊಳಗೇ ಲಾವಾ ರಸವ ಅದುಮಿಟ್ಟು 
ಸ್ಪೋಟಿಸದ ಮೌನ ಪರ್ವತ;
ಮನಸೂ ಕೆಲವೊಮ್ಮೆ ಹೀಗೇ
ಮಾತು ತಪ್ಪಿ ಮೌನ ಮುರಿದರೆ
ಅಸಹನೀಯ ನೋವ ಉಣಬಡಿಸುವುದು!!

ನಿರಾಕಾರ ಮೌನವನು ತಡೆವುದೂ,
ಹಿಡಿವುದೂ ಹುಂಬತನ,
ಹೆಜ್ಜೆಗೆಜ್ಜೆಗೊಟ್ಟು ಅನುಸರಿಸಿ ಸಾಗುವುದು
ತಕ್ಕ ಮಟ್ಟಿಗೆ ಜಾಣತನ!!

ಮೌನ ಒಮ್ಮೊಮ್ಮೆ ಪದವಿರದ ಕವನ,
ಮಂತ್ರವಿರದ ಹವನ
ರಾಗವಿರದ ಗಾನ;
ಹೆದ್ದಾರಿಯ ದಾಟ ಹೊರಟು
ಖುದ್ದು ಸಾವಿಗೀಡಾಗುವ ಶ್ವಾನ,
ನಿರಾಧಾರ ನೆನಪುಗಳ ಗರ್ಭವನು
ತುಂಬುವ ಭ್ರೂಣ!!

                               -- ರತ್ನಸುತ

ಕನಸ ದಾಟಿ ಬರುವೆ ತಾಳಿ

ಕನಸು ಬೀಳುವ ಮುನ್ನ
ಕಣ್ಣುಗಳ ಕಿತ್ತಿಟ್ಟು
ವಿಳಾಸವ ಎತ್ತಿಟ್ಟು
ಹೆಸರನ್ನೂ ಮುಚ್ಚಿಟ್ಟು
ನಾನಲ್ಲದವನಾಗಿ ಸಾಗಿ ಬರುವೆ;
ಮತ್ತೆ ದೃಷ್ಟಿ ಬರಲಿ
ಊರ ಪತ್ತೆ ಸಿಗಲಿ
ಹೆಸರು ಉಳಿದೇ ಇರಲಿ!!

ಕಣ್ಣಿಲ್ಲದವನ ಕನಿಕರಿಸಿ
ಕೈ ಹಿಡಿದು ನಡೆಸಿದವರ
ಹೆಜ್ಜೆ ಸದ್ದನು ಮೂಸ ಬಲ್ಲೆ;
ನಿಂದಿಸಿ ನಕ್ಕವರ,
ಜಾಡಿಸಿ ಜರಿದವರ
ನಾಡಿ ಮಿಡಿತದಲ್ಲೇ ಮತ್ತೆ
ಗುರುತು ಹಚ್ಚಬಲ್ಲೆ!!

ಊರು ಸೂರಿಲ್ಲದವನ
ಹೊತ್ತು ತುತ್ತಿಗಾಧಾರವಾದವರು
ಕಾಳು ಕಾಳು ಕೂಡಿಟ್ಟ
ಇರುವೆಯ ಮನಸುಳ್ಳವರು;
ಹಾದು ಹೊರಟ ಬೀದಿ ತೂಂಬ
ಹೆಗ್ಗಣಗಳ ಕಳ್ಳ ಮೂಸೆ,
ಬಲ್ಲವರೇ ಬಲ್ಲರು
ಅನ್ನ ಚೆಲ್ಲಿದವರಲ್ಲ, ಹಸಿವಿನ ನೋವ!!

ಬೆನ್ನಿಗೊಂದು ಹೆಸರಿಟ್ಟು
ವ್ಯಂಗ್ಯವಾಡುವವರಿಗೆಲ್ಲ
ನಾನೊಬ್ಬ ಅನಾಮಿಕ;
ಎದೆಗೆದೆಯ ಮುಂದಿಟ್ಟು
ಕಣ್ಣಲಿ ಕಣ್ಣಿಟ್ಟು 
ಇಡದ ಹೆಸರಿಗೂ ಸಿಗುವಾತ;
ನಾ ನಿಮ್ಮವನೆಂಬುವ ಹೆಸರೇ
ಅವ್ವ ಇಟ್ಟುದಕ್ಕೂ ಸೂಕ್ತ!!

ಕನಸ ದಾಟಿ ಬಂದವನ
ಕುಶಲ ಕೇಳಿ ಬಂದವರು
ಎಡ-ಬಲ ಪಂಕ್ತಿಯಲ್ಲುಂಡವರು;
ನಟ್ಟ ನಡು ಉಸಿರಿಗೀಗ ದೈವ ಸಿದ್ಧಿ,
ಸ್ಪುಟದ ಹಾಳೆ ತಿದ್ದಿ ಬುದ್ಧಿ,
ನಿದ್ದೆಯಿಂದೆದ್ದ ಚಿತ್ತ ಎಂದಿಗಿಂತ ಹಗುರ
ಅಲ್ಲಿ ತೂಕದ ವಿಚಾರ!!

                                   -- ರತ್ನಸುತ

ಬಾಗಿಲ ಮರೆಯಲ್ಲಿ

ಬಂದು ಬಾಗಿಲಲ್ಲೇ ನಿಂತ ನಿನ್ನ
ತಲೆ ಬಾಗಿ ಕರೆಯಲೊಲ್ಲ ಅಲ್ಪ ಒಲವು
ದಣಿವಾರಿಸುವ ಗಡಿಗೆ ಬತ್ತಿ ಒಣಗಿದೆ
ಕುಶಲೋಪರಿಗೆ ಮುಂದಾಗದಲ್ಪತನವು!!

ಬೆರಳಾಡಿಸಿ ಬಿಟ್ಟ ಕೊಳವೀಗ ಬಯಲು
ಮುಳುಗದ ದೋಣಿಗೆ ತೇಲುವ ಮನಸಿಲ್ಲ
ಸಂಜೆಗಳು ಬಂದು ಹಾಗೇ ಮರೆಯಾದವು
ನಿನ್ನ ನೆರಳ ಕೊರಳೆದುರು ಏನೂ ಸೊಗಸಲ್ಲ!!

ಲೆಕ್ಕವಿಟ್ಟ ಚುಕ್ಕಿಗಳಿಗೆ ಸೊಕ್ಕು ಈ ನಡುವೆ
ಇಲ್ಲಿ ಮಿಂಚಿ ಮತ್ತೆಲ್ಲೋ ಮತ್ತೆ ಮಿನುಗುವಾಟ
ಇರುವೆಗಳೂ ಮರೆತು ಹೋದಂತೆ ಗೋಚರಿಸಿವೆ
ಇಬ್ಬರೂ ಸೇರಿ ಹೇಳಿ ಕೊಟ್ಟ ಜೇನ ಪಾಠ!!

ಕತ್ತಲ ಕೂಪದಲ್ಲಿ ಬೆಳಕಿಗೂ ಮಸಿ ಬಳಿದು
ಕುರುಡನೆದುರು ಕಪ್ಪು ಬಿಳುಪು ಪಾತ್ರ ಸಜ್ಜಾದೋ
ರಂಗ ಮಂಟಪ ನಮ್ಮ ಎದುರು ನೋಡುತಿದೆ
ದುರಂತ ಪ್ರೇಮ ನಾಟಕವ ಪ್ರದರ್ಶಿಸಲೆಂದಿದೋ!!

ಹೂವ ಪಕಳೆ ಕಿತ್ತ ಬೆರಳ ಬಣ್ಣ ಮಾಸಿಯೇಯಿಲ್ಲ 
ಕಿತ್ತಲೆ ಹಣ್ಣು ಸುಲಿದ ಘಮಲು ಜೀವಂತ
ನೀಲಿ ಮುಗಿಲ ಬೆತ್ತಲನ್ನು ಮರೆಸಿದ ಕಾರ್ಮುಗಿಲು
ಎಲ್ಲ ಗುರುತ ಅಳಿಸಲಿಕ್ಕೆ ತುಂತುರು ಧಾವಂತ!!

ಬಾಗಿಲಲ್ಲೇ ಉಳಿದೆಯೇಕೆ ಹಸಿ ಮೈಯ್ಯ ಹೆಣ್ಣೇ?
ತಾಯಿಯ ಹಳೆ ಸೀರೆಯುಂಟು, ಕೊಡುವೆ ಮೈ ತಡವಿಕೋ
ಕೊಡಲೆಂದೇ ಬರೆದಿಟ್ಟ ಎಷ್ಟೋ ಕಾಗದಗಳಿವೆ
ಗುಡ್ಡೆ ಹಾಕಿ ಹೊತ್ತಿಸುವೆ, ಮೈ ಚಳಿಯ ಬಿಡಿಸಿಕೋ!!

                                                               -- ರತ್ನಸುತ

ಗುಡಿ ಪ್ರಸಾದ

ಅವರೆಲ್ಲ ಅವರವರ ಕೆಲಸದಲ್ಲಿ ನಿರತರಾಗಿದ್ದಾಗ
ಅವಳಷ್ಟೇ ನನ್ನ ಕಿತ್ತು ತುನ್ನುವಂತೆ ನೋಡುತ್ತಿದ್ದಳು,
ಹೇಳಿ ಕೇಳಿ ಗುಡಿ ಅರ್ಚಕನ ಮಗಳು;
ದೇವರೇ ಕೊಟ್ಟ ಪ್ರಸಾದವೋ?
ಇಲ್ಲ ಪರೀಕ್ಷೆಯೋ? ತಿಳಿಯಲಿಲ್ಲ, 
ಮನಸು ಮುನ್ನುಗ್ಗು ಅಂದರೆ
ಅನುಭವ ತುಸು ಕಾಯಿಸಿತು!!

ಯಾರೋ ಹೊಡೆದ ಈಡ್ಗಾಯಿ ಚೂರು
ಹಣೆಗೆ ಮುತ್ತಿಟ್ಟು
ಹಣೆ ಬರಹವನ್ನೇ ಬದಲಾಯಿಸಿತು;
ಹೊಚ್ಚ ಹೊಸ ರೇಷಿಮೆ ದಾವಣಿಯ
ತುಂಡು ಮಾಡಿ ಸೀದಾ ಹಾರ್ಟಿಗೇ ಬಿಗಿದಳು;
ಒಳಗಿನ್ನೂ ಗಾಯ ಆರಿಲ್ಲ
ಕಟ್ಟು ಬಿಚ್ಚುಗೊಡುತ್ತಿಲ್ಲ!!

"ಇಷ್ಟಾರ್ಥ ಸಿದ್ಧಿರಸ್ತು" ಎಂದರಸಿ
ಮಂಗಳಾರತಿ ತಟ್ಟೆಯ ಮುಂದಿಟ್ಟ 
ಅವಳಪ್ಪನ ಬಾಯಿಗೆ
ತುಪ್ಪದ ಸಜ್ಜಿಗೆ ತುಂಬಬೇಕು;
ಇಂದು ಅವನ ಚರಣ ಸೋಕಿದೆ,
ಎಂದಾದರೂ ಅವ ನನ್ನ ಕಾಲು ತೊಳೆದು
ಕಣ್ತುಂಬಿದಾನಂದಬಾಷ್ಪದಲಿ
ಜೀವ ದಾನ ಮಾಡುವನೆಂಬ ಆಸೆಯಲ್ಲಿ!!

ದೇವರೂ ಎಷ್ಟೆಂದು ಬೆಂಬಲಿಸಬೇಕು,
ಅವನ ಲಿಸ್ಟಿನಲ್ಲಿ ನನ್ನಂತೆ ಇನ್ನೂ ಕೋಟಿ ಮಂದಿ;
ಗಮನ ಬೇರಾರ ಮೇಲೋ ವಾಲಿಸಿದ,
ನನ್ನ ಪ್ರೀತಿಯ ಪುಷ್ಕರಿಣಿಯಲ್ಲಿ ಮುಳುಗಿಸಿದ;

ಕೆಲಸದ ನಿಮಿತ್ತ ತಿಂಗಳು ಊರು ಬಿಟ್ಟಿದ್ದೆ,
ವಾಪಸ್ಸು ಬರುವಷ್ಟರಲ್ಲಿ ಹಕ್ಕಿ ಇನ್ನಾರದ್ದೋ ತೆಕ್ಕೆಯಲ್ಲಿ;
ಅವಳ ಗಂಡನೀಗ ಅದೇ ಗುಡಿಯ ಪ್ರಧಾನ ಅರ್ಚಕ,
ಮಂಗಳಾರತಿ ತಟ್ಟೆ ಮುಂದಿಟ್ಟು "ಇಷ್ಟಾರ್ಥ ಸಿದ್ಧಿರಸ್ತು!!" ಎಂದರಸಿದ!!

ಹಾರ್ಟಿಗೆ ಬಿಗಿದ ರೇಷಿಮೆ ತುಂಡು
ಚೂರು ಚೂರೇ ಶಿಥಿಲಗೊಂಡು
ಕೊನೆಗೆ ಗಾಯವೂ ವಾಸಿಯಾಯಿತು,
ಹಣೆ ಬರಹಕ್ಕೆ ಹೊಣೆಯಾರೆಂಬಂತೆ!!

ಗುಡಿ ಮೆಟ್ಟಿಲ ಮೇಲೆ ನಿತ್ರಾಣನಾಗಿ ಕುಳಿತೆ,
ಇನ್ನಾವುದೋ ನಗು ನನ್ನ ಕೆಣಕಲಾರಂಭಿಸಿತು;
ನೈಲಾನ್ ದಾವಣಿ ಎಂಬುದೊಂದು ಬಿಟ್ಟರೆ
ಮತ್ತದೇ ನವಿರು ಅನುಭವ, ಮತ್ತೊಂದು ಪ್ರೀತಿ!!

                                                -- ರತ್ನಸುತ

ರುಜುವಾತು

ಉಸಿರ ಮಾತಿಗೆ ಎದೆಯ ಕದವಿರಿಸಿ
ಯಾರಿಗೂ ಕೇಳಿಸದಂತೆ ವ್ಯವಹರಿಸುವಾಗ
ಬಿಕ್ಕಳಿಕೆ ಮೂಡಿ ಬಯಲಾಗಬಹುದು
ಬೆದರ ಬೇಡ ನಿನ್ನ ದಮ್ಮಯ್ಯ;
ಏನೋ ಕಳೆದಂತೆ ಕಣ್ತುಂಬಿಕೊಳ್ಳುವೆನು
ಇನ್ನೂ ಸನಿಹಕ್ಕೆ ನೆರಳಂತೆ ನಿಲ್ಲುವೆನು
ಕಾಲೆಳೆವ ಕೀಟಲೆ ಸೋಲುಗಳು ಹಲವಾರು
ಬೀಳೋ ಮುನ್ನ ಒಮ್ಮೆ ಬಿಗಿಹಿಡಿಯೆ ಕೈಯ್ಯ!!

ಇರಬಹುದು ನೂರೆಂಟು ಕಾರಣಗಳು 
ನಾವು ದೂರಾಗ ಬಯಸದೇ ದೂರಾದೆವು,
ಹಾಗೆಂದು ಸುಮ್ಮನೆ ಬಿಡಲೊಲ್ಲ ಕನಸುಗಳು
ಇನ್ನೂ ವಿಪರೀತ ಕಾಡಿಸುತಿವೆ;
ಉಪಾಯ ಮಾಡಿ ಹೇಗೋ ಲಾಂದ್ರ ಹಿಡಿದು
ಹೊರಟೆ ರಾತ್ರಿ ಪಾಳಿಗೆ ಕಾಡು-ಮೇಡು ಸುತ್ತಿ,
ಮಿಂಚು ಹುಳುಗಳು ಹೇಗೋ ಪತ್ತೆ ಮಾಡಿ
ನನ್ನ ಬೆನ್ನ್ನು ಬುಡದೆ ಹಿಡಿದು ಛೇಡಿಸುತಿವೆ!!

ಹಾಲು ಬಟ್ಟಲ ತುಂಬ ನಿನ್ನ ಪ್ರತಿಬಿಂಬ
ಬಿಸಿಯನ್ನೂ ಲೆಕ್ಕಿಸದೆ ಒಂದೇ ಗುಟುಕಲ್ಲಿ
ಕುಡಿವಾಸೆಗೆ ಸುಟ್ಟ ನಾಲಗೆಯ ಗುರುತು
ಪ್ರತಿ ಮಾತಿನ ನೆನಪು ನಿನ್ನದೇ ಕುರಿತು;
ನೀ ಎಲ್ಲೋ ನಾ ಎಲ್ಲೋ
ನಿಲುಕದಾಲೋಚನೆಗಳ ತೀರಾ ನಂಬಿದೆವು,
ಹಠವನ್ನು ಬದಿಗೊತ್ತಿ ಸಿಗುವ ಒಮ್ಮೆ
ಮನ ಬಿಚ್ಚಿ ಮಾತನಾಡುವ ಕುಳಿತು!!

ಬಹಳವೇನಲ್ಲ ಸೂಜಿಯಷ್ಟೇ ಗಾಯ
ಹೃದಯವನು ಈ ಮಟ್ಟಕೆ ನೋಯಿಸುತಿದೆ,
ವಿರಹಿಯ ಪರಿತಾಪದಲಿ ಬೆಂದ ಭಾವಗಳು
ಬಿಡುವಿಲ್ಲದೆ ನೋವ ರಿಂಗಣಿಸುತಲಿವೆ;
ಹತ್ತೇ ದಿನಗಳು ಹತ್ತು ದಶಕಗಳಂತೆ
ಮೆಲುಕು ಹಾಕಲು ಮತ್ತೊಂದು ಜನುಮ,
ಮತ್ತೆ ಮತ್ತೆ ನನ್ನ ಎಚ್ಚರಗೊಳಿಸುತಿದೆ
ನಿನ್ನ ಕಣ್ಣ ಹೊಳಪಿಗಿಗೋ ಪ್ರಣಾಮ!!

ಕವಡೆ ದೂರ ಎಸೆದು ಬಂದೆ
ಹಸ್ತ ರೇಖೆ ತಿರುಚಿಕೊಂಡೆ
ಹಣೆಯ ಬರಹಕೊಂದು ಅಳಿಸೋ
ಮಾಯಾ ಅಳಿಕೆ ತಂದೆ;
ಈಡು-ಜೋಡು, ತಿದ್ದಿ-ತೀಡಿ
ಮನ್ವಂತರ ಎದುರು ನೋಡಿ
ನನ್ನ ನಾನೇ ಮರು ರೂಪಿಸಿ
ನಿನ್ನಗೆ ನೀಡೆ ಬರುವೆ, 
ಜೆತೆಗಿರುವ ರುಜುವಾತಿನ ಆಣೆಯನ್ನೂ ಇಡುವೆ!!

                                                  -- ರತ್ನಸುತ

ಕವಿತ್ವ

ಅರ್ಧ ಓದಿ ಬಿಟ್ಟ ಕವಿತೆ ನಿನು;
ಏನೇ ಅರಿತರೂ ಅಪೂರ್ಣ
ಅನಿಸಿದ್ದೆಲ್ಲವೂ ಅಪೂರ್ವ
ನೆನಪಲ್ಲುಳಿದದ್ದು ಚೂರು
ಮರೆತ ಪದಗಳು ನೂರು
ಅಂತ್ಯವೋ ಅನಂತ
ಗ್ರಹಿಕೆ ದಿಗಂತ
ಮತ್ತೆ ಮತ್ತೆ ಓದ ಬಯಸಿದ
ಗುರುತಿಡದ ಗೌಪ್ಯ ಹಾಳೆ!!

ಮೊದಲಿಂದ ಶುರುವಾಗಿ
ಅದೆಲ್ಲೋ ಮಗ್ನನಾಗಿ ಮೈಮರೆತು
ನಡು ನಡುವೆ ಸಣ್ಣಗೆ ತಡವರಿಸುತ್ತ
ಮೈಲಿಗಲ್ಲುಗಳಿಲ್ಲದ ರಸ್ತೆ ಬದಿಯಲ್ಲಿ
ಧೂಳಿಡಿದ ನಾಮ ಫಲಕಕ್ಕೆ
ಸೋನೆ ಮಳೆ ಪುನಃಷ್ಚೇತನಗೊಳಿಸಿದಂತೆ
ಹೃದಯ ಶುಭ್ರವಾದಾಗ
ಮತ್ತೆ ಅರ್ಧಕ್ಕೇ ನಿತ್ರಾಣನಾಗುತ್ತೇನೆ!!

ಪದವಿಲ್ಲದ ಸಾಲುಗಳ ಕೂಡಿಸುತ್ತ
ಕಣ್ಣ ಸುತ್ತ ಹರಿದ ತೊರೆ ತೊರೆಯ
ಸೆರೆ ಹಿಡಿದು ಸೇರಿಸುವಾಗ
ನಿನ್ನಂತೆಯೇ ಒಂದು ನದಿ
ನನ್ನ ದಡವಾಗಿಸಿ ಸೋಕುತ್ತಿದ್ದಂತೆ
ಮುನ್ನುಡಿಗೆ ಕಾಯದ ಸಂಕಲನವಾದೇನು;
ಓದುವ ಹೊಣೆ ನಿನ್ನದೇ,
ವಿಮರ್ಶೆಗೆ ಕಲ್ಲಾಗಿ ಕಾಯುವೆ!!

ಕವಿತ್ವದ ಒಟ್ಟು ಸಾರಾಂಶ
ನಿನ್ನ ಮೂಗುತ್ತಿಯ ಮಿಂಚು,
ಅದೂ ನಾಚಿಕೊಂಡಾಗಲಷ್ಟೇ;
ವಿಪರೀತ ಅನಿಸುವ ಲಹರಿಯಲ್ಲಿ
ಉಸಿರಾಟ ಮರೆತು ಒಮ್ಮೆ ಕುಸಿದು
ನಿನ್ನ ನೆನಪ ಮಸೆದು
ಎದ್ದ ಶಾಖದಲ್ಲಿ ಎಚ್ಚರಾಗುವಾಗ
ಮೈ ಮುರಿದ ಸದ್ದ ನೀ ಕೇಳಬೇಕು!!

ಕಪಾಟಿನಲ್ಲಿ ಎತ್ತಿಟ್ಟರೂ
ಎದೆಯಲ್ಲಿ ಸದಾ ತೆರೆದುಕೊಂಡ 
ನಿನ್ನ ಮುಖ ಪುಟವ
ಹೊರಳಿಸಿ, ಹೊರಳಿಸಿ ಸಾಕಾಗಿ
ಮತ್ತೆ, ಮತ್ತೆ ಓದುವಾಗ
ನೀನಾಗಿಯೇ ಒಮ್ಮೆ
ಬೇರೇನಾದರೂ ಬರೆದು ಹೋಗಬೇಕು
ಹೆಸರ ಹಂಗು ತೊರೆದು ನನ್ನ ಕೂಗಬೇಕು!!

-- ರತ್ನಸುತ

Tuesday 15 July 2014

ಚಿಟ್ಟೆ ಆಗುವ ಮುನ್ನ

ನನ್ನ ಸುತ್ತ ಕಟ್ಟಿಕೊಂಡ ಗೂಡಿನ
ಎಳೆ ಎಳೆಯಲ್ಲೂ ನಿನ್ನ ರೇಷಿಮೆ ಗುರುತು;
ಒಳಗೆ ಕತ್ತಲ ಸಾಮ್ರಾಜ್ಯ, ಒಂಟಿ ಯಾತನೆ,
ನಿನ್ನ ನೆನಪೊಂದಿರದಿದ್ದರೆ
ರೆಕ್ಕೆ ತಾಳುವನಕ ಜೀವ ತಾಳದೆ
ಬಿಕ್ಕಿ ಬಿಕ್ಕಿ ಅತ್ತು ಬಿಡುತ್ತಿದ್ದೆ
ಹೃದಯ ಕಿತ್ತೆಸೆದು
ವಿಲ-ವಿಲ ಒದ್ದಾಡಿ ಸತ್ತು ಬಿಡುತ್ತಿದ್ದೆ;

ಕಾಣದ ಕಣ್ಣಿನೊಳಗೆ ಬಣ್ಣ ಬಣ್ಣದ
ಕನಸುಗಳು ಮೂಡುವಂತಾಗಿದ್ದು
ನಿನ್ನ ನಿರೀಕ್ಷೆಯ ಭಾರ ಹೊತ್ತು;
ನೀ ಸವರಿ ಬಿಟ್ಟ ಎದೆಯ ಮೇಲೆ
ಚಿಗುರಿದ ರೋಮ ರೋಮವೂ
ಹೊಸ ಕಥೆಗಳ ಪಾಡುವಲ್ಲಿ
ನೀನೇ ಕಥಾ ನಯಕಿ;
ನನಗಲ್ಲಿ ಪೋಷಕ ಪಾತ್ರವಷ್ಟೇ!!

ಅಲ್ಪ ಮೊತ್ತದ ಆನಂದವ ಅರಗಿಸಿಕೊಳ್ಳಲಾಗದವ
ಜೀವಮಾನದ ಸುರಿಯ ಒಡೆಯನೆಂದು
ಊಹೆಗೈವುದೂ ಅತಿಶಯ;
ಮೋಹ ತೆಕ್ಕೆ ಸಣ್ಣದು,
ಪ್ರವಾಹ ಭೀತಿಯ ಸಹಿಸದು;
ಇನ್ನೂ ಅಲೆ ಅಪ್ಪಳಿಸದ 
ಕಿನಾರೆಯ ಮರಳ ದಂಡೆಯ ಪಾಡು ನನದು!!

ರೆಕ್ಕೆಯ ಬಲಾಬಲದ ಪ್ರಯೋಗಕ್ಕೆ
ನಿನ್ನ ಪ್ರೇಮಾಯಣದ ಪ್ರೇರಣೆ;
ಇದ್ದಲ್ಲಿಯ ಆವರಣಕ್ಕೆ ಸಾವಿರ ಪಟ್ಟು ಜೋಡಿಸಿ
ದಿಗ್ಬ್ರಾಂತನಾಗುತ್ತೇನೆ;
ಒಂದೇ ಏಟಿಗೆ ನಿನ್ನ ಹೊತ್ತು
ಲೋಕ ಸಂಚಾರ ನಡೆಸುವ ಹುಂಬ-
ನಾನೆಂದರೆ ನಗದಿರು;
ಆ ನಗುವಲ್ಲೇ ಇದ್ದ ಪ್ರಾಣ ಹಾರಬಹುದು!!

ಇನ್ನೇನು ಗೂಡಿಗೂ ಸಂಬಾಳಿಸಲಾಗದೆ
ಬಿಟ್ಟುಗೊಡುವ ತಯಾರಿಯಲ್ಲಿದೆ;
ಎಂದೂ ಕಾಣದ ಬೆಳಕು
ಕಣ್ಣ ಚುಚ್ಚಬಹುದು,
ಲೋಕದ ವಿಶಾಲತೆಗೆ ಹೃದಯ
ಬೆಚ್ಚಿ ಬೀಳಬಹುದು;
ನಿನ್ನ ಪ್ರೇಮ ರಕ್ಷೆಯೊಂದೇ
ಆಧಾರಕ್ಕೂ ಆಧರ!!

ಇಗೋ ಹಾರ ಹೊರಟೆ 
ಹುಡುಕಾಟಕ್ಕೆ ಕೊನೆಯಿಲ್ಲವೆಂಬಂತೆ
ಅಲೆಮಾರಿ ಅರಸನಾಗಿ!!

                                -- ರತ್ನಸುತ

ಮನದ ತುಂತುರಿನಲ್ಲಿ

ತುಂತುರು ತವಕಗಳು
ಮನದ ನೆಲವ ಹಸಿಗೊಳಿಸುತ್ತಿವೆ,
ಹೊರಗೂ ನಿಲ್ಲದ ಮಳೆ
ಆಷಾಢ ಮಾಸದ ಶಪಿತ ಮನ;
ಹುಚ್ಚು ಬಯಕೆಗಳ ಸ್ವಚ್ಛ ನಿಲುವು,
ಮೈ ಬಿಸಿ ಸುಡುತಿದೆ ಕಂಬಳಿಯ;
ನವ ನಿರ್ಮಾಣ ಕುಸುರಿ ಕಾರ್ಯಕ್ಕೆ
ಭಾವ ಪೌರರ ಆಗಮನ!!

ಮೋಡಕ್ಕೂ ಅರೆ ಮನಸು,
ಕಂತುಗಳಲ್ಲಿ ಬಂದು ನಿಲ್ಲುತ್ತಿದೆ;
ಬರಬಾರದಿತ್ತೆ ಮಗು ಅತ್ತಂತೆ,
ಯಾರೋ ಹಿಂಬಾಲಿಸಿ ಬಿಟ್ಟಂತೆ?

ಸೂರ್ಯನ ಮುಖ ನೋಡಿ
ಕೆಲ ದಿವಸಗಳೇ ಆಯಿತು;
ಸೊರಗಿ ಹೋಗಿರದಿದ್ದರೆ ಅದೇ ಪುಣ್ಯ;
ಮೈ ಶಾಖದಲ್ಲಿ ಅತಿ ಧನ್ಯ!!

ಕನಸುಗಳು ತೀರ ಹದಗೆಡುತ್ತಿವೆ,
ಹಾಗೂ ಹೆಚ್ಚು ಹಿಡಿಸುತ್ತಿವೆ;
ಸ್ಥಿಮಿತದಲ್ಲಿರದ ಉದ್ರೇಕ
ತಟಸ್ಥನಾಗಲು ಚೆದುರಿದ ಏಕಾಗ್ರತೆ!!

ಬೆರಳುಗಳಿಗೂ ಬೆತ್ತಲ ಭಾವ
ಅಗ್ನಿ ಸ್ಪರ್ಶದಿಂದ ಚೂರು ವಿಮುಕ್ತಿ,
ಸ್ಖಲನಗೊಂಡವು ಸ್ವಮಿಲನದಲ್ಲೇ
ಹಬ್ಬಬಾರದಿತ್ತು ಈ ಹಗಲ ವದಂತಿ;

ಪುಸ್ತಕಗಳಿಗೆ ಮುಖಪುಟದ ಸಾಂತ್ವನ,
ಕಣ್ಣ ನೋಟಕ್ಕೆ ಕಿಟಕಿಯ ದಿಗ್ಬಂಧನ 
ಉಗುರು ಬೆಚ್ಚಗಿನ ಪದ ಗುಚ್ಚಕ್ಕೆ
ಸಮಾಧಾನಕರ ಕಾವ್ಯ ಬಹುಮಾನ!!

                                 -- ರತ್ನಸುತ

ಗುಮ್ಮ ಬಂತು ಗುಮ್ಮ

ಕೂಸು ಕತ್ತಲ ಕೋಣೆಯತ್ತ
ಪುಟ್ಟ ಹೆಜ್ಜೆಯಿಟ್ಟು ಸಾಗುವಾಗ
ಸಂಬಾಳಿಸಲಾಗದ ಅಮ್ಮ
"ಅಲ್ಲಿ ಗುಮ್ಮ ಇದಾನೆ ಕಂದ" ಅಂದೊಡನೆ
ಅಲ್ಲೊಬ್ಬ ಗುಮ್ಮ ನಿಜಕ್ಕೂ ಹುಟ್ಟಿಕೊಳ್ಳುತ್ತಾನೆ!!

ಸೆರಗ ಹಿಂದೆಯೇ ಅವಿತು
ದೀಪ ಉರಿಯದ ಹೊರತು
ಅತ್ತ ಸುಳಿಯಲು ಪುಕ್ಕಲುತನ
ಅಡ್ಡಗಟ್ಟಿದಾಗ
ಕೂಸೊಳಗಿನ ಪರಾಕ್ರಮಿಯೊಬ್ಬನ
ಅಹಮಿಕೆಗೆ ಕೊಡಲಿ ಏಟು;
ಎಲ್ಲವೂ ಸಹ್ಯ ಅದಕೆ 
ಗುಮ್ಮ ಒಬ್ಬನ ಬಿಟ್ಟು!!

ಗೂಟಕ್ಕೆ ನೆತು ಹಾಕಿದ ಅಪ್ಪನ ಕೋಟು
ಮಸಿಯಾದ ಹಳೆ ದೇವರ ಫೋಟೊ
ಟೇಬಲ್ ಫ್ಯಾನು, ನಿಲುವುಗನ್ನಡಿ
ಮಂಚದ ಕಾಲು, ಕಿಟಕಿಯ ಕೋಲು
ಬೆಳಕಿನ ಕಿರಣ, ಸೋಫಾ ನೆರಳು
ಎಲ್ಲದರಲ್ಲೂ ಗುಮ್ಮ ಅಡಗಿದ್ದಾನೆ;

ನಿದ್ದೆಯಿಂದೆಚ್ಚರಗೊಂಡು
ಪಿಳಿ-ಪಿಳಿ ಕಣ್ಣರಳಿಸಿ
ಅಮ್ಮನ ಹಿಡಿಯ ಅರಸಿದ ಕಂದನ
ಆಡಿಸುವವನೂ, ಹೆದರಿಸುವವನೂ
ತಾನೇ ಭಾವಿಸಿ, ರೂಪಿಸಿ, ಹೆಸರಿಸಿದ
ನಿರಾಕಾರ ಗುಮ್ಮ!!

ಬೆಂಬಲಕಾದವರು ಜೊತೆಗಿದ್ದರೆ
ಹೇಗಾದರೂ ಮಾಡಿ ಕಿವಿ ಹಿಂಡುವ ಆಸೆ,
ಪೆಟ್ಟು ಕೊಡಲು ಪಟ್ಟು,
ಕಂಡ-ಕಂಡಲ್ಲಿ, ಸಿಕ್ಕ-ಸಿಕ್ಕಲ್ಲಿ
ಅಡ್ಡಾಡಿಸಿ ಸೇಡು ತೀರಿಸುವ ಅತಿಶಯ;
ಇಷ್ಟಾದರೂ ಗುಮ್ಮ ಸುತ್ತಲೇ ಸುತ್ತುವ 
ಬಿಟ್ಟು ತೊಲಗದ ಮೊಂಡು ಪ್ರಾಣಿ!!

ಹಂತ ಹಂತಕ್ಕೂ 
ಹೆದರಿಸುವ ದಿಕ್ಕು-ದೆಸೆ ಬದಲಾಯಿಸುವ ಅವನಿಗೆ
ಒಬ್ಬ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್
ಬ್ಯಾಟ್ ಮ್ಯಾನ್, ಹನುಮಾನರ ಸವಾಲು,
ಚೋಟ ಭಿಮ್ ಶಕ್ತಿ,
ಹಾರ್ಲಿಕ್ಸ್, ಕಾಂಪ್ಲಾನ್, ಬೋರ್ನ್ವೀಟ 
ಬಿಸ್ಕತ್ತು, ಚಾಕ್ಲೇಟಿನ ಚುರುಕು
ಆದರೂ ಅವ ಸೋಲುವುದಿಲ್ಲ
ಇವ ಸೋಲೊಪ್ಪುವುದಿಲ್ಲ!!

                                -- ರತ್ನಸುತ

ಆತ್ಮ ನಿವೇದನೆ

ಒಲವು ಅಸ್ಥಿರ
ಮನಸು ಸ್ಥಾವರ
ಮಿಡಿತ ಮಧುರ;
ಕನಸ ಕಾತರಗಳ
ಕಣ್ಣಲ್ಲಿ ಧೂಳೆಬ್ಬಿಸಿದಂತೆ
ಜಿನುಗಿಸೋ ಕಲೆ
ಕಾಡಿಗೆಯ ದಿಗ್ಬಂಧನದ
ನಿನ್ನ ಕಣ್ಣಿಗಿದೆ, ಒಪ್ಪಬೇಕು!!

ಹೂವ ಆಧರ
ತಂಪು ಚಾಮರ
ಹೊನ್ನ ಸಿಂಗಾರ
ಬಣ್ಣ ಚಿತ್ತಾರವ
ಹೋಲುವ ನಿನ್ನತನಗಳ
ಬಣ್ಣಿಸಿ, ಬಣ್ಣಿಸಿ
ರೋಸುಹೋಗಿದೆ
ಸುಮ್ಮನಾದೆ ಅದಕೆ, ಕ್ಷಮಿಸಬೇಕು!!

ಕಾಯಿಸಿದ ಕಿರಾತಕ
ನೋಯಿಸಿದ ನತದೃಷ್ಟ
ಪೀಡಿಸಿದ ಪಿಪಾಸು
ಪ್ರೀತಿಸಿದ ಪಾಪಿ;
ಪಾತ್ರ ಪರಿವರ್ತಿಸುತ
ಬಂಧ ತಿರುಚಲು ಆಗ,
ಜೀವಮಾನದ ಘೋರ
ಶಿಕ್ಷೆ ವಿಧಿಸಬೇಕು!!

ಚಟಮಾರಿಯ ಹತೋಟಿ
ತುಂಟತನದ ಸ್ಥಿಮಿತ
ಪಾವು ಹೆಚ್ಚು ಸಹನೆ
ಚಿಟಿಕೆಯಷ್ಟು ಕೋಪ
ಇರುಸು ಮುರುಸು ತಾಳಿ
ದಿನದಂತ್ಯಕೆ ಸಣ್ಣ ಜಗಳ-
ಮಿಂದೆದ್ದ ಉಸಿರ
ಕಟ್ಟಿ ಬಿಡಿಸಬೇಕು!!

ನಿಷ್ಟೂರದ ನುಡಿ
ಕರ್ಪೂರದ ಉರಿ;
ಹೊತ್ತಿಸದೆ ಘಮಿಸಿ
ಹೊತ್ತಿಸಲು ಕೈ ಮುಗಿದು
ಕಾಯ ಬೇಕು,
ಕಾದು ಮಾಗ ಬೇಕು
ಮುಪ್ಪು ಹಣ್ಣಿನಲ್ಲೂ 
ಪ್ರೇಮ ಚಿಗುರಬೇಕು!!

              -- ರತ್ನಸುತ

ಗಿರ್ಕಿ

ಎದುರು ಮನೆಯ ಸಾವು
ನೆರೆ ಮನೆಯ ಹಸುಗೂಸ
ಬಿಡುವಿರದ ಅಳಲು;
ಗೌಡರ ಸೊಸೆಯ
ಬಸುರನ್ನ ಬಯಲಿಗೆಳೆದ
ಬಂಜೆ ಕೊರವಂಜಿ!!

ಸಾಲದ ದಿನಸಿಯ
ಬೆಲ್ಲದ ಅಚ್ಚಿಗೆ ಬೆಚ್ಚಗೆ
ಮೆತ್ತಿ ಸತ್ತ ಇರುವೆ;
ಹಾಲು ಗಲ್ಲದ ಮೇಲೆ
ಕೆಂಪು ದೀಪದ ಚುಕ್ಕಿ
ಕೀವುಗಟ್ಟಿದ ಮೊಡವೆ!!

ಕವಳ ಕಾಳಿನ ಚೀಲ
ಕೊರಳ ಜಪ ಮಾಲೆ
ಹಣೆಯ ತ್ರಿಪಟ್ಟಿ;
ಒಡಲಿನ ಬೆವರು
ಮಣ್ಣಿನ ಹಸಿರು
ಅಂಗೈಯ್ಯ ಒರಟು ಕಲೆ!!

ಶಾಲೆ, ಮಂದಿರ-
ಮಸೀದಿಯ ಗಂಟೆ,
ಸ್ಪೀಕರ್ ಗದ್ದಲ;
ರಸ್ತೆ ರಸ್ತೆಗಳ
ಸಿಗ್ನಲ್ ದೀಪಗಳಡಿಯಲಿ
ಹಸಿವ ಕೂಗು!!

ಏಕ ದಿನ ಪ್ರವಾಸಿ ತಾಣ
ನಾಲ್ಕು ಮಂದಿಯ ಕೂಡಿ
ಹಿಂದಿರುಗದ ಮನಸು;
ಬಾಣಂತಿ ಕೋಣೆಯಲಿ
ತೊಟ್ಟಿಲ ಸಿಂಗಾರ
ಕೆನ್ನೀರ ಆರತಿ!!

ಮೌನದ ತೀರ
ಪಿಸುಗುಡುವ ತಂಗಾಳಿ
ಶಂಖ ನಾದ;
ದುಃಖ ಲವಣ
ಖುಷಿಯ ಅಲೆಯು
ಜೀವ ಕಡಲು!!

             -- ರತ್ನಸುತ

ಕವಿತೆ

ಕವಿಗೆ ಕವಿತೆಯೇ ಅಸ್ತ್ರ,
ತನ್ನಿಷ್ಟಕೆ ಬರೆಯಲು
ಇನ್ನಾರನೋ ಇರಿವುದು;
ಹಿತವಲ್ಲ ಪ್ರತಿ ಸಲವೂ
ಪ್ರತಿಯೋರ್ವರ ನಿಲುವಿಗೆ!!

ಬಿಕ್ಕಿದವರ ಕಣ್ಣೀರ
ಸಂಪಾದಿಸುವವುಗಳು,
ಬೋಳು ಬರದ ಛಾಯೆ
ಸತ್ವ ಕಳೆದವು ಹಲವು;
ಮಿಕ್ಕವೆಲ್ಲ ಲೆಕ್ಕವಷ್ಟೆ
ಮುರು ಮತ್ತೊಂದು!!

ಕನಸ ಕಿತ್ತು ತಿಂದ
ಬಕಾಸುರ ಭಾವಗಳು
ನಿದ್ದೆಯಲ್ಲೂ ಪ್ರಾಸ ಬದ್ಧ
ಕಾವ್ಯವಾಗಿ ಹೊಮ್ಮಿ
ಗಿಜುಗುಡುವ ಜೀರಂಗಿಯಂತೆ!!

ಕಸದಲೂ ಹಾಳೆಯ ಚೂರು
ಕೆಸರಲೂ ಪದ್ಮ ಪುಷ್ಪ
ಕುಸುರಿಯ ಹೆಸರನಿಟ್ಟು
ಜಾರಲಾನಂದ ಬಾಷ್ಪ;

ನೀಳ ಸಾಲ ನಡುವು
ಮಡದಿಯ ನಿತಂಬವೋ?
ಜನನನಿಯ ಮಡಿಲೋ?
ಗೆಳತಿಯ ಗೌಪ್ಯ
ಸೆರಗ ಹಿಂದಿನ ಸಿರಿಯೋ?!!
ಮಾರ್ಮಿಕ, ಪ್ರಚೋದಕ
ಪ್ರಚಾರಕ, ಪ್ರಭಾವಿಕ!!

ಗಿರಿ ಅಂಚಿನ ಹಿಮವು
ಗರಿ ಕುಂಚದ ಘಮವು
ಮನ ಮೈಲಿಗೆ ಸೂತಕವೂ
ಹೃದಯಾಂತರಾಳ ಪುಳಕವೂ;
ಮೌನ ಮುರಿವ ಸಿತಾರ
ಸದ್ದು ಗದ್ದಲ ಬಿಡಾರ
ಚಿಣ್ಣರ ಚಿಲಿಪಿಲಿ
ಬಣ್ಣದ ಓಕುಳಿ!!

ಮಧ್ಯಂತರ ಮುಗಿದು
ಮನ್ವಂತರ ದಾಟಿ
ವಾರಾಂತ್ಯದ ಬಿಡುವಿಗೆ
ಕಾಯದ ನಿರಾಧಾರ ಪದಗುಚ್ಚ
ಕೂಸು ಬಿಟ್ಟ ಹೆಜ್ಜೆ ಗುರುತು
ಬಾಣದಷ್ಟೇ ತೀಕ್ಷ್ಣ 
ಕಣ್ಣ ಕಾಡಿಗೆ ನೀರು
ಒಂದು ದೀರ್ಘ ಉಸಿರು!!

                       -- ರತ್ನಸುತ

ಕ್ರಾಸ್ ಕಲ್ಚರ್

ಮಿಂಚುವುದು ಹಳೆ ಗೋಳು
ಮಾಸುವುದೇ ಹೊಸ ಸ್ಟೈಲು 
ಬಾಚದ ಕೂದಲಿಗೆ ಟ್ರೆಂಡಿ ಹೆಸರು;
ಫೇಸಿನ ಪೌಡರ್ರು
ಕ್ರೀಮು ಕಂಪನಿ ನೂರು
ಸ್ಪ್ರೇಗಳು ತಡೆವವು ದುಡಿಮೆ ಬೆವರು!!

ಟೈಮು ತೋರಿದರಷ್ಟೇ
ಸಾಲದಾಗಿದೆ ವಾಚು
ಬ್ರಾಂಡು ಇಲ್ಲದ ಹೊರತು ಶುದ್ಧ ವೇಷ್ಟು;
ಮನೆಯ ಮುದ್ದೆ ಸಾರು
ವಾಮಿಟ್ಟು ತರಿಸುವುದು
ಪಿಜ್ಜಾ ಬ್ರೆಡ್ಡಿನ ಟೇಸ್ಟು ಬೆಸ್ಟು!!

ಸೈಕಲ್ಲು ತುಳಿವವರ
ಸ್ಟೇಟಸ್ಸು ಕೀಳಂತೆ
ಮನೆಗೆರಡು ಮೋಟಾರು ಬೈಕಿಲ್ಲ ಕಾರು;
ಬಟ್ಟೆ ನೋಡಿ ಅಳತೆ
ಮಾತಿಗೇ ಮಾನ್ಯತೆ
ಹೊಟ್ಟೆ ಪಾಡನು ಕೇಳುವವರು ಯಾರು?!!

ಫಾರಿನ್ನು ಶಾಲೆಗಳು
ಫೇಮಸ್ಸು ಯುನಿವರ್ಸಿಟಿ-
-ಗಳು ದೊಡ್ಡವರ ಸ್ಟಾಂಡರ್ಡು ಕೋಡು;
ದೇಸಿ ಕಲ್ಚರ್ರು 
ಪೂರ್ವಿಕರ ಗೊಡ್ಡಂತೆ
ವೆಸ್ಟ್ರನ್ನು ಅಂದಾಗ "ಅಬ್ಬಾಬ್ಬ ನೋಡು!!"

ರೈಮ್ಸು ಕಲಿತರೆ ಚುರುಕು
ಇಲ್ಲವಾದರೆ ಪೆದ್ದು
ಮಾತೃ ಭಾಷೆಗೆ ಇದುವೇ ಗೋಲ್ಡ್ ಮೆಡಲ್ಲು;
ಮೂವತ್ತು ದಾಟಿದರೆ
ರಿಚ್ಚು ಖಾಯಿಲೆಗಳು
ಕಾಮನ್ನು ಎಲ್ಲೆಲ್ಲೂ ಹಾರ್ಟ್ ಟ್ರಬಲ್ಲು!!

ಮಮ್ಮಿ ಮಕ್ಕಳ ಮಾತು
ಗ್ರ್ಯಾನಿಗಳಿಗೆ ಒಗಟು
ಹಳ್ಳಿಗಳು ಈನಡುವೆ ಲೇಯೌಟ್ಗಳು;
ಕಟ್ಟಿಕೊಂಡವರಲ್ಲಿ
ಏನೋ ಪ್ರಾಬ್ಲಮ್ಮು
ಲೇಟ್ ನೈಟ್ ಪಾರ್ಟಿಯಲಿ ಡ್ಯೂಯೆಟ್ಗಳು!!

                                          -- ರತ್ನಸುತ

ನಲ್ಮೆಯ ಬದುಕಿಗೆ

ಕ್ಷಮೆಯಿಲ್ಲದ ಸಾಲು ಸಾಲು 
ತಪ್ಪುಗಳ ಮಾಡಿ ಬಂದೆ
ಕೊನೆಯದಾಗಿ ನಿನ್ನ ಪ್ರೀತಿ
ಪಾಲು ಕೇಳಲು;
ಆಸೆ ತುಂಬಿ ಹೃದಯವನ್ನೇ
ಬಗಿದು ಪಾದದಡಿಯಲಿಟ್ಟೆ
ಒಪ್ಪಿಸೋಕೆ ತಂದ ಪ್ರಾಣ
ನಿನ್ನದಾಗಲು!!

ನೆತ್ತರಲ್ಲಿ ಬರೆದ ಓಲೆ 
ಕೊಟ್ಟರಿಲ್ಲ ಯಾವ ಭಾವ
ಉಸಿರ ಕೊಟ್ಟು ಗೀಚಿಕೊಂಡೆ
ಓದ ಬೇಕಿದೆ;
ಸಂತೆ ದಾರಿ ಮಧ್ಯೆ ಒಮ್ಮೆ
ಎಲ್ಲರನ್ನೂ ತಪ್ಪಿಸುತ್ತ
ನಿನ್ನ ತಲುಪೋ ಹಾಗೆ ಮೆಲ್ಲ
ಕೂಗ ಬೇಕಿದೆ!!

ನಿನ್ನ ಮಾತು ಜಾರೋ ಮುನ್ನ
ನನ್ನ ಅರಿವಿನಲ್ಲಿ ಹರಿದು
ಸಿಹಿಯೋ, ಕಹಿಯೋ ಮುಂಚೆ ಎಲ್ಲ
ಅರಿಯ ಬೇಕಿದೆ;
ರೂಪಕೊಂದು ರೂಪಕವ
ಹುಡುಕಿ ಹುಡುಕಿ ಸೋತು ಹೋದೆ
ನಿನಗೆ ನೀನೇ ಸಾಟಿಯೆಂದು
ಬರೆಯ ಬೇಕಿದೆ!!

ಕಣ್ಣ ಅಕ್ಷಯದಲಿ ಒಮ್ಮೆ
ಸುಧೆಯ ಒಳೆಗೆ ಮುಳುಗುವಂತೆ
ನನ್ನ ಬಿಂಬ ಕಾಣುವಾಸೆ
ಎದುರು ಬಂದರೆ;
ಯಾವ ಅಡ್ಡಿ ಇಲ್ಲದಂತೆ
ಸಾಗುತಿಹುದು ಬಾಳ ಪಯಣ
ಎದುರು ಕಾದೆ ಎದುರಿಸೋಕೆ
ಮಧುರ ತೊಂದರೆ!!

ನಲ್ಮೆಯೊಂದೇ ಸಾಕು ನಮಗೆ
ಹೆಮ್ಮೆ ಬಾಳು ಸಾಗಿಸೋಕೆ
ಖಾಲಿ ಕಿಸೆಯ ಕಂಡು ಸಿಡುಕು
ಮೂಡ ಬಾರದು;
ನಿನ್ನ ಪೆಟ್ಟು, ನನ್ನ ಮುದ್ದು
ನಾಲ್ಕು ಗೋಡೆ ನಡುವೆ ಇರಲಿ
ಯಾವ ಕಾರಣಕ್ಕೂ ಆಚೆ
ಇಣುಕ ಬಾರದು!!

                         -- ರತ್ನಸುತ

ಪುನಃ ಬದುಕಲಿ

ಕ್ಷುಲ್ಲಕ ಕಾರಣಕೆ ಉಂಟಾದ ಅಂತರಕೆ
ಪೀಠಿಕೆ ನೀಡುವೆನು ಬರಲು ಬಳಿಗೆ
ಸತ್ತು ಕಟ್ಟಿದ ನಮ್ಮ ಪ್ರೇಮ ಗೋರಿಯ ಮೇಲೆ
ತೆರೆದುಕೊಂಡರೆ ಒಲಿತು ಹೂವ ಮಳಿಗೆ!!

ಇದ್ದು ಹೇಳದ ಮಾತು, ಕದ್ದು ಕೇಳಿದವಲ್ಲಿ
ಯಾವೊದೂ ಮುದ ನೀಡುತಿಲ್ಲವೇಕೆ?
ನೆರಳ ದೂರಾಗಿಸಿದ ಒಡಲ ಬೇಗುದಿಯಲ್ಲಿ
ಜೀವಂತ ಕಣಗಳನು ಹುಡುಕ ಬೇಕೆ?!!

ನಂಬಿದ ತೋಳುಗಳ ಮದ ಇಳಿಸಲೇ ಬೇಕು
ವಿಷಕಾರಿ ವಿಷಯಗಳ ಹಂಚಿಕೊಂಡು
ಕೊನೆವರೆಗೂ ನಕ್ಕಂತೆ ನಟಿಸಬೇಕಿದೆ ನಾವು
ಗೊತ್ತಾಗದಂತೆ ಕಣ್ತುಂಬಿಕೊಂಡು!!

ಬಲವಾದ ಪೆಟ್ಟೊಂದು ಜ್ವರ ತರಿಸಿ ಬಿಟ್ಟದ್ದು
ಬೆನ್ನ ಹಿಂದೆ ಮರೆಸಿ ಇಟ್ಟ ಗಾಯ
ನಿನ್ನ ಕಣ್ಣೊಳು ನಾನು, ನನ್ನ ಕಣ್ಣೊಳು ನೀನು
ಕರಗಿ ಹೋದರೆ ಉಳಿವುದೆಮ್ಮ ಪ್ರಾಯ!!

ಅಂಗೈಯ್ಯ ಮೇಲೊಂದು ಹಸ್ತಾಕ್ಷರದ ಗುರುತು
ಒಪ್ಪಂದ ಮುರಿದರೂ ಕರಗದಂತೆ 
ಕೆನ್ನೆ ತೋಯ್ದರೂ ಇಲ್ಲಿ ನಿರ್ವಾಣ ಸ್ಥಿತಿಯಲ್ಲೇ
ಉಳಿದೆವೊಮ್ಮೆಯೂ ಹಾಗೆ ಒರೆಸದಂತೆ!!

ಮುಚ್ಚಿಡುವೆ ಸಾಕಾಗಿ, ಹೊತ್ತಿಸುವೆ ಬೇಕಾಗಿ
ಪ್ರೇಮ ಪತ್ರಗಳಾವೂ ಇನ್ನು ಸಲ್ಲ
ಉರುಳಿ ಬಿದ್ದ ಬಾಳನಿನ್ನೊಮ್ಮೆ ಕಟ್ಟಿದರೆ
ಮತ್ತೆ ಹಿಂದಿರುಗಿದರೂ ಅಡ್ಡಿ ಇಲ್ಲ!!

                                        -- ರತ್ನಸುತ

ನೀ ಎಲ್ಲಿರುವೆ?

ಕಿಸೆಯಲ್ಲೇ ಉಳಿದ ನೂರಾರು ಹಾಡುಗಳು
ಅಂಗ ವೈಕಲ್ಯಕ್ಕೆ ತುತ್ತಾಗ ಬಹುದೇ?
ಊರುಗೋಲಂತೂ ಸಿಕ್ಕಾಯ್ತು ಒಲವಲ್ಲಿ
ಮೂಖ ಮನಸು ಈಗ ಬಾಯಿ ಬಿಡಬಹುದೇ?!!

ಸ್ಥೂಲ ಹೃದಯದ ಆಳದಾಳದಲ್ಲಿಯ ಮಾತು
ಹೊರಚೆಲ್ಲುವ ಮುಂಚೆ ಮಾಸಿದಂತಾಗಿ,
ಮತ್ತೆ ಸಾಗಿದೆ ಪಯಣ ಮತ್ತೂ ಆಳಕೆ ಈಗ
ಖುದ್ದು ಜೊತೆಯಾದ ನನ್ನೊಳಗ ಅನುರಾಗಿ!!

ಕಾಯುತ ಕಾಯುವುದು, ಬೇಡದೆ ಬೇಯುವುದು
ಎದೆ ಚಿಮಣಿ ಹೊರಗೆಲ್ಲ ವಿರಹದ್ದೇ ಸುದ್ದಿ
ಈಗಷ್ಟೇ ಸ್ಥಿಮಿತಕ್ಕೆ ಬಂದ ಒಲವ ಕೂಸು
ರಕ್ಷಣೆಗೆ ಬೇಡುತಿದೆ ನಿನ್ನ ಹಳೆ ಕೌದಿ!!

ಹಠಮಾರಿ ಆಸೆಗಳು, ಹದ್ದು ಮೀರಲು ನಿಂತು
ಜಿದ್ದಾ-ಜಿದ್ದಿಯಲಿ ಸೋತಿಹುದು ಚಿತ್ತ
ಒಂದಲ್ಲ ಎರಡಲ್ಲ ಕೋಟಿ ಹೆಜ್ಜೆ ದಾಟಿ
ಧಾವಂತ ಪಯಣವಿದು ನಿನ್ನೂರಿನತ್ತ!!

ಮೈ ಸವೆದ ಜಾಡು, ಮೈ ಮುರುದ ಹಾಡು
ತಲುಪಲೆಂತೋ ನಿನ್ನ ಹುಟ್ಟೂರು ಮನೆಯ
ನೀನೇ ಎಂಬುದಕೆ ಕನಸ ಕುರುಹನು ಬಿಟ್ಟು
ಬೇರೆ ಏನಾದರೂ ಸುಳುವನ್ನು ಕೊಡೆಯ!!

ನಡುದಾರಿಯಲಿ ತಂಪು ನೆರಳ ಹೊಂಗೆ ಮರಕೆ
ನಿನ್ನ ಹೆಸರಿನ ಗುರುತ ಕೊಟ್ಟು ಬಂದಿರುವೆ
ದಾರಿ ತಪ್ಪುವ ಮುನ್ನ ಕಾಣು ಕಣ್ಣಿಗೆ ಒಮ್ಮೆ
ಓ ಮಾಯ ಕನ್ನಿಕೆ, ಹೇಳು ಎಲ್ಲಿರುವೆ?

                                             -- ರತ್ನಸುತ

ಝುಮ್ಮಯಂ

ಒದ್ದೆ ತುರುಬನು ಬಿಗಿದು
ಕಣ್ಣ ಬೆಳಕಲ್ಲದ್ದಿ
ಹಾಲು ಕೆನ್ನೆ ಧರಿಸಿ
ಸೀಳೋ ನಗುವ ಚೆಲ್ಲಿ
ಬರಬೇಡ ನೀ ಹಾಗೆ
ನನ್ನ ಬಳಿಗೆ,
ಮೂಗುದಾರ ಕಿತ್ತು
ಶರತ ಚಳಿಗೆ!!

ಚರಣ ತಾಕಿಸುವಾಗ
ನಡುವ ಬಾಗಿಸಿ,
ಕಸೂತಿ ಕಲೆಯ
ರವಿಕೆ ತೋರಿಸಿ,
ಕಾಲೆಳೆವೆಯೇನು? ನೀ
ಮನ ಸೆಳೆವೆಯೇನು?
ಧ್ಯಾನ ಭಂಗಕೆ ನನ್ನ
ಈಡು ಮಾಡಿ!!

ಕಡುಗತ್ತಲ ಶಯ್ಯೆ
ಸುತ್ತ ಮಿಂಚುವ ಪರದೆ
ಸೊಳ್ಳೆ ಕಡಿದರೂ ಮುಧವು
ತಲೆ ದಿಂಬಿಗೂ ಒಲವು;
ನರ ತಂತಿ ಮೀಟದೆಯೇ
ಹರಿದ ಇಂಚರ ಗುಚ್ಚ
ತಳಮಳದ ಉಂಗುಟವು
ನಿರ್ವಿಕಾರ ಕುಂಚ!!

ಶುದ್ಧ ಸುಧ
ಪುಷ್ಕರಿಣಿಯ
ತೆರೆ ಮರೆಯ ಪೇಯ;
ಜಯ ಜಯ ಜಾಯೇ
ಜರ್ಜರಿತ ಮಾಯೆ
ಸುರತ ಸುರ ತಾಯೇ;
ಅಂಬೆಗಾಲಿಗೂ ನೋವು
ಪಾದಂಗಳ್ ಬಲಿತಿರೆ!!

ಅಧರ ಹೃದಯದ ಉದರ
ತುಂಬಲೆಂತು ಸಾಧ್ಯ,
ಕೊಡಗಟ್ಟಲೆ ಹಸಿವು
ಬಿರಿದ ಬಾವಿ;
ಬತ್ತಿ ಅಂಚಿನ ಚೂಪು
ಬೆಂಕಿ ಸೋಕದ ಉರುಯು
ವಿರಹದೆಣ್ಣೆಗೆ ಅಲ್ಲಿ
ಜ್ವರದ ತಾಪ!!

ಹೂವ ಕೊನೆ ಉಸಿರು
ಸಾಲು ಶವ ಯಾತ್ರೆ
ಹೂವಿಗೆ ಹೂವೇ,
ನಾರಿಗೂ ಹೂವೇ;
ಮುಟ್ಟಿ ನೋಡಲು ಹಣೆ
ಒಲೆಯ ಮೇಲಿನ ಹೆಂಚು,
ತುಟಿ ಮೇಲೆ ಹಿಂಗದ
ಮಂಜು-ಮುತ್ತು!!

                 -- ರತ್ನಸುತ

ನಾನಲ್ಲ್ಲದ ನಾನು

ವಾಚಾಳಿ ಸಾಲುಗಳು
ನನ್ನವಾಗಿರಬಹುದು
ನಾನೇನು ಪ್ರಖ್ಯಾತ ಕವಿಯಲ್ಲ;
ಬರಿ ಬೊಗಳುವ ದಾಸ 
ನಾನಾಗಿರಬಹುದು
ಆದರೆ ದಿಕ್ಕೆಟ್ಟ ಪಾಡಲ್ಲ!!

ನನಗಂತ ಯಾವೊಂದೂ
ಸ್ವಂತಿಕೆ ಇರದಿರಲು
ನಾನಿದ್ದೂ ಇಲ್ಲವಾದವನಲ್ಲ;
ನನ್ನ ಹೆಸರು ಎಲ್ಲೂ
ಪ್ರಚಲಿತವಾಗಿಲ್ಲ
ಹಾಗಂತ ಆಗಂತುಕ ಅಲ್ಲ!!

ಉಪ್ಪರಿಗೆ ಮೇಲಿಂದ
ಪರಪಂಚ ಕಂಡವನು
ಎವರಸ್ಟಿಗಾಸೆ ಪಟ್ಟವನಲ್ಲ;
ಇದ್ದಂತೆಯೇ ಖುಷಿ
ಹೊಂದಿದವ ನಾನೆಂದೂ
ದಿ ಬೆಸ್ಟು ಆಗುವ ಮನಸಿಲ್ಲ!!

ಮನೆ ಮಟ್ಟಿಗೆ ಚೂರು
ಒಳ್ಳೆ ಹುಡುಗ ನಾನು
ಹೆಸರಿಟ್ಟು ಆಡಿಕೊಂಡವರಿಲ್ಲ;
ಈ ಬೀದಿಯ ಬದಿಗೆ
ನನ್ನಂಥವನೊಬ್ಬ
ಇರುವಂಥ ಮಾಹಿತಿ ದೊರೆತಿಲ್ಲ!!

ಚಟವುಂಟು ನೂರೆಂಟು
ಹಠ ಗೆಲ್ಲಿಸುವ ಗುಟ್ಟು
ಬಿಟ್ಟುಗೊಡುವ ವಿದ್ಯೆ ಕಲಿತಿಲ್ಲ;
ಎಳೆಸಾದ ತಲೆಯೊಳಗೆ
ಸೊಗಸಾದ ಕನಸುಗಳು
ಈಡೇರಿಸೋ ಶಕ್ತಿ ನನಗಿಲ್ಲ!!

ನಾನಲ್ಲ ಹಿತವನು
ಅಹಿತಕರನೂ ಅಲ್ಲ
ಸ್ವಾವಲಂಬನೆ ಬಿಟ್ಟು ಬೇರಿಲ್ಲ;
ಇರದುದ್ದಕೆ ಅತ್ತು
ಇದ್ದುದ್ದಕೆ ಬೀಗಿ
ಸಮತೋಲನವ ಎಂದೂ ತಪ್ಪಿಲ್ಲ!!

ನನ್ನವರು ನೂರಾರು
ಅದರಾಚೆ ಇನ್ನೂರು
ಮತ್ತಾರು ಇದ್ದಾರೋ ಗೊತ್ತಿಲ್ಲ;
ಹೀಗೇ ಇರಬೇಕು
ಅಂದುಕೊಂಡವರಾರೂ
ಈ ತನಕ ಬಾಳಲ್ಲಿ ಸಿಕ್ಕಿಲ್ಲ!!

                        -- ರತ್ನಸುತ

ಹರಿಶ್ಚಂದ್ರರು

ಹೆಣ ಕೊಯ್ಯುವ ಕಸಾಯಿಗೆ
ಹಸ್ತದ ನಾಜೂಕುತನ
ಎದೆಯ ಬಂಡತನ
ಕರುಳ ತಾಯ್ತನ
ಸುಕ್ಕು ಹೆಗಲ ಒರಟುತನಗಳು
ಅರಿವಿಗೆ ಬರುವುದುಂಟೇ?!!

ಉದರದಲ್ಲಿ ಸಿಕ್ಕ ದುರ್ಮಾಂಸವ
ಕೊನೆ ಬೆರಳಲ್ಲಿ ಹಾಗೆ ತೀಡುತ್ತ
ಕಳೆದ ರಾತ್ರಿ ಬೇಯದ ಮುದ್ದೆಯೊಂದು
ಬಿರಿಯಾನಿ ಗುಡ್ಡೆಯೊಳಗೆ ಸಿಕ್ಕದ್ದು ನೆನಪಾಗಿ
ಅಸಡ್ಡೆ ಮೂಡುತ್ತದೆ!!

ಇಡಿ ದೇಹದ ಚರ್ಮ ಸುಲಿದು
ಯತಾವತ್ತಾಗಿ ಮತ್ತೆ ಹೊಲಿದವನು
ಈ ತನಕ ತಾನು 
ಕಳಚಿ ಬಿದ್ದ ಶರ್ಟಿನ ಗಿಂಡಿಯ
ಹೊಲಿದುಕೊಳ್ಳುವಷ್ಟು ಪುರುಸೊತ್ತಿಲ್ಲದವ!!

ಅರೆ ಬೆಂದ ತೊಗಲಿಗೆ
ಚೂರಿ ಹಾಕುವ ಮುನ್ನವೇ
ಕಿತ್ತು ಬರುವುದನ್ನು ಕಂಡವನಿಗೆ;
ಬಯಕೆ ಅರಿತ ಮಡದಿ
ಸಾರಾಯಿ ಬುಡ್ಡಿ ಜೊತೆಗೆ
ಚಿಕನ್ ಕಬಾಬಿನೊಡನೆ
ಹೊಸ ಸೀರೆ, ಮೊಲ್ಲೆ ಮುಡಿದು
ಕಾಯುವೆನೆಂದದ್ದು ನೆನಪಾದಂತೆ
ನಸುನಕ್ಕು ಸುಮ್ಮನಾಗುತ್ತಾನೆ!!

ಹುಟ್ಟೇ ಕೊನೆಯಾದಮೇಲೆ
ಹುಟ್ಟು ಮಚ್ಚೆಗಳಿಗೆಂಥ ಮಾನ್ಯತೆ;
ಲೆಕ್ಕ ಹಾಕುವುದಿರಲಿ
ಸುತಾರಾಮ್ ಗಮನಿಸುವುದೂ ಇಲ್ಲ;

ಸತ್ತು ಪ್ರಶಾಂತವಾದ ಕಣ್ಣು;
ಆಗಾಗ ರೆಪ್ಪೆ ಸರಿಸಿ
ಮೇಲ್ಚಾಚಿದ ಗುಡ್ಡೆಗಳಿಗಳ ಕಂಡು
ಗಡ್ಡ ಗೀರಿಕೊಳ್ಳುತ್ತಾನೆ!!

ಬೀಡಿ ಘಾಟಿನ ನಂಟು
ಬಾಯ್ಸುಟ್ಟರೂ ಬಿಡಿಸಲಾಗದ್ದು;
ಸ್ವಚ್ಛೆದೆಯ ಶ್ವಾಸಕೋಶದೊಳಗೆ
ತನ್ನ ಹೆಮ್ಮಯ ಪತಾಕೆಯ ನೆಟ್ಟು
ಗಹಗಹಿಸಿ ನಗುತ್ತಾನೆ
"ಸಾಯೋ ಮುಂಚೆ ಹಾಳಾಗ್ರೋ,
ಬದ್ಕಿರೋದೇ ಹಾಳಾಗಕೆ!!"
ಸಾರಿ, ಸಾರಿ ನುಡಿದು!!

"ಹಂದರಕ್ಕೂ, ಮಂದಿರಕ್ಕೂ
ವ್ಯತ್ಯಾಸವೇನಿಲ್ಲ
ಎರಡೂ ಹುಡುಕಿದರೆ ಸಿಗುವಂತವು;
ಮಂದಿರದಲ್ಲಿ ದೇವರಿಲ್ಲ,
ಹಂದರದಲ್ಲಿ ಜೀವವಿಲ್ಲ....."
ತತ್ವಶಾಸ್ತ್ರ ಪ್ರವೀಣನೀತ!!

ವಾರಸುದಾರ ಸತ್ತು ಹತ್ತು ವರ್ಷ
ಮಡದಿ ಕೈ ಕೊಟ್ಟು ಇಪ್ಪ್ಪತ್ತು ವರ್ಷ
ನೆಂಟ-ಇಷ್ಟರೆಲ್ಲ ಎಂದಾದರೊಮ್ಮೆ
ಇವನ ಬೇಟಿಯಲ್ಲೇ ಕೊನೆಯಾಗುವರು;
ಮಣ್ಣು ಮುಕ್ಕುವ ಮುನ್ನ,
ಸುಟ್ಟು ಬೇಯುವ ಮುನ್ನ!!

                               -- ರತ್ನಸುತ

ಬೊಂಬಾಟ್ ಭಾನುವಾರ

ಮುಗಿಲೆಲ್ಲ ಕರಿ ಕಂಬಳಿ ಹೊದ್ದು
ದಿನವೆಲ್ಲ ತೂಕಡಿಸುತಿದೆ
ಸಂಜೆ ವೇಳೆಗೆ ಆಕಳಿಸೆದ್ದು
ಧರೆಗಿಳಿವ ಸೂಚನೆಗಳಿದೆ!!

ಒಣಗಲು ಹಾಕಿದ ವಾರದ ಬಟ್ಟೆಗೆ
ಬಿಸಿಲಿನ ಯೋಗ ಸಿಗುತಿಲ್ಲ
ಮೂದಲಿಸುತ್ತಿದೆ ಹಿತ್ತಲ ಹೂವು
ನಗುವಿಗೆ ಕಾರಣ ಇನ್ನಿಲ್ಲ!!

ಯಾವುದೋ ಸೋಗಲಿ ಬೀಸುವ ಗಾಳಿ
ಚಳಿಯಲಿ ಬೇಯಿಸಿ ಬಿಡುತಿತ್ತು
ಆಷಾಢದ ಏಕಾಂತದ ಹುಣ್ಣಿಗೆ
ನಿಂಬೆ ಹುಳಿ ಹಿಂಡುವ ಹೊತ್ತು!!

ಕೊಡೆಗಳು ಉಳಿದವು ಕೆಲಸಕೆ ಬಾರದೆ
ಬಾಗಿಲಲಿಗೋ-ಅಗೋ ಎಂದು
ರೆಪ್ಪೆಗಳೋ ಬಿಗಿದಪ್ಪಿವೆ ಕೂಡಲೆ
ವಿರಹದ ತಾಪಕೆ ಮನ ನೊಂದು!!

ಉಗುರು ಕತ್ತರಿಸಿದ ಕರಗಳಿಗೆ
ಬೆಳ್ಳುಳ್ಳಿಯ ಬಿಡಿಸುವ ಶಾಪ
ಕಣ್ಣೀರಿಗೆ ಕಾರಣವಾದವು
ಬೆಲೆ ಏರಿದ ಈರುಳ್ಳಿಯ ಕೋಪ!!

ನಾಟಿ ಕೋಳಿಯ ಬಸಿದ ಸಾರು
ನಾಲಿಗೆ ಸೊರಗುಟ್ಟಿತು ಹಾಗೆ
ಮುದ್ದೆ ಉಂಡು ಹೊಡೆದಲು ನಿದ್ದೆ
ಆ ಸುಖ ಬಣ್ಣಿಸಲಿ ಹೇಗೆ?!!

                              -- ರತ್ನಸುತ 

ಮರುಭೂಮಿ ಪಯಣ

ಮರಳು ಯಾಮಾರಿಸುತ್ತಿದೆ
ಬಿಟ್ಟ ಹೆಜ್ಜೆಗಳ ನುಂಗಿ;
ಈಗಿದ್ದ ದಾರಿಯ ಇಲ್ಲವಾಗಿಸಿ
ಮತ್ತೊಂದರ ಸೃಷ್ಟಿಸುತ್ತಿದೆ
ಹಿಂಬಾಲಕರಿಗಾವ ಸುಳುವನ್ನೂ
ಬಿಟ್ಟುಗೊಡದಂತೆ!!

ನಾ ಮಲಗಿದ ಜಾಗದಲ್ಲೇ
ಜೀವ ಸಮಾಧಿ ನಿರ್ಮಿಸಿದ
ಅಮಾನುಷ ಮರಳ ಗುಡ್ಡೆಗೆ
ಗಾಳಿಯ ವಿಪರೀತ ಬೆಂಬಲ;
ದಿಬ್ಬದ ಮೆಲೆ ನೆಟ್ಟ 
ವಿಜಯ ಪತಾಕೆ
ನೆಲಕ್ಕುರುಳಿ ಮಣ್ಣು ಮುಕ್ಕುತ್ತಿದೆ!!

ನೆತ್ತಿ ಸುಡುವ ಸೂರ್ಯನಿಗೆ
ಬೆಂಗಾವಲಾದ ನೀಲಿ ಆಕಾಶ
ಇದ್ದೆಲ್ಲ ಮೋಡಗಳನ್ನೂ ಹಿಂಡಿ
ದಣಿದವನಿಗೆ ಒದಗಿಸುತ್ತಿತ್ತು;
ಇತ್ತ ನನ್ನ ಹೊತ್ತ ಭೂಮಿಗೆ
ತೊಟ್ಟನ್ನೂ ಒಪ್ಪಿಸದಂತೆ!!

ಕಳ್ಳಿ ಗಿಡಗಳ ಮಾಂಸ
ಅದೆಷ್ಟು ಚೈತನ್ಯದಾಯಕ?!!
ಮಸಣದ ಪಾಲಾದರೂ
ಜೀವಂತಿಕೆ ಕಾಪಾಡಿಕೊಂಡ ಅವು
ನಿಸ್ವಾರ್ಥ ಜೀವಿಗಳು;
ಆತ್ಮ ರಕ್ಷಣೆಗೆ ಬೆಳೆಸಿಕೊಂಡ
ಮುಳ್ಳುಗಳ ಹೊರತು ಪಡಿಸಿ!!

ಹಣೆಗೆ ಅಂಗೈಯ್ಯನಿಟ್ಟು
ದೂರ-ದೂರ ನೋಡಿದಷ್ಟೂ
ಕಂಡುಕೊಂಡ ದಾರಿಗಳನೇಕ;
ಊರುಗೋಲಿಗೆ ಗೆಜ್ಜೆ ಕಟ್ಟಿ
ಹೆಜ್ಜೆಜ್ಜೆಗೂ ಎಚ್ಚರಗೊಳ್ಳೂತ್ತೇನೆ
ನಿರಾವಲಂಬಿತನಾಗಿ!!

ಕಣ್ಣಿನ ಪೊರೆಯಾಚೆ ಕಂಡ
ವಿಶಾಲ ಪ್ರಪಂಚಕ್ಕೆ 
ನನ್ನ ತತ್ವ ನುಡಿ
ಮಸಿ ಬಳಿದ ಹಾಳೆ;
ಎಂದಾದರೊಮ್ಮೆ ಕಸುವಾಗುವಂತೆ
ಇಲ್ಲ ಕಸವಾಗುವಂತೆ!!

                              -- ರತ್ನಸುತ

ಅಂತಿಮ ತಿರುವು

ಹೊರೆ ಹೊತ್ತ ಹೆಗಲ ಮೇಲೆ
ಚಾಚಿ ಮಲಗಿದವರ
ನೆರವೇರದ ಕನಸುಗಳ ಭಾರ;
ಮಿಥ್ಯ ಲೋಕದೊಳಗೆ
ಸತ್ಯ ಶೋಧದ ನಿಮಿತ್ತ
ಕಣ್ಣು ಮುಚ್ಚಿ ಸಾಗಿದವರ
ಕೆಸರ ಹೆಜ್ಜೆಯ ಸ್ವಚ್ಛಗೊಳಿಸಿ
ಕೈಗಳ ಎದೆಗಾನಿಸಿದೆವು!!

ಹೆಬ್ಬೆಟ್ಟು, ಹುಟ್ಟು ಮಚ್ಚೆ ಗುರುತು
ಎತ್ತರ, ತೂಕ, ಸುತ್ತಳತೆಗಳ
ದಾಖಲಿಸಿ ಪಡೆದ
ಗುರುತಿನ ಚೀಟಿ ಇರಲಿ,
ಹೊರಟ ಗುರಿತಾಣದ
ಲಿಖಿತ ವಿಳಾಸವನ್ನೂ ಜೀಬಿಗಿರಿಸದೆ
ಬೆತ್ತಲು ದೇಹಕ್ಕೆ ತಿಳಿ ಬಟ್ಟೆ ಸುತ್ತಿ
ದತ್ತಿ ಹತ್ತಿಯ ಮೂಗಿಗಿಟ್ಟೆವು!!

ಎಲ್ಲಿದ್ದವೋ ಹಸಿದ ಕಾಗೆಗಳು;
ಹಿಡಿ ಅನ್ನಕ್ಕೂ ಗತಿ ಇಲ್ಲದವಂತೆ
ಕಾಲು-ತಲೆ ಭಾಗವನ್ನ
ಹೆಕ್ಕಿ, ಕುಕ್ಕಿ ತಿನ್ನುವಾಗ
ಒಳಗಿನ ದೇವರಿಗೆ ಎಚ್ಚರವಾಗದಿದ್ದರೆ
ಅದೇ ಹೂತವರ ಪುಣ್ಯ;
ಕಲ್ಲು ಕಲ್ಲಿಗೂ ಇಲ್ಲಿ ಹೆಸರಿದೆ,
ಚಿಗುರೋ ಮುಳ್ಳಿಗೂ ಕ್ಷಮೆಯಿದೆ!!

ಒಮ್ಮೆ ಎದೆಗೆ ಕಿವಿಯೊಡ್ಡಿ
ಕೊನೆ ಮಾತುಗಳ ಆಲಿಸುವ;
ಛೇ ತಗೆ, ಮೂರ್ಖತ್ವದ ಪರಮಾವದಿ!!
ನೆರಳು ದಾಟಿ ಹೊರಟ ಮೇಲೆ
ಬಾಗಿಲನೇನು ಕೇಳುವುದು
ಹೊಸಲಿನ ಪಿಸುಗುಟ್ಟುಗಳ?
ಸುಮ್ಮನಿರುವುದೇ ಲೇಸು
ತನ್ನ ಪಾಡಿಗೆ ತನ್ನ ಬಿಟ್ಟು!!

ಆಗಾಗ ತೂಕಡಿಸಿಯೂ
ಮಲಗದೆ ತಲೆ ಕಾಯ್ದ ಹಣತೆ
ಈಗಲೂ ಬೆಳಗುತಿದೆ
ಕತ್ತಲ ಹಜಾರವ ದಿಟ್ಟಿಸುತ್ತ;
ಚಳಿ ಬಿಡಿಸಿಕೊಂಡ ಒಲೆ
ಚಿಮಣಿಗೂ ಜೀವ ನೀಡಿತು,
ಗಂಜಿ ಉಕ್ಕಿ ಚೀರುತಿದೆ
ಜೋಡಿ ಒಲೆಯೆಡೆಗೆ ಕೆಂಡವ ಸರಿಸಲು!!

                                     -- ರತ್ನಸುತ

ಸಾವಿನ ಗುಟ್ಟು

ಗುಟ್ಟು ರಟ್ಟಾಗುವ ವೇಳೆ
ಬಯಲೆಲ್ಲ ಕಣ್ಣೀರ ಸುದ್ದಿ
ನಾನು ನನ್ನವುಗಳೆಲ್ಲ
ತಾಜಾ ಹೂಗಳ ಕೆಳಗೆ ರದ್ದಿ

ಅಲ್ಲಿ ಗೋಳಿಟ್ಟ ಹೃದಯಗಳಿಗೆ
ಸಾಂಬ್ರಾಣಿಯ ಹೊಗೆ
ಊದಿಕೊಂಡ ಕಣ್ಗುಡ್ಡೆಗಳೊಳಗಿಂದ
ನೆನಪುಗಳ ಒದ್ದೆ ಪಯಣ

ನೀಳ ಮೌನದ ನಡುವೆ
ಆಗಾಗ ಇಣುಕಿ ಜಾರಿಕೊಳ್ಳುವ
ಬಿಕ್ಕಳಿಕೆ ಸದ್ದು;
ತುಟಿಗಳೇನೂ ನುಡಿಯದೆ 
ಎಲ್ಲವೂ ನುಡಿದಂತೆ!!

ಮಣ್ಣಿನ ವ್ಯಾಮೋಹಕೆ
ಕೊನೆಗೂ ತೆರೆ ಎಳೆದ ಮಣ್ಣು;
ಉಸಿರಿನ ತಕರಾರೂ ಇಲ್ಲದ
ಚಿರ ನಿದ್ದೆಗೆ 
ಸಹಸ್ರ ಕಾವಲಿನ ಕಣ್ಣು!!

ಹೆಸರಿಗೂ ಅಲ್ಪ ವಿರಾಮ;
ಜನ್ಮಗಳ ಪಾಲಿನಲ್ಲಿ
ಒಂದು ಗೀಟಿಗೆ ಕಾಟು ಹೊಡೆದು
ಮುಂದೊಂದರ ತಯಾರಿಗೆ
ನಾಂದಿ ಹಾಡಿದ ಜವರಾಯ!!

ಸುಕ್ಕುಗಟ್ಟಿದ ಕೆನ್ನೆಗೆ
ಬೊಗಸೆ ನೀರ ಪ್ರೋಕ್ಷಣೆ
ನಾಳೆಗಳ ಕೌತುಕಕೆ
ತೊರೆದವರ ಪಟವ ಹೊತ್ತ
ತಡೆ ಗೋಡೆಯ ವೀಕ್ಷಣೆ!!

                    -- ರತ್ನಸುತ

ಚಿತೆ ಬೆಂಕಿ ಬೆಳಕಲ್ಲಿ

ಚೂರೇ ತೆಗೆದ ಕಿಟಕಿಯ ನೆರವಿಗೆ
ತಂಗಾಳಿಯ ಪಿಸು ಮಾತಿನ ನಮನ
ತಾರೀಕನು ಧಿಕ್ಕರಿಸಿ ಹೊರಳಿದೆ
ಪಂಚಾಂಗಕೆ ಮತ್ತೆಲ್ಲಿಯೋ ಗಮನ

ಬಾಚಿ ಉದುರಿದ ಕುರುಳಿನ ಸುರುಳಿಯ
ಎರಡು ಗೋಡೆಯ ಮೂಲೆ ಹಿಡಿದು
ಪೂರ್ತಿ ಮುಗಿಸದ ಪುಸ್ತಕ ಹಾಳೆಯ
ವಜೆಯಂತೆ ಕನ್ನಡಕ ತಡೆದು

ಪಲ್ಲಂಗದ ಪಕ್ಕದ ಕಾಗದಕೆ
ಹಸ್ತಾಕ್ಷರ ಬೀಳದೆ ಒದ್ದಾಟ
ಬೇಡದ ಪದಗಳ ಬರಹವ ಖಂಡಿಸಿ
ಒಳಗೊಳಗೆ ತುಸು ತಿಳಿ ಗುದ್ದಾಟ

ಪರದೆಯ ಸರಿಸುವ ಸರಸದ ಆಟಕೆ
ಕಿಟಕಿ ಕೋಲುಗಳ ತಡೆಯಾಜ್ಞೆ
ಕನ್ನಡಿಯೊಳಗೆ ಸಿನಿಮಾ ತಾರೆಯ
ಎಂದೂ ನಿಲ್ಲದ ಪೋಲಿ ಸನ್ನೆ

ಎಣ್ಣೆ ಬಿಡಿಸಿದ ಬಾಗಿಲ ಅಳಲಿಗೆ
ನಿದ್ದೆಗೆ ತಡೆಯೊಡ್ಡುವ ಕೋಪ
ಸ್ವಪ್ನಗಳೆಲ್ಲವೂ ಸಾವನಪ್ಪಲು
ಹಗಲುಗನಸುಗಳ ಹಿಡಿ ಶಾಪ

ರೆಪ್ಪೆಯ ಸೋಕಿದ ಬೆಳಕಿನ ಕಿರಣ
ಹೆಣಗಳ ಚಿತೆಗೆ ಕೊಳ್ಳಿಯನಿಟ್ಟೋ
ಹಿಂದೆಯೇ ನೀಗಿತು ಹಾಳೆಯ ಹಸಿವು
ಇರಿಸಿದೆ ಜೇಬಿಗೆ ಮಡಿಸಿಟ್ಟು!!

                                 -- ರತ್ನಸುತ

ನಾ ಹುಚ್ಚನಲ್ಲ

ಹೆಜ್ಜೆಜ್ಜೆಯೂ ಭೂಮಿಯ ಕೊನೆಯೆಂದು
ಆತಂಕಗೊಂಡ ಮನಸಿನ ಹಿಂದೆ
ಅದಕ್ಕೂ ಮಿಗಿಲಾಗಿ ಭೀತಿಗೊಳಗಾದ
ನೆರಳಿದೆಯೆಂಬುದು ಅರಿವಿಗೆ ಬರುವ ಮುನ್ನ
ಎಡವಿಕೊಂಡ ಉಂಗುಟದ ಉಗುರು
ಪತ್ತೆ ಹಚ್ಚಲಾರದಷ್ಟು ದೂರ ಹಾರಿತ್ತು;
ತುಳಿದ ನೆರಳಿಗೂ ಅರ್ಥವಾಗಲಿಲ್ಲ
ಬೆರಳ ನೋವು, ತನ್ನ ಪೇಚಾಟದ ನಡುವೆ!!

ಭೂಮಿಗೆ ಕೊನೆಯಿಲ್ಲವೆಂದರಿಯಲು
ಒಂದಿಡಿ ಸುತ್ತು ಸುತ್ತಿ ಬರಬೇಕು;
ಅರ್ಧ ಆಯಸ್ಸು ಕಳೆದು ಅರಿತ ಸತ್ಯವ
ಸಾರ ಹೊರಟರೆ, ನಿರೂಪಿಸು ಎನ್ನುತ್ತಾರೆ;
ನಿರೂಪಿಸಲು ಮತ್ತೊಮ್ಮೆ ಸುತ್ತಬೇಕು
ಅವರೆಲ್ಲರನ್ನೂ ಬೆನ್ನಿಗೆ ಕಟ್ಟಿಕೊಂಡು;
ಸುಮ್ಮನಿದ್ದಿದ್ದರೆ ಸಾಕಾಗಿತ್ತು,
ಇದೀಗ ಮಾರ್ಗ ಮಧ್ಯೆ ಮುಕ್ಕಾಲು ಸತ್ತಿದ್ದೇನೆ!!

ಕುಷ್ಟ ರೋಗಿಯೊಬ್ಬನ ಹೆಣವ
ಹೂಳಲೊಲ್ಲದೆ, ಸುಡಲೊಲ್ಲದೆ
ಭೂಮಿ ಅಂಚಿಗಿ ಕೊಂಡೊಯ್ದು
ದಬ್ಬಲೆಂದು ಹೊರಟಿತ್ತು ಮೆರವಣಿಗೆ;
ಸಿಕ್ಕ ಸಿಕ್ಕವರಿಗೆ ಮತ್ತೆ ಸಿಕ್ಕು
ದಾರಿ ತೋರಿದವರೊಳಗೆ ನಾನೂ ಒಬ್ಬ;
ಮತ್ತೆ ಸಿಕ್ಕರೆ ತಡೆದು ನಿಲ್ಲಿಸಬೇಕು
ಹೆಣವ ಹೊತ್ತವರು ಹೆಣವಾಗುವ ಮುನ್ನ!!

ಧರ್ಮ ಭ್ರಷ್ಟನೆಂದು ಗಲ್ಲಿಗೇರಿಸಿದ
ಅದೆಷ್ಟೋ ತತ್ವಜ್ಞಾನಿಗಳ ಸ್ಮರಿಸುತ್ತ
ಮತ್ತೆ ಮತ್ತೆ ಸಾರುತ್ತೇನೆ
"ಭೂಮಿ ದುಂಡಾಗಿದೆ"
"ಅಸ್ಥಿರ ಸೂರ್ಯನ ಸುತ್ತ 
ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತ
ಉರುಳುತ್ತ ಹಗಲಿರುಳು
ಕಣ್ಣಾಮುಚ್ಚಾಲೆ ಆಟವಾಡುತ್ತ!!

ನಾ ಅರಿತ ಸತ್ಯ ತಡವಾಯಿತೇ?!!
ಜಗ ಜಾಹೀರಾದ ಸುದ್ದಿಯ ಹೊತ್ತು
ಭೂಮಿಯ ಸುತ್ತಿ ಸುಸ್ತಾಗಿದ್ದೇನೆ
ಉಂಗುಟದ ಉಗುರ ಹುಡುಕುವ ನೆಪದಲ್ಲಿ;
ಎಲ್ಲರೂ ನನ್ನ ಹುಚ್ಚನೆಂದರೂ
"ಹುಚ್ಚನಿಗೆ ಮಾತ್ರ ಜಗವೇ ಹುಚ್ಚರ ಸಂತೆ,
ತನ್ನೊಬ್ಬನ ಬಿಟ್ಟು;"
ಹೌದು, ನಾ ಹುಚ್ಚನಲ್ಲ!!

ಎಡವಿದ ಜಾಗಕ್ಕೇ 
ಇನ್ನೆಷ್ಟು ಬಾರಿ ಪೆಟ್ಟಾಗುವುದೋ!!
ಸುಮ್ಮನೆ ಒಂದು ಮೂಲೆ ಹಿಡಿದು
ತಟಸ್ಥನಾಗಬೇಕನಿಸುವಾಗಲೇ
ಒಬ್ಬ ಹುರುಳಿಲ್ಲದೆ ವಾದಿಸುತ್ತಾನೆ
"ಭೂಮಿಗೆ ಕೊನೆಯುಂಟು"
ಕಾಲಿಗೆ ಚಕ್ರ ಕಟ್ಟಿಕೊಂಡು
ಮತ್ತೆ ಹುಚ್ಚು ನಡಿಗೆಯಿಟ್ಟೆ!!

                       -- ರತ್ನಸುತ

ಇನ್ ಲವ್ ವಿತ್ ಅ ವಾಂಪೈಯರ್

ಕೃಷ್ಣಮೃಗದ ಕೊಂಬಿನಲ್ಲಿ
ಇರಿದೆಯಲ್ಲ ಬೆನ್ನಿಗೆ
ರಕ್ತಪಾತ ಕಂಡು ಮೂರ್ಛೆ
ಹೋಗಬೇಡ ಮಲ್ಲಿಗೆ!!

ಸಂಜೆ ಸತ್ತ ಬೆಳಕಿನಲ್ಲಿ
ಏನು ನಿನ್ನ ಅಬ್ಬರ
ಸಾವ ಉಣಿಸುವಾಗ ನಿನ್ನ
ಮುಖದಲೇನು ಆಧರ!!

ಒಲವ ಸರೋವರದಲೊಮ್ಮೆ
ನಿನ್ನ ಅದ್ದಿ ನೋಡಲೇ?
ಕೆಂಪು ಮೆತ್ತಿ ಚಂದವಲ್ಲ
ಹಾಲಗೆನ್ನೆ ಕೋಮಲೆ!!

ನಿನ್ನ ಸಿಟ್ಟು-ಸೆಡವು ಎಲ್ಲ
ಚಿಟಿಕೆ ಘಾಟು ಮಜ್ಜಿಗೆ
ಹಿತವ ನೀಡುವಂಥ ಉರಿ
ಉದರ ತಂಪಿನೊಟ್ಟಿಗೆ!!

ಕೋರೆ ಹಲ್ಲಿನಲ್ಲೂ ನೀನು
ಅಪ್ರತಿಮ ಸುಂದರಿ
ನೆತ್ತರೀರುವಾಗ ಕಾಣಬೇಕು
ನಿನ್ನ ವೈಖರಿ!!

ಪ್ರೇತ ಅನಿಸುತೀಯ ನೀನು
ಭೀತರಾದ ಮಂದಿಗೆ
ಪ್ರೀತಿ ಹೊರತು ಕಾಣದೇನು
ಈ ನನ್ನ ಕಣ್ಣಿಗೆ!!

ಹೃದಯ ನಿನ್ನದಾದಮೇಲೆ
ನೆತ್ತರೂನೂ ನಿನ್ನದು
ನಿನ್ನ ಸೇರಿ, ಪ್ರಾಣ ಬಿಡುವ
ಭಾಗ್ಯವಷ್ಟೇ ನನ್ನದು!!

                    -- ರತ್ನಸುತ

ಸೂತಕದ ಕವನ

ಹರಿವ ನೀರಿಗೆ
ಕಾಗದದ ದೋಣಿ ಮಾಡಿ
ಹರಿ ಬಿಡುವ ಮುನ್ನ
ಬೇಲಿ ಹೂಗಳ ಕಿತ್ತು
ಒಳಗೆಲ್ಲ ಹರಡಿಕೊಂಡೆ;
ಬರೆದುಕೊಂಡದ್ದು ಅಳಿವನಕ
ಯಾರಿಗೂ ಕಾಣದಿರಲೆಂದು!!

ಇದನರಿತ 
ಹೂವೊಳಡಗಿದ್ದ ಇರುವೆ
ಎಲ್ಲವನ್ನೂ ಬಯಲಿಗೆಳೆವ
ಹಂಬಲ ಹೊತ್ತು
ಓದುತ್ತಾ ಸತ್ತದ್ದು
ಪಾಪ ಆ ಹೂವಿಗೂ ಗೊತ್ತಾಯಿತು!!

ಮೊದಲೇ ಮರುಗಿದ
ಮೈಲಿಗೆ ಮೈಯ್ಯ ತಾನು
ಮತ್ತೊಂದರ ಸಾವಿಗೆ
ಸಿಂಗಾರಗೊಂಡಿದೆಯೆಂದರಿತು
ಹೂವಿಗೂ ಹೃದಯಾಘಾತ!!

ಶವಗಳ ಸಾಗಾಣಿಕೆ ನಡುವೆ
ಒಂದು ಸುಳಿಯಾದರೂ ಸಿಕ್ಕಿದ್ದರೆ
ತಳ ಸೇರುತಿತ್ತು ದೋಣಿ,
ದೊರೆವುದಾಗಿತ್ತು ಶಾಂತಿ
ಅಳಿವಿನಂಚಿನೆಲ್ಲಕ್ಕೂ!!

ನಿನ್ನ ಕೈ ಸೇರಬಾರದಿತ್ತಷ್ಟೇ ಹುಡುಗಿ!!
ಆದರೆ, ನೀನಾಗೇ ಹುಡುಕಿ ಬಂದೆ;

ಮೊದಲು ಇರುವೆ ಸತ್ತಿದ್ದ
ಹೂವ ಮುಡಿಗೇರಿಸಿಕೊಂಡು
ನೀನೂ ಮಡಿ ತಪ್ಪಿದವಳು,
ಆ ನಂತರ ಕಾಗದ ಬಿಡಿಸಿ
ಅಳಿದುಳಿದಕ್ಷರ ಓದುತ್ತ ಹೋದೆ;

ಕೊನೆಗೆ,
ಕೊನೆಯುಸಿರ ಸವರಿ ಕೂತು
ನನ್ನ ಮನಸಲ್ಲಿ
ಸೂತಕದ ಛಾಯೆ ಬಿಡಿಸಿ
ಹೆಣವಾಗಿಸಿದೆ ನನ್ನ!!

                        -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...