Monday 24 August 2015

ಮಳೆಗೂ ಮೊದಲು

ಹೊತ್ತು ಸಾಲದಷ್ಟು ಸಾಲ ಕೊಟ್ಟು
ಮಾತು ಮುಂದುವರಿದೂ ಹಿಂದೆ ಉಳಿದು
ಮೌನ ಮಾತಿಗಿಂತ ಗಾಢವಾಗಿ
ಲಜ್ಜೆ ಕೆಂಪು ಉಡುಪು ತೊಟ್ಟು ನಿಂತು
ಒಂದು ಸುಳ್ಳ ಸುತ್ತ ನೂರು ಕೋಟೆ
ಹಾಗು ನೀನು ಮತ್ತು ನಾನು ಮಾತ್ರ
ತೋಯ್ದ ಮಳೆಗೆ ಕ್ಷಮೆಯ ದಾನವಿಟ್ಟು
ಉಳಿಸಿಕೊಳ್ಳಬೇಕೇ ಎಲ್ಲ ಗುಟ್ಟು?!!


ಅತ್ತ ದೂರದಲ್ಲೂ ನಿಲ್ಲದಂತೆ
ಇತ್ತ ಹತ್ತಿರಕ್ಕೂ ಬಾರದಂತೆ
ಎತ್ತೆತ್ತರದಾಸೆಗಳ ಏಣಿಯೆಷ್ಟು ಭಾರ?
ಹಗುರ ಹೃದಯದೊಳಗೆ ಈಗ
ಕುಸಿದು, ಹೆಚ್ಚಿ ವಾಯುಭಾರ
ತನ್ನ ಪಾಡಿಗಷ್ಟೇ ಸುತ್ತಬೇಕೇ
ಹೊತ್ತು-ಗೊತ್ತಿರದ ಗಡಿಯಾರ?!!


ಇನ್ನೂ ಕಣ್ಣ ತೇವ ಹಿಂಗೇಯಿಲ್ಲ
ಇಂಗಿತಕ್ಕೆ ಹೇಗೆ ಎಳೆದೆ ತೆರೆಯ?
ನೊಂದ ಕನಸುಗಳ ಸಾಲು ಸಾಲು
ಮುಖಕೆ ಬೀಸಿ ತೋರಿಸುತ್ತ ಬರೆಯ
ಹರೆಯ ಹೊರೆಯ ಬರಿಯ ಮಾತು ಸಲ್ಲ
ಮೂಕತನವ ಮೆಚ್ಚಿಕೊಳ್ಳಬೇಕು
ಬೇಕು ಅನ್ನುವಷ್ಟು ಬೇಡಿಕೆಗಳ
ಒಮ್ಮೆ ತೆರೆದು ಹಾಗೇ ಮರೆಸು ಸಾಕು!!


ಯಾವ ಸದ್ದು ನಿನ್ನ ಕಾಡಿಸಿದ್ದು?
ಅದಾವ ಸಾಲು ನಿನ್ನ ಎದೆಗೆ ನಾಟಿ
ಮತ್ತೆ ಮತ್ತೆ ಗಾಯವಾಗಿಸಿದ್ದು?
ಅದೆಷ್ಟು ನಗುವೆ, ಅದೆಷ್ಟು ಅಳುವೆ
ಅದೆಷ್ಟು ಬದುಕ ಬದುಕುವಾಸೆ ನಿನಗೆ?
ಇಷ್ಟೇ ಅಲ್ಲ, ಇನ್ನಷ್ಟಿದೆ ತಿಳಿಯೆ
ವಯಸು ಹೆಜ್ಜೆ ಇಡಲಿ ಮುಪ್ಪಿನೆಡೆಗೆ!!


ಜಡೆಯ ಚಾಟಿ ಬೀಸಿ ಎದೆಗೆ
ಕುರುಳ ತುದಿ ಬೆವರ ಕದ್ದಿತಲ್ಲ,
ಇದೆಯಾ ಅದರರಿವು ನಿನಗೆ?
ಮಲಗಿದಂತೆ ನಟಿಸಿ, ನಟಿಸಿ
ಕಣ್ಣು ಮಂಜುಗಟ್ಟಿದಾಗ
ಬಿಸಿಲ ಹೊತ್ತು ತಂದು ನನ್ನ
ಕರಗಿಸುತ್ತ ಬೊಗಸೆಯಲ್ಲಿ ಹಿಡಿದುಕೋ
ತುಟಿ ಸಮೀಪ ತಂದುಕೋ!!


                                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...