Monday, 19 October 2015

ಹಾಳೆಯ ಹೂವು


ಬರೆಯಲೇ ಬೇಕೆಂದು ಹಠಕ್ಕೆ ಬಿದ್ದಾಗ
ಬರೆವುದೆಲ್ಲವೂ ಸಪ್ಪೆ
ತಾನಾಗೇ ಬರೆಯಿಸಿಕೊಳ್ಳುವ ಒಂದು ಪದವಾದರೂ
ಕಾವ್ಯ ಕುಪ್ಪೆ

ಬರೆವ ನಾನೊಬ್ಬನೇ ಬಲ್ಲವನೆಂದನಿಸಿದೊಡೆ
ಬರೆಯದಿರುವುದೇ ಒಳಿತು
ಬರೆವುದೇ ಆದರೆ ಬರಿದಾಗಬೇಕು ನಾ
ಬರಹದಲಿ ಮಿಂದು ಬೆರೆತು

ಅರೆ-ಬರೆ ಬರೆವುದು, ಭಾರಿ ಏನಲ್ಲ ಇದು
ಬರಿ ಮೌನದೊಂದು ಛಾಯೆ
ಬರೆದಷ್ಟೂ ಬರಿದಾಗದ ಭಾಷೆ ನನ್ನದು
ಏನಿದರ ಮರ್ಮ ಮಾಯೆ?!!

ಬರವಿಲ್ಲ, ನೆರೆಯಿಲ್ಲ ಬಂದಷ್ಟೂ ಸಿರಿಯೇ

ಇರದಲ್ಲಿಯೂ ಸುಸ್ಥಿತಿ
ಎಲ್ಲ ಮುಗಿದಿರಲೊಂದು ಮತ್ತೆ ಮೊದಲಾಗಲು
ಹಿಡಿದಂತೆ ತಿಳಿ ಆರತಿ

ಬನ್ನಣೆಗೆ ಬಣ್ಣ, ಬವಣೆಗೂ ಬಾಣ
ಬಿನ್ನವಿದು ಭಾವಗಳಿಗೆ
ಹೆಸರಿಡಲು ಮತ್ತಷ್ಟು ಮೆರುಗು ಮೂಡುವುದು
ಹಾಳೆಯ ಹೂವುಗಳಿಗೆ!!

                                      --
ರತ್ನಸುತ

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...