Tuesday 15 July 2014

ಸೂತಕದ ಕವನ

ಹರಿವ ನೀರಿಗೆ
ಕಾಗದದ ದೋಣಿ ಮಾಡಿ
ಹರಿ ಬಿಡುವ ಮುನ್ನ
ಬೇಲಿ ಹೂಗಳ ಕಿತ್ತು
ಒಳಗೆಲ್ಲ ಹರಡಿಕೊಂಡೆ;
ಬರೆದುಕೊಂಡದ್ದು ಅಳಿವನಕ
ಯಾರಿಗೂ ಕಾಣದಿರಲೆಂದು!!

ಇದನರಿತ 
ಹೂವೊಳಡಗಿದ್ದ ಇರುವೆ
ಎಲ್ಲವನ್ನೂ ಬಯಲಿಗೆಳೆವ
ಹಂಬಲ ಹೊತ್ತು
ಓದುತ್ತಾ ಸತ್ತದ್ದು
ಪಾಪ ಆ ಹೂವಿಗೂ ಗೊತ್ತಾಯಿತು!!

ಮೊದಲೇ ಮರುಗಿದ
ಮೈಲಿಗೆ ಮೈಯ್ಯ ತಾನು
ಮತ್ತೊಂದರ ಸಾವಿಗೆ
ಸಿಂಗಾರಗೊಂಡಿದೆಯೆಂದರಿತು
ಹೂವಿಗೂ ಹೃದಯಾಘಾತ!!

ಶವಗಳ ಸಾಗಾಣಿಕೆ ನಡುವೆ
ಒಂದು ಸುಳಿಯಾದರೂ ಸಿಕ್ಕಿದ್ದರೆ
ತಳ ಸೇರುತಿತ್ತು ದೋಣಿ,
ದೊರೆವುದಾಗಿತ್ತು ಶಾಂತಿ
ಅಳಿವಿನಂಚಿನೆಲ್ಲಕ್ಕೂ!!

ನಿನ್ನ ಕೈ ಸೇರಬಾರದಿತ್ತಷ್ಟೇ ಹುಡುಗಿ!!
ಆದರೆ, ನೀನಾಗೇ ಹುಡುಕಿ ಬಂದೆ;

ಮೊದಲು ಇರುವೆ ಸತ್ತಿದ್ದ
ಹೂವ ಮುಡಿಗೇರಿಸಿಕೊಂಡು
ನೀನೂ ಮಡಿ ತಪ್ಪಿದವಳು,
ಆ ನಂತರ ಕಾಗದ ಬಿಡಿಸಿ
ಅಳಿದುಳಿದಕ್ಷರ ಓದುತ್ತ ಹೋದೆ;

ಕೊನೆಗೆ,
ಕೊನೆಯುಸಿರ ಸವರಿ ಕೂತು
ನನ್ನ ಮನಸಲ್ಲಿ
ಸೂತಕದ ಛಾಯೆ ಬಿಡಿಸಿ
ಹೆಣವಾಗಿಸಿದೆ ನನ್ನ!!

                        -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...