Monday 21 September 2015

ಸಿದ್ಧಾರ್ಥನಾಗುವ ಕನಸು ಕೈ ಬಿಡಬೇಕು


ಶಾಂತನಾಗಿರುವ ಬುದ್ಧನ ಕಂಡಾಗ
ಸಿದ್ಧಾರ್ಥನ ವೈಭೋಗಗಳೆಲ್ಲ ಧೂಳೆನಿಸುತ್ತವೆ


ಕಂಪ್ಯೂಟರಿನ ಪರದೆಯ ಮೇಲೆ
ಕಣ್ಮುಚ್ಚಿಯೇ ಕಣ್ತೆರೆಸುವಾತನು
ಲಾಕ್ ಆಗುವ ಮುನ್ನ ಹೇಗಿದ್ದನೋ
ಅನ್ಲಾಕ್ ಆಗುವಾಗಲೂ ಹಾಗೇ ಇರುತ್ತಾನೆ


ಸಿದ್ಧಾರ್ಥನಾಗಲು ಹಂಬಲಿಸಿದ ಮನಸು ಮಾತ್ರ
ಲಾಕ್ ಆದಾಗ ನಿರಾಳ
ಅನ್ಲಾಕ್ ಮಾಡುವ ಮೊದಲೇ ಕರಾಳ!!


ಕಸದ ಬುಟ್ಟಿಯಲಿ ಚಿಂದಿ ಕಾಗದಗಳು
ಎಂದೋ ಉಪಯುಕ್ತ ಸರಕು,
ನನ್ನನ್ನೇ ನೋಡಿಕೊಂಡಂತಾಗುತ್ತದೆ
ಆತ್ತ ಮುಖ ಮಾಡುವಾಗಲೆಲ್ಲ


ಕ್ರೆಡಿಟ್ ಕಾರ್ಡಿನ ಬಳಕೆಯ ಸಂದೇಶಗಳು
ಆಗಾಗ ಫೋನ್ ಮೆಮೋರಿ ಫುಲ್ ಆಗಿಸುವಾಗ
ವ್ಯಾಲೆಟ್ ತೆಗೆದು ಕಾರ್ಡ್ ಕಿತ್ತೆಸೆವಷ್ಟು ಕೋಪ
ಅಲ್ಲಿಗೆ ಎಲ್ಲವೂ ಮುಗಿದಂತಲ್ಲ!!


"ಪರ್ಸನಲ್ ಲೋನ್ ಬೇಕೆ?"
ಎಂದು ಇನ್ಕಮಿಂಗ್ ಕಾಲುಗಳು ಕಾಲೆಳೆದಾಗ
"ಬೇಕು..." ಎಂದು ಕೂಗುವಾಸೆ
ನಾಳೆಗಳು ಕಣ್ಮುಂದೆ ಬಂದು
ಹಾಗೇ ಬಾಯ್ಮುಚ್ಚಿಸಿಬಿಡುತ್ತವೆ!!


ಇನ್ಬಾಕ್ಸ್ ತುಂಬ ಇಂಪಲ್ಲದ
ಇಂಪಾರ್ಟೆಂಟ್ ಮೇಲ್ಗಳೇ
ಎಲ್ಲಕ್ಕೂ ಟೈಮ್ ನೀಡದ ಹೊರತು
ತೊಲಗಿಸಿಕೊಳ್ಳುವ ಯೋಗವಿಲ್ಲ


ಆಗಲೇ ಬುದ್ಧ ನೆನಪಾಗುತ್ತಾನೆ
ವಾಲ್ಪೇಪರಿನ ತುಂಬ ನಗು ಚೆಲ್ಲುತ್ತ,
ಅವನ ಮುಖ ನೋಡುತ್ತಲೇ ಅನಿಸುತ್ತೆ
"ಸಿದ್ಧಾರ್ಥನಾಗುವ ಕನಸು ಕೈ ಬಿಡಬೇಕು"


                                        -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...